ವಿಜಯಪುರದಲ್ಲಿ ಬಸವಾದಿ ಚಿಂತಕ ಬಸನಗೌಡ ಹರನಾಳ ಅಸಮಾಧಾನ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸುಪ್ರೀಂಕೋರ್ಟ್ ಛೀಮಾರಿ ಹಾಕಿದರೂ ಸಹ ಕನೇರಿ ಶ್ರೀಗಳು ಬಸವಾದಿ ಶರಣರನ್ನು ನಿಂದಿಸುವ, ವಚನಗಳ ಸಾರವನ್ನು ಅಪಾರ್ಥ ಮಾಡುವ ಹಾಗೂ ಬಸವಾದಿ ಅನುಯಾಯಿಗಳನ್ನು ಬಸವ ತಾಲಿಬಾನಿ ಎಂದು ಹೇಳುವ ಮೂಲಕ ನ್ಯಾಯಾಂಗ ನಿಂದನೆಯನ್ನು ಮಾಡುತ್ತಿದ್ದಾರೆ ಎಂದು ಬಸವಾದಿ ಚಿಂತಕ ಬಸನಗೌಡ ಹರನಾಳ ಅಸಮಾಧಾನ ಹೊರಹಾಕಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾಮೀಜಿಯಾಗಿ ಬಸವಾದಿ ಚಿಂತಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿರುವುದು ಸರಿಯಲ್ಲ, ಬಸವಾದಿ ಶರಣರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಬಗ್ಗೆ ಕೋರ್ಟ್ ಸಹ ಸ್ವಾಮೀಜಿಗಳಿಗೆ ಛಿಮಾರಿ ಹಾಕಿದೆ, ಆದರೂ ಸಹ ಶರಣರ ವಚನ ತಿರುಚುವುದು, ಬಸವಾದಿ ಶರಣರನ್ನು ಬೈಯುತ್ತಿದ್ದಾರೆ.
ಬಸವ ತಾಲಿಬಾನಿ ಎಂದು ಹೇಳುವ ಮೂಲಕ ನ್ಯಾಯಾಂಗ ನಿಂದನೆ ಮಾಡುತ್ತಲೇ ಇದ್ದಾರೆ, ನಿಂದನೆ ಮಾಡುವುದು ಸಲ್ಲದ ಕೆಲಸ, ಮಾಡುತ್ತಿರುವ ಉದ್ದೇಶ ಸರಿಯಿಲ್ಲ, ಬಸವಾದಿ ಶರಣರ ಹಿಂದೂ ಸಮಾವೇಶ ಮಾಡುತ್ತಿರುವುದು ಬಸವಣ್ಣನಿಗೆ ವಿರೋಧಿ ನಡೆಯಾಗಿದೆ ಎಂದು ಅಸಮಾಧಾನ ಹೊರಹಾಕಿದರು.
ಎಲ್ಲ ಜಿಲ್ಲೆಗಳಲ್ಲಿ ಕನೇರಿ ಶ್ರೀಗಳ ವಿರುದ್ದ ಪ್ರತಿಭಟನೆ ಆಯೋಜಿಸಲಾಗಿದೆ. ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಗಳಿಗೆ ಮನವಿ, ಅವರಿಗೆ ಕಾರ್ಯಕ್ರಮ ಆಯೋಜನೆಗೆ ಅವಕಾಶ ನೀಡಬಾರದು ಎಂದು ವಿವರಿಸಿದರು.
ನಿಂದನೆ ಮಠಾಧೀಶರು ಮಾಡುವ ಕೆಲಸವಲ್ಲ. ಅವರು ತಮ್ಮ ಮಠದಲ್ಲಿ ಪ್ರವಚನ ನೀಡಲಿ. ಅದು ಬಿಟ್ಟು ಹಿಂದೂ ಶರಣ ಸಮಾವೇಶ ಹೆಸರಲ್ಲಿ ವಚನಗಳ ತಿರುಚುವುದು, ಬಸವಪರ ಸಂಘಟನೆಗಳು, ಸ್ವಾಮೀಜಿ ಹಾಗೂ ಮುಖ್ಯಮಂತ್ರಿಗಳನ್ನೂ ಬೈಯುವ ಕೆಲಸ ಮಾಡುತ್ತಿದ್ದಾರೆ ಎಂದರು.
