ಲೇಖನ – ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ಡಾ ಕಲಾಂ ತಮಿಳುನಾಡಿನ ರಾಮೇಶ್ವರಂನ ಅತ್ಯಂತ ಬಡ ಕುಟುಂಬದಲ್ಲಿ ಹುಟ್ಟಿದರು. ಬಾಲ್ಯದಲ್ಲಿ ಪತ್ರಿಕೆ ಮಾರುತ್ತಿದ್ದರು. ಅವರು ಪೈಲೆಟ್ ಆಗಬೇಕೆಂದು ಕನಸು ಕಂಡಿದ್ದರು. ಆದರೆ ಪೈಲೆಟ್ ಸಂದರ್ಶನದಲ್ಲಿ ಇವರಿಗೆ ಸಿಕ್ಕಿದ್ದು ೯ ನೇ ಸ್ಥಾನ. ಆಯ್ಕೆಯಾಗಿದ್ದು ಕೇವಲ ೮ ಜನ ಮಾತ್ರ ಆಗ ಅವರು ಧೃತಿಗೆಡದೆ, ‘ನನಗಾಗಿ ವಿಧಿ ಬೇರೆ ದೊಡ್ಡ ಹಾದಿ ಸಿದ್ಧಪಡಿಸಿದೆ.’ ಎಂದು ಸಕಾರಾತ್ಮಕವಾಗಿ ಯೋಚಿಸಿದರು. ಅದೇ ಯೋಚನೆ ಅವರನ್ನು ‘ಇಂಡಿಯನ್ ಮಿಸೈಲ್ ಮ್ಯಾನ್ ‘(ಭಾರತದ ಕ್ಷಿಪಣಿ ತಂತ್ರಜ್ಞಾನದ ಪಿತಾಮಹ) ಮತ್ತು ಭಾರತದ ಜನಪ್ರಿಯ ರಾಷ್ಟ್ರಪತಿಯನ್ನಾಗಿ ಮಾಡಿತು. ಇದು ನಮ್ಮ ವಿಚಾರಗಳು ಹೇಗೆ ದೊಡ್ಡ ಬಾಗಿಲನ್ನು ತೆರೆಯುತ್ತವೆ ಎಂಬುದಕ್ಕೆ ಸಾಕ್ಷಿ.
ಅದೃಷ್ಟವೆಂದರೆ?
ಅದೃಷ್ಟ ಎನ್ನುವುದು ಕೇವಲ ಕಾಕತಾಳೀಯವಲ್ಲ. ಒಬ್ಬ ವ್ಯಕ್ತಿಯು ಸಕಾರಾತ್ಮಕ ದೃಷ್ಟಿಕೋನ ಹೊಂದಿದ್ದಾಗ, ಆತ ಸಂಕಷ್ಟಗಳಲ್ಲೂ ಅವಕಾಶವನ್ನು ಹುಡುಕುತ್ತಾನೆ. ಅದೇ ನಕಾರಾತ್ಮಕ ಚಿಂತಕನು ಉತ್ತಮ ಅವಕಾಶದಲ್ಲೂ ದೋಷವನ್ನೇ ಹುಡುಕುತ್ತಾನೆ. ನೀವು ನಿಮ್ಮ ವಿಚಾರಗಳನ್ನು ಸರಿಪಡಿಸಿಕೊಂಡಾಗ ಪರಿಸ್ಥಿತಿಗಳು ತಾವಾಗಿಯೇ ಸುಧಾರಿಸಲು ಆರಂಭಿಸುತ್ತವೆ. ರಾಲ್ಸ್ ವಾಲ್ಡೋ ಎಮರ್ಸನ್ ಹೇಳುವಂತೆ: ‘ದುರ್ಬಲರು ಅದೃಷ್ಟವನ್ನು ನಂಬುತ್ತಾರೆ, ಆದರೆ ಬಲಿಷ್ಟರು ಕಾರಣ ಮತ್ತು ಪರಿಣಾಮದ ಮೇಲೆ ನಂಬಿಕೆ ಇಡುತ್ತಾರೆ.’
