ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿರುವ ವಕೀಲ ಸೈಯದ್ ಆಸೀಫ್ ಉಲ್ಲಾ ಸೈಯದ್ ಖಾದರ್ ಭಾಷಾ ಖಾದ್ರಿ ಮೇಲೆ ಕೇಸ್ ದಾಖಲಿಸಿ, ಬಂಧಿಸಿ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವಂತೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಬೆಂಬಲಿಗರು ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಔದ್ರಾಮ್ ಅವರಿಗೆ ಸೋಮವಾರ ಮನವಿ ಪತ್ರ ಸಲ್ಲಿಸಿದರು.
ವಿಜಯಪುರದ ವಕೀಲ ಸೈಯದ್ ಆಸೀಫ್ ಉಲ್ಲಾ ಸೈಯದ್ ಖಾದರ್ ಭಾಷಾ ಖಾದ್ರಿ ಎಂಬಾತ ಜನಪ್ರತಿನಿಧಿಯಾದ ಬಸನಗೌಡ ಪಾಟೀಲ ಯತ್ನಾಳರ ಬಗ್ಗೆ ಪದೇ ಪದೇ ಅತ್ಯಂತ ಕೀಳು ಮಟ್ಟದ ಅವಾಚ್ಯ ಶಬ್ದಗಳನ್ನು ಬಳಸಿ ಏಕವಚನದಲ್ಲಿ ಅವಹೇಳನಕಾರಿ ಮಾತನಾಡಿದ್ದು, ಎಲ್ಲ ಕಡೆ ವೈರಲ್ ಆಗಿದೆ. ಇದರಿಂದ ರಾಜ್ಯಮಟ್ಟದಲ್ಲಿ ಬಸನಗೌಡ ಪಾಟೀಲ ಯತ್ನಾಳರ ಹೆಸರಿಗೆ ಕಳಂಕವನ್ನು ಸತತವಾಗಿ ತರುತ್ತಿದ್ದಾನೆ. ಇವನ ಹೀನ ನಡೆಯಿಂದ ರಾಜ್ಯಾದ್ಯಂತ ಇರುವ ಬಸನಗೌಡರ ಲಕ್ಷಾಂತರ ಹಿಂದೂ ಅಭಿಮಾನಿಗಳು, ಕಾರ್ಯಕರ್ತರು, ಹಿತೈಷಿಗಳು ಅಲ್ಲದೆ, ಸಮಾಜ ಬಾಂಧವರು ರೊಚ್ಚಿಗೆದ್ದು ಇವನ ವಿರುದ್ಧ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ, ವಿಜಯಪುರ ನಗರಕ್ಕೆ ಎಲ್ಲ ಕಡೆಯಿಂದ ಆಗಮಿಸಿ ದೊಡ್ಡ ಹೋರಾಟ ಮಾಡುತ್ತೇವೆ ಎಂದು ಕೇಳುತ್ತಿದ್ದಾರೆ.
ಶಾಂತವಾದ ವಿಜಯಪುರ ನಗರದಲ್ಲಿ ಯಾವುದೇ ಅಹಿತಕರ ಅನಾಹುತ ಘಟನೆಗಳು ಸಂಭವಿಸದಂತೆ ಮುನ್ನಚ್ಚರಿಕಾ ಕ್ರಮವಾಗಿ ಅವನನ್ನು ಬಂಧಿಸಿ, ಕೇಸ್ ದಾಖಲಿಸಿಕೊಂಡು, ಜಿಲ್ಲೆಯಿಂದ ಗಡಿಪಾರು ಮಾಡಬೇಕು. ಅಲ್ಲದೆ, ಇಂತಹ ಕ್ರಮಿನಲ್ ವ್ಯಕ್ತಿಯಿಂದ ಸಾರ್ವಜನಿಕರಿಗೆ ಯಾವುದೇ ನ್ಯಾಯ ಸಿಗಲು ಸಾಧ್ಯವಿಲ್ಲ. ಹೀಗಾಗಿ ಸರ್ಕಾರಿ ವಕೀಲ ಹುದ್ದೆಯಿಂದಲೂ ತಕ್ಷಣ ವಜಾ ಮಾಡಬೇಕು.
