ಕೇಳುತ್ತಿಲ್ಲ ಚಿಕ್ಕನಂದಿ, ಹತ್ವಾಳು ರೈತರ ಗೋಳು | ಅನಿರ್ದಿಷ್ಟಾವಧಿ ಧರಣಿಗೆ ನಿರ್ಧಾರ
ಉದಯರಶ್ಮಿ ದಿನಪತ್ರಿಕೆ
ಎಚ್ ಡಿ ಕೋಟೆ :ಕಳೆದ 40-50 ವರ್ಷಗಳಿಂದಲೂ ಅದೇ ಭೂಮಿಯಲ್ಲಿ ವ್ಯವಸಾಯ ಮಾಡಿಕೊಂಡು ಬರುತ್ತಿದ್ದೇವೆ. ಆರ್ ಟಿ ಸಿ ಕೂಡ ನಮ್ಮ ಹೆಸರಿನಲ್ಲಿ ಇದೆ. ಆದರೆ ಪಹಣಿಯಲ್ಲಿ ಸರಕಾರಿ ಬೀಳು ಭೂಮಿ ಎಂದು ನಮೂದಾಗಿದೆ. ಇದರಿಂದ ನಮಗೆ ಯಾವುದೇ ಸರಕಾರಿ ಸೌಲಭ್ಯಗಳು ಸಿಗುತ್ತಿಲ್ಲ. ಬ್ಯಾಂಕ್ ಗಳಿಂದ ಸಾಲ ಪಡೆಯಲು ಆಗುತ್ತಿಲ್ಲ. ನಮ್ಮ ಹೆಸರಿಗೆ ಭೂಮಿ ಇದ್ದರೂ ಇಲ್ಲದಂತಾಗಿದೆ. ಖಾತೆಯಲ್ಲಿ ಸರಕಾರಿ ಬೀಳು ತೆಗೆದುಹಾಕಿ ಬದಲಾವಣೆ ಮಾಡಿ ಕೊಡುವಂತೆ ಸಂಬಂಧಪಟ್ಟ ಇಲಾಖೆ, ಸ್ಥಳೀಯ ಶಾಸಕರು, ಅಧಿಕಾರಿಗಳಿಗೆ ಮನವಿ ಮಾಡುತ್ತಾ ಬಂದಿದ್ದರೂ ಏನು ಪ್ರಯೋಜನವಾಗಿಲ್ಲ ಎಂದು ತಾಲೂಕಿನ ಚಿಕ್ಕನಂದಿ, ಹತ್ವಾಳು ರೈತರು ಅಳಲು ತೋಡಿಕೊಳ್ಳುತ್ತಾರೆ.
ತಾಲೂಕಿನ ಹಂಪಾಪುರ ಹೋಬಳಿ ವ್ಯಾಪ್ತಿಗೆ ಸೇರಿದ ಚಿಕ್ಕನಂದಿ, ಹತ್ವಾಳು ಗ್ರಾಮದ ವ್ಯಾಪ್ತಿಯಲ್ಲಿ ಸುಮಾರು 700 ಎಕರೆ ಕೃಷಿ ಜಮೀನು ಸಕಾರಣವಿಲ್ಲದೆ ಸರ್ಕಾರಿ ಬೀಳು ಎಂದು ಸಮುದಾಗಿರುವುದರಿಂದ ಉಂಟಾಗಿರುವ ಗೋಳು ರೈತರ ನೆಮ್ಮದಿ ಹಾಳು ಮಾಡಿದೆ. 1991ರಲ್ಲಿ ಅಂದಿನ ಸರ್ಕಾರ, ಕಂದಾಯ ಬಾಕಿಯಿಂದಾದ ಹಾಗೂ ಬೀಳು ಬಿದ್ದ ಜಮೀನುಗಳನ್ನು ಸ್ವಾಧೀನಾನುಭವದಲ್ಲಿರುವ ಹಾಗೂ ಅವರ ವಂಶಸ್ಥರ ಹೆಸರಿಗೆ ರೆಸ್ಟೋರ್ ಮಾಡಿಕೊಡುವಂತೆ ಆದೇಶ ಹೊರಡಿಸಿತ್ತು. ಆಗಿದ್ದ ತಹಸೀಲ್ದಾರ್, ಕಂದಾಯಾಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಕಾರ್ಯರೂಪಕ್ಕೆ ಬರಲಿಲ್ಲ. 2004ರಲ್ಲಿ ಸರ್ಕಾರ 6 ತಿಂಗಳ ಕಾಲಾವಕಾಶ ನೀಡಿ ಮತ್ತೆ ರೆಸ್ಟೋರ್ಗೆ ಆದೇಶಿಸಿತ್ತು . ಆದರೆ ಆಗಿನ ತಹಸೀಲ್ದಾರ್ ಕೂಡ ಕಾರ್ಯರೂಪಕ್ಕೆ ತರುವ ಕೆಲಸ ಮಾಡಲಿಲ್ಲ. ನಂತರದ ದಿನಗಳಲ್ಲಿ ಈ ಕ್ಷೇತ್ರದ ಯಾವ ಚುನಾಯಿತ ಸಂಸದರಾಗಲೀ, ಶಾಸಕರಾಲೀ ಈ ರೈತರ ನೆರವಿಗೆ ಬರಲಿಲ್ಲ. ಸರ್ಕಾರದ ಗಮನ ಸೆಳೆಯಲಿಲ್ಲ. ಹೀಗಾಗಿ ಅವರ ಹೆಸರಿನಲ್ಲಿ ಖಾತೆ ಇದ್ದರೂ ಸರ್ಕಾರಿ ಬೀಳು ಎಂದು ನಮೂದಾಗಿರುವುದರಿಂದ, ನಮಗೆ ಸರ್ಕಾರದಿಂದ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ ಅಂತಾರೆ ಹತ್ವಾಳು ರೈತರು.
