ಲೇಖನ
– ವೀಣಾ ಹೇಮಂತ್ ಗೌಡ ಪಾಟೀಲ್,
ಮುಂಡರಗಿ
ಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಪ್ರಪಂಚದ ಯಾವುದೇ ಮೂಲೆಯಲ್ಲಿ ನೋಡಿದರೂ ನಾವು ಕಿವಿ ಕೇಳಿಸದ, ಕಣ್ಣು ಕಾಣದ, ಮಾತನಾಡಲು ಬಾರದ ಜನರನ್ನು ಅಲ್ಲಲ್ಲಿ ಕಾಣಬಹುದು. ಇವರಲ್ಲಿ ಈ ನ್ಯೂನತೆಗಳು ಹುಟ್ಟಿನಿಂದಲೂ ಬಂದಿರಬಹುದು, ಇಲ್ಲವೇ ಹುಟ್ಟಿದ ಕೆಲವು ವರ್ಷಗಳ ನಂತರ, ಇಲ್ಲವೇ ಯಾವುದೋ ಆಕಸ್ಮಿಕಗಳಲ್ಲಿ ಜೊತೆಗೂಡಿದಂತಹ ತೊಂದರೆಗಳಾಗಿರಬಹುದು. ಆದರೆ ಜಗತ್ತಿನ ಯಾವುದೇ ಭಾಗದಲ್ಲಿ ರುಚಿಯನ್ನು ಕಳೆದುಕೊಂಡ ನಾಲಿಗೆಯ ಕುರಿತು ಎಲ್ಲಾದರೂ ಕೇಳಿರುವಿರಾ? ಹುಟ್ಟಿದ ಮಗುವಿನ ನಾಲಿಗೆಗೆ ಗೊತ್ತಾಗುವಷ್ಟೇ ರುಚಿ ವಯಸ್ಸಾದ ವೃದ್ಧನಿಗೂ ಇರುತ್ತದೆ. ಪಂಚೇಂದ್ರಿಯಗಳಲ್ಲಿ ಉಳಿದೆಲ್ಲ ಅಂಗಗಳು ಮಗುವಿನ ಶೈಶವಾವಸ್ಥೆಯಿಂದ ಕ್ರಿಯಾಶೀಲವಾಗಿದ್ದು ವಯಸ್ಸಾದಂತೆ ತಮ್ಮ ಕಾರ್ಯ ನಿರ್ವಹಣೆಯ ಸಾಮರ್ಥ್ಯದಲ್ಲಿ ಕುಂಠಿತತೆಯನ್ನು ಹೊಂದಿದರೆ, ನಾಲಿಗೆ ಮಾತ್ರ ಆಬಾಲ ವೃದ್ಧರಾದಿಯಾಗಿ ಎಲ್ಲರಲ್ಲೂ ಅಷ್ಟೇ ಚುರುಕಾಗಿ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ಕಾರಣ ನಾಲಿಗೆ ನಮ್ಮ ಮೆದುಳಿಗೆ ಅತ್ಯಂತ ಹತ್ತಿರದಲ್ಲಿ ಇದೆ ಎಂದು ಪ್ರಾಜ್ಞರು ಹೇಳುತ್ತಾರೆ.

ನಮ್ಮ ಮೆದುಳಿನಲ್ಲಿರುವ ಸೆನ್ಸಾರ್ ನರ್ವಗಳ ( ಅರಿವಿನ ನರವ್ಯೂಹ) ಮೂಲಕ ನಾವು ಕೇಳುವ, ನೋಡುವ, ಸ್ಪರ್ಶಿಸುವ, ವಾಸನೆಯನ್ನು ಗ್ರಹಿಸುವ ಶಕ್ತಿಯನ್ನು ಹೊಂದಿದ್ದೇವೆ, ಅಂತೆಯೇ ನಮ್ಮ ನಾಲಿಗೆಯೂ ಕೂಡ ಅತ್ಯಂತ ತ್ವರಿತವಾಗಿ ರುಚಿಯನ್ನು ಗ್ರಹಿಸಿ ಹೇಳುವ ಶಕ್ತಿಯನ್ನು ಹೊಂದಿದೆ.
ಅಡುಗೆಮನೆಯಲ್ಲಿನ ಹಲವಾರು ವಿಷಯಗಳನ್ನು ವಸ್ತುಗಳನ್ನು ಅರಿತುಕೊಳ್ಳುವ ಶಕ್ತಿಯನ್ನು ಹೊಂದಿರುವುದು ನಾಲಿಗೆ. ಯಾವುದೋ ಒಂದು ಆಹಾರವನ್ನು ಸೇವಿಸಿದಾಗ ಅದನ್ನು ಈ ಮುಂಚೆ ಸೇವಿಸಿದ ನೆನಪಾಗಬಹುದು. ಚಿಕ್ಕಂದಿನಲ್ಲಿ ಅಮ್ಮ ಮಾಡಿ ತಿನ್ನಿಸಿದ ಯಾವುದೋ ಒಂದು ಅಡುಗೆ ನಮ್ಮ ನೆನಪಿನ ಕಣಜದಲ್ಲಿ ಉಳಿದುಕೊಂಡಿರಬಹುದು ಇಂದಿಗೂ ಆ ರುಚಿ ಅದರ ನೋಟ ನಮ್ಮ ನೆನಪಿನಿಂದ ಮರೆಯಾಗದೇ ಇರಲು ಕಾರಣ ನಾಲಿಗೆಯ ಪ್ರಖರ ಗುಣ ಗ್ರಹಣ ಶಕ್ತಿ.
