ಶಿರಹಟ್ಟಿ ಯುಕೆಪಿ ಪುನರ್ವಸತಿ ಕೇಂದ್ರದ ಸ್ಥಳದಲ್ಲಿ 40 ವರ್ಷಗಳಿಂದ ವಾಸವಾಗಿರುವ 500ಕ್ಕೂ ಹೆಚ್ಚು ಕುಟುಂಬಗಳನ್ನು ನೋಟಿಸ್ ನೀಡದೆ ತೆರವುಗೊಳಿಸಲು ಮುಂದಾದ ಅಧಿಕಾರಿಗಳ ಕ್ರಮಕ್ಕೆ ವಿರೋಧ | ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ
ಉದಯರಶ್ಮಿ ದಿನಪತ್ರಿಕೆ
ಅಥಣಿ: ತಾಲೂಕಿ ಶಿರಹಟ್ಟಿ ಗ್ರಾಮದ ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ಕೇಂದ್ರದ ಸ್ವಾಧೀನದಲ್ಲಿರುವ ಜಾಗದಲ್ಲಿ ಕಳೆದ 40 ವರ್ಷಗಳಿಂದ ವಾಸವಾಗಿರುವ 500ಕ್ಕೂ ಹೆಚ್ಚು ಕುಟುಂಬಗಳನ್ನು ಯಾವುದೇ ನೋಟಿಸ್ ನೀಡದೆ ತೆರವುಗೊಳಿಸಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಆರೋಪಿಸಿ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಹಾಗೂ ಶಿರಹಟ್ಟಿ ಗ್ರಾಮಸ್ಥರು ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಬಹುಜನ ಸಮಾಜ ಪಕ್ಷಕ ಬೆಳಗಾವಿ ವಲಯ ಉಸ್ತುವಾರಿ ಹಾಗೂ ನ್ಯಾಯವಾದಿ ಬಾಹುಸಾಹೇಬ ಕಾಂಬಳೆ ಮಾತನಾಡಿ, ಆರ್, ಸಿ, ನಂ.1 ರ ನಿವಾಸಿಗಳು ಕಳೆದ 40 ವರ್ಷಗಳಿಂದ ಇಲ್ಲಿ ನೆಲೆಸಿದ್ದಾರೆ. ಮನೆ ಕಟ್ಟಿಕೊಂಡು ಮಕ್ಕಳನ್ನು ಬೆಳೆಸಿ ಮತದಾರರ ಪಟ್ಟಿ ರೇಷನ್ ಕಾರ್ಡ್ ವಿದ್ಯುತ್ ಬಿಲ್ ಎಲ್ಲವನ್ನೂ ಇಲ್ಲಿಯೇ ಹೊಂದಿದ್ದಾರೆ. ಇಷ್ಟೆಲ್ಲ ದಾಖಲೆಗಳಿದ್ದರೂ ಗುರುವಾರ ಮಧ್ಯಾಹ್ನ 1 ಗಂಟೆಗೆ ಅಧಿಕಾರಿಗಳು ಏಕಾಏಕಿ ಬಂದು ಯಾವುದೇ ಪೂರ್ವ ನೋಟಿಸ್ ನೀಡದೆ ಕಾನೂನು ಪ್ರಕ್ರಿಯೆ ಅನುಸರಿಸದೆ ಜಾಗ ಖಾಲಿ ಮಾಡಿ, ಖಾಲಿ ಮಾಡದಿದ್ದರೆ ಲಾಠಿ ಚಾರ್ಜ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಬೆದರಿಕೆ ಹಾಕುವುದು ಕಾನೂನು ಬಾಹಿರ, ಮಾನವೀಯತೆಗೆ ವಿರುದ್ಧವಾದ ನಡೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ಹೆಸರಿನಲ್ಲಿ ಬಡವರನ್ನು ಮತ್ತೆ ನಿರಾಶ್ರಿತರನ್ನಾಗಿ ಮಾಡುವ ಹುನ್ನಾರ ಇದಾಗಿದೆ. 500ಕ್ಕೂ ಹೆಚ್ಚು ಕುಟುಂಬಗಳು, ಮಹಿಳೆಯರು, ಮಕ್ಕಳು, ವೃದ್ಧರು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ನಾವು ಎಷ್ಟೋ ಸಲ ಸ್ಥಳಿಯ ಶಾಸಕರಿಗೂ ಹಾಗೂ ಜನ ಪ್ರತಿನಿಧಿಗಳಿಗೂ ಮನವಿ ಸಲ್ಲಿಸಿದರೂ ಯಾವುದೆ ಪ್ರಯೋಜನವಾಗಿಲ್ಲ. ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಈ ಅಮಾನವೀಯ ತೆರವು ಕಾರ್ಯಾಚರಣೆ ನಿಲ್ಲಿಸಬೇಕು. ಇಲ್ಲದಿದ್ದರೆ ನಾವು ಕಾನೂನು ಹೋರಾಟದ ಜೊತೆಗೆ ಉಗ್ರ ಪ್ರತಿಭಟನೆಗೂ ಸಿದ್ಧ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಅಥಣಿ ವಕೀಲರ ಸಂಘದ ಮಹಿಳಾ ಪ್ರತಿನಿಧಿ ಗೀತಾ ಕಾಂಬಳೆ, ಬಹುಜನ ಸಮಾಜ ಪಕ್ಷದ ಜಿಲ್ಲಾ ಅಧ್ಯಕ್ಷ ಸಂಜೀವ ಕಾಂಬಳೆ, ರಾಜು ಕಾಂಬಳೆ, ಮಹಾವೀರ ಕಾಂಬಳೆ, ಮುರುಗೇಶ ಅಥಣಿ ಸೇರಿದಂತೆ ಶಿರಹಟ್ಟಿ ಗ್ರಾಮದ ನಿವಾಸಿಗಳು ಇದ್ದರು.

