ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಳೆದ ಐದಾರು ವರ್ಷಗಳಿಂದ ಶರಣರ ಚರಿತ್ರೆಯನ್ನು ವಿರೂಪಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದ, ಶರಣರ ಕುರಿತಾದ ವಿವಾದಾಸ್ಪದ ಸಾಹಿತ್ಯ ಕೃತಿಗಳ ಮೂಲಕ ಬಸವ ಭಕ್ತರಲ್ಲಿ ಅನಗತ್ಯ ಗೊಂದಲ ಅಶಾಂತಿ ಮೂಡಿಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತಿದ್ದ ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಪ್ರೊ ವಾಸುದೇವ ಬಡಿಗೇರ ಅವರ ವಿವಾದಾಸ್ಪದ ಸಾಹಿತ್ಯ ಕೃತಿಗಳ ಬಗ್ಗೆ ಮಾಹಿತಿ ಪಡೆದು ಅವರ ಮೇಲೆ ಯೋಗ್ಯ ಕ್ರಮ ಕೈಗೊಳ್ಳಬೇಕು ಎಂದು ಘನವೆತ್ತ ರಾಜ್ಯಪಾಲ ಥಾವರ ಚಂದ ಗೆಹ್ಲೋಟ ಅವರು ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಕುಲಪತಿಗಳಿಗೆ ಪತ್ರ ಬರೆದು ಆದೇಶ ಮಾಡಿದ್ದಾರೆ.
ಈ ಕುರಿತು ಮಂಗಳವಾರ ಪತ್ರಿಕಾ ಹೇಳಿಕೆ ನೀಡಿದ ಬಸವ ತಿಳುವಳಿಕೆ ಸಂಶೋಧನಾ ಕೇಂದ್ರ ಪುಣೆ ಇದರ ಅಧ್ಯಕ್ಷರಾದ ಡಾ ಶಶಿಕಾಂತ ಪಟ್ಟಣ ಅವರು ರಾಜ್ಯಪಾಲರ ಕ್ರಮವನ್ನು ಸ್ವಾಗತಿಸಿದ್ದಾರೆ.
ಪ್ರೊ ವಾಸುದೇವ ಬಡಿಗೇರ ಅವರು ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಇಬ್ಬರೂ ಒಬ್ಬರೇ ಎಂದೆನ್ನುವ ಒಂದು ಕೃತಿಯನ್ನು ರಚಿಸಿ ವಿವಾದಕ್ಕೆ ಕಾರಣರಾಗಿದ್ದರು. ಈ ಮೊದಲು ಬಸವಣ್ಣ ವಿಶ್ವ ಕರ್ಮ ಎಂದು ಸಾಧಿಸಲು ಹೋಗಿ ನಗೆಗೆ ವಿಷಯವಾಗಿದ್ದರು. ಬಸವ ಸಮಕಾಲೀನ ಜೇಡರ ದಾಸಿಮಯ್ಯನವರನ್ನು ಬಸವ ಪೂರ್ವ ಯುಗಕ್ಕೆ ಒಯ್ದು ಶರಣರ ಚರಿತ್ರೆಗೆ ಅಪಚಾರ ಮಾಡಿದ್ದಾರೆ. ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಕೆಂಭಾವಿ ಬೋಗಣ್ಣ, ಕುಂಬಾರ ಗುಂಡಯ್ಯ ಮುಂತಾದ ಅನೇಕ ಶರಣರನ್ನು ಬಸವ ಪೂರ್ವಯುಗದ ಶರಣರು ಎಂದು ಸುಳ್ಳು ಸಂಶೋಧನೆ ಮಾಡಿದ್ದಾರೆ. ಈ ವಿಷಯದ ಬಗ್ಗೆ ಐದಾರು ವರ್ಷಗಳಿಂದ ಪ್ರೊ ವಾಸುದೇವ ಬಡಿಗೇರ ಅವರ ಜೊತೆಗೆ ಸಂಪರ್ಕದಲ್ಲಿದ್ದು ಇಂತಹ ಅಪ್ರಬುದ್ಧ ಅಸತ್ಯವಾದ ಸಂಶೋಧನೆಗೆ ಅವಕಾಶ ನೀಡ ಬೇಡಿ ಎಂದು ಫೋನ್ ಮೂಲಕ ಕೇಳಿಕೊಂಡಿತ್ತು. ಮುಂದೆ ಲೇಖನ-ಪತ್ರಗಳ ಮೂಲಕ ಅವರಿಗೆ ಮನವರಿಕೆ ಮಾಡಲು ಪ್ರಯತ್ನಪಟ್ಟರೂ ತಮ್ಮ ಮೊಂಡುತನ ಮತ್ತು ಪಾಂಡಿತ್ಯ ಪ್ರದರ್ಶನದ ಪ್ರಚಾರ ಪ್ರಿಯತೆಗೆ ಶರಣರ ಕುರಿತಾದ ವಿವಾದಾಸ್ಪದ ಸಾಹಿತ್ಯ ಕೃತಿಗಳ ಮೂಲಕ ಬಸವ ಭಕ್ತರಲ್ಲಿ ಅನಗತ್ಯ ಗೊಂದಲ ಅಶಾಂತಿ ಮೂಡಿಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತಿದ್ದರು. ಇವರನ್ನು ಬಹಿರಂಗವಾಗಿ ಸೌಹಾರ್ದಯುತವಾದ ಚರ್ಚೆಗೆ ಕರೆಯಲಾಯಿತು. ತಾನು ಹೇಳಿದ್ದೆ ಸತ್ಯವೆನ್ನುವ ಭ್ರಮೆಯಲ್ಲಿದ್ದರು. ಇವರ ವಿವಾದಾಸ್ಪದ ಹೇಳಿಕೆ ಕೃತಿ ಬರವಣಿಗೆ ಭಾಷಣಗಳ ವಿರುದ್ಧ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಇದರ ಕರ್ನಾಟಕದ ಬಹುತೇಕ ಜಿಲ್ಲಾ ಘಟಕ ಮತ್ತು ಶರಣ ಸಾಹಿತ್ಯ ಪರಿಷತ್ ವಿಜಯಪುರ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮತ್ತು ಇತರ ಅನೇಕ ಸಂಘಟನೆಗಳ ವತಿಯಿಂದ ಸಹಸ್ರಾರು ಬಸವ ಭಕ್ತರು ರಾಜ್ಯಪಾಲರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಕುಲಸಚಿವರಿಗೆ ಕಳೆದ ಮೂರು ತಿಂಗಳಿನಿಂದ ಪತ್ರ ಚಳುವಳಿ ಆರಂಭಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿ ಘನವೆತ್ತ ರಾಜ್ಯಪಾಲರಾದ ಶ್ರೀ ಥಾವರ ಚಂದ ಗೆಹ್ಲೋಟ ಅವರು ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಕುಲಪತಿಗಳಿಗೆ ಪತ್ರ ಬರೆದು ಪ್ರೊ ವಾಸುದೇವ ಬಡಿಗೇರ ಅವರ ವಿವಾದಾಸ್ಪದ ಸಾಹಿತ್ಯ ಕೃತಿಗಳ ಬಗ್ಗೆ ಮಾಹಿತಿ ಪಡೆದು ಅವರ ಮೇಲೆ ಯೋಗ್ಯ ಕ್ರಮ ಕೈಗೊಳ್ಳಬೇಕು ಎಂದು ಆದೇಶ ಮಾಡಿದ್ದಾರೆ. ರಾಜ್ಯಪಾಲರ ಈ ಕ್ರಮಕ್ಕೆ ಬಸವ ತಿಳುವಳಿಕೆ ಸಂಶೋಧನಾ ಕೇಂದ್ರ ಪುಣೆ ಇದರ ಅಧ್ಯಕ್ಷರಾದ ಡಾ ಶಶಿಕಾಂತ ಪಟ್ಟಣ, ಸಮಸ್ತ ಲಿಂಗಾಯತ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷೆ ಡಾ ಜಯಶ್ರೀ ಪಟ್ಟಣ, ಪ್ರೊ ಆರ್ ಎಸ್ ಬಿರಾದಾರ, ಪ್ರೊ ಶಾರದಮ್ಮ ಪಾಟಿಲ, ಸರಸ್ವತಿ ಪಾಟೀಲ, ಸುಧಾ ಪಾಟೀಲ, ರೇಣುಕಾ ಪಾಟೀಲ, ಸಿದ್ದಪ್ಪ ಪಡನಾಡ, ಗೌರಮ್ಮ ನಾಶಿ ಮುಂತಾದ ಅನೇಕರು ಹರ್ಷ ವ್ಯಕ್ತ ಪಡಿಸುತ್ತ ರಾಜ್ಯಪಾಲರ ಕ್ರಮವನ್ನು ಹಂಪಿ ಕನ್ನಡ ವಿವಿ ಕುಲಪತಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿದ್ದಾರೆ.

