ಚಡಚಣದಲ್ಲಿ ಕೆಎಸ್ಆರ್ಟಿಸಿ ಬಸ್–ಕ್ಯಾಂಟರ್ ಮುಖಾಮುಖಿ ಡಿಕ್ಕಿ | ೨೭ ಜನರಿಗೆ ಗಾಯ | ಮೂವರ ಸ್ಥಿತಿ ಗಂಭೀರ
ಉದಯರಶ್ಮಿ ದಿನಪತ್ರಿಕೆ
ಚಡಚಣ: ತಾಲ್ಲೂಕಿನಲ್ಲಿ ಒಂದೇ ದಿನದ ಅಂತರದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕೆಎಸ್ಆರ್ಟಿಸಿ ಬಸ್ ಹಾಗೂ ಸಿಮೆಂಟ್ ಸಾಗಿಸುತ್ತಿದ್ದ ಕ್ಯಾಂಟರ್ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಮೃತಪಟ್ಟಿದ್ದು, 27 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.
ರಾಜ್ಯ ಹೆದ್ದಾರಿ 41ರ ಬರಡೋಲ ಗ್ರಾಮ ಹಾಗೂ ಲೋಣಿ ಕ್ರಾಸ್ ನಡುವೆ ಚಡಚಣ ಪೋಲಿಸ್ ಸರಹದ್ದಿನಲ್ಲಿ ಮಂಗಳವಾರ ಬೆಳಗ್ಗೆ ಈ ದುರ್ಘಟನೆ ನಡೆದಿದೆ. ವಿಜಯಪುರ ಡಿಪೋದ ಕೆಎ 28 ಎಫ್ 2468 ನಂಬರಿನ ಕೆಎಸ್ಆರ್ಟಿಸಿ ಬಸ್ ಚಡಚಣದಿಂದ ಬದಾಮಿ ಕಡೆಗೆ ಸುಮಾರು 50 ಪ್ರಯಾಣಿಕರನ್ನು ಹೊತ್ತು ಸಾಗುತ್ತಿತ್ತು. ಇದೇ ವೇಳೆ ಝಳಕಿ ಕಡೆಯಿಂದ ಚಡಚಣಕ್ಕೆ ಬರುತ್ತಿದ್ದ ಕೆಎ 28 ಎಎ 6792 ನಂಬರಿನ ಸಿಮೆಂಟ್ ತುಂಬಿದ ಕ್ಯಾಂಟರ್ನ ಟೈರ್ ಏಕಾಏಕಿ ಸ್ಫೋಟಗೊಂಡಿದೆ. ಪರಿಣಾಮವಾಗಿ ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಬಸ್ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ಬಸ್ ಚಾಲಕ ಹಣಮಂತ ಚಲವಾದಿ(38) ನಿಡಗುಂದಿ, ಹಾವಿನಾಳ ಗ್ರಾಮದ ನಿವಾಸಿಗಳಾದ ಕ್ಯಾಂಟರ್ ಚಾಲಕ ಅಶೋಕ ಮಹಾದೇವ ಉಟಗಿ (32) ಹಾಗೂ ಅವರ ಪತ್ನಿ ರಾಧಾಬಾಯಿ ಅಶೋಕ ಉಟಗಿ (28) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಬಸ್ನಲ್ಲಿದ್ದ ಎಲ್ಲ ಪ್ರಯಾಣಿಕರು ಗಾಯಗೊಂಡಿದ್ದು, ಅವರಲ್ಲಿ ಚಡಚಣ ಆರೋಗ್ಯ ಕೇಂದ್ರದಲ್ಲಿ 6 ಜನ ಪುರಷರು,18 ಮಹಿಳೆಯರು ಹಾಗೂ 3 ಮಕ್ಕಳು ಸೇರಿದಂತೆ ಒಟ್ಟು 27 ಜನರಿಗೆ ಪ್ರಾಥಮಿಕ ಉಪಚಾರ ಮಾಡಲಾಯಿತು. ಅದರಲ್ಲಿ ಮೂರು ಜನರ ಸ್ಥಿತಿ ಗಂಭೀರವಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗೆ ವಿಜಯಪುರ ಜಿಲ್ಲಾ ಆಸ್ಪತ್ರೇಗೆ ರವಾನಿಸಲಾಗಿದೆ.
