ಲೇಖನ
– ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ಹಲೋ ಅವನಿ,
ಮುಗಿಲೆತ್ತರಕ್ಕೆ ನಿಂತಿದ್ದ ಕಾಲೇಜಿನ ಕಟ್ಟಡದ ಮುಂದೆ ಎಲ್ಲೆಲ್ಲೂ ವಿದ್ಯಾರ್ಥಿಗಳ ಸಡಗರದ ಓಡಾಟ. ಅಂದು ಕೊನೆ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುವ ಹಾಗೂ ವಾರ್ಷಿಕೋತ್ಸವದ ಆಚರಣೆ ಇತ್ತು. ಹಬ್ಬದ ವಾತಾವರಣದಲ್ಲಿ ನೂರಾರು ಹುಡುಗಿಯರ ನಡುವೆ ತಿದ್ದಿ ತೀಡಿದ ಬೊಂಬೆಯಂತಿರುವ ನೀನು ಚಂದದ ಮುಗುಳ್ನಗೆ ಹೊತ್ತು ಓಡಾಡುತ್ತಿದ್ದೆ. ನಿನ್ನ ಕಂಡು ಪಡ್ಡೆ ಹುಡುಗರ ಕಣ್ಣುಗಳು ಅರಳಿದವು. ಆದರೆ ಛೇಡಿಸುವ ಸಾಹಸ ಯಾರೂ ಮಾಡಲಿಲ್ಲ. ಹುಡುಗಿಯರು ಸಹ ಕಣ್ಮಿಟುಕಿಸದೇ ನೋಡತೊಡಗಿದ್ದರು. ಉಳಿದ ಹುಡುಗಿಯರ ನಡುವೆ ನೀನು ವಿಭಿನ್ನವಾಗಿ ಎದ್ದು ಕಾಣುತ್ತಿದ್ದೆ. ಬೆರಳಣಿಕೆಯಷ್ಟು ಪ್ರತಿಭಾವಂತ ಹುಡುಗಿಯರಲ್ಲಿ ಮಿಂಚುತ್ತಿದ್ದೆ. ನಿನ್ನ ಭಾಷಣ ಕಲೆ ಪ್ರಬಂಧ ಬರಹ ಕಾವ್ಯಗಾಯನದ ಪ್ರಶಸ್ತಿಗಳು ಎಲ್ಲರ ಚಿತ್ತವನ್ನು ಹಿಡಿದಿಟ್ಟುಕೊಂಡವು. ಅದಲ್ಲದೇ ಕಾರ್ಯಕ್ರಮದ ಕೊನೆಯಲ್ಲಿ ನಿನ್ನ ಮುಡಿಗೇರಿದ ಬೆಸ್ಟ್ ಸ್ಟುಡೆಂಟ್ ಅವಾರ್ಡ್ ನಿನ್ನ ಖುಷಿಯ ಮೇರೆಯನ್ನು ಮೀರಿಸಿತ್ತು.
ದಿನಪತ್ರಿಕೆಗಳಲ್ಲಿ ಮ್ಯಾಗಜಿನ್ಗಳಲ್ಲಿ ನೀ ಬರೆಯುತ್ತಿದ್ದ ಕವಿತೆಗಳು ಓದುಗರ ಮನ ಗೆದ್ದಿದ್ದವು. ಆ ದಿನ ನಡೆದ ಅಂತರ್ ಕಾಲೇಜು ಸ್ಪರ್ಧೆಗಳಿಗೆ ಬಂದ ಬೇರೆ ಕಾಲೇಜಿನ ಹುಡುಗ ಹುಡುಗಿಯರಿಗೆ ನಿನ್ನನ್ನು ನೋಡುವ ಕಾತುರ.ಇನ್ನೂ ಕೆಲವರಂತೂ ನೇರವಾಗಿ ಭೇಟಿಯಾಗುವ ಆಸೆಯನ್ನು ಹೊತ್ತು ಬಂದಿದ್ದರು. ಅವರ ಜೊತೆಗೆಲ್ಲ ಸರಳ ಸಜ್ಜನಿಕೆಯಿಂದ ಮಾತನಾಡಿದೆ. ಬಹುತೇಕರು ನಿನ್ನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದರು. ‘ನಿಮ್ಮ ಕವಿತೆಯಂತೆ ನೀವೂ ಸುಂದರವಾಗಿರುವಿರಿ’ ಎಂದು ಪ್ರಶಂಸಿದರು. ಆಗ ಕಾಶ್ಮೀರ ಸೇಬಿನಂಥ ನಿನ್ನ ಕೆನ್ನೆ ಮತ್ತಷ್ಟು ರಂಗೇರಿತು.

