ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಪಡೆಯುವುದರಿಂದ ಕ್ಷಯ ರೋಗ ನಿಯಂತ್ರಿಸಬಹುದು ಎಂದು ಗರಸಂಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಧಿಕಾರಿಗಳಾದ ಡಾ.ತೈಸಿನ್ ಶಿವಣಗಿ ಹೇಳಿದರು.
ತಾಲೂಕಿನ ಕುಂಟೋಜಿ ಗ್ರಾಮದ ಆರೋಗ್ಯ ಉಪಕೇಂದ್ರದಲ್ಲಿ ಗರಸಂಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಮ ಪಂಚಾಯತಿ ಸಂಯುಕ್ತಾಶ್ರಯದಲ್ಲಿ ೧೦೦ ದಿನದ ಕ್ಷಯ ಮುಕ್ತ ಭಾರತ ಅಂಗವಾಗಿ ಹಮ್ಮಿಕೊಂಡಿದ್ದ ಉಚಿತ ಎಕ್ಸರೇ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಚ್ಐವಿ ಸೋಂಕಿತರು, ಮಧುಮೇಹ ಪೀಡಿತರು ಹಾಗೂ ಧೂಮಪಾನ ಮಾಡುವವರು ಬಹುಬೇಗ ಸೋಂಕಿಗೆ ಒಳಗಾಗುತ್ತಾರೆ. ಕ್ಷಯ ರೋಗಿ ಕೆಮ್ಮಿದಾಗ ಮತ್ತು ಸೀನಿದಾಗ ಹೊರ ಬರುವ ರೋಗಾಣುಗಳು ಆರೋಗ್ಯವಂತ ವ್ಯಕ್ತಿಯ ದೇಹ ಸೇರಿ ಸೋಂಕು ಉಂಟಾಗುತ್ತದೆ. ಕ್ಷಯ ರೋಗಕ್ಕೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸಾ ಸೌಲಭ್ಯಗಳನ್ನು ನೀಡಲಾಗುತ್ತದೆ. ಕ್ಷಯ ರೋಗಿಗಳು ನಿರಂತರ ೬ ತಿಂಗಳು ಸೂಕ್ತ ಚಿಕತ್ಸೆ ಪಡೆದರೆ ರೋಗದಿಂದ ಮುಕ್ತಿ ಹೊಂದಬಹುದು. ನಿಯಮಿತವಾಗಿ ಔಷಧ ತೆಗೆದುಕೊಳ್ಳದಿದ್ದರೆ ಅಡ್ಡ ಪರಿಣಾಮಗಳು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತೆ. ಎರಡು ವಾರಕ್ಕೂ ಹೆಚ್ಚು ಕೆಮ್ಮು, ಜ್ವರ ಕಂಡು ಬಂದಲ್ಲಿ ಹತ್ತಿರದ ಆಸ್ಪತ್ರೆ ಗಳಿಗೆ ಭೇಟಿ ನೀಡಿ ಕ್ಷಯ ರೋಗ ಪರೀಕ್ಷೆ ಮಾಡಿಸುವಂತೆ ಸಲಹೆ ನೀಡಿದರು.
ಗರಸಂಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮೇಲ್ವಿಚಾರಕ ಎಂ ಎಸ್ ಗೌಡರ ಮಾತನಾಡಿ ನಗರ, ಹಳ್ಳಿ, ಪಟ್ಟಣ ಸೇರಿ ಎಲ್ಲ ಕಡೆಗೂ ಕ್ಷಯ ರೋಗಿಗಳ ಪತ್ತೆ ಹಚ್ಚುವ ಕಾರ್ಯ ತಾಲೂಕಿನಾದ್ಯಂತ ಆಯ್ದ ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗಿದ್ದು ಕ್ಷಯರೋಗ ಲಕ್ಷಣಗಳು ಇರುವವರು ತಪಾಸಣೆಗೆ ಒಳಪಟ್ಟು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಗ್ರಾಮದ ಒಟ್ಟು ೧೧೮ ಜನರು ಉಚಿತ ಎಕ್ಸರೇ ಪರೀಕ್ಷೆಯಲ್ಲಿ ಭಾಗಿಯಾದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎನ್.ಜಿ.ತಾಳಿಕೋಟಿ, ಮಂಜುನಾಥ ಮಾಮನೆ, ಆರೋಗ್ಯ ನಿರೀಕ್ಷಕ ಎಸ್.ಬಿ.ಹೂಗಾರ, ಛಾಯಾ ಚಿತ್ರಣಾಧಿಕಾರಿಗಳಾದ ಈರಣ್ಣ ಕಸಬೇಗೌಡರ, ಬಸವರಾಜ್ ಕುಂಟೋಜಿ, ಬಸವರಾಜ್ ಹವೇರಿ, ವಿ.ಕೆ.ಪಾಟೀಲ್, ಝೆಡ್.ಎಮ್.ಬೀಳಗಿ, ಮಲ್ಲನಗೌಡ ಬಿರಾದಾರ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಆಶಾ ಕಾರ್ಯಕರ್ತೆಯರು ಇದ್ದರು.

