ರಾಜ್ಯಕ್ಕೆ ಮೊದಲ ರ್ಯಾಂಕ್ ನೀಡುವ ಮೂಲಕ ಮತ್ತೊಂದು ಮೈಲುಗಲ್ಲು ನೆಟ್ಟ ಎಕ್ಸಲಂಟ್ ಕಾಲೇಜು
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪ್ರತಿ ವರ್ಷವೂ ಒಂದಲ್ಲ ಒಂದು ರ್ಯಾಂಕ್ ಮೂಲಕ ಗುರುತಿಸಿಕೊಂಡಿರುವ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜು ಈ ಬಾರಿ ವೆಟರ್ನರಿ ಸೈನ್ಸ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ನೀಡುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಜಿಲ್ಲೆಗೆ ಮತ್ತೊಂದು ಗರಿ ಮೂಡುವಂತೆ ಮಾಡಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ೨೦೨೫-೨೬ ನೇ ಸಾಲಿಗೆ ನಡೆಸಿದ ಕರ್ನಾಟಕ ಸಾಮಾನ್ಯ ಅರ್ಹತಾ ಪರೀಕ್ಷೆಯಲ್ಲಿ ಗಂಗಾಧರ ಮುತ್ತಗಿ ವೆಟರ್ನರಿ ಸೈನ್ಸನಲ್ಲಿ(ಪ್ರಾ) ೦.೫ ರ್ಯಾಂಕ್ ಹಾಗೂ ಬಿಎಸ್ಸಿ ಅಗ್ರಿಯಲ್ಲಿ ೩.೫ ರ್ಯಾಂಕ್ ಪಡೆದುಕೊಂಡಿರುವುದು ಶ್ಲಾಘನೀಯವಾಗಿದೆ.
ಇತ್ತೀಚೆಗೆ ಪ್ರಕಟಗೊಂಡ ೨೦೨೫-೨೬ ನೇ ಕೆ-ಸಿಇಟಿ ಪರೀಕ್ಷೆಯ ಫಲಿತಾಂಶದಲ್ಲಿ ತಾಂತ್ರಿಕ ದೋಷಗಳಿಂದಾಗಿ ಕೆಲವು ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸಲು ಸಾಧ್ಯವಾಗದೇ ಉಳಿದಿದ್ದವು. ಅಂಥಹ ಸಂದರ್ಭದಲ್ಲಿ ಸ್ಪಾಟ್ ರ್ಯಾಂಕಿಂಗ್ನ್ನು ನೀಡುವ ಪ್ರತೀತಿ ಕೆಇಎ ಅಳವಡಿಸಿಕೊಂಡಿದ್ದು ಅದರ ಆಧಾರದ ಮೇಲೆ ರ್ಯಾಂಕ್ ನೀಡಲಾಗಿದ್ದು ಗಂಗಾಧರ ಮುತ್ತಗಿ ೦.೫ ರ್ಯಾಂಕ್ ಪಡೆಯುವ ಮೂಲಕ ಜಿಲ್ಲೆಯ ಇತಿಹಾಸದಲ್ಲಿಯೇ ಮೊದಲನೇ ರ್ಯಾಂಕ್ಗಿಂತಲೂ ಹೆಚ್ಚಿನ ರ್ಯಾಂಕ್ನ್ನು ಪಡೆದುಕೊಂಡಿದ್ದು ಹೆಮ್ಮೆಯ ವಿಷಯವಾಗಿದೆ.