ಅಭಿಮಾನಿಗಳ ಗುಂಪಿನಿಂದ ಬಿಡಿಸಿಕೊಂಡು, ಸರ್ಟಿಫಿಕೆಟ್ಗಳನ್ನು ಹಿಡಿದು ನನ್ನತ್ತ ಹೆಜ್ಜೆ ಹಾಕಿದಾಗ ನನ್ನೆದೆ ಫೋನ್ ರಿಂಗಣಿಸುತ್ತಿತ್ತು. ಆ ಕರೆಯನ್ನು ತುಂಡರಿಸಿದ್ದೆ ಅದರಲ್ಲಿ ಅಚ್ಚಾಗಿದ್ದ ನಿನ್ನ ಹೆಸರನ್ನೊಮ್ಮೆ ಮನದಲ್ಲಿ ಓದಿದೆ. ಅದರ ಮುಂದೆ ನನ್ನ ಹೆಸರನ್ನು ಸೇರಿಸಿದೆ. ಎಲ್ಲಿಲ್ಲದ ಖುಷಿ ಆದರೆ ಹೊರಗೆ ತೋರಗೊಡಲಿಲ್ಲ. ಅಭಿನಂದನೆಗಳನ್ನು ಹೇಳಲು ನಾ ಕೈ ಚಾಚಿದೆ. ನೀನು ಮೆಲ್ಲಗೆ ಕೈ ಕುಲುಕಿದಾಗ ರೋಮ ರೋಮಗಳು ನಿಮಿರಿದವು. ಮೊದಲ ಸ್ಪರ್ಷ ಕಣ್ಣಲ್ಲಿ ಕಣ್ಣಿಟ್ಟು ಕೇಳಿದೆ. ‘ಚಿಲುಮೆಯಂತೆ ಚಿಮ್ಮುವ ನಿನ್ನ ಚೆಲುವಿಕೆಯನ್ನು ಕಂಡ ಸನ್ಯಾಸಿಗೂ ಒಲವಾಗುವುದು’ ಎಂದೆ. ಇದೇನಿದು ಕವಿತೆಯ ಭಾಷೆಯಲ್ಲಿ ಪ್ರತಿಕ್ರಿಯಿಸುತ್ತಿರುವೆ ಎಂದು ನೀ ಕಾಲೆಳೆದಾಗ ‘ನಾನು ಕವಿಯಲ್ಲ, ನಿನ್ನಂಥ ಕವಿಗೆ ಕಿವಿಯಾಗುವವನು.’ ಎನ್ನುತ್ತ ನಕ್ಕೆ.
ನೋಡುನೋಡುತ್ತಿದ್ದಂತೆಯೇ ಮೈಮನಗಳಿಗೆಲ್ಲ ಹಬ್ಬಿದ ನಿನ್ನೊಲವು ಮತ್ತೆ ಮತ್ತೆ ನೆನಪಾಗುತ್ತಿತ್ತು. ಹೀಗಾಗಿಯೇ ನಿನ್ನನ್ನು ಭೇಟಿಯಾಗಬೇಕು ಅಂತ ನಿಮ್ಮ ಹಾಸ್ಟೆಲ್ ಬಳಿ ಎಷ್ಟೋ ಸಲ ಬಂದಿದ್ದೆ. ಆದರೆ ವಾಚ್ಮನ್ ಒಳಗೆ ಬಿಡುತ್ತಿರಲಿಲ್ಲ. ಅಂತ ತಡವರಿಸುತ್ತ ಹೇಳಬೇಕೆಂದನ್ನೆಲ್ಲ ಹೇಳಿ ಮುಗಿಸಿದೆ. ಆ ಮಾತುಗಳಿಗೆ ನೀನು ಕಣ್ಣರಳಿಸಿದೆ. ಮರ್ನಾಲ್ಕು ವರ್ಷಗಳ ಕೆಳಗೆ ಹಗಲು ರಾತ್ರಿ ನಿನ್ನ ಗುಂಗು ಅಮರಿಕೊಂಡಿದೆ. ಈಗೀಗಂತೂ ರಾಶಿ ರಾಶಿ ಕನಸುಗಳ ದಾರಿಯತ್ತ ದೂಡಿರುವೆ. ಇದರಿಂದಾಗಿಯೇ ಪ್ರೀತಿಯ ಅಮಲಿನ ಘಮಲು ಎತ್ತರೆತ್ತರಕ್ಕೆ ಏರುತ್ತಿದೆ..ಹೇಳಿ ಕೇಳಿ ಉಕ್ಕುವ ಪ್ರಾಯದ ವಯಸ್ಸು, ಮಧು ಹೀರುವ ದುಂಬಿ ಆಗೆಂದು ದುಂಬಾಲು ಬಿದ್ದಿದೆ ಮನಸ್ಸು ಎಂದೆ ನಡಗುತ್ತ.

