ವಿಜಯಪುರದಲ್ಲಿ ಪಶ್ಚಿಮ ಬಂಗಾಳ ಆದಾಯ ತೆರಿಗೆ ಇಲಾಖೆ ಮುಖ್ಯ ಪ್ರಧಾನ ಆಯುಕ್ತ ಶ್ರೀನಿವಾಸ ಬಿದರಿ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತಲೆತಲಾಂತರದಿಂದ ಬಂದ ಆಸ್ತಿಗಳನ್ನು ನಮ್ಮ ಹಿರಿಯರು ದಾನ ನೀಡಿದ್ದರ ಫಲವಾಗಿ ಆರಂಭಗೊಂಡ ಶಿಕ್ಷಣ ಸಂಸ್ಥೆಗಳು ಸಮಾಜದಲ್ಲಿ ಸತ್ಪ್ರಜೆಗಳನ್ನು ರೂಪಿಸಿವೆ ಎಂದು ಪಶ್ಚಿಮ ಬಂಗಾಳ ರಾಜ್ಯದಲ್ಲಿ ಆದಾಯ ತೆರಿಗೆ ಇಲಾಖೆ ಮುಖ್ಯ ಪ್ರಧಾನ ಆಯುಕ್ತರಾಗಿರುವ ವಿಜಯಪುರದ ಶ್ರೀನಿವಾಸ ಬಿದರಿ ಹೇಳಿದರು.
ಆದಾಯ ತೆರಿಗೆ ಇಲಾಖೆಯಲ್ಲಿ ಪ್ರಧಾನ ಆಯುಕ್ತರಿಂದ ಮುಖ್ಯ ಪ್ರಧಾನ ಆಯುಕ್ತರೆಂದು ಬಡ್ತಿ ಪಡೆದಿರುವ ಹಿನ್ನೆಲೆಯಲ್ಲಿ ವಿಜಯಪುರದಲ್ಲಿ ಅವರ ಸ್ನೇಹಿತರು, ಶಾಲಾ-ಕಾಲೇಜು ಸಹಪಾಠಿಗಳು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ವಿಜಯಪುರದ ದರ್ಬಾರ್, ಪಿಡಿಜೆ, ಬಿಡಿಇ, ಶ್ರೀ ಸಿದ್ದೇಶ್ವರ ಹೈಸ್ಕೂಲ್ ಎಲ್ಲವೂಗಳು ಸಹ 70-100 ವರ್ಷದ ಹಿಂದೆ ಅಂದಿನ ಹಿರಿಯರು ತಮ್ಮ ತಲೆ ತಲಾಂತರದ ಆಸ್ತಿಯನ್ನು ಈ ನಾಡಿನ ಮಕ್ಕಳ ಭವಿಷ್ಯ ಒಳಿತಾಗಲಿ ಎಂದು ದಾನವಾಗಿ ನೀಡಿದ್ದರು. ಅದರ ಫಲವಾಗಿ ಅಂತಹ ಸಂಸ್ಥೆಗಳಲ್ಲಿ ಕಲಿತ ನಮ್ಮಂಥವರು ಉನ್ನತ ಹುದ್ದೆಗೆ ಹೋಗಲು ಸಾಧ್ಯವಾಯಿತು. ಇದಕ್ಕೆ ಕಾರಣರಾದ ಆ ಹಿರಿಯ ಚೇತನಗಳನ್ನು ಸದಾ ಸ್ಮರಿಸಬೇಕು ಎಂದರು.
