ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಬಸವನ ಬಾಗೇವಾಡಿ ಮತಕ್ಷೇತ್ರದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಹಾಗೂ ದೇಶಾಭಿಮಾನಿ ನಾಗರಿಕರು ಬುಧವಾರ, ಜೂನ್ ೧೦, ೨೦೨೬ ರಂದು ತಮ್ಮ ತಮ್ಮ ಊರುಗಳ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಕರೆ ನೀಡಿದರು.
ಪಟ್ಟಣದ ಸ್ವಗೃಹದಲ್ಲಿ ಬುಧವಾರ ಸಾಯಂಕಾಲ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿಯವರು ೧೨ ವರ್ಷಗಳ ೪೩೯೯ ದಿನಗಳ ಸೇವೆಯನ್ನು ಪೂರೈಸಿ ಹೊಸ ಇತಿಹಾಸ ನಿರ್ಮಿಸಿರುವ ಹಿನ್ನೆಲೆಯಲ್ಲಿ ಈ ಪೂಜೆ ಆಯೋಜಿಸಲು ಮನವಿ ಮಾಡಿದರು.
ಹಿಂದೆ ಮೂರು ಬಾರಿ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರು ಅವರ ೪೩೯೨ ದಿನಗಳ ದಾಖಲೆ ಮುರಿದು ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯದ ಪ್ರತಿಯೊಂದು ಹಳ್ಳಿ, ಪಟ್ಟಣ ಮತ್ತು ನಗರಗಳಲ್ಲಿ ಇರುವ ಪ್ರಮುಖ ದೇವಸ್ಥಾನಗಳಲ್ಲಿ ದೇಶಾಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಬೇಕು ಎಂದು ಅವರು ವಿನಂತಿಸಿದರು.
ನೆಹರು ಅವರ ಕಾಲಘಟ್ಟ ಹಾಗೂ ಇಂದಿನ ಕಾಲಘಟ್ಟದಲ್ಲಿ ದೊಡ್ಡ ವ್ಯತ್ಯಾಸವಿದೆ. ಆ ಕಾಲದಲ್ಲಿ ಮಾಧ್ಯಮ ಹಾಗೂ ಪ್ರಚಾರದ ಪ್ರಭಾವ ಕಡಿಮೆ ಇದ್ದರೆ, ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಬಹಳ ಪ್ರಬಲವಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಆಡಳಿತ ನಡೆಸುವುದು ಸವಾಲಿನ ಸಂಗತಿ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರು ಕಠಿಣ ಪರಿಸ್ಥಿತಿಗಳಲ್ಲಿಯೂ ದೇಶದ ಅಭಿವೃದ್ಧಿಗಾಗಿ ಹಾಗೂ ಜನಹಿತಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರ ಆಡಳಿತ ಇನ್ನಷ್ಟು ಯಶಸ್ವಿಯಾಗಲು ಮತ್ತು ದೇಶದ ರಕ್ಷಣೆಗೆ ದಕ್ಷತೆಯೊಂದಿಗೆ ಮುಂದುವರಿಯಲು ದೇವರ ಅನುಗ್ರಹಕ್ಕಾಗಿ ಎಲ್ಲರೂ ಪ್ರಾರ್ಥಿಸೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರಾದ ರಾಜಶೇಖರ ಶೀಲವಂತ, ಈರಯ್ಯ ಮಠಪತಿ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಕಲ್ಲಪ್ಪ ಸಿ. ಸೊನ್ನದ, ಸದಸ್ಯರಾದ ಬಾಬು ಭಜಂತ್ರಿ, ಬಸಪ್ಪ ಗಾಜಿ, ಯಮನಪ್ಪ ಮಂಟೂರ, ಮಳೆಪ್ಪ ಬರಗಿ, ವಿಜಯಕುಮಾರ ಕೊಟ್ಟಗಿ, ಸುಭಾಷ್ ಭಜಂತ್ರಿ, ಶಿವಾನಂದ ದೊಡಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

