ಬಂಡಿ ದಾರಿ ಜಾಗ ಗುರುತಿಸಲು ಸರ್ವೇ ಅಧಿಕಾರಿಗಳು ಮೀನಾಮೇಷ
ಉದಯರಶ್ಮಿ ದಿನಪತ್ರಿಕೆ
ಎಚ್ ಡಿ ಕೋಟೆ: ರೈತರು ವ್ಯವಸಾಯದ ಉದ್ದೇಶಗಳಿಗಾಗಿ ತಿರುಗಾಡಲು ಬಳಸುವ ಖಾಸಗಿ ಜಮೀನುಗಳಲ್ಲಿ ಗ್ರಾಮ ನಕಾಶೆ ಪ್ರಕಾರ ಇರುವ ಕಾಲುದಾರಿ, ಬಂಡಿ ದಾರಿ ಅಥವಾ ಇತರೆ ದಾರಿಗಳನ್ನು ಯಾವುದೇ ಜಮೀನಿನ ಮಾಲೀಕ ಮುಚ್ಚುವುದು ಕಾನೂನುಬಾಹಿರ. ಇಂತಹ ಪ್ರಕರಣಗಳಲ್ಲಿ ಅಗತ್ಯ ಕ್ರಮ ಕೈಗೊಂಡು ರೈತರು ಓಡಾಡಲು ಅನುವು ಮಾಡಿಕೊಡಬೇಕು ಎಂದು ಎಲ್ಲ ತಹಸೀಲ್ದಾರ್ಗಳಿಗೆ ಕಂದಾಯ ಇಲಾಖೆ ಕಟ್ಟುನಿಟ್ಟಾಗಿ ಸೂಚಿಸಿದೆ. ಒಂದು ವೇಳೆ ಅಕ್ಕಪಕ್ಕದ ಜಮೀನಿನ ಮಾಲೀಕರು ರೈತರಿಗೆ ತಿರುಗಾಡಲು ಅಡ್ಡಿಪಡಿಸಿದರೆ ತಾಲೂಕಿನ ತಹಸೀಲ್ದಾರ್ಗಳು ಕ್ರಮ ಕೈಗೊಳ್ಳಬೇಕು. ಒತ್ತುವರಿ ತೆರವುಗೊಳಿಸಿ ರೈತರಿಗೆ ತಿರುಗಾಡಲು ಅವಕಾಶ ಕೊಡಬೇಕು.
ಆದರೆ ಹೆಚ್ ಡಿ ಕೋಟೆ ತಾಲೂಕಿನ ಅಣ್ಣೂರು ಗ್ರಾಮದ ರೈತ ಜಗದೀಶ್ ಬಿನ್ ಚಂದ್ರಪ್ಪ ಹಾಗೂ ಶಿವಪ್ಪ ಕುಟುಂಬ, ತಮ್ಮ ಜಮೀನಿಗೆ ತೆರಳಲು ಕಾಲುದಾರಿ ಅಥವಾ ಬಂಡಿ ರಸ್ತೆ ಇಲ್ಲದೆ ಪರದಾಡುತ್ತಿದೆ. ಅಣ್ಣೂರು ಗ್ರಾಮದಲ್ಲಿ ಚಂದ್ರಪ್ಪ ಎಂಬುವವರಿಗೆ 38/3 ಸರ್ವೇ ನಂಬರ್ ನಲ್ಲಿ 2 ಎಕರೆ 30 ಗುಂಟೆ ಜಮೀನು ಇದೆ. ಆದರೆ ತಿರುಗಾಡಲು ರಸ್ತೆ ಇಲ್ಲ. ಬೇಸಿಗೆ ಕಾಲದಲ್ಲಿ ಪಕ್ಕದಲ್ಲಿರುವ ಚಿಕ್ಕಕೆರೆ ಮೂಲಕ ಜಮೀನಿಗೆ ತೆರಳುತ್ತಿದ್ದಾರೆ. ಆದರೆ ಕಾಲ ಕಳೆದಂತೆ ಅಕ್ಕಪಕ್ಕದ ಜಮೀನಿನ ಮಾಲೀಕರು, ಕೆರೆ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಹಿನ್ನೆಲೆ ಜಮೀನಿಗೆ ಹೋಗಲು ರಸ್ತೆಯೇ ಇಲ್ಲದಂತಾಗಿದೆ. ಇನ್ನು ಮಳೆ ಬಂದು ಕೆರೆಗೆ ನೀರು ತುಂಬಿಕೊಂಡರೆ ಜಮೀನಿಗೆ ತೆರಳಲೂ ರಸ್ತೆಯೇ ಇಲ್ಲದಂತಾಗಲಿದೆ.