ಒಂದು ದಿನ ಟೆಲಿಫೋನ್ ಮಾತುಕತೆಯಲ್ಲಿ ಊರ ಹೊರವಲಯದಲ್ಲಿ ಭೇಟಿಯಾಗುವಾ ಎಂದು ನಿರ್ಧಾರವಾಯಿತು. ಅಂದಿನ ನಿನ್ನ ಡ್ರೆಸ್ಸಿಂಗ್ ಇಂದಿಗೂ ಅಚ್ಚಳಿಯದೇ ಎದೆಯಲ್ಲಿ ಅಚ್ಚೊತ್ತಿದಂತಿದೆ. ಅಚ್ಚಬಿಳಿ ಬಣ್ಣದ ಒಡಲಿನ ಸೀರೆಯಲ್ಲಿ ಅಲ್ಲಲ್ಲಿ ಚಿಕ್ಕ ಚಿಕ್ಕ ಗುಲಾಬಿ ಅರಳಿದ ಡಿಸೈನ್ ಸೀರೆ. ಅದಕ್ಕೊಪ್ಪುವ ಹೊಸ ವಿನ್ಯಾಸದ ರವಿಕೆ. ಸೀರೆ ಮತ್ತು ರವಿಕೆ ಬಣ್ಣಕ್ಕೆ ಹೊಂದುವಂಥ ಬಣ್ಣದ ಗಾಜಿನ ಬಳೆಗಳು. ರಿಂಗಿನ ಆಕಾರದಲ್ಲಿದ್ದ ಮೂಗುತಿ, ಕಿವಿಯಲ್ಲಿ ನೇತಾಡುವ ಬಂಗಾರದ ಜುಮುಕಿ ಬೆನ್ನ ಹಿಂದೆ ಇಳಿ ಬಿಟ್ಟ ರೇಷ್ಮೆಯಂತಹ ಕೂದಲು. ಮುಡಿಯಲ್ಲಿ ಮುಡಿದ ಮಲ್ಲಿಗೆ ಸಂಪಿಗೆ ಹೂಗಳ ಸುಗಂಧ ಗಾಳಿಯಲ್ಲಿ ತೇಲುತ್ತಿತ್ತು. ನಿನ್ನ ಸೌಂದರ್ಯ ಕಣ್ಣು ಕೋರೈಸುತ್ತಿತ್ತು. ಮೈಮರೆಸುವ ರೂಪಕ್ಕೆ ನಾನು ಕಳೆದು ಹೋಗಿದ್ದೆ. ಅದೇ ಸಮಯಕ್ಕೆ ಬೈಕಿನಲ್ಲಿ ನಿನ್ನೆದೆ ನನ್ನ ಬೆನ್ನಿಗೆ ತಾಕುತ್ತಿದ್ದಂತೆ ಆಸೆಗಳ ತಕಧಿಮಿತ ನನ್ನೆದೆಯಲ್ಲಿ ಹೆಚ್ಚಿಸಿತ್ತು.
