ವಿಜಯಪುರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮದಲ್ಲಿ ಡಾ. ವಿ ಡಿ ಐಹೊಳ್ಳಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸೂಜಿ ಕಾಯಕದ ಶಂಕರ ದಾಸಿಮಯ್ಯನವರು ಮೂಲತಃ ಶೈವ ಬ್ರಾಹ್ಮಣರು. ನವಿಲೆಯ ಜಡೆ ಶಂಕರದೇವರ ಭಕ್ತಿ ಸೇವೆಗೈದು ಲಿಂಗಾಯತ ಧರ್ಮ ಸೇರಿದರು. ಧ್ಯಾನ, ತಪಸ್ಸು ಮಾಡಿ ಶಿವನಿಂದ ಉರಿಗಣ್ಣನ್ನು ಪಡೆದು ಸ್ವೇಚ್ಛಾಚಾರಿ ಭವಿಗಳ ಅಹಂಕಾರವನ್ನು ನಿರಸನಗೊಳಿಸಿದರು. ಪರಿಶುದ್ಧವಾದ ಮನಸ್ಸಿನ, ಮಹಾ ತಪಸ್ವಿಯಾದ ಶಂಕರ ದಾಸಿಮಯ್ಯನವರೇ ಶಿವದಾಶಿವಯ್ಯನವರೆಂದು ಸಂಶೋಧನೆಯಿಂದ ತಿಳಿದು ಬಂದಿದೆ. ಧರ್ಮಾನುಯಾಯಿಗಳು ಶರಣರ ತತ್ವಗಳನ್ನು ಅರಿತು ಅಳವಡಿಸಿಕೊಂಡರೆ ಬದುಕು ಸಾರ್ಥಕವಾಗುವುದೆಂದು ಡಾ. ವಿ ಡಿ ಐಹೊಳ್ಳಿ ಹೇಳಿದರು. ಅವರು ವೀರಶೈವ ಮಹಾಸಭೆಯಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ “ಶಿವದಾಶಿವಯ್ಯನವರ ಅನುಭವ” ಕುರಿತು ಉಪನ್ಯಾಸ ನೀಡಿದರು.
ಜಂಬುನಾಥ ಕಂಚ್ಯಾಣಿ ಮಾತನಾಡಿ, ವಿಜಯಪುರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಸದಸ್ಯತ್ವ, ದತ್ತಿಗಳ ಸಂಖ್ಯೆ ಮತ್ತು ಮಹಾಮನೆಯ ಚಂದಾದಾರತ್ವದಲ್ಲಿ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ ಎಂದು ಹೇಳಿದರು.
ವಿ ಸಿ ನಾಗಠಾಣ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಪ್ರಪಂಚದಲ್ಲಿಯೇ ಬಸವಾದಿ ಶರಣರ ವಚನಗಳು ವಿದ್ವಾಂಸರ, ವಿಚಾರವಾದಿಗಳ ಹಾಗೂ ಸಮಾಜ ಸುಧಾರಕರ ಗಮನ ಸೆಳೆದಿವೆ ಎಂದು ಹೇಳಿದರು.
ದತ್ತಿ ದಾಸೋಹಿಗಳಾದ ಯುವರಾಜ ಚೋಳಕೆ ಮಾತನಾಡಿದರು.
ಅಮರೇಶ ಸಾಲಕ್ಕಿ ಸ್ವಾಗತಿಸಿದರು. ಬಸವಲಿಂಗಪ್ಪ ಸಾರವಾಡ ವಂದಿಸಿದರು, ಈರಣ್ಣ ತೊಂಡಿ ಕಟ್ಟಿ ಕಾರ್ಯಕ್ರಮ ನಡೆಸಿಕೊಟ್ಟರು.
ಸಭೆಯಲ್ಲಿ ನಾಗಮ್ಮ ಚೋಳಕೆ, ಎಸ್ ಜಿ ನಾಡಗೌಡರ, ಎಸ್ ವೈ ಗದಗ, ಶಾರದಾ ಕೊಪ್ಪ, ಚೇತನ್ ಕುಮಾರ, ಜಗದೀಶ ಮೊಟಗಿ, ಶಕುಂತಲಾ ಮೋಸಲಗಿ, ಪ್ರಿಯಾಂಕಾ, ಆರ್ ಎಂ ದೊಡ್ಡಮನಿ ಹಾಗೂ ಶಿವಸಿಂಪಿ ಸಮುದಾಯದ ಗಣ್ಯರು ಉಪಸ್ಥಿತರಿದ್ದರು.

