ಕೂಡಗಿ ಗ್ರಾಮದಲ್ಲಿ ಶಾಸಕ ಶಿವಾನಂದ ಪಾಟೀಲ ಭರವಸೆ
ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ದೇಶದೆಲ್ಲೆಡೆ ಖ್ಯಾತಿ ಗಳಿಸಿರುವ ಈ ಭಾಗದ ರೈತರ ವಿಳ್ಯದೆಲೆ ಮತ್ತು ಈರುಳ್ಳಿ ಖರೀದಿ ಮತ್ತು ಮಾರಾಟಕ್ಕಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯನ್ನು ಕೂಡಗಿಯಲ್ಲಿ ನಿರ್ಮಿಸುವ ಚಿಂತನೆಯಿದ್ದು ಭವಿಷ್ಯದಲ್ಲಿ ಅದನ್ನು ನಿರ್ಮಿಸುವ ಯೋಜನೆ ಇದೆ ಎಂದು ಶಾಸಕ ಶಿವಾನಂದ ಪಾಟೀಲ ಭರವಸೆ ನೀಡಿದರು.
ಕೂಡಗಿ ಗ್ರಾಮದ ಮಾರುತೇಶ್ವರ ದೇವಸ್ಥಾನ ಬಳಿ ಸಮುದಾಯ ಭವನ, ಎಪಿಎಂಸಿ ಬಳಿ ಸಿಸಿ ರಸ್ತೆ, ಕೂಡಗಿ ತಾಂಡಾದ ೨ ಕಡೆಗಳಲ್ಲಿ ಸಿಸಿ ರಸ್ತೆ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಈ ಭಾಗದ ಜನ ಎನ್ಟಿಪಿಸಿಗಾಗಿ ತಮ್ಮ ಫಲವತ್ತಾದ ಜಮೀನನ್ನು ಕಳೆದುಕೊಂಡಿದ್ದಾರೆ. ಆದರೆ ಅದಕ್ಕೆ ತಕ್ಕ ಪ್ರತಿಫಲ ಅವರಿಗೆ ಎನ್ಟಿಪಿಸಿ ಇನ್ನೂ ನೀಡಿಲ್ಲ ಎಂದರು. ಕೂಡಗಿ ತಾಂಡಾದಲ್ಲಿ ೩೩ ಕೊಳವೆ ಭಾವಿಗಳಿದ್ದರೂ ಸ್ಥಳೀಯ ನಿವಾಸಿಗರಿಗೆ ಕುಡಿಯುವ ನೀರಿನ ತೊಂದರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ಕುಡಿಯುವ ನೀರಿನ ಬಗ್ಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿದರು.
ವೇ.ಗಂಗಾಧರಯ್ಯ ಹಿರೇಮಠ ಪೂಜೆ ನೆರವೇರಿಸಿದರು. ಪ್ರಮುಖರಾದ ಮೈರಾಜಪೀರಾ ಜಾಗೀರದಾರ, ತಾನಾಜಿ ನಾಗರಾಳ, ಕಲ್ಲು ದೇಸಾಯಿ, ರಫೀಕ ಪಕಾಲಿ, ಭರ್ಮಣ್ಣ ಬಿದರಿ, ಶಿವಪ್ಪ ಗುಡದಿನ್ನಿ, ಚಂದ್ರಶೇಖರ ಜುಗತಿ, ಸಂಗನಗೌಡ ಪಾಟೀಲ, ಮಹ್ಮದಆರೀಪ್ ತಾಳಿಕೋಟಿ, ರಾಜು ರಾಠೋಡ, ಈಶ್ವರ ಜಾಧವ, ಬಾಬು ಕೋಲಾರ, ಶಫೀಕ ಜಾಗೀರದಾರ, ಕಾಶಿಬಾಯಿ ಉಳ್ಳಾಗಡ್ಡಿ, ಹೈದರ್ಅಲಿ ಇನಾಮದಾರ ಮತ್ತಿತರರು ಇದ್ದರು.

