ಸಂಕೋನಟ್ಟಿಯಲ್ಲಿ ರೂ.21.52 ಕೋಟಿ ವೆಚ್ಚದ ನೂತನ ವಿದ್ಯುತ್ ಉಪಕೇಂದ್ರಕ್ಕೆ ಶಾಸಕ ಸವದಿ ಚಾಲನೆ
ಅಥಣಿ: ಸಂಕೋನಟ್ಟಿ ಗ್ರಾಮ ವ್ಯಾಪ್ತಿಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ (ಕೆಪಿಟಿಸಿಎಲ್) ವತಿಯಿಂದ ನಿರ್ಮಿಸಲಾಗುತ್ತಿರುವ 110/11 ಕೆ.ವಿ. ನೂತನ ವಿದ್ಯುತ್ ಉಪಕೇಂದ್ರದ ಕಾಮಗಾರಿಗೆ ಶಾಸಕ ಲಕ್ಷ್ಮಣ ಸವದಿ ಅವರು ಭೂಮಿ ಪೂಜೆ ಸಲ್ಲಿಸಿದರು.
ಈ ಯೋಜನೆಯು ಈ ಭಾಗದ ರೈತರಿಗೆ ಮತ್ತು ಗ್ರಾಮೀಣ ಜನತೆಗೆ ವರದಾನವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಸ್ತುತ ಸಂಕೋನಟ್ಟಿ 33/11 ಕೆ.ವಿ. ಉಪಕೇಂದ್ರದ ಮೇಲೆ ಹೆಚ್ಚಿನ ಒತ್ತಡವಿದ್ದ ಕಾರಣ, ಸುತ್ತಮುತ್ತಲ ಗ್ರಾಮಗಳಲ್ಲಿ ಕಡಿಮೆ ವೋಲ್ಟೇಜ್ ಮತ್ತು ಪದೇ ಪದೇ ವಿದ್ಯುತ್ ವ್ಯತ್ಯಯದ ಸಮಸ್ಯೆ ಉಂಟಾಗುತ್ತಿತ್ತು. ನೂತನ ಉಪಕೇಂದ್ರದಿಂದ ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲಿದೆ. ವಿಶೇಷವಾಗಿ ರೈತರ ನೀರಾವರಿ ಪಂಪ್ಸೆಟ್ಗಳಿಗೆ ಹಗಲು ವೇಳೆಯಲ್ಲಿ 7 ಗಂಟೆಗಳ ಕಾಲ ನಿರಂತರ ಮತ್ತು ಗುಣಮಟ್ಟದ ವಿದ್ಯುತ್ ಪೂರೈಕೆಯಾಗಲಿದೆ ಎಂದು ಶಾಸಕರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಲಕ್ಷ್ಮಣ ಸವದಿ ಅವರು, “ಗ್ರಾಮೀಣಾಭಿವೃದ್ಧಿಗೆ ವಿದ್ಯುತ್ ಮೂಲಸೌಕರ್ಯ ಅತಿ ಅಗತ್ಯ. ಭವಿಷ್ಯದ ವಿದ್ಯುತ್ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಸರ್ಕಾರದ ಸಹಕಾರದೊಂದಿಗೆ ಅಥಣಿ ಕ್ಷೇತ್ರವನ್ನು ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನಾಗಿ ಮಾಡುವ ಗುರಿ ಹೊಂದಿದ್ದೇವೆ” ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕೆಪಿಟಿಸಿಎಲ್ನ ಮೇಜರ್ ವರ್ಕ್ಸ್ ಎಂಜಿನಿಯರ್ಗಳು, ಅಧಿಕಾರಿಗಳಾದ ಸಂಜಯ್ ಗೊಣಜಾಲ, ಸಂಪನ್ನವರ, ಎಸ್ .ಪಾರ್ಥನಳ್ಳಿ, ಅನಿಲ ರಾವ್ ದೇಶಪಾಂಡೆ, ಗುತ್ತಿಗೆದಾರ ಅಜಯ ದೇಶಪಾಂಡೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಅಶೋಕ್ ಸನಾಳ, ಮಲ್ಲಪ್ಪ ಅವಟಿ, ಅನಂತ್ ಬಸರಿಕೋಡಿ , ಲಕ್ಷ್ಮಣ ಮುಗಳಕೊಡ, ಅಶೋಕ್ ಕೌಜಲಗಿ, ರಾಹುಲ್ ನಾಯ್ಕ, ಮಲ್ಲು ಕೊಳ್ಳೋಲಿ, ಮುತ್ತು ಮೊಕಾಸಿ ಸೇರಿದಂತೆ ಸ್ಥಳೀಯ ರೈತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

