ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ದ್ವಿತೀಯ ರಾಷ್ಟ್ರೀಯ ಶಸ್ತ್ರಚಿಕಿತ್ಸಕರ ದಿನಾಚರಣೆ ಅಂಗವಾಗಿ ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಶಸ್ತ್ರ ಚಿಕಿತ್ಸಾ ವಿಭಾಗದ ವತಿಯಿಂದ ಹಾಗೂ ವಿಜಯಪುರ ಜಿಲ್ಲಾ ಶಸ್ತ್ರ ಚಿಕಿತ್ಸಕರ ಸಂಘದ ಸಹಯೋಗದಲ್ಲಿ ಅಂತಿಮ ಎಂ.ಬಿ.ಬಿ.ಎಸ್. ವಿದ್ಯಾರ್ಥಿಗಳಿಗಾಗಿ “ಸರ್ಜಿಕ್ವಿಜ್” ರಸಪ್ರಶ್ನೆ ಕಾರ್ಯಕ್ರಮವನ್ನು ಸೋಮವಾರ ಸ್ಕಿಲ್ ಲ್ಯಾಬೊರೆಟರಿ ಕಟ್ಟಡದ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ ಕೋಟೆಣ್ಣವರ, ರಾಷ್ಟ್ರೀಯ ಶಸ್ತ್ರಚಿಕಿತ್ಸಕರ ದಿನಾಚರಣೆಯ ಉದ್ದೇಶ ಜನಸಾಮಾನ್ಯರಿಗೆ ಶಸ್ತ್ರ ಚಿಕಿತ್ಸಕರ ಮಹತ್ವವನ್ನು ತಿಳಿಸುವುದು, ಸಮಾಜ ಸುಧಾರಣಾ ಕಾರ್ಯಗಳಲ್ಲಿ ಶಸ್ತ್ರ ಚಿಕಿತ್ಸಕರು ಪಾಲ್ಗೊಳ್ಳುವುದು ಮತ್ತು ಸ್ನಾತಕ ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಶಸ್ತ್ರ ಚಿಕಿತ್ಸಾ ವಿಭಾಗದ ಬಗ್ಗೆ ಆಸಕ್ತಿ ಮೂಡಿಸುವುದಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆಗೆ ರಸಪ್ರಶ್ನೆ ಕಾರ್ಯಕ್ರಮ ಸೂಕ್ತ ವಿಧಾನವಾಗಿದ್ದು, ಜ್ಞಾನದ ಜೊತೆಗೆ ಸಮಯ ಪ್ರಜ್ಞೆ, ಗುಂಪು ಸಾಮರ್ಥ್ಯ ಮತ್ತು ವಿಶ್ಲೇಷಣಾ ಸಾಮರ್ಥ್ಯಗಳನ್ನು ಅಳೆಯುವ ಮಹತ್ವದ ಸಾಧನವಾಗಿದೆ” ಎಂದು ಅಭ್ಯರ್ಥಿಗಳಿಗೆ ಶುಭ ಹಾರೈಸಿದರು.
ಪೂರ್ವಭಾವಿ ಪರೀಕ್ಷೆಯ ಮೂಲಕ ಅಂತಿಮ ಸುತ್ತಿಗೆ ಆಯ್ಕೆಯಾದ 10 ವಿದ್ಯಾರ್ಥಿಗಳನ್ನು ಐದು ತಂಡಗಳಾಗಿ ವಿಭಾಗಿಸಲಾಗಿತ್ತು. ಪ್ರತಿ ತಂಡಕ್ಕೂ ಬಿ.ಎಲ್.ಡಿ.ಇ. ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಹಿರಿಯ ವೈದ್ಯರ ಹೆಸರನ್ನು ನಾಮಕರಣ ಮಾಡಲಾಗಿತ್ತು. ಕ್ವಿಜ್ ಮಾಸ್ಟರ್ ಆಗಿ ಡಾ. ದೀಪಕ ಚವ್ಹಾಣ ಕಾರ್ಯಕ್ರಮವನ್ನು ಅತ್ಯಂತ ಆಕರ್ಷಕವಾಗಿ ನಿರ್ವಹಿಸಿದರು.