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಚಡಚಣ ಪೊಲೀಸ್ ಠಾಣೆಯ ಪಿಎಸ್ಐ ಸೋಮೇಶ ಗೆಜ್ಜಿ, ವೃತ್ತ ನಿರೀಕ್ಷಕ ಪರಶುರಾಮ ಮನಗೂಳಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಚಡಚಣ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಸೋಮವಾರ 15ರಂದು ಮರಗೂರ ಸಕ್ಕರೆ ಕಾರ್ಖಾನೆ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದ ಬೆನ್ನಲ್ಲೇ ಈ ದುರ್ಘಟನೆ ಸಂಭವಿಸಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಆರ್ಟಿಒ ಅಧಿಕಾರಿ ಹಾಗೂ ಸಿಬ್ಬಂದಿಗಳ ನೇಮಕಕ್ಕೆ ಆಗ್ರಹ
ಚಡಚಣ ಪಟ್ಟಣದಲ್ಲಿ ಬಹುತೇಕ ವಾಹನಗಳ ತಪಾಸಣೆಯ ಜವಾಬ್ದಾರಿ ಆರ್ಟಿಒ ಅಧಿಕಾರಿ ಹಾಗೂ ಸಿಬ್ಬಂದಿಗಳಿಗಿದ್ದು ತಾಲೂಕಾಗಿ ಸುಮಾರು ವರ್ಷಗಳು ಗತಿಸಿದರೂ ಇಲ್ಲಿಯವರೆಗೆ ಆರ್ಟಿಒ ಅಧಿಕಾರಿ ಹಾಗೂ ಸಿಬ್ಬಂದಿಗಳ ನೇಮಕವಾಗಿಲ್ಲ. ಆದ್ದರಿಂದ ಇಲ್ಲಿ ಕಾನೂನು ಸುವ್ಯವಸ್ಥೆ, ವಾಹನ ತಪಾಸಣಿ ಸರಿಯಾಗಿ ನಡೆಯದಿರುವುದರಿಂದ ಅಪಘಾತಗಳು ಆಗಾಗ ಸಂಭವಿಸುತ್ತಿದ್ದು ಆರ್ಟಿಒ ಅಧಿಕಾರಿ ಹಾಗೂ ಸಿಬ್ಬಂದಿಗಳ ನೇಮಕ ಮಾಡಿದ್ದೆ ಆದಲ್ಲಿ ಇಂಥಹ ಅನೇಕ ತರಹದ ಅಂದರೆ ಟೆಂಪೋ ಹಾಗೂ ಟ್ರ್ಯಾಕ್ಟರ್ಗಳಲ್ಲಿ ಹೈ ಡಿಬಿ ಸ್ಪೀಕರ್ ಅಳವಿಡಿಕೆ, ಅಧಿಕೃತ ಚಾಲನಾ ಪರವಾನಗಿ ಇಲ್ಲದ ವಾಹನಸವಾರ,18 ವರ್ಷ ತುಂಬದ ವಾಹನ ಸವಾರ, ಫಿಟ್ ಇಲ್ಲದ ವಾಹನಗಳ ತಪಾಸಣೆ, ಇನ್ಸುರೆನ್ಸ ಇಲ್ಲದ ವಾಹನ ತಪಾಸಣೆ ಸೇರಿದಂತೆ ಎಲ್ಲವನ್ನು ತಪಾಸಣೆ ಮಾಡಿದರೆ ಇಂಥಹ ಅನಾಹುತಗಳನ್ನು ತಪ್ಪಿಸಬಹುದು. ಆದ್ದರಿಂದ ಚಡಚಣ ತಾಲೂಕಿಗೆ ಆರ್ಟಿಒ ಅಧಿಕಾರಿ ಹಾಗೂ ಸಿಬ್ಬಂಧಿಗಳ ನೇಮಕ ಮಾಡಿಕೊಳ್ಳಬೇಕೆಂದು ಮತ್ತು ಚಡಚಣ ಪ್ರದೇಶದಲ್ಲಿ ವಾಹನಗಳ ತಪಾಸಣೆ ಮತ್ತು ವಾಹನ ಸಂಚಾರ ನಿಯಮಗಳ ಕಟ್ಟುನಿಟ್ಟಿನ ಜಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಹಾಗೂ ಹಿರಿಯ ನಾಗರಿಕರು ಸರಕಾರಕ್ಕೆ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಹಾಗೂ ನಾಗಠಾಣ ಶಾಸಕರಾದ ವಿಠ್ಠಲ ಕಟಕಧೋಂಡ ಅವರಿಗೆ ಈ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.