ನಮ್ಮ ಜೀವನದಲ್ಲಿ ಭಾಗ್ಯ ಎನ್ನುವುದು ಕೇವಲ ಆಕಸ್ಮಿಕವಾಗಿ ಬರುವಂಥದ್ದಲ್ಲ; ಅದು ನಮ್ಮ ಯೋಚನೆ, ಕೆಲಸ ಮತ್ತು ನಡವಳಿಕೆಯ ಪ್ರತಿಬಿಂಬವಾಗಿರುತ್ತದೆ. ವಿಚಾರಗಳು ಹಣೆಬರಹವನ್ನು ಬದಲಿಸುವುದು ಸಾಧ್ಯವೇ ಎಂದು ಕೇಳುವವರಿಗೆ ಇಲ್ಲಿ ಚರ್ಚಿಸುವ ವಿಚಾರಗಳು ದಾರಿದೀಪವಾಗಬಲ್ಲವು.

ಸಕಾರಾತ್ಮಕ ಆಲೋಚನೆ
ಅಮೇರಿಕದ ಸುಪ್ರಸಿದ್ಧ ಅಧ್ಯಕ್ಷರಲ್ಲಿ ಒಬ್ಬರಾದ ಅಬ್ರಹಾಂ ಲಿಂಕನ್ ಅವರು ಕಂಡ ಸೋಲುಗಳು ಅಷ್ಟಿಷ್ಟಲ್ಲ. ವ್ಯಾಪಾರದಲ್ಲಿ ನಷ್ಟ, ಪ್ರಿಯತಮೆಯ ಸಾವು, ಚುನಾವಣೆಯಲ್ಲಿ ಸತತ ಎಂಟು ಬಾರಿ ಸೋಲು. ಹೀಗೆ ಅಸಂಖ್ಯಾತ ಸೋಲುಗಳನ್ನು ಕಂಡರೂ ಅವರು ‘ನಾನು ಸೋತಿದ್ದೇನೆ ಹೊರತು ಬಿದ್ದಿಲ್ಲ.’ ಎಂದು ಸಕಾರಾತ್ಮಕವಾಗಿಯೇ ಯೋಚಿಸಿದರು. ಈ ದೃಢವಾದ ವಿಚಾರಧಾರೆ ಮತ್ತು ಅದೃಷ್ಟವು ತನ್ನ ಕೈಯಲ್ಲೇ ಇದೆ ಎಂಬ ನಂಬಿಕೆ ಅವರನ್ನು ವಿಶ್ವದ ಪ್ರಭಾವಶಾಲಿ ನಾಯಕನನ್ನಾಗಿಸಿತು. ನಾನು ಏನನ್ನಾದರೂ ಸಾಧಿಸಿಯೇ ತೀರುತ್ತೇನೆ ಎಂಬ ಸಕಾರಾತ್ಮಕ ಆಲೋಚನೆಗಳನ್ನು ಮಾಡಿದರೆ ಅದೃಷ್ಟದ ಬಾಗಿಲನ್ನು ಬಡಿದು ನಮ್ಮತ್ತ ತಿರುಗಿಸಿಕೊಳ್ಳುವಂತೆ ಮಾಡುತ್ತವೆ. ನಮ್ಮ ಆಲೋಚನೆಗಳು ನಮ್ಮ ಬದುಕಿನ ದಿಕ್ಕನ್ನು ಬದಲಿಸುವ ಶಕ್ತಿಯನ್ನು ಹೊಂದಿವೆ. ಮನಸ್ಸಿದ್ದರೆ ಮಾರ್ಗ ಎಂಬಂತೆ ಸೋಲನ್ನೇ ನೆನೆಯುವ ಬದಲು, ಗೆಲ್ಲುವ ಹಾದಿಯ ಬಗ್ಗೆ ಯೋಚಿಸಿದರೆ ಅವಕಾಶಗಳು ತಾವಾಗಿಯೇ ಒದಗಿ ಬರುತ್ತವೆ. ಸಕಾರಾತ್ಮಕ ಯೋಚನೆಗಳೇ ಅದೃಷ್ಟದ ಬಾಗಿಲು ತೆರೆಯುವ ಮೊದಲ ಮೆಟ್ಟಿಲು.