ಹಸಿರು ಕಾನನದಲಿ ಹಕ್ಕಿಪಕ್ಷಿಗಳ ಚಿಲಿಪಿಲಿ ಕಿವಿಗೆ ಬೀಳುತ್ತಿತ್ತು. ನಿನ್ನ ಮಧುರ ದನಿಯೂ ಅಷ್ಟೇ ಸೊಗಸಾಗಿ ಕಿವಿಯನ್ನು ತುಂಬುತ್ತಿತ್ತು. ಇದೆಲ್ಲ ನಿನ್ನಲ್ಲಿ ತೀವ್ರವಾಗಿ ತನ್ಮಯನಾಗುವಂತೆ ಮಾಡಿತ್ತು. ನಿರ್ಜನ ರಸ್ತೆಯಾದ್ದರಿಂದ ಹೆಚ್ಚು ವಾಹನಗಳು ಓಡಾಡುತ್ತಿರಲಿಲ್ಲ. ‘ಮುಂದೆ ಬೈಕ್ ಹೋಗಲ್ಲ ತುಸು ದೂರ ಸಾಗಿದರೆ ಹನುಮಂತನ ದೇವಸ್ಥಾನವಿದೆ ಅಲ್ಲಿಗೆ ಹೋಗೋಣವೇ?’ ಎಂದಾಗ ನೀ ಗತ್ತಿನಿಂದ ಕತ್ತು ಹೊರಳಿಸುತ್ತ ತಲೆ ಅಲ್ಲಾಡಿಸಿದೆ. ಇಷ್ಟು ದಿನ ಒಟ್ಟಿಗಿದ್ದ ನೀನು ಎಲ್ಲಿ ದೂರವಾಗಿಯೋ ಎಂದು ಮಂಕಾಗಿದ್ದೆ. ನೀನು ಹೀಗೆ ಮಂಕಾಗಿದ್ದರೆ ನನಗೆ ಉತ್ಸಾಹ ಇರುವುದಿಲ್ಲವೆಂದು ಹೇಳುವಾಗ ನಿನ್ನ ಕಣ್ಣಲ್ಲಿ ನೋವು ತುಂಬಿತ್ತು. ಭಾರವಾದ ಮನಸ್ಸಿನಿಂದ ಹೆಜ್ಜೆ ಹಾಕುತ್ತ ದೇವಸ್ಥಾನ ತಲುಪಿದೆವು. ಮಾರುತಿಯನ್ನು ಕಂಡು ಮನದಿಚ್ಛೆಯನ್ನು ಇಡೇರಿಸೆಂದು ಕೈ ಮುಗಿದೆವು. ಗುಡಿಯಾಚೆಗಿನ ಹೆಬ್ಬಂಡೆ ಮೇಲೆ ಕೂತು ಇಬ್ಬರೂ ಒಮ್ಮೆಲೇ ಮುಖ ಮುಖ ನೋಡಿಕೊಂಡೆವು. ನಾನೇ ತುಸು ದೈರ್ಯ ಮಾಡಿ ನಿನ್ನ ಕೈ ಮೆಲ್ಲಗೆ ಹಿಡಿದೆ. ‘ನಿನ್ನ ಸಣ್ಣ ಕದಲಿಕೆಯೂ ನನಗೆ ಬೇಗನೆ ಅರಿವಿಗೆ ಬರುತ್ತದೆ. ನಿನ್ನುಸಿರಿನ ಏರುಪೇರಿನಿಂದಲೇ ನಿನ್ನ ಸ್ಥಿತಿಗತಿಯನ್ನು ಅರಿಯುವಷ್ಟು ಗಾಢವಾದ ಪ್ರೀತಿ ನಿನ್ನ ಮೇಲಿದೆ.’ ಎಂದು ಹಣೆಗೆ ಹೂಮುತ್ತನ್ನಿತ್ತೆ.
ನನ್ನಪ್ಪ ಅಮ್ಮ ಪ್ರಾಯದಲ್ಲಿ ಮಾಡಿದ ತಪ್ಪಿಗೆ ಅನಾಥಾಶ್ರಮದಲ್ಲಿ ಬಿಟ್ಟು ಹೋದಾಗಿನಿಂದ ಸಕ್ಕರೆಯಂತಹ ಅಕ್ಕರೆ ಕಂಡಿಲ್ಲ. ಬಾಲ್ಯದಲ್ಲಿ ತೀರ ಆಪ್ತರ ಆರೈಕೆ ವಾತ್ಸಲ್ಯ ಇಲ್ಲದೇ ಬೆಳೆದಿದ್ದೇನೆ. ದೇವರ ಅನುಗ್ರಹದಿಂದ ಬದುಕಿದ್ದೇನೆ. ಯಾವೊಂದು ಸುಳಿವು ಇಲ್ಲದೇ ಅವರನ್ನು ಹುಡುಕುವ ಹುಚ್ಚಿನಲ್ಲಿದ್ದಾಗ ನೀನು ಸಿಕ್ಕೆ. ಹೆತ್ತವರಿಂದ ಅಕ್ಕರೆ ಆಸರೆ ಸಿಗಬೇಕಾದ ವಯಸ್ಸಿನಲ್ಲಿ ಸಿಕ್ಕಿಲ್ಲ. ಈಗೇಕೆ ಮರಗುವೆ ಎಂದು ಧೈರ್ಯ ತುಂಬಿ ಜೀವನ ಪ್ರೀತಿ ಹೆಚ್ಚಿಸಿದೆ. ನೋವೆನ್ನೆಲ್ಲ ನಗುವಿನಲ್ಲಿ ಮರೆಸಿರುವೆ. ನೀನು ದೂರವಾದರೆ ನಾನು ಬದುಕುವುದಾದರೂ ಹೇಗೆ ಎಂದೆ.