ಡಾ.ಮಹಾಂತೇಶ ಬಿರಾದಾರ ಮಾತನಾಡಿ, 1992-93 ರಲ್ಲಿ ವಿಜಯಪುರ ಜಿಲ್ಲೆಯಿಂದ ಐ.ಆರ್.ಎಸ್ ಪಾಸಾದ ಮೊದಲ ವ್ಯಕ್ತಿ ಶ್ರೀನಿವಾಸ ಬಿದರಿ ಆಗಿದ್ದಾರೆ. 34 ವರ್ಷಗಳ ಸುಧೀರ್ಘ ಸೇವೆಯಿಂದ ಇಂದು ಪ್ರಧಾನಮಂತ್ರಿ, ವಿತ್ತ ಮಂತ್ರಿಗಳ ಕಾರ್ಯಪಡೆಯಲ್ಲಿ ದೇಶದ ಆರ್ಥಿಕ ನೀತಿ ನಿರೂಪಣೆಗಳನ್ನು ನಿರ್ವಹಿಸುವ ಪ್ರಮುಖ ವ್ಯಕ್ತಿಯಾಗಿದ್ದರೆ. ಇನ್ನೂ ಅವರು ಉನ್ನತ ಸ್ಥಾನಕ್ಕೆ ಹೋಗಲಿದ್ದಾರೆ. ಇದು ವಿಜಯಪುರದವರೆಲ್ಲರಿಗೂ ಹೆಮ್ಮೆಯ, ಅಭಿಮಾನದ ಸಂಗತಿ. ದೇವರಗೆಣ್ಣೂರು ಎಂಬ ಪುಟ್ಟ ಹಳ್ಳಿಯಿಂದ ಬಂದಿರುವ ಇವರು ಇಂದಿಗೂ ವಿಜಯಪುರಕ್ಕೆ ಬಂದರೆ, ಹಳ್ಳಿಯಲ್ಲಿಯೇ ಇರುತ್ತಾರೆ ಮತ್ತು ಹಳೆಯ ಗೆಳೆಯರೊಂದಿಗೆ ಸ್ಪೂರ್ತಿ ಫೌಂಡೇಶನ್ ಮುಖಾಂತರ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾರೆ. ಇದು ಇವರ ಮಣ್ಣಿನ ಗುಣ ತೋರಿಸುತ್ತದೆ ಎಂದರು.
ಸಿದ್ದೇಶ್ವರ ಸಹಕಾರಿ ಬ್ಯಾಂಕ್ ಅಧ್ಯಕ್ಷ ರವಿಂದ್ರ ಬಿಜ್ಜರಗಿ ಮಾತನಾಡಿ, ವಿಜಯಪುರದ ವರ್ತಕರ ಮತ್ತು ಎಪಿಎಂಸಿ ಗೆ ಸಂಬಂಧಿಸಿದ ಹಲವಾರು ವ್ಯಾಜ್ಯಗಳನ್ನು ಬಿದರಿ ಅವರ ಗಮನಕ್ಕೆ ತಂದಾಗ ಅವುಗಳಿಗೆ ನ್ಯಾಯಯುತ ಪರಿಹಾರ ದೊರಕಿಸಿದ್ದಾರೆ. ಬಿದರಿ ಮನೆತನ ವಿಜಯಪುರಕ್ಕೆ ಉತ್ತಮ ಕೊಡುಗೆ ನೀಡಿದೆ. ರಾಮಪ್ಪ ಬಿದರಿ ಅವರು ಸಂಸದರಾಗಿ, ಡಾ.ಸಿ.ಆರ್.ಬಿದರಿ, ಡಾ.ಎಲ್.ಎಚ್.ಬಿದರಿ ವೈದ್ಯರಾಗಿ, ಆಶಾ ಬಿದರಿ ಸಾಮಾಜಿಕವಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ ಎಂದರು.
ವಿಡಿಎ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ, ಮಾಜಿ ಅಧ್ಯಕ್ಷ ಚಂದ್ರಕಾಂತ ಶೆಟ್ಟಿ, ಮಾಜಿ ಶಾಸಕ ಪ್ರೊ.ರಾಜು ಆಲಗೂರ, ಅರುಣ ಹುಂಡೇಕಾರ, ಬಸವರಾಜ ಪಾಟೀಲ, ಡಾ.ವಿಜಯ ಪಾಟೀಲ, ವಿಜಯ ಡೋಣಿ, ಪ್ರಕಾಶ ಹಕ್ಕಪಕ್ಕಿ, ಜಯಾನಂದ ತಾಳಿಕೋಟಿ, ಪ್ರವೀಣ ವಾರದ, ವೀರಣ್ಣ ಹುಂಡೇಕಾರ, ಆನಂದ ಮಂಗಳವೇಡೆ, ದಾದು ತಿವಾರಿ, ಸುಭಾಸ ಬಗಲಿ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