ಸಿದ್ಧತೆ
ಅದೃಷ್ಟದ ಬಾಗಿಲು ತೆರೆಯಲು ಕೇವಲ ಆಲೋಚನೆ ಸಾಕಾಗುವುದಿಲ್ಲ, ಆ ಆಲೋಚನೆಗೆ ತಕ್ಕ ಸಿದ್ಧತೆ ಇರಬೇಕು. ಉತ್ತಮ ಆರೋಚನೆಗಳು ನಮಗೆ ಸರಿಯಾದ ಹಾದಿಯನ್ನು ತೋರಿಸುತ್ತವೆ ಮತ್ತು ಆ ಹಾದಿಯಲ್ಲಿ ನಡೆಯಲು ಬೇಕಾದ ಶಕ್ತಿಯನ್ನು ನೀಡುತ್ತವೆ. ಸೆನೆಕಾ ಎಂಬ ದಾರ್ಶನಿಕ ಹೇಳಿದ ಈ ಮಾತು ಅದೃಷ್ಟಕ್ಕೆ ಅತುತ್ತಮ ವ್ಯಾಖ್ಯಾನ ನೀಡುತ್ತದೆ: ಲಕ್ ಈಸ್ ವಾಟ್ ಹ್ಯಾಪನ್ಸ್ ವೆನ್ ಪ್ರಿಪರೇಶನ್ ಮೀಟ್ಸ್ ಅಪಾರ್ಚುನಿಟಿ.’( ಸಿದ್ಧತೆ ಮತ್ತು ಅವಕಾಶಗಳು ಒಂದಾದಾಗ ಸಂಭವಿಸುವುದೇ ಅದೃಷ್ಟ.)
ಕಲಿಕೆ
ಕಾಲ ಬದಲಾಗುತ್ತಲೇ ಇರುತ್ತದೆ. ಕಾಲಕ್ಕೆ ತಕ್ಕಂತೆ ಹೊಸ ಕೌಶಲ್ಯಗಳನ್ನು ಕಲಿಯುವುದು ಬಹಳ ಮುಖ್ಯ. ಬದಲಾಗುತ್ತಿರುವ ಜಗತ್ತಿಗೆ ನಾವು ಹೊಂದಿಕೊಂಡಾಗ ಮಾತ್ರ ಹೊಸ ಅವಕಾಶಗಳು ಬಾಗಿಲು ತೆರೆಯುತ್ತವೆ. ಜ್ಞಾನವಿದ್ದವನಿಗೆ ಅದೃಷ್ಟ ಒಂದಲ್ಲ ಒಂದು ರೂಪದಲ್ಲಿ ಒಲಿದು ಬರುತ್ತವೆ. ಇಂಜಿನಿಯರಿಂಗ್ ಓದುವ ಕಾಲದಲ್ಲಿ ‘ಹುಡುಗಿಯರಿಗೆ ಇಲ್ಲಿ ಪ್ರವೇಶವಿಲ್ಲ’ ಎಂಬ ನಿಯಮವಿದ್ದಾಗಲೂ ತಮ್ಮ ಆಲೋಚನೆಯಿಂದಲೇ ಅದನ್ನು ಎದುರಿಸಿದರು. ಸುಧಾ ಮೂರ್ತಿ. ಟಾಟಾ ಕಂಪನಿಗೆ ಪತ್ರ ಬರೆದು ತಮ್ಮ ಹಕ್ಕನ್ನು ಪಡೆದರು. ‘ನನ್ನಿಂದ ಸಾಧ್ಯ’ ಎಂಬ ವಿಶ್ವಾಸ ಇಂದು ಅವರನ್ನು ಇಡೀ ಪ್ರಪಂಚವೇ ಗುರುತಿಸುವ ದಾನಿ ಮತ್ತು ಲೇಖಕಿಯನ್ನಾಗಿ ಮಾಡಿದೆ.
ಕೃತಜ್ಞತೆ

ನಮ್ಮ ಬಳಿ ಇರುವುದಕ್ಕೆ ನಾವು ಎಷ್ಟು ಕೃತಜ್ಞರಾಗಿರುತ್ತೇವೆಯೋ, ಅಷ್ಟು ಹೆಚ್ಚು ಸಂತೋಷ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಕೊರತೆಗಳ ಬಗ್ಗೆ ದೂರುವುದನ್ನು ಬಿಟ್ಟು, ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಬೆಳೆಯುವ ಹಂಬಲವಿರಬೇಕು. ಅದೃಷ್ಟವು ಸೋಮಾರಿಗಳನ್ನು ಹುಡುಕಿಕೊಂಡು ಬರುವುದಿಲ್ಲ. ಸರಿಯಾದ ಯೋಚನೆ ಮತ್ತು ಯೋಜನೆಯೊಂದಿಗೆ ಕಠಿಣ ಪರಿಶ್ರಮ ಪಟ್ಟಾಗ, ಆ ಪರಿಶ್ರಮವೇ ಕಾಲಕ್ರಮೇಣ ಅದೃಷ್ಟವಾಗಿ ಮಾರ್ಪಡುತ್ತದೆ. ಶ್ರಮವೇ ಸೌಭಾಗ್ಯದ ಜನನಿ’ ಎಂಬ ಮಾತನ್ನು ನೆನಪಿಡಬೇಕು.