‘ಈಗ ನಾನು ನಿನಗೆ ನೀನು ನನಗೆ ಹೀಗಿರುವಾಗ ದೂರವಾಗುವ ಮಾತೆಲ್ಲಿದೆ’ ಎನ್ನುತ್ತ ಬೆರಳುಗಳಲ್ಲಿ ಬೆರಳು ಸೇರಿಸಿದೆ. ಮಾಮರದ ಚಿಗುರೆಲೆ ಅತ್ತಿತ್ತ ಅಲ್ಲಾಡುತ್ತಿತ್ತು. ಅಂತೆಯೇ ನಮ್ಮ ದೇಹಗಳು ಕೂಡ ಅಲ್ಲಾಡುತ್ತಿದ್ದವು. ತೀರ ಪಕ್ಕಕ್ಕಿದ್ದ ಭುಜಗಳು ಢಿಕ್ಕಿ ಹೊಡೆದವು. ತೋಳುಗಳು ಒಂದಕ್ಕೊಂದು ಸುತ್ತಿಕೊಂಡವು. ಅದರುತಲ್ಲಿದ್ದ ಅಧರಗಳು ಒಂದಾಗಲು ಮುಂದಾದವು. ಒಂದಕ್ಕೊಂದು ಅಂಟಿಕೊಂಡವು. ಕೆಲ ಕಾಲ ಸುರುಳಿಯಂತೆ ಸುತ್ತಿಕೊಳ್ಳುವಲ್ಲಿ ನಿರತವಾಗಿದ್ದವು. ಆಲಿಂಗನವೂ ಬಿಗಿಯಾಗುತಲಿತ್ತು. ಆ ನಡುವೆ ಕೋಮಲ ಕೆನ್ನೆಗೆ ನನ್ನ ಚಿಗುರು ಮೀಸೆ ಚುಚ್ಚಿತು. ಆಗ ನೀನು ಒಮ್ಮಿಂದೊಮ್ಮೆಲೇ ಎಚ್ಚರಗೊಂಡೆ. ‘ಹರೆಯದ ಹರಿವಿನಲ್ಲಿ ಅರಿಯದೇ ಕ್ಷಣಿಕ ಸುಖದಲ್ಲಿ ಮೈ ಮರೆತರೆ ಒಡಲಲಿ ಜೀವವೊಂದು ಮೈದಳೆಯುವುದು. ಸಮಾಜದ ಅಂಜಿಕೆಗೆ ಹಸುಗೂಸನು ಅನಾಥಾಶ್ರಮ ಸೇರಿಸಬೇಕಾಗುವುದು.’ ಎನ್ನುತ್ತ ಮೆಲ್ಲನೆ ನನ್ನ ದೂರ ಸರಿದೆ.
ನೀನು ಹೇಳುವುದೂ ಸರಿ ಚಿನ್ನ ‘ಅವ್ವನನ್ನು ಬಿಟ್ಟರೆ ನನಗೆ ಬೇರೆ ಬಂಧುವಿಲ್ಲ. ಅವ್ವನೇ ನನಗೆ ಸರ್ವಸ್ವ.’ ನಿನ್ನ ವಿಷಯವನ್ನೆಲ್ಲ ಅವಳಿಗೆ ಹೇಳಿರುವೆ. ಅವಳು ನಿನ್ನನ್ನು ಮುದ್ದು ಸೊಸೆಯಾಗಿ ಒಪ್ಪಿಯಾಗಿದೆ. ದೇವರ ಸಾಕ್ಷಿಯಾಗಿ ಹಾಕಿದ ಮೂರು ಗಂಟಿನ ನಂಟನು ರಜಿಸ್ಟರ್ ಮಾಡಿಸುವೆ ಎಂದಾಗ ನೀ ಒಪ್ಪಿದೆ. ಜಿನುಗುವ ಚುಕ್ಕಿಗಳ ಬೆಳಕಿನಲ್ಲಿ ಜೋಡಿ ಚುಕ್ಕಿಗಳಂತೆ ಜೋಡಿ ಹಕ್ಕಿಗಳಾಗುವಾ ಬಂಗಾರದಂತಹ ಮಕ್ಕಳಿಗೆ ಹೆಮ್ಮೆಯ ಹೆತ್ತವರಾಗುವಾ. ದಿನ ರಾತ್ರಿ ನಿದಿರೆ ರಾಣಿ ಬಳಿ ಬರುವ ಮುನ್ನ ಸತಾಯಿಸದೇ ಬಳಿ ಬಾ ರಾಣಿ ಒಂದಾಗುವಾ ಜಗ ಮರೆಯುವಾ
ಇಂತಿ ನಿನ್ನ ಆಕಾಶ