ಕರ್ನಾಟಕ ಭೂ ಕಂದಾಯ ನಿಯಮಗಳು 1996ರ ನಿಯಮ 59ರ ಅಡಿ ‘ದಾರಿಯ ಹಕ್ಕುಗಳು ಮತ್ತು ಇತರೆ ಅನುಭೋಗದ ಹಕ್ಕುಗಳ’ ಕಾಯ್ದೆಯಡಿ ಬಂದಿದಾರಿ ಅಥವಾ ಕಾಲುದಾರಿ ಗುರುತು ಮಾಡಿ, ತಿರುಗಾಡಲು ಅವಕಾಶ ಮಾಡಿಕೊಡಬೇಕೆಂದು, ತಹಸೀಲ್ದಾರ್ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾಧಿಕಾರಿಗೂ ಮನವಿ ಪತ್ರ ನೀಡಿದ್ದೇವೆ. ಆದರೆ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ವೇ ಅಧಿಕಾರಿಗಳು, ಅಳತೆಗೆ ದಿನಾಂಕ ನಿಗದಿಪಡಿಸುತ್ತಾರೆ ಆದರೆ ಆ ದಿನ ಬಂದು ಅಳತೆ ಮಾಡದೇ ನೆಪವೊಡ್ಡಿ ಮುಂದೂಡತ್ತಲೇ ಬರುತ್ತಿದ್ದಾರೆ. ಹೀಗಾಗಿ ರಸ್ತೆ ಇಲ್ಲದೆ ಜಮೀನಿನಲ್ಲಿ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತಿಲ್ಲ. ಬೆಳೆಗಳನ್ನು ಬೆಳೆದರೂ ಸಾಗಿಸಲು ದಾರಿ ಇಲ್ಲದೆ ಪರಿತಪಿಸುವಂತಾಗಿದೆ. ಈಗಲಾದರೂ ತಹಸೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಬಂಡಿ ದಾರಿಗೆ ಜಾಗ ಗುರುತಿಸಿ, ತಿರುಗಾಡಲು ಅನುವು ಮಾಡಿಕೊಡಬೇಕೆಂದು ರೈತ ಜಗದೀಶ್ ಮನವಿ ಮಾಡಿದ್ದಾರೆ.
“ಕಳೆದ 20 ವರ್ಷಗಳಿಂದಲೂ ನಮ್ಮ ಕುಟುಂಬ ವ್ಯವಸಾಯ ಮಾಡಿಕೊಂಡು ಬರುತ್ತಿದ್ದೇವೆ. ಈ ಹಿಂದೆ ಕೆರೆ ಜಾಗ ವಿಶಾಲವಾಗಿದ್ದ ಹಿನ್ನೆಲೆ ಕೆರೆ ಪಕ್ಕದಲ್ಲೇ ರಸ್ತೆ ಮಾಡಿಕೊಂಡು ಜಮೀನಿಗೆ ತಿರುಗಾಡುತ್ತಿದ್ದೆವು. ಕಾಲಕ್ರಮೇಣ ಅಕ್ಕಪಕ್ಕದ ಜಮೀನಿನವರು ಕೆರೆ ಜಾಗವನ್ನೇ ಒತ್ತುವರಿ ಮಾಡಿಕೊಂಡಿರುವ ಪರಿಣಾಮ ನಮಗೆ ಇದೀಗ ತಿರುಗಾಡಲು ರಸ್ತೆಯೇ ಇಲ್ಲದಂತಾಗಿದೆ. ಹೀಗಾಗಿ ಜಮೀನು ಇದ್ದರೂ ಬೆಳೆಗಳನ್ನು ಬೆಳೆಯಲಾರದ ಪರಿಸ್ಥಿತಿ ನಿರ್ಮಾಣವಾಗಿದೆ.”
– ಶಿವಪ್ಪ ಅಣ್ಣೂರು
ರೈತ

