ಆಲಮಟ್ಟಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರ ಬೃಹತ್ ಪ್ರತಿಭಟನೆ | ಲಿಖಿತ ಭರವಸೆ ಬಳಿಕ ಹಿಂಪಡೆತ
ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಏತ ನೀರಾವರಿ ಯೋಜನೆ ಪೂರ್ಣಗೊಳಿಸುವಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಮವಾರ ಆಲಮಟ್ಟಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಆಲಮಟ್ಟಿಯ ರಾಮಲಿಂಗೇಶ್ವರ ವೃತ್ತದಲ್ಲಿ ನೂರಾರು ರೈತರು ವೃತ್ತಾಕಾರವಾಗಿ ನಿಂತು ಪ್ರತಿಭಟಿಸಿದರು.
ಈ ವೇಳೆ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ, ಶಾಂತಗೌಡ ಪಾಟೀಲ ಸಂಗಮೇಶ ಸಗರ, ರಾಹುಲ ಕುಬಕಡ್ಡಿ, ಶಶಿಕಾಂತ ಗುರೂಜಿ, ಕಲ್ಲು ಸೊನ್ನದ ಮತ್ತಿತರರು ಮಾತನಾಡಿ, “೨೦೧೭ರಲ್ಲಿ ಆರಂಭಗೊಂಡ ನಾಗರಬೆಟ್ಟ ಏತ ನೀರಾವರಿ ಯೋಜನೆ ೮ ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ೩೦೬ ಎಕರೆ ಭೂಮಿಗೆ ಪರಿಹಾರ ನೀಡದೇ ಕಾಮಗಾರಿ ನಡೆಸಲಾಗಿದೆ. ಭೂಸ್ವಾಧೀನ ಜಮೀನಿಗೆ ಇನ್ನೂ ಅವಾರ್ಡ್ ಆಗಿಲ್ಲ. ಮಾರುಕಟ್ಟೆ ಬೆಲೆಗಿಂತ ಕಡಿಮೆ ಪರಿಹಾರ ನೀಡಲಾಗಿದೆ” ಎಂದು ಆರೋಪಿಸಿದರು.
“ಕೆಲವೇ ಮೀಟರ್ ಕಾಮಗಾರಿ ಬಾಕಿ ಇದೆ. ಭೂಮಿ ವಶಪಡಿಸಿಕೊಂಡು ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಲಿಖಿತ ಭರವಸೆ ನೀಡುವವರೆಗೂ ಪ್ರತಿಭಟನೆ ಹಿಂದಕ್ಕೆ ಪಡೆಯುವುದಿಲ್ಲ” ಎಂದು ಪಟ್ಟು ಹಿಡಿದರು.
ಹೋರಾಟ ವಾಪಸ್:
ಯುಕೆಪಿಯ ವಿಶೇಷ ಭೂಸ್ವಾಧೀನಾಧಿಕಾರಿ ಎಂ.ಬಿ. ನಾಗಠಾಣ, “ಒಪ್ಪಿತ ದರದ ಐ-ತೀರ್ಪು ರಚಿಸಲು ರೈತರು ಒಪ್ಪಿದರೆ ನಿಯಮನುಸಾರ ಮೂರು ತಿಂಗಳಲ್ಲಿ ಐ-ತೀರ್ಪು ಪ್ರಕಟಿಸಿ ಪರಿಹಾರ ನೀಡಲಾಗುವುದು” ಎಂದು ಲಿಖಿತ ಪತ್ರ ನೀಡಿದ ಬಳಿಕ ಸಂಜೆ ರೈತರು ಹೋರಾಟ ಹಿಂಪಡೆದರು.
ಚಿಮ್ಮಲಗಿಯ ಸಿದ್ಧರೇಣುಕ ಸ್ವಾಮೀಜಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ರೈತ ಮುಖಂಡರಾದ ಶಿವಾನಂದ ಟಕ್ಕಳಕಿ, ಶಶಿಕಾಂತ ದೇಸಾಯಿ, ಹನುಮಂತ ತಳವಾರ, ರವಿಶಂಕರ ಕೋತಿನ, ನಿಂಗರಾಜ ಆಲೂರ, ಸೀತಪ್ಪ ಗಣಿ ಮತ್ತಿತರರು ಉಪಸ್ಥಿತರಿದ್ದರು.
