ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಗರದ ಜನತೆಗೆ ಮೂಲಭೂತ ಸೌಕರ್ಯಗಳನ್ನು ಪ್ರಾಮಾಣಿಕವಾಗಿ ಒದಗಿಸುವ ಕಾರ್ಯದಲ್ಲಿ ಕಾರ್ಯಪ್ರವೃತ್ತನಾಗಿದ್ದೇನೆ. ಜೊತೆಗೆ ರೂ.೨೫ಕೋಟಿ ವೆಚ್ಚದ ೪೩ ರಸ್ತೆ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದು ಸಹ ಮಂಜೂರು ಹಂತದಲ್ಲಿದೆ. ಇನ್ನು ಒಂದೆ ತಿಂಗಳಲ್ಲಿ ಮಂಜೂರು ಮಾಡಿಸಿ ನಗರದಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ಸರಿಪಡಿಸುವ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ನಗರದ ಬಸವ ಮಂಟಪದ ಬಳಿ ನಗರಸಭೆ ವತಿಯಿಂದ ೨೦೨೫-೨೬ನೆಯ ಸಾಲಿನ ಮುಖ್ಯಮಂತ್ರಿ ಕೌಶಲ್ಯಾಭಿವೃದ್ಧಿ ಯೋಜನೆ ಅಡಿಯಲ್ಲಿ ರೂ.೩೦ಲಕ್ಷದ ಅನುದಾನದ ರಸ್ತೆ ಅಭಿವೃದ್ಧಿ ಪಡಿಸುವ ಭೂಮಿಪೂಜೆಯನ್ನು ನೇರವೇರಿಸಿ ಮಾತನಾಡಿದ ಅವರು, ಸಿಂದಗಿ ನಗರಕ್ಕೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ೩೪ ರಸ್ತೆಗಳು ಮಂಜೂರಾಗಿವೆ. ೩೪ರಲ್ಲಿ ಮೊದಲಿಗೆ ೨೧ನೇ ವಾರ್ಡನಿಂದಲೇ ಪ್ರಾರಂಭೋತ್ಸವ ಮಾಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ರವಿ ಶಿರಗುಪ್ಪಿ, ಅಜರ್ ನಾಟೀಕಾರ, ಯೋಜನಾ ಪ್ರಾಧಿಕಾರ ಅಧ್ಯಕ್ಷ ಹಣಮಂತ ಸುಣಗಾರ, ಸಾಯಬಣ್ಣ ಪುರದಾಳ, ಅಂಬರೀಶ ಚೌಗಲೆ, ಸುನಂದಾ ಯಂಪುರೆ, ಹಾಂಸಿಪೀರ ಆಳಂದ, ನೂರಅಹ್ಮದ ಅತ್ತಾರ, ಶಾಂತೂ ರಾಣಾಗೋಳ, ಜಯಶ್ರೀ ಹದನೂರ, ಶಶಿಕಲಾ ಅಂಗಡಿ, ರವಿ ನಾವಿ, ಎ.ಎ.ಮುಲ್ಲಾ ಸೇರಿದಂತೆ ಇಲಾಖೆಯ ಸಿಬ್ಬಂದಿಗಳು, ಪಕ್ಷದ ಕಾರ್ಯಕರ್ತರು ಹಾಗೂ ನಿವಾಸಿಗಳು ಇದ್ದರು.

