ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಗೋಲಗುಮ್ಮಜ್ ಪೊಲೀಸ್ ಠಾಣೆ ವ್ಯಾಪ್ತಿಯ ಹರಣಶಿಖಾರಿ ಕಾಲೋನಿಯಲ್ಲಿ ಅಕ್ರಮವಾಗಿ ಕಳ್ಳಬಟ್ಟಿ ಸರಾಯಿ ಹಾಗೂ ನಕಲಿ ಸೇಂದಿ ತಯಾರಿಕೆ ಮತ್ತು ಮಾರಾಟ ನಡೆಯುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮನಗೌಡ ಹಟ್ಟಿ ಅವರ ಮಾರ್ಗದರ್ಶನದಲ್ಲಿ, ವಿಜಯಪುರ ಉಪವಿಭಾಗದ ಡಿಎಸ್ಪಿ ನೇತೃತ್ವದಲ್ಲಿ ಇಂದು ಮುಂಜಾನೆ 5 ಗಂಟೆಗೆ 10 ಪೊಲೀಸ್ ತಂಡಗಳು ಕಾರ್ಯಾಚರಣೆ ನಡೆಸಿದವು.
ದಾಳಿಯ ವೇಳೆ ಕಾಲೋನಿಯಲ್ಲಿದ್ದ ಸುಮಾರು 10 ರಿಂದ 15 ಅಕ್ರಮ ಮದ್ಯ ತಯಾರಿಕಾ ಸ್ಥಳಗಳು ಪತ್ತೆಯಾಗಿದ್ದು, ಮಾನವ ಜೀವಕ್ಕೆ ಅಪಾಯಕಾರಿಯಾದ ಸಿಎಚ್ ಪೌಡರ್ ಮಿಶ್ರಣ ಮಾಡಿ ನಕಲಿ ಸೇಂದಿ ಮತ್ತು ಕಳ್ಳಬಟ್ಟಿ ಸರಾಯಿ ತಯಾರಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಸುಮಾರು 480 ರಿಂದ 500 ಲೀಟರ್ ಕಳ್ಳಬಟ್ಟಿ ಸರಾಯಿ ತಯಾರಿಕೆಗೆ ಬಳಸುತ್ತಿದ್ದ ಕಚ್ಚಾ ಕೊಳೆ ಹಾಗೂ 50 ಲೀಟರ್ ನಕಲಿ ಸೇಂದಿಯನ್ನು ಸ್ಥಳದಲ್ಲೇ ನಾಶಪಡಿಸಲಾಯಿತು. ಜೊತೆಗೆ 30 ಲೀಟರ್ ಶುದ್ಧ ಕಳ್ಳಬಟ್ಟಿ ಸರಾಯಿ ಮತ್ತು 1 ಕೆಜಿ ಸಿಎಚ್ ಪೌಡರ್ ವಶಪಡಿಸಿಕೊಳ್ಳಲಾಗಿದೆ.
ಜಪ್ತಿಗೊಂಡ ವಸ್ತುಗಳ ಒಟ್ಟು ಮೌಲ್ಯ ಸುಮಾರು ₹45,000 ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಗೋಲಗುಮ್ಮಜ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) 2023ರ ಕಲಂ 123 ಹಾಗೂ ಕರ್ನಾಟಕ ಅಬಕಾರಿ ಕಾಯ್ದೆಯ ಕಲಂ 34 ಅಡಿಯಲ್ಲಿ ನಾಲ್ಕು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ.
ಬಂಧಿತ ಆರೋಪಿಗಳು:
- ಪರಶುರಾಮ ಮುರಾರಿ ಕಾಳೆ (46), ಎಚ್ಎಸ್ ಕಾಲೋನಿ, ವಿಜಯಪುರ
- ಸುನೀಲ್ ಲಕ್ಷ್ಮಣ ಚವ್ಹಾಣ (22), ಎಚ್ಎಸ್ ಕಾಲೋನಿ, ವಿಜಯಪುರ
- ಸುರೇಶ್ ಬಲರಾಮ ಕಾಳೆ (52), ಎಚ್ಎಸ್ ಕಾಲೋನಿ, ವಿಜಯಪುರ
ಇನ್ನೊಬ್ಬ ಆರೋಪಿ ಶಂಕರ ರತನ ಚವ್ಹಾಣ (ಸುಮಾರು 40) ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.

