ಮುದ್ದೇಬಿಹಾಳ-ತಾಳಿಕೋಟೆ ನ್ಯಾಯಾಲಯಗಳಲ್ಲಿ ಒಬ್ಬರೇ ನ್ಯಾಯಾಧೀಶರು ಕಾರ್ಯನಿರ್ವಹಿಸುವ ವ್ಯವಸ್ಥೆ | ನ್ಯಾಯ ವಿತರಣೆಗೆ ಹಿನ್ನಡೆಯ ಆತಂಕ | ಹೆಚ್ಚುವರಿ ನ್ಯಾಯಾಲಯ ಬೇಡಿಕೆ
ಉದಯರಶ್ಮಿ ದಿನಪತ್ರಿಕೆ
ವರದಿ: ಚೇತನ ಶಿವಶಿಂಪಿ
ಮುದ್ದೇಬಿಹಾಳ: ಈಗಾಗಲೇ ಸುಮಾರು ೫ ಸಾವಿರಕ್ಕೂ ಹೆಚ್ಚು ಪ್ರಕರಣಗಳ ಭಾರ ಹೊತ್ತಿರುವ ಪಟ್ಟಣದ ಸಿವಿಲ್ ನ್ಯಾಯಾಲಯಕ್ಕೆ (ಕಿರಿಯ ಶ್ರೇಣಿ) ನ್ಯಾಯಾಧೀಶರ ಕೊರತೆಯ ಸಮಸ್ಯೆ ಎದುರಾಗಿದ್ದು, ಒಬ್ಬರೇ ನ್ಯಾಯಾಧೀಶರು ಮುದ್ದೇಬಿಹಾಳ ಮತ್ತು ತಾಳಿಕೋಟೆ ನ್ಯಾಯಾಲಯಗಳಲ್ಲಿ ಕಾರ್ಯನಿರ್ವಹಿಸುವ ವ್ಯವಸ್ಥೆ ಜಾರಿಯಾಗಿರುವುದು ಸಾರ್ವಜನಿಕರು ಹಾಗೂ ವಕೀಲರ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ.
ಮುದ್ದೇಬಿಹಾಳದಲ್ಲಿ ಒಂದೇ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಕಾರ್ಯನಿರ್ವಹಿಸುತ್ತಿದ್ದು, ಸಾವಿರಾರು ಪ್ರಕರಣಗಳು ಬಾಕಿ ಉಳಿದಿವೆ. ಇಂತಹ ಸಂದರ್ಭದಲ್ಲಿ ಪ್ರತ್ಯೇಕ ನ್ಯಾಯಾಧೀಶರನ್ನು ನೇಮಕ ಮಾಡುವ ಬದಲು, ಅದೇ ನ್ಯಾಯಾಧೀಶರಿಗೆ ತಾಳಿಕೋಟೆ ನ್ಯಾಯಾಲಯದ ಜವಾಬ್ದಾರಿಯನ್ನೂ ನೀಡಲಾಗಿದೆ. ಪರಿಣಾಮವಾಗಿ ವಾರದಲ್ಲಿ ಮೂರು ದಿನಗಳ ಕಾಲ ಮುದ್ದೇಬಿಹಾಳ, ಮೂರು ದಿನಗಳ ಕಾಲ ತಾಳಿಕೋಟೆ ನಡುವೆ ಓಡಾಟ ನಡೆಸುತ್ತಾ ಎರಡೂ ನ್ಯಾಯಾಲಯಗಳ ಕಾರ್ಯಭಾರ ನಿಭಾಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಇದರಿಂದ ಈಗಾಗಲೇ ವಿಳಂಬವಾಗುತ್ತಿರುವ ಪ್ರಕರಣಗಳ ವಿಚಾರಣೆ ಮತ್ತಷ್ಟು ಮುಂದೂಡಿಕೆಯಾಗುವ ಸಾಧ್ಯತೆ ಇದೆ. ಕಳೆದ ಹಲವು ವರ್ಷಗಳಿಂದ ಮುದ್ದೇಬಿಹಾಳದಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಸ್ಥಾಪನೆ ಹಾಗೂ ಪ್ರತ್ಯೇಕ ನ್ಯಾಯಾಧೀಶರ ನೇಮಕಕ್ಕೆ ಆಗ್ರಹ ಕೇಳಿಬರುತ್ತಿದ್ದರೂ, ನ್ಯಾಯಾಂಗ ಆಡಳಿತ ಈ ಕುರಿತು ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ವಕೀಲರ ವಲಯದ ಅಭಿಪ್ರಾಯದಂತೆ, “ಒಂದೇ ನ್ಯಾಯಾಲಯದಲ್ಲಿ ೫ ಸಾವಿರಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇರುವಾಗ, ಅದೇ ನ್ಯಾಯಾಧೀಶರಿಗೆ ಮತ್ತೊಂದು ನ್ಯಾಯಾಲಯದ ಜವಾಬ್ದಾರಿ ನೀಡಿರುವುದು ನ್ಯಾಯ ವಿತರಣೆಯ ವೇಗಕ್ಕೆ ಹಿನ್ನಡೆಯಾಗಬಹುದು. ಮುದ್ದೇಬಿಹಾಳಕ್ಕೆ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಹಾಗೂ ಪ್ರತ್ಯೇಕ ನ್ಯಾಯಾಧೀಶರನ್ನು ನೇಮಿಸುವ ಅಗತ್ಯವಿದೆ” ಎಂದು ಒತ್ತಾಯಿಸಿದ್ದಾರೆ.
ಜನಸಂಖ್ಯೆ, ಪ್ರಕರಣಗಳ ಸಂಖ್ಯೆ ಮತ್ತು ನ್ಯಾಯಾಂಗದ ಮೇಲಿನ ಒತ್ತಡವನ್ನು ಗಮನಿಸಿದರೆ, ಮುದ್ದೇಬಿಹಾಳಕ್ಕೆ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಮಂಜೂರು ಮಾಡುವುದು ಕಾಲದ ಅಗತ್ಯವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

