ಚಡಚಣ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಲು ತಾಲೂಕು ಕೆಕೆಎಂಪಿ ಅಧ್ಯಕ್ಷ ಅಂಬಾದಾಸ ಸಿಂದಗಿ ಕರೆ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ (ಕೆಕೆಎಂಪಿ) ಬೆಂಗಳೂರು, ವಿಜಯಪುರ ಜಿಲ್ಲಾ ಶಾಖೆಯ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ 399ನೇ ಜಯಂತೋತ್ಸವ ಹಾಗೂ ಜಿಲ್ಲಾ ಸಮಾವೇಶವನ್ನು ಜೂನ್ 7ರಂದು ವಿಜಯಪುರ ನಗರದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುವದು ಎಂದು ಚಡಚಣ ತಾಲೂಕು ಕೆಕೆಎಂಪಿ ಅಧ್ಯಕ್ಷ ಅಂಬಾದಾಸ ಸಿಂದಗಿ ಹೇಳಿದರು.
ವಿಜಯಪುರ ನಗರದ ಆಶ್ರಮ ರಸ್ತೆಯ ಐಶ್ವರ್ಯ ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಸುಸಜ್ಜಿತ ಸಮುದಾಯ ಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಸಮಾರಂಭದ ದಿವ್ಯ ಸಾನಿಧ್ಯವನ್ನು ಮಂಜುನಾಥ ಭಾರತಿ ಸ್ವಾಮೀಜಿ, ಗೋಸಾಯಿ ಮಠ, ಗವಿಪುರಂ (ಬೆಂಗಳೂರು) ವಹಿಸಲಿದ್ದು, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ರಾಜ್ಯಾಧ್ಯಕ್ಷ ಸುರೇಶರಾವ್ ಎಸ್. ಸಾಠೆ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ರಾಜ್ಯದ ಸಚಿವರು, ಸಂಸದರು, ಶಾಸಕರು, ವಿವಿಧ ಜಿಲ್ಲೆಗಳ ಹಾಗೂ ತಾಲೂಕುಗಳ ಕೆಕೆಎಂಪಿ ಪದಾಧಿಕಾರಿಗಳು, ಸಮಾಜದ ಮುಖಂಡರು ಮತ್ತು ಗಣ್ಯರು ಭಾಗವಹಿಸಲಿದ್ದಾರೆ.
ಜಿಲ್ಲಾ ಸಮಾವೇಶದ ಅಂಗವಾಗಿ ಸಮಾಜದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ, ವೃದ್ಧಾಪ್ಯ ವೇತನ, ಅಂಗವಿಕಲ ವೇತನ ಹಾಗೂ ವಿಧವಾ ವೇತನ ವಿತರಣೆ ಕಾರ್ಯಕ್ರಮವೂ ಹಮ್ಮಿಕೊಳ್ಳಲಾಗಿದೆ.
ಛತ್ರಪತಿ ಶಿವಾಜಿ ಮಹಾರಾಜರ ಆದರ್ಶಗಳು ಯುವಜನತೆಗೆ ಸ್ಫೂರ್ತಿದಾಯಕವಾಗಿದ್ದು, ಸಮಾಜದ ಸಂಘಟನೆ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಇಂತಹ ಸಮಾವೇಶಗಳು ಸಹಕಾರಿಯಾಗಲಿವೆ ಆದ್ದರಿಂದ ಚಡಚಣ ತಾಲೂಕಿನ ಎಲ್ಲಾ ಮರಾಠಾ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಚಡಚಣ ತಾಲೂಕು ಕೆಕೆಎಂಪಿ ಅಧ್ಯಕ್ಷ ಅಂಬಾದಾಸ ಸಿಂದಗಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧ್ಯಕ್ಷ ಬಿ.ಬಿ. ಶಿವಾಳ್ಕರ (7676573249) ಹಾಗೂ ಚಡಚಣ ತಾಲೂಕು ಅಧ್ಯಕ್ಷ ಅಂಬಾದಾಸ ಸಿಂದಗಿ (9743424101) ಅವರನ್ನು ಸಂಪರ್ಕಿಸಬಹುದು.

