ಉದಯರಶ್ಮಿ ದಿನಪತ್ರಿಕೆ
ಎಚ್ ಡಿ ಕೋಟೆ: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ಶಾಸಕ ಅನಿಲ್ ಚಿಕ್ಕಮಾದುಗೆ ಸಚಿವ ಸ್ಥಾನ ನೀಡಬೇಕು. ಇಲ್ಲವಾದರೆ ಮೈಸೂರಿನ ಪುರಭವನದ ಮುಂದೆ ಎಸ್ ಚಿಕ್ಕಮಾದು ಅಭಿಮಾನಿ ಬಳಗದ ನೇತೃತ್ವದಲ್ಲಿ ನಾಯಕ ಸಮುದಾಯ ಬೃಹತ್ ಪ್ರತಿಭಟನೆ ಮಾಡಲಿದೆ ಎಂದು ಮೈಸೂರು- ಚಾಮರಾಜನಗರ ಜಿಲ್ಲೆ ಎಸ್ ಚಿಕ್ಕಮಾದು ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಕ್ಯಾತನಹಳ್ಳಿ ನಾಗರಾಜು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದ ವಾಲ್ಮೀಕಿ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕ್ಯಾತನಹಳ್ಳಿ ನಾಗರಾಜು. ಅನಿಲ್ ಚಿಕ್ಕಮಾದು ಅವರು ಹಳೇ ಮೈಸೂರು ಭಾಗದಲ್ಲಿ ಎಸ್ಟಿ ಸಮುದಾಯದ ಪ್ರಭಾವಿ ಶಾಸಕರು. ತನ್ನದೇ ಆದ ವರ್ಚಸ್ಸು ಹೊಂದಿರುವ ಪ್ರಮುಖ ನಾಯಕರು. ಪ್ರತಿ ಚುನಾವಣೆಯಲ್ಲೂ ಶೇ. 70 ರಷ್ಟು ನಾಯಕ ಸಮುದಾಯ ಕಾಂಗ್ರೆಸ್ ಬೆಂಬಲಿಸುತ್ತಾ ಬರುತ್ತಿದೆ. ಮೈಸೂರು ಚಾಮರಾಜನಗರ, ಕೊಡಗು, ಮಂಡ್ಯ ಹಾಗೂ ಹಾಸನ ಜಿಲ್ಲೆಯಲ್ಲಿ 6 ಲಕ್ಷ ನಾಯಕ ಸಮುದಾಯದ ಜನಸಂಖ್ಯೆ ಇದ್ದು, 8 ಕ್ಷೇತ್ರಗಳಲ್ಲಿ ನಮ್ಮ ಸಮುದಾಯದ ಮತಗಳೇ ನಿರ್ಣಾಯಕವಾಗಿವೆ. ಕಳೆದ 30 ವರ್ಷಗಳಿಂದಲೂ ಈ ಭಾಗದಲ್ಲಿ ನಮ್ಮ ಸಮಾಜದ ಶಾಸಕರಿಗೆ ಸಚಿವ ಸ್ಥಾನ ನೀಡಿಲ್ಲ. ಹೀಗಾಗಿ ಈ ಬಾರಿ ಶಾಸಕ ಅನಿಲ್ ಚಿಕ್ಕಮಾದುಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ. ಶಾಸಕರಿಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಖಾತೆ ಅಥವಾ ಕ್ರೀಡಾ ಇಲಾಖೆ ಖಾತೆ ಸಿಗುವ ಭರವಸೆ ಇದೆ. ಒಂದು ವೇಳೆ ನಮ್ಮ ನಿರೀಕ್ಷೆ ಹುಸಿ ಮಾಡಿದರೆ, ನಾಯಕ ಸಮುದಾಯ ಬೀದಿಗಿಳಿಯಲಿದೆ. ತಾಲೂಕು ಮಟ್ಟ, ಜಿಲ್ಲಾ ಕೇಂದ್ರಗಳಲ್ಲೂ ಉಗ್ರ ಹೋರಾಟ ಮಾಡಲಿದೆ. ಈ ಸರ್ಕಾರಕ್ಕೆ ಇನ್ನು ಎರಡು ವರ್ಷ ಅಧಿಕಾರ ಇರುವುದರಿಂದ ಸದ್ಯ ದುಡುಕಿನ ನಿರ್ಧಾರ ತೆಗೆದುಕೊಳ್ಳುವುದಿಲ್ಲ. 2028ಕ್ಕೆ ಚುನಾವಣೆಯಲ್ಲಿ ಅನಿಲ್ ಚಿಕ್ಕಮಾದು ಯಾವ ಪಕ್ಷದಿಂದ ಸ್ಪರ್ಧೆ ಮಾಡಬೇಕು ಎಂಬುದನ್ನು ನಮ್ಮ ನಾಯಕ ಸಮುದಾಯ ನಿರ್ಧಾರ ಮಾಡಲಿದೆ ಎಂದು ಹೇಳಿದರು.
ಮೈಸೂರು- ಚಾಮರಾಜನಗರ ಜಿಲ್ಲೆ ಎಸ್ ಚಿಕ್ಕಮಾದು ಅಭಿಮಾನಿ ಬಳಗದ ಕಾರ್ಯದರ್ಶಿ ಮಹೇಶ್ ನಾಯಕ, ಗೌರವಾಧ್ಯಕ್ಷ ದೊರೆಸ್ವಾಮಿ ನಾಯಕ, ಟಿ. ಅಂಕನಾಯಕ, ಯಜಮಾನರಾದ ನಾಗರಾಜ, ಎಸ್ಸಿ ಎಸ್ಟಿ ಜಾಗೃತಿ ಸಮಿತಿಯ ಸದಸ್ಯ ವೇಣು, ನಿರ್ದೇಶಕರಾದ ಬೆಟ್ಟ ನಾಯಕ, ಅಗತ್ತೂರು ಅಂಕನಾಯಕ, ನಿಂಗರಾಜು , ಬೈರನಾಯಕ, ಶ್ರೀನಿವಾಸ್, ಮಾಗುಡಿಲು ಮಣಿ, ರಾಮ ನಾಯಕ, ಜಯಪ್ಪ, ಗೋವಿಂದ, ಚೆಲುವರಾಜು, ದೊಡ್ಡವೀರ ನಾಯಕ, ದಾಸನಾಯಕ, ನಾಗನಾಯಕ, ಕಾಳಿಂಗ ನಾಯಕ, ಕೃಷ್ಣ, ಬೀರೇಶ್ ಮಡಿವಾಳ್, ಸಿದ್ದು, ಕುಮಾರ್, ಕೆಂಪ, ಗೋಪಾಲ್, ರವಿಶಂಕರ್, ಕುಮಾರ್, ಚೆನ್ನನಾಯಕ, ಪುರುಷೋತ್ತಮ್, ವಕೀಲ ಲೋಕೇಶ್ ಸೇರಿದಂತೆ ನಾಯಕ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

