ಉದಯರಶ್ಮಿ ದಿನಪತ್ರಿಕೆ
ಬೆಳಗಾವಿ: ನಗರದ ಡಾ ಫ ಗು ಹಳಕಟ್ಟಿ ಸಭಾಭವನದಲ್ಲಿ ರವಿವಾರ ವಾರದ ಪ್ರಾರ್ಥನಾ ಸಭೆ ನಡೆಯಿತು.
ಈ ವೇಳೆ ಮಾತನಾಡಿದ ಸಾಹಿತಿ ಡಾ ಶಶಿಕಾಂತ ಪಟ್ಟಣ ಇವರು, ಇತ್ತೀಚಿನ ದಿನಗಳಲ್ಲಿ ವಚನ ಚಳುವಳಿ ಬಸವ ತತ್ವ ಪ್ರಸಾರ ಕುಗ್ಗಿಸುವ ನಿರಂತರ ಪ್ರಯತ್ನಗಳು ನಡೆಯುತ್ತಿವೆ ಎಂದು ವಿಷಾದ ವ್ಯಕ್ತ ಪಡಿಸಿದರು.
ಒಂದು ಕಡೆಗೆ ಕನ್ನೇರಿ ಸ್ವಾಮಿಗಳು ಒತ್ತಾಯ ಪೂರ್ವಕವಾಗಿ ಲಿಂಗಾಯತರ ಹೆಗಲ ಮೇಲೆ ವೈದಿಕರ ಹೇರಿಕೆ ಮಾಡಿದರೆ ಹಂಪಿ ಕನ್ನಡ ವಿವಿ ಪ್ರಾಚೀನ ಇತಿಹಾಸ ಹಾಗೂ ಪುರಾತತ್ವ ಅಧ್ಯಯನದ ಪ್ರಾಧ್ಯಾಪಕ ಪ್ರೊ ವಾಸುದೇವ ಬಡಿಗೇರ ಅವರು ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಇಬ್ಬರೂ ಒಬ್ಬರೇ ಎಂದೆನ್ನುತ್ತಾ ಕಕ್ಕಯ್ಯ ಕೆಂಭಾವಿ ಬೋಗಣ್ಣ ಮಾದಾರ ಚೆನ್ನಯ್ಯ ಕುಂಬಾರ ಗುಂಡಯ್ಯ ಮುಂತಾದ ಅನೇಕ ಶರಣರನ್ನು ಬಸವ ಪೂರ್ವಯುಗದ ಶರಣರು ಎಂದು ಸುಳ್ಳು ಸಂಶೋಧನೆ ಮಾಡಿದ್ದಾರೆ.
ಇಂತವರ ವಿರುದ್ಧ ಪ್ರತಿಭಟನೆ ಮಾಡಬೇಕೆಂದು ಕರೆಕೊಟ್ಟರು.
ಇಂತಹ ಪ್ರಚಲಿತ ವಿದ್ಯಮಾನಗಳು ಬಸವಣ್ಣನವರ ತತ್ವ ಸಿದ್ಧಾಂತಕ್ಕೆ ಮಾರಕವಾಗಿವೆ.
ಇದರ ಜೊತೆಗೆ ಬಸವಣ್ಣನವರ ತಂಗಿ ಎಂದು ಅನೇಕ ಜನ ಸಂಶೋಧಕರು ಹೇಳಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಇವತ್ತು ಲಿಂಗಾಯತ ಧರ್ಮ ಮಾನ್ಯತೆಗಾಗಿ ಮಠ ಮತ್ತು ರಾಜಕಾರಣಿಗಳ ಬೆನ್ನು ಹತ್ತದೆ ತಮ್ಮ ಸ್ವಂತ ಬಲದಿಂದ ಅಧ್ಯಯನಶೀಲರಾಗಿ ಕಾರ್ಯ ನಿರ್ವಹಿಸ ಬೇಕೆಂದು ಕರೆ ಕೊಟ್ಟರು.
ಕನ್ನಡಿಗರಿಗೆ ಲಿಂಗಾಯತರಿಗೆ ಬಸವಣ್ಣನವರ ವಚನಗಳು ಇನ್ನೂ ಪಚನವಾಗಿಲ್ಲ ಎಂದು ನೋವು ವ್ಯಕ್ತ ಪಡಿಸಿದರು.
ಈ ಹಿಂದೆ ಧರ್ಮ ಕಾರಣ ಕಾದಂಬರಿ ಮತ್ತು ಅನೇಕ ವಿವಾದಾಸ್ಪದ ಸಾಹಿತ್ಯ ಕೃತಿಗಳ ವಿರುದ್ಧ ಹೋರಾಟ ಮಾಡಿದ ಲಿಂಗಾಯತ ಸಂಘಟನೆ ಮತ್ತೊಮ್ಮೆ ತಾನು ಮುಂದಾಳತ್ವವನ್ನು ವಹಿಸಿಕೊಳ್ಳ ಬೇಕೆಂದು ವಿನಂತಿಸಿದರು.
ಸಂಗಮೇಶ ಅರಳಿ ಸ್ವಾಗತಿಸಿದರು.
ಶರಣ ಶಂಕರ ಗುಡಸ, ಶರಣ ಸದಾಶಿವ ದೇವರಮನಿ, ಅಕ್ಕ ಮಹಾದೇವಿ ತೆಗ್ಗಿ ಮುಂತಾದವರು ಮಾತನಾಡಿದರು.
ಸಭೆಯಲ್ಲಿ ಶಶಿಭೂಷಣ ಪಾಟೀಲ ನರಗುಂದ, ಆನಂದ ಕರ್ಕಿ, ನ್ಯಾಯವಾದಿ ಸುನಿಲ್ ಸಾಣಿಕೊಪ್ಪ ಮತ್ತು ಬೇಸಿಗೆಯ ಶಿಬಿರದ ಶಿಬಿರಾರ್ಥಿಗಳು ಶಿಕ್ಷಕರು ಪಾಲ್ಗೊಂಡಿದ್ದರು.