ಇದರ ಕುರಿತು ಸಂತೋಷವನ್ನು ಹಂಚಿಕೊಂಡ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಚೇರ್ಮನ್ ಬಸವರಾಜ್ ಕೌಲಗಿ; ಕಳೆದ ಬಾರಿಯೂ ಸಹ ಅತ್ಯುತ್ತಮ ಫಲಿತಾಂಶವನ್ನು ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜು ಇಂದು ಐತಿಹಾಸಿಕ ಸಾಧನೆಗೆ ಸಾಕ್ಷಿಯಾಗಿದ್ದು ಸಂತಸ ತಂದಿದೆ. ಕಾಲೇಜು ಪ್ರಾರಂಭಗೊಂಡ ಮರು ವರ್ಷದಲ್ಲಿಯೇ ರಾಜ್ಯಕ್ಕೆ ಪ್ರಥಮ ರ್ಯಾಂಕ್ ನೀಡಿದ್ದ ನಮ್ಮ ಸಂಸ್ಥೆ ಈ ಬಾರಿಯೂ ಸಹ ಅಂತಹದೇ ಸಾಧನೆಗೆ ಸಾಕ್ಷಿಯಾಗಿದ್ದು ನಿಜಕ್ಕೂ ಹೆಮ್ಮೆ ಎನಿಸುತ್ತದೆ. ಸ್ಪಾಟ್ ರ್ಯಾಂಕಿಂಗ್ ಮೂಲಕ ೦.೫ ರ್ಯಾಂಕ್ ಪಡೆದ ಈ ವಿದ್ಯಾರ್ಥಿಯು ವೆಟರ್ನರಿಯಲ್ಲಿ ರಾಜ್ಯಕ್ಕೆ ಮೊದಲ ಹಾಗೂ ೩.ರ್ಯಾಂಕ್ ಮೂಲಕ ಬಿಎಸ್ಸಿ ಅಗ್ರಿಯಲ್ಲಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದುಕೊಳ್ಳುವ ಮೂಲಕ ಕೆಸರಿನಲ್ಲಿ ಕಮಲ ಅರಳುತ್ತದೆ ಬಡತನದಲ್ಲಿ ಪ್ರತಿಭೆ ಅರಳುತ್ತದೆ ಎನ್ನುವುದನ್ನು ಸಾಬೀತು ಮಾಡಿ ತೋರಿಸಿದ್ದಾನೆ ಎಂದು ಹೇಳಿದರು.
ವಿದ್ಯಾರ್ಥಿಯ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲ ಮಂಜುನಾಥ ಮ. ಜುನಗೊಂಡ, ಶೈಕ್ಷಣಿಕ ಸಂಯೋಜಕ ಮಂಜುನಾಥ ತುಮ್ಮರ ಮಟ್ಟಿ ಸೇರಿದಂತೆ ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತ ಪಡಿಸಿದ್ದಾರೆ.

“ಅಪ್ಪ ಗೋಡೆ ಕಟ್ಟುವವರ ಕೈಯಲ್ಲಿ ಕೆಲಸಕ್ಕೆ ಹೋಗುತ್ತಿದ್ದು ನನ್ನನ್ನು ಓದಿಸಬೇಕು ಎಂದು ಎಕ್ಸಲಂಟ್ ಗೆ ತಂದು ಸೇರಿಸಿದರು. ಅವರ ಕಷ್ಟದ ಬಗ್ಗೆ ಅರಿವಿದ್ದ ನಾನು ಇಷ್ಟ ಪಟ್ಟು ಓದುತ್ತಿದ್ದೆ. ಕಾಲೇಜಿನ ಸರ್ವರೂ ನನಗೆ ಸದಾ ಬೆಂಬಲಿಸುತ್ತಲಿದ್ದರು. ಈ ಕಾರಣದಿಂದಾಗಿಯೇ ನಾನು ಹೆಚ್ಚು ಹೆಚ್ಚು ಓದಲು ಅರಿತುಕೊಳ್ಳಲು ಸಾಧ್ಯವಾಯಿತು. ಎಲ್ಲ ಉಪನ್ಯಾಸಕರು ಸಹಾಕಾರ ನೀಡುತ್ತಲಿದ್ದರು. ಈ ಕಾರಣದಿಂದಾಗಿಯೇ ನಾನು ಇಷ್ಟು ಚನ್ನಾಗಿ ಪರೀಕ್ಷೆ ಬರೆಯುವುದಕ್ಕೆ ಸಾಧ್ಯವಾಯಿತು. ಅದರಲ್ಲೂ ಸ್ಪಾಟ್ ರ್ಯಾಂಕ್ ಮೂಲಕ ೦.೫ ರ್ಯಾಂಕ್ ಬಂದಿದ್ದು ಒಂದು ಕ್ಷಣ ನನಗೆ ಆಶ್ಚರ್ಯ ತಂದಿತು. ತದನಂತರದಲ್ಲಿ ಅದರ ಕುರಿತು ಉಪನ್ಯಾಸಕರು ಹೇಳಿದ ಮೇಲೆಯೇ ನನಗೆ ನಂಬಿಕೆ ಬಂದಿದ್ದು. ಈ ರ್ಯಾಂಕ್ ಮುಂದೆ ಬರುವಂತ ಪರೀಕ್ಷೆಯಲ್ಲಿ ಇನ್ನೂ ಹೆಚ್ಚಿನ ರ್ಯಾಂಕ್ ಪಡೆಯುವುದಕ್ಕೆ ಆತ್ಮ ವಿಶ್ವಾಸ ಮೂಡಿಸಿದೆ.”
– ಗಂಗಾಧರ ಮುತ್ತಗಿ
ಮೊದಲ ರ್ಯಾಂಕ್ ವಿದ್ಯಾರ್ಥಿ

