ಉದಯರಶ್ಮಿ ದಿನಪತ್ರಿಕೆ
ಬಬಲೇಶ್ವರ: ಹಿಂದುಳಿದ ಹಳ್ಳಿಯ ಸಾಮಾನ್ಯ ಕುಟುಂಬದ ಚೆನ್ನಬಸಪ್ಪ ಅಂಬಲಿ, ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ, ನಿರಂತರ ತೀವ್ರಗಾಮಿ ಚಟುವಟಿಕೆಗಳನ್ನು ನಡೆಸಿ, ಹಲವಾರು ಬಾರಿ ಜೈಲುವಾಸ ಅನುಭವಿಸಿ, ಸ್ವಾತಂತ್ರ್ಯಾನಂತರವೂ ಕಾಂಗ್ರೆಸ್ ನಲ್ಲಿ ಸಕ್ರಿಯರಾಗಿ ಕೆಪಿಸಿಸಿ ಅಧ್ಯಕ್ಷ ಚುನಾವಣೆಯಲ್ಲಿ ಧಿಮಂತ ನಾಯಕ ಎಸ್.ನಿಜಲಿಂಗಪ್ಪನವರನ್ನು ಸೋಲಿಸಿದ ಹೆಗ್ಗಳಿಕೆ ಹೊಂದಿದ್ದಾರೆ ಎಂದು ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಹಾಂತೇಶ ಬಿರಾದಾರ ಹೇಳಿದರು.
ಬಬಲೇಶ್ವರ ತಾಲ್ಲೂಕಿನ ಅರ್ಜುಣಗಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಬುಧವಾರ ಅಂಬಲಿ ಕುಟುಂಬದವರು ₹ 1 ಲಕ್ಷ ರೂಪಾಯಿ ವೆಚ್ಚದಲ್ಲಿ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ ಉದ್ಘಾಟಿಸಿ ಮಾತನಾಡಿದ ಅವರು, ಈ ಭಾಗದಲ್ಲಿ ಅತೀ ಬರಗಾಲ ಬಿದ್ದು ಜನರಿಗೆ ಆಹಾರ ಕೊರತೆಯಾದಾಗ ತಮ್ಮ ಮನೆಯ ದವಸ-ಧಾನ್ಯಗಳಿಂದ ಜನರಿಗೆ ಅಂಬಲಿ ತಯಾರಿಸಿ ನೀಡಿದ್ದರಿಂದ ’ಬಣಜಿಗೇರ’ ಎಂಬ ಇವರ ಮನೆತನದ ಹೆಸರು ’ಅಂಬಲಿ’ಯಾಗಿ ಬದಲಾವಣೆಯಾಯಿತು. ಅದೇ ಕುಟುಂಬದ ಚೆನ್ನಬಸಪ್ಪ ಬಾಲಕನಾಗಿದ್ದಾಗಲೇ ಕಂದಾಯ ವಸೂಲಿಗೆ ಬಂದಿದ್ದ ಮಾಮಲೆದಾರರನ್ನು ತರಾಟೆಗೆ ತೆಗೆದುಕೊಂಡು “ಬರಗಾಲದಿಂದ ಜನ ಸಾಯುತ್ತಿದ್ದಾರೆ. ಇಂಥಹ ಕೆಟ್ಟ ಸ್ಥಿತಿಯಲ್ಲಿ ನಿಮಗೆ ಕಂದಾಯ ಕೊಡಬೇಕೆ?” ಎಂದಿದ್ದರು. ಅಲ್ಲಿಂದ ಆರಂಭಗೊಂಡ ಅವರ ಹೋರಾಟ ದೇಶಕ್ಕೆ ಸ್ವಾತಂತ್ರ್ಯ ಬರುವವರೆಗೂ ನಿರಂತರವಾಗಿತ್ತು. ಹೋರಾಟಗಾರರೊಂದಿಗೆ ಭೂಗತರಾಗಿ, ಮಿಂಚನಾಳ, ಜುಮನಾಳ, ಮುಳವಾಡ ರೈಲ್ವೆ ನಿಲ್ದಾಣಗಳನ್ನು ಧ್ವಂಸಗೊಳಿಸಿ, ಬ್ರಿಟಿಷರಿಗೆ ಬಿಜಾಪುರ ಜಿಲ್ಲೆಯಲ್ಲಿ ಉಗ್ರ ಪ್ರತಿರೋಧ ಒಡ್ಡಿದ್ದರು ಎಂದರು.