ನಾವು ನೋಡುವ ನೋಟದಲ್ಲಿ ನಾವು ರಾಜಿ ಮಾಡಿಕೊಳ್ಳಬಹುದು, ನಾವು ಕೇಳುವ ಸಂಗೀತದಲ್ಲಿ ಕೂಡ ನಾವು ರಾಜಿ ಮಾಡಿಕೊಳ್ಳಬಹುದು, ಆದರೆ ನಾವು ತಿನ್ನುವ ಆಹಾರದಲ್ಲಿ ನಮಗಿಷ್ಟವಿಲ್ಲದ ರುಚಿಯನ್ನು ತಿನ್ನಲು ರಾಜಿ ಮಾಡಿಕೊಳ್ಳಲು ಸಾಧ್ಯ ಆಗುವುದೇ ಇಲ್ಲ. ಒಂದು ದಿನ ಚಲನಚಿತ್ರ ನೋಡಲು ಆಗುವುದಿಲ್ಲ ಎಂದಾದರೆ ಇರಲಿ ಬಿಡು ಎನ್ನುವ ನಾವುಗಳು ಒಂದು ದಿನ ಊಟ ಸಿಗುವುದಿಲ್ಲ ಎಂದರೆ ಹೋಗಲಿ ಬಿಡು ಎನ್ನಲು ಸಾಧ್ಯವೇ? ಖಂಡಿತವಾಗಿಯೂ ಇಲ್ಲ.
ಹಸಿವು ನಮ್ಮ ಮಾನಸಿಕ ಮತ್ತು ದೈಹಿಕ ಅವಶ್ಯಕತೆ ಆಗಿರುವುದರಿಂದ ಅದನ್ನು ಶತಾಯಗತಾಯ ಪೂರೈಸಿಕೊಳ್ಳಬೇಕು. ಜಿಹ್ವಾ ಚಾಪಲ್ಯವನ್ನು ಕಟ್ಟಿಡಲು

ಸಾಧ್ಯವೇ ಇಲ್ಲ. ಶಾಲೆಯಿಂದ ಮನೆಗೆ ಬಂದ ಮಗುವಿನ ಅವಶ್ಯಕತೆ ಆಹಾರ.ಎಲ್ಲರಿಗೂ ನೀಡುವಂತೆ ಮಗುವಿಗೂ ಆಹಾರವನ್ನು ಉಣಬಡಿಸಿದರೆ ಮಗು ಬೇರೊಂದು ತಿಂಡಿಗೆ ಆಸೆ ಪಡುವುದಿಲ್ಲ. ಹೊಟ್ಟೆ ತುಂಬದ ಮಗು ಮಾತ್ರ ಹತ್ತು ಹಲವು ತಿನಿಸುಗಳ ಕಡೆ ತಮ್ಮ ಚಿತ್ತವನ್ನು ಹರಿಸುತ್ತದೆ
ಸಮಯ ಸಂದರ್ಭಗಳಿಗನುಸಾರವಾಗಿ ಮಕ್ಕಳಿಗೆ ಮನೆಯಲ್ಲಿ ಎಲ್ಲ ರೀತಿಯ ತಿಂಡಿಗಳನ್ನು ಮಾಡಿ ಗುಣಪಡಿಸುವುದು ಸಾತ್ವಿಕ ಆಹಾರದ ಮಹತ್ವವನ್ನು ಹೇಳಿಕೊಡುವುದು.
ಹಬ್ಬ ಹುಣ್ಣಿಮೆಯ ಅಡುಗೆ ತಿಂಡಿಗಳಿಗೆ ಮಕ್ಕಳನ್ನು ತಯಾರು ಮಾಡಿ.. ಅಡುಗೆ ಮನೆಯ ಆಕರ್ಷಣೆಯ ಕೇಂದ್ರವಾಗಲಿ. ಸಾಂಪ್ರದಾಯಿಕ ಅಡುಗೆಗಳಾದ ಹೋಳಿಗೆ, ಸೀಕರಣೆ, ಹುಗ್ಗಿ, ಪಾಯಸ, ಕಡುಬು ವಡೆ
ಹಪ್ಪಳ ಸಂಡಿಗೆ ಕೋಸಂಬರಿಗಳ ರುಚಿ ಮಕ್ಕಳಿಗೆ ತೋರಿಸಿ.
ಹೊಟ್ಟೆಯ ಮೂಲಕ ಮನಸ್ಸನ್ನು ಗೆಲ್ಲಬೇಕು ಎಂದು ನಮ್ಮ ಹಿರಿಯರು ಹೇಳಿರುವುದು ಈ ಕಾರಣಕ್ಕೆ ಅಲ್ಲವೇ? ಅಮ್ಮನ ಕೈ ತುತ್ತು, ಅಜ್ಜಿಯ ಕೈಯ ಉಂಡೆ, ಚಕ್ಕುಲಿ, ಕೋಡುಬಳೆಗಳು ಮಕ್ಕಳನ್ನು ಆಯಸ್ಕಾಂತದಂತೆ ಸೆಳೆಯಲಿ