ಡಾ. ಬಿ. ಸಿ. ಉಪ್ಪಿನ ತಂಡದ ಪಾರ್ಥ ಶೇಂದೆ ಮತ್ತು ಸತ್ಯಜಿತ ಪ್ರಥಮ ಸ್ಥಾನ ಪಡೆದರು. ಡಾ. ಪಿ. ಎಲ್. ಕರಿಹೋಳು ತಂಡದ ಅದಿತಿಕುಮಾರ ಮತ್ತು ಪ್ರಜಕ್ತಾ ದ್ವಿತೀಯ ಸ್ಥಾನ, ಡಾ. ವಿ. ಬಿ. ರೆಡ್ಡಿ ತಂಡದ ರೇವತಿ ಮತ್ತು ಸಾನಿಕಾ.ಬಾಗ್ವೆ ತೃತೀಯ ಸ್ಥಾನ ಅಲಂಕರಿಸಿದರು. ವಿಜೇತ ವಿದ್ಯಾರ್ಥಿಗಳಿಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಜಯಪುರ ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ.ರಾಜಕುಮಾರ.ಹಿರೇಮಠ,ಪ್ರಾಧ್ಯಾಪಕರಾದ ಡಾ. ಎಂ.ಬಿ.ಪಾಟೀಲ, ಡಾ. ವಿಜಯಾ ಪಾಟೀಲ, ಡಾ. ಗಿರೀಶ ಕುಲ್ಲೊಳ್ಳಿ, ಡಾ. ವಿಕ್ರಂ ಸಿಂದಗಿಕರ, ವಿಜಯಪುರ ಜಿಲ್ಲಾ ಶಸ್ತ್ರ ಚಿಕಿತ್ಸಕರ ಸಂಘದ ಕಾರ್ಯದರ್ಶಿ ಡಾ. ರಮಾಕಾಂತ ಬಳೂರಕರ ಪ್ರಮಾಣ ಪತ್ರ ಮತ್ತು ಪ್ರಶಸ್ತಿಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಡಾ. ಸಂತೋಷ ಮಡಗೊಂಡ, ಡಾ. ವೀಣಾ ಘಂಟೆಪ್ಪಗೋಳ, ಡಾ. ಆನಂದ ಸುಂತನ, ಡಾ. ಅಕ್ಷತಾ ಗೌಡರ ಹಾಗೂ ಡಾ. ಭುವನೇಶ್ವರಿ ಉಪಸ್ಥಿತರಿದ್ದರು. ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು. ಕಾರ್ಯಕ್ರಮದ ಕೊನೆಯಲ್ಲಿ ಸಂಯೋಜಕ ಡಾ. ಮಂಜುನಾಥ ಸಾವಂತ ಅವರು ವಂದಿಸಿದರು.
ಚಿಕಿತ್ಸಾ ಸಪ್ತಾಹ ಶಿಬಿರದ ಸಮಾರೋಪ
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಶಸ್ತ್ರಚಿಕಿತ್ಸಕರ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಹಾಗೂ ಚಿಕಿತ್ಸಾ ಸಪ್ತಾಹ ಶಿಬಿರದ ಸಮಾರೋಪವೂ ನಡೆಯಿತು. ಶಿಬಿರದಲ್ಲಿ ಸುಮಾರು 530ಕ್ಕೂ ಅಧಿಕ ರೋಗಿಗಳನ್ನು ತಪಾಸಣೆ ಮಾಡಲಾಗಿದ್ದು, ಅಗತ್ಯವಿದ್ದ ಸುಮಾರು 75 ರೋಗಿಗಳಿಗೆ ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು.
ಅಲ್ಲದೆ, ಶುಕ್ರವಾರ ಬಿ.ಎಲ್.ಡಿ.ಇ. ಧ್ವನಿ 98.6 ಎಫ್.ಎಂ.ನಲ್ಲಿ ಪ್ರಸಾರವಾದ “ಸರ್ಜನ್ ಮತ್ತು ಸಮಾಜ” ರೇಡಿಯೋ ಸಂವಾದ ಕಾರ್ಯಕ್ರಮದಲ್ಲಿ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ. ಮಂಜುನಾಥ ಕೋಟೆಣ್ಣವರ ಹಾಗೂ ವಿಜಯಪುರ ಜಿಲ್ಲಾ ಶಸ್ತ್ರಚಿಕಿತ್ಸಕರ ಸಂಘದ ಕಾರ್ಯದರ್ಶಿ ಡಾ. ರಮಾಕಾಂತ ಬಳೂರಕರ ಭಾಗವಹಿಸಿದ್ದರು. ರವಿವಾರದಂದು 10 ಮಂದಿ ಕಿರಿಯ ವೈದ್ಯರು ಸ್ವಯಂಪ್ರೇರಿತ ರಕ್ತದಾನ ಮಾಡುವ ಮೂಲಕ ರಾಷ್ಟ್ರೀಯ ಶಸ್ತ್ರಚಿಕಿತ್ಸಕರ ದಿನಾಚರಣೆಗೆ ವಿಶೇಷ ಮೆರುಗು ತಂದರು.