ಮುಂಬೈ ಪ್ರಾಂತ್ಯದಲ್ಲಿ ಬಾದಾಮಿ, ಬೀಳಗಿಯಿಂದ ನಂತರ ಮೈಸೂರು ರಾಜ್ಯದಲ್ಲಿ ತಿಕೋಟಾದಿಂದ ಶಾಸನಸಭೆಗೆ ಆಯ್ಕೆಯಾಗಿದ್ದ ಇವರು, ನಿಜಲಿಂಗಪ್ಪನವರ ಮಂತ್ರಿಮಂಡಲದಲ್ಲಿ ಸೇರ್ಪಡೆಯಾಗುವ ಮುಂಚೆಯೇ ಪಾರ್ಶ್ಚುವಾಯುಗೆ ತುತ್ತಾಗಿ, ಮಂತ್ರಿಯಾಗದೆ ಉಳಿದರು. ಇಂದು ನಾವು ಅನುಭವಿಸುವ ಸ್ವಾತಂತ್ರ್ಯ ಅಂಬಲಿ ಚೆನ್ನಬಸಪ್ಪನವರಂತಹ ನಿಸ್ವಾರ್ಥ ಹೋರಾಟಗಾರರ ಫಲ. ಇವರನ್ನು ನಾವು ಮರೆತಿದ್ದೇವೆ ಎಂದು ಹೇಳಿದರು.
ಕ್ಷೇತ್ರಶಿಕ್ಷಣಾಧಿಕಾರಿ ಬಸವರಾಜ ತಳವಾರ ಮಾತನಾಡಿ, ಅಂಬಲಿ ಕುಟುಂಬದ ಆದರ್ಶವನ್ನು ಈಗೀನ ತಲೆಮಾರಿನವರು ಮುಂದುವರೆಸಿದ್ದು, ಈ ವರ್ಷದಿಂದ ಇನ್ನು ಮುಂದೆ ಪ್ರತಿವರ್ಷವೂ ಒಂದು ಲಕ್ಷ ರೂಪಾಯಿಗಳನ್ನು ವ್ಯಯಿಸಿ, ತಮ್ಮ ಅರ್ಜುಣಗಿ ಗ್ರಾಮದ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲತೆಗಳನ್ನು ಕಲ್ಪಿಸುತ್ತಿರುವುದು ಮಾದರಿ. ಇದನ್ನು ಉಳಿದ ಹಳ್ಳಿಗಳಲ್ಲಿ ಬೇರೆಯವರು ಅನುಸರಿಸಬೇಕು ಎಂದರು.
ಪ್ರಾಚಾರ್ಯ ಎಲ್.ಪಿ.ಹುಣಶಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶೇಖರ ಅಂಬಲಿ, ಪ್ರೊ.ಸುರೇಶ ಅಂಬಲಿ, ರಮೇಶ ದೇಸಾಯಿ, ಮಲ್ಲು ಕೆಂಪವಾಡ, ಶೇಖಪ್ಪ ದೇಸಾಯಿ, ಚೆನ್ನಬಸಪ್ಪ ಅಂಬಲಿ, ರಫೀಕ ಸೋನಾರ, ಉಮಾಕಾಂತ ತಡಾಕಿ, ಸಿದ್ದರಾಯ ಜಂಗಮಶೆಟ್ಟಿ, ರಮೇಶ ತಂಬಾಕ್, ಮಲ್ಲೇಶಿ ಮೋಟಗಿ, ಎಸ್.ಎಸ್.ಮಠಪತಿ, ಸಿದರಾಯ ಅಥಣಿ ಮತ್ತಿತರರು ಗ್ರಾಮಸ್ಥರು ಉಪಸ್ಥಿತರಿದ್ದರು.
ನಿರ್ಮಲಾ ದೊಡಮನಿ ಹಾಗೂ ವನಜಾಕ್ಷಿ ಬಡಿಗೇರ ನಿರೂಪಿಸಿದರು, ರಮೇಶ ಕುಂಬಾರ ಸ್ವಾಗತಿಸಿದರು.