ಈಗಾಗಲೇ ಇತನ ವಿರುದ್ಧದ ದಲಿತ ಮಹಿಳೆ ಮೇಲೆ ಹಲ್ಲೆ ಹಾಗೂ ಕಿರುಕುಳ ನೀಡಿದ ಪ್ರಕರಣ, ಕೋರ್ಟ ಆವರಣದಲ್ಲಿಯೇ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಪ್ರಕರಣ, ಮಹಾನಗರ ಪಾಲಿಕೆ ಸದಸ್ಯೆಯ ಪತಿಯ ಹತ್ಯೆ ಪ್ರಕರಣ, ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತರ ಬಗ್ಗೆ ಕೆಟ್ಟ ಪದ ಬಳಸಿ ನಿಂಧಿಸಿದ ಪ್ರಕರಣ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿ ರೌಡಿಶೀಟರ್ ನಿಂದಾಗಿ ಗಡಿಪಾರು ಶಿಕ್ಷೆಗೆ ಒಳಗಾಗಿರುವ ವ್ಯಕ್ತಿ ಆಗಿದ್ದಾನೆ. ಕ್ರಿಮಿನಲ್ ಹಿನ್ನೆಲೆ ಹೊಂದಿರುವ ವ್ಯಕ್ತಿಯ ಕೆಲಸವೇ ಸಮಾಜದಲ್ಲಿ ಗಲಭೆ ಸೃಷ್ಟಿಸಿ ಅಶಾಂತಿ ನಿರ್ಮಾಣ ಮಾಡುವ ದುರುದ್ದೇಶ ಹೊಂದಿದ್ದಾನೆ. ಅದಕ್ಕೆ ಅವಕಾಶ ಕಲ್ಪಿಸಬಾರದು.
ಸಮಾಜದಲ್ಲಿ ಕೋಮುಗಲಭೆ ಸೃಷ್ಟಿಸಲು ಯತ್ನಿಸುತ್ತಿರುವ ಹಾಗೂ ಜನಪ್ರತಿನಿಧಿಗಳು, ಅಧಿಕಾರಿಗಳ ಬಗ್ಗೆ ಕೀಳು ಮಟ್ಟದ ಅವಾಚ್ಯ ಶಬ್ದಗಳನ್ನು ಬಳಸಿ, ಏಕವಚನದಲ್ಲಿ ಸಂಭೋಧಿಸುವ ಮೂಲಕ ಸಾಂವಿಧಾನಿಕ ಹುದ್ದೆಯಲ್ಲಿರುವವರಿಗೆ ಅವಮಾನ ಮಾಡುತ್ತಿರುವ ವಕೀಲ ಸೈಯದ್ ಆಸೀಫ್ ಉಲ್ಲಾ ಸೈದ್ ಖಾದರ್ ಭಾಷಾ ಖಾದ್ರಿ ಮೇಲೆ ಶೀಘ್ರ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ ವಿಕ್ರಮ ಗಾಯಕವಾಡ, ಬಾಬು ಶಿರಶ್ಯಾಡ, ಸುನೀಲ ಬೈರವಾಡಗಿ, ಅಶೋಕ ಬೆಲ್ಲದ, ಕಿರಣ ಕಾಳೆ, ಲಕ್ಷ್ಮಣ ಜಾಧವ, ಯುವರಾಜ ಚೋಳಕೆ, ರಮೇಶ ಪಡಸಲಗಿ, ಸಂಜು ಭೋಸಲೆ, ಶಿವಾನಂದ ಸಿಂದಗಿ, ಸುರೇಶ ಚವ್ಹಾಣ, ಗುಂಡೇಶ್ವರ ಹಳಕಟ್ಟಿ, ಪ್ರದೀಪ ಕಲ್ಯಾಣಶೆಟ್ಟಿ, ಪ್ರಸಾದ ಶಿವಸಿಂಪಿ, ಅನೀಲ ಭೂಸನೂತ ಇದ್ದರು.