ರೈತರ ಮುಖ್ಯ ಬೇಡಿಕೆಗಳು
೧. ಯೋಜನಾ ನಿರಾಶ್ರಿತ ಪ್ರಮಾಣಪತ್ರ ನೀಡಬೇಕು.
೨. ನಿರಾಶ್ರಿತ ರೈತರ ನಿರುದ್ಯೋಗಿ ಮಕ್ಕಳಿಗೆ ಜೀವನಾಧಾರ ಭತ್ಯೆ ಒದಗಿಸಬೇಕು.
೩. ಕಲ್ಯಾಣ ಕರ್ನಾಟಕದ ೩೭೧(ಜೆ) ಮಾದರಿಯಲ್ಲಿ ಸೌಲಭ್ಯ, ಮೀಸಲಾತಿ ನೀಡಬೇಕು.

ಅಧಿಕಾರಿಗಳ ಸ್ಪಷ್ಟನೆ
ಸ್ಥಳಕ್ಕೆ ಭೇಟಿ ನೀಡಿದ ಮುಖ್ಯ ಎಂಜಿನಿಯರ್ ಡಿ. ಬಸವರಾಜ, ಕೆಬಿಜೆಎನ್ಎಲ್ನ ತಾಂತ್ರಿಕ ನಿರ್ದೇಶಕ ವಿ.ಎಸ್. ಹಿರೇಗೌಡರ, “ಯೋಜನೆಯ ಮುಖ್ಯ ಕಾಲುವೆಯ ಸುಮಾರು ೧ ಕಿ.ಮೀ ಕಾಮಗಾರಿ ಮಾತ್ರ ಬಾಕಿ ಇದೆ. ರೈತರು ಸಹಕರಿಸಿದರೆ ನಾಳೆಯೇ ಕಾಮಗಾರಿ ಆರಂಭಿಸುತ್ತೇವೆ. ಭೂಸ್ವಾಧೀನಕ್ಕಾಗಿ ಕೆಬಿಜೆಎನ್ಎಲ್ ೨೨೩ ಕೋಟಿ ರೂ. ವಿಶೇಷ ಭೂಸ್ವಾಧೀನಾಧಿಕಾರಿಗಳಿಗೆ ಡಿಪಾಸಿಟ್ ಮಾಡಿದೆ” ಎಂದರು.
ಯುಕೆಪಿ ಪುನರ್ವಸತಿ ವಿಶೇಷ ಜಿಲ್ಲಾಧಿಕಾರಿ ಮಾರುತಿ ಬ್ಯಾಕೋಡ, “ರೈತರು ಒಪ್ಪಂದದ ಬೆಲೆಗೆ ಪರಿಹಾರ ಪಡೆಯಲು ಒಪ್ಪಿದರೆ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿ ಮೂರು ತಿಂಗಳೊಳಗೆ ಪರಿಹಾರ ನೀಡಲಾಗುವುದು” ಎಂದರು.
ಭಾರಿ ಬಂದೋಬಸ್ತ್
ಬಸವನಬಾಗೇವಾಡಿ ಡಿವೈಎಸ್ಪಿ ನೇತೃತ್ವದಲ್ಲಿ ೧೫೦ಕ್ಕೂ ಅಧಿಕ ಪೊಲೀಸರು, ಇಬ್ಬರು ಸಿಪಿಐ, ೧೦ಕ್ಕೂ ಹೆಚ್ಚು ಪಿಎಸ್ಐಗಳು ಬಂದೋಬಸ್ತ್ ಕೈಗೊಂಡಿದ್ದರು. ರಾಕ್ ಗಾರ್ಡನ್, ಕೃಷ್ಣಾ ಉದ್ಯಾನ, ಲವ-ಕುಶ ಉದ್ಯಾನ, ವಾಟರ್ ಪಾರ್ಕ್ ಸಂಪೂರ್ಣ ಬಂದ್ ಮಾಡಲಾಗಿತ್ತು.