ವೈದ್ಯ ಡಾ.ರವಿಕುಮಾರ್ ಬಿರಾದಾರ ಮಾತನಾಡಿ, ಜೂನ್ ೨೮ರಂದು ಬಸವ ಕಲ್ಯಾಣದಲ್ಲಿ ಸಮಾವೇಶಕ್ಕೆ ಮುಂದಾಗಿದ್ದಾರೆ. ಹಿಂದೂ ಶಿವಶರಣರ ಸಮಾವೇಶ ಎಂದು ಕಲಬೆರಕೆ ಸಮಾವೇಶ ಮಾಡಬೇಡಿ. ಪ್ರತ್ಯೇಕ ಹಿಂದೂ ಸಮಾವೇಶ ಮಾಡಿ, ಇಲ್ಲವೇ ಶಿವಶರಣರ ಸಮಾವೇಶವನ್ನಾದರೂ ಮಾಡಿ ಎಂದರು.
ಕನ್ನೇರಿ ಸ್ವಾಮೀಜಿ ಅಸಂಬದ್ಧ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ, ಕನೇರಿ ಸ್ವಾಮೀಜಿ ಅವರನ್ನು ಬಿಜೆಪಿ-ಸಂಘಪರಿವಾರದವರು ಬಿಜೆಪಿ, ಆರ್ಎಸ್ಎಸ್ ದುರ್ಬಳಕೆ ಮಾಡಿಕೊಳ್ಳುತ್ತಿವೆ, ಸ್ವಾಮೀಜಿ ಇಷ್ಟು ವರ್ಷಗಳ ಕಾಲ ಯಾಕೆ ಸುಮ್ಮನೆ ಇದ್ದರು. ಈಗ ಯಾಕೆ ಹಿಂದೂ, ಲಿಂಗಾಯತ ಬಗ್ಗೆ ಮಾತನಾಡುತ್ತಿದ್ದಾರೆ?, ಇದರ ಉದ್ದೇಶವೇನು?, ಇದನ್ನು ಗಮನಿಸಿದರೆ ದ್ವೇಷ ಬಿತ್ತುವ ಹುನ್ನಾರ ಅಡಗಿದೆ ಎಂದರು.
ಬಸವಣ್ಣನ ಚಿಂತನೆಯು ಜಾಗತಿಕವಾಗಿ ಬೆಳೆಯುತ್ತಿದೆ. ಇದನ್ನು ದುರ್ಬಳಕೆ ಮಾಡಿಕೊಳ್ಳಲು ಬಸವಣ್ಣನ ಹೆಸರು ಹೇಳುತ್ತಿದ್ದಾರೆ. ಇದಕ್ಕಾಗಿ ಶರಣರ ವಚನಗಳನ್ನು ತಿರುಚಿ ಹೇಳುವ ಕೆಲಸ ಮಾಡುತ್ತಿದ್ದಾರೆ. ಬಸವಣ್ಣ ಹಿಂದೂ ಧರ್ಮವನ್ನು ತಿರಸ್ಕರಿಸಿದರು. ಆಗಲೇ ಲಿಂಗಾಯತ ಧರ್ಮವನ್ನು ಸ್ಥಾಪಿಸಿದರು. ಆದರೆ, ಸಮಾಜ ಸುಧಾರಣೆ ಮಾಡಿದರು, ಹಿಂದೂ ಧರ್ಮವನ್ನು ಪ್ರತಿಪಾದಿಸಿದರು ಎಂದರು.
ಹಿಂದೂ ಧರ್ಮವನ್ನು ಬಸವಣ್ಣ ಪ್ರತಿಪಾದಿಸಿದ್ದೇ ನಿಜವಾದರೆ, ಲಕ್ಷಾಂತರ ವಚನಗಳನ್ನು ಸುಟ್ಟಿದ್ದು ಯಾಕೆ, ಶರಣರನ್ನು ಯಾಕೆ ಕೊಲೆ ಮಾಡಲಾಯಿತು. ಅವರನ್ನು ಕೊಂದಿದ್ದು ಯಾರು? ಎಂದು ಪ್ರಶ್ನಿಸಿದರು.
ಮುಖಂಡರಾದ ಪ್ರಭುಗೌಡ ಬಿರಾದಾರ, ಚೆನ್ನು ಕಟ್ಟಿಮನಿ, ಅಡಿವೆಪ್ಪ ಸಾಲಗಲ್ಲ, ನಾಗರಾಜ ಲಂಬು ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