ಸಮಯದ ಮಹತ್ವ
ಕಳೆದು ಹೋದ ಸಮಯ ಮತ್ತು ಕೈತಪ್ಪಿದ ಅವಕಾಶಗಳು ಮತ್ತೆ ಸಿಗುವುದಿಲ್ಲ. ಯಾರು ಸಮಯದ ಮಹತ್ವ ಅರಿತು ನಡೆಯುತ್ತಾರೋ ಅವರನ್ನು ಕಾಲವು ಉನ್ನತ ಸ್ಥಾನದಲ್ಲಿರುತ್ತದೆ. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ನಿಮ್ಮ ಭಾಗ್ಯವನ್ನು ಖಂಡಿತ ಬದಲಿಸುತ್ತದೆ.. ನಾವು ಯಾವುದರ ಬಗ್ಗೆ ಹೆಚ್ಚು ಯೋಚಿಸುತ್ತೇವೆಯೋ ಮತ್ತು ಗಮನ ಹರಿಸುತ್ತೇವೆಯೋ ಅದು ನಮ್ಮ ಜೀವನದಲ್ಲಿ ವೃದ್ಧಿಯಾಗುತ್ತದೆ. ನಾವು ಸೋಲು ಭಯ ಅಸಾಧ್ಯತೆಗಳ ಬಗ್ಗೆಯೇ ಯೋಚಿಸುತ್ತಿದ್ದರೆ, ನಮ್ಮ ಸುತ್ತಲಿನ ಅವಕಾಶಗಳು ನಮಗೆ ಕಾಣಿಸದಂತಾಗುತ್ತವೆ. ಇದಕ್ಕೆ ಪೂರಕವಾಗಿ ಜೇಮ್ಸ್ ಅಲೆನ್ ಅವರ ಸುಂದರವಾದ ಉಕ್ತಿಯಿದೆ: ‘ಅ ಮ್ಯಾನ್ ಈಸ್ ಲಿಟರಲಿ ವಾಟ್ ಹಿ ಥಿಂಕ್ಸ್, ಹೀಸ್ ಕ್ಯಾರಕ್ಟರ್ ಬೀಯಿಂಗ್ ದ ಕಂಪ್ಲೀಟ್ ಸಮ್ ಆಫ್ ಆಲ್ ಹೀಸ್ ಥಾಟ್ಸ್.’
ಆಕರ್ಷಣೆಯ ನಿಯಮ
ವಿಶ್ವದ ನಿಯಮದ ಪ್ರಕಾರ, ನಾವು ಯಾವ ರೀತಿಯ ಕಂಪನಗಳನ್ನು ಹೊರಹಾಕುತ್ತೇವೆಯೋ ಅದೇ ರೀತಿಯ ಫಲಿತಾಂಶಗಳನ್ನು ಪಡೆಯುತ್ತೇವೆ. ನಾವು ‘ನನ್ನಿಂದ ಸಾಧ್ಯ.’ ‘ನಾನು ಯಶಸ್ವಿಯಾಗುತ್ತೇನೆ.’ ಎಂಬ ಧನಾತ್ಮಕ ವಿಚಾರಗಳನ್ನು ಬಿತ್ತಿದಾಗ ನಮ್ಮ ಸುಪ್ತ ಮನಸ್ಸು ಆ ಗುರಿಯನ್ನು ತಲುಪಲು ಬೇಕಾದ ದಾರಿಗಳನ್ನು ಹುಡುಕಲು ಆರಂಭಿಸುತ್ತದೆ. ಆಗ ನಮಗೆ ಅನಿರೀಕ್ಷಿತವಾಗಿ ಸಹಾಯ ಹಸ್ತಗಳು ದೊರೆಯುತ್ತವೆ. ಇದನ್ನೇ ಜನರು ‘ಅದೃಷ್ಟ ಒಲಿಯಿತು’ ಎಂದು ಹೇಳುತ್ತಾರೆ.. ಜೀವನವೆಂಬುದು ನಾವು ದಿನವಿಡೀ ಯೋಚಿಸುವ ವಿಚಾರಗಳ ಮೊತ್ತವಾಗಿದೆ. ಅನೇಕರು ಅದೃಷ್ಟ ಎನ್ನುವುದ ಆಕಾಶದಿಂದ ಬೀಳುವ ಪವಾಡ ಅಥವಾ ಹಣೆಬರಹ ಎಂದು ಎಂದು ನಂಬುತ್ತಾರೆ. ಆದರೆ ವಾಸ್ತವವದಲ್ಲಿ, ಅದೃಷ್ಟ ಎಂಬುದು ನಮ್ಮ ವಿಚಾರಗಳಿಂದ ಉಂಟಾಗುವ ಕ್ರಿಯಗಳ ಫಲಿತಾಂಶವಾಗಿದೆ.