ಈ ಸಂಬಂಧ ಕರ್ನಾಟಕ ಭೂ ಹಕ್ಕು ವೇದಿಕೆ ರೈತರ ಜೊತೆಗಿನ ಸಂವಾದಕ್ಕೆ ವೇದಿಕೆ ಕಲ್ಪಿಸಿಕೊಟ್ಟಿತ್ತು. ಈ ವೇಳೆ ರೈತರು ತಮ್ಮ ಅಳಲು ಬಿಚ್ಚಿಟ್ಟರು. ಸರ್ಕಾರಿ ಬೀಳು ತೆಗೆದುಹಾಕಿ ಕೊಡುವಂತೆ ತಹಸೀಲ್ದಾರ್, ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿಗೆ ಮನವಿ ಪತ್ರ ಕೊಟ್ಟಿದ್ದೇವೆ. ಆದರೆ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಶಾಸಕ ಅನಿಲ್ ಚಿಕ್ಕಮಾದು ಅವರ ಗಮನಕ್ಕೂ ಕೂಡ ತಂದಿದ್ದೇವೆ. ಆದರೆ ಅವರು ಕೂಡ ಕ್ರಮ ಕೈಗೊಂಡಿಲ್ಲ ಎಂದು ರೈತ ಸುಬ್ಬಣ್ಣ ಆರೋಪ ಮಾಡುತ್ತಾರೆ.
ಈ ವೇಳೆ ರಾಮಾಚಾರಿ, ಸಣ್ಣಸ್ವಾಮಿ, ಸುಬ್ಬಣ್ಣ, ಶಿವಕುಮಾರ್, ರಾಜಣ್ಣ, ಚಿಕ್ಕಶೆಟ್ಟಿ, ಶಿವಪ್ಪ ಸೇರಿದಂತೆ ಚಿಕ್ಕನಂದಿ, ಹತ್ವಾಳು ಗ್ರಾಮಸ್ಥರು ಉಪಸ್ಥಿತರಿದ್ದರು.
“ತಹಸೀಲ್ದಾರ್ ಕಳಿಸಿದ ವರದಿ ಜಿಲ್ಲಾಧಿಕಾರಿ ಕಚೇರಿಯಲ್ಲೋ ಹುಣಸೂರಿನ ಉಪವಿಭಾಗಾಧಿಕಾರಿ ಕಚೇರಿಯಲ್ಲೋ ಯಾವ ಮೂಲೆಯಲ್ಲಿ ಬಿದ್ದು ನಿದ್ರಿಸುತ್ತಿವೆಯೋ ಗೊತ್ತಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳಿಸಿದ್ದಾರೋ ಇಲ್ಲವೋ ಇದಕ್ಕೂ ಖಚಿತ ಮಾಹಿತಿ ಲಭ್ಯವಿಲ್ಲ. ತಾಲೂಕು ಕಚೇರಿಯಲ್ಲಿ ವಿಚಾರಿಸಿದರೆ ಒಂದೊಂದು ಹೇಳಿಕೆ. ಡಿಸಿಗೆ ಕಳಿಸಿದ್ದೇವೆ ಹುಣಸೂರು ಎಸಿಗೆ ಕಳಿಸಿದ್ದೇವೆ ಅಂತ ಸಬೂಬು ಹೇಳುತ್ತಾರೆ. ನಮಗೂ ತಾಳ್ಮೆ ಇಲ್ಲದಂತಾಗಿದೆ. ಹೀಗಾಗಿ ಶೀಘ್ರದಲ್ಲೇ ತಾಲೂಕು ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ಮಾಡುತ್ತೇವೆ.”
– ಸಣ್ಣಸ್ವಾಮಿ, ಹತ್ವಾಳು ರೈತರು

