ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಸಕಾಲದಲ್ಲಿ ವಿತರಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಅವರು, ಬಿತ್ತನೆ ಬೀಜ ವಿತರಣೆ ಹಾಗೂ ಬೀಜ ಉಪಚಾರ ಹಾಗೂ ಕೀಟನಾಶಕ ಸುರಕ್ಷಾ ತರಬೇತಿಗಳಂತಹ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ನಗರದ ಕೃಷಿ ಇಲಾಖೆ ವತಿಯಿಂದ ಕಛೇರಿ ಆವರಣದಲ್ಲಿ ಹಮ್ಮಿಕೊಂಡ ಮುಂಗಾರು ಹಂಗಾಮಿನ ಬಿತ್ತನೆ ಬೀಜಗಳ ವಿತರಣಾ ಕಾರ್ಯಕ್ರಮದಲ್ಲಿ ವಿತರಣೆ ಮಾಡಿ ಮಾತನಾಡಿದ ಅವರು, ಸರ್ಕಾರದ ಯೋಜನೆಗಳು ಮತ್ತು ಸಹಾಯಧನವನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು. ಸರ್ಕಾರದಿಂದ ಬರುವ ಬಿತ್ತನೆ ಬೀಜ, ರಸಗೊಬ್ಬರ ವಿತರಣೆ ಮಾಡುವುದು ನಮ್ಮ ಜವಾಬ್ದಾರಿ. ಬಿತ್ತನೆ ಬೀಜ, ಕೃಷಿಭಾಗ್ಯ ಯೋಜನೆ, ಸಾವಯವ ಕೃಷಿ ಹಾಗೂ ಇತರೆ ಸರ್ಕಾರದ ಯೋಜನೆಗಳ ಸಹಾಯಧನದಲ್ಲಿ ರೈತರಿಗೆ ಲಾಭವಾಗುವಂತೆ ತಲುಪಿಸಬೇಕು ಎಂದರು.
ಈ ವೇಳೆ ಇಂಡಿ ಕೃಷಿ ಸಹಾಯಕ ಉಪನಿರ್ದೇಶಕ ಚಂದ್ರಕಾಂತ ಪವಾರ ಮಾತನಾಡಿ, ಈ ಭಾಗದ ರೈತರಿಗೆ ಬೀಜ ಮತ್ತು ರಸಗೋಬ್ಬರ ಕೊರತೆ ಉಂಟಾಗದಂತೆ ನಿಗಾವಹಿಸಿಲಾಗುವುದು. ೧೦೦ಕ್ಕೆ ಶೇ.೯೫ರಷ್ಟು ಬೆಳೆ ಬರುವ ಬೀಜಗಳನ್ನು ಪರಿಷ್ಟರಣೆ ಮಾಡಿಯೇ ವಿತರಣೆ ಮಾಡಲಾಗುತ್ತಿದೆ. ರೈತ ಸಂಕರ್ಪ ಕೇಂದ್ರದಲ್ಲಿ ಮೆಕ್ಕೆಜೋಳ, ತೊಗರಿ, ಹೆಸರು ಮತ್ತು ಸೂರ್ಯಕಾಂತಿ ಬೀಜಗಳನ್ನು ವಿತರಣೆ ಮಾಡಲಾಗುವುದು. ಮೆಕ್ಕೆಜೋಳ ೪೦ಕ್ವಿಂಟಲ್, ಸೂರ್ಯಕಾಂತಿ ೧೫೦ಕೆಜಿ ಇದೆ. ಯಾವುದೇ ರೈತರಿಗೆ ಕಡಿಮೆ ಬೀಳದ ರೀತಿಯಲ್ಲಿ ಬೀಜವಿದೆ ಎಂದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪ್ರಶಾಂತ ಸಾಣಿ, ಕೃಷಿಕ ಸಮಾಜದ ಅಧ್ಯಕ್ಷ ಶಿವಪ್ಪಗೌಡ ಬಿರಾದಾರ, ಶಿವಾನಂದ ಹೂವಿನಹಳ್ಳಿ, ಪ್ರಗತಿಪರ ರೈತ ಭಾಗಪ್ಪಗೌಡ ಪಾಟೀಲ, ಗಂಧಾದರ ಚಿಂಚೊಳ್ಳಿ, ಅಶೋಕ ಕೋಳಾರಿ, ನೂರಅಹ್ಮದ ಅತ್ತಾರ, ಸುನಂದಾ ಯಂಪುರೆ, ಅಬ್ದುಲ್ರಜಾಕ ಮೋಮಿನ ಸೇರಿದಂತೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರು ಇದ್ದರು.