ಶಿಲ್ಪಿಗಳು
ಕೊನೆಯದಾಗಿ, ನಮ್ಮ ವಿಚಾರಗಳೇ ನಮ್ಮ ಬದುಕಿನ ಶಿಲ್ಪಿಗಳು. ನಿಮ್ಮ ವಿಚಾರಗಳು ಮಿತಿಯಾಗಿದ್ದರೆ ನಿಮ್ಮ ಯಶಸ್ಸೂ ಮಿತಿಯಾಗಿರುತ್ತದೆ. ನಿಮ್ಮ ಆಲೋಚನೆಗಳನ್ನು ವಿಶಾಲವಾಗಿಸಿ ಕಠಿಣ ಪರಿಶ್ರಮದ ಮೇಲೆ ನಂಬಿಕೆ ಇಡಿ. ಮಹಾತ್ಮ ಗಾಂಧೀಜಿಯವರ ಈ ಮಾತುಗಳನ್ನು ನೆನಪಿಡಿ: ‘ಕೀಪ್ ಯುವರ್ ಥಾಟ್ಸ್ ಪಾಸಿಟಿವ್ ಬಿಕಾಸ್ ಯುವರ್ ಥಾಟ್ಸ್ ಬಿಕಮ್ ಯುವರ್ ವರ್ಡ್ಸ್ ಕೀಪ್ ಯುವರ್ ವರ್ಡ್ಸ್ ಪೊಸಿಟಿವ್ ಬಿಕಾಜ್ ಯುವರ್ ವರ್ಡ್ಸ್ ಬಿಕಮ್ ಯುವರ್ ಬಿಹೇವಿರ್ ಯುವರ್ ಬಿಹೇವಿಯರ್ ಬಿಕಮ್ಸ್ ಯುವರ್ ಹ್ಯಾಬಿಟ್ಸ್.’ ಹೀಗೆ ನಮ್ಮ ವಿಚಾರಗಳನ್ನು ಸರಿಪಡಿಸಿಕೊಂಡರೆ, ಅದೃಷ್ಟದ ಬಾಗಿಲು ತಂತಾನೇ ತೆರೆಯುತ್ತದೆ. ಅದೃಷ್ಟವೆಂಬುದು ಮೇಲಿಂದ ಉದುರುವುದಿಲ್ಲ. ಅದು ನಮ್ಮ ಸತತ ಪ್ರಯತ್ನದ ಫಲ. ನಿಮ್ಮ ಮೇಲೆ ನಿಮಗೆ ನಂಬಿಕೆಯಿರಲಿ. ಉತ್ತಮ ದಾರಿಯಲ್ಲಿ ಸಾಗುತ್ತಿದ್ದರೆ ನಿಮ್ಮ ಭಾಗ್ಯ ನಿಮ್ಮನ್ನು ಹಿಂಬಾಲಿಸುತ್ತದೆ. ಅದೃಷ್ಟದ ಬಾಗಿಲು ತೆರೆದು ನಿಮ್ಮನ್ನು ತೆರೆದ ತೋಳುಗಳಿಂದ ಸ್ವಾಗತಿಸುತ್ತದೆ.


