“ಇವನಾರವ ಇವನಾರವ ಎಂದೆನ್ನದೆ, ಇವ ನಮ್ಮವ ಇವ ನಮ್ಮವ..” ಎಂದೆನ್ನುತ ಸರ್ವರನ್ನೂ ಅಪ್ಪಿಕೊಳ್ಳುವ ಸಹೃದಯತೆಯ ಧೀಮಂತ
ಉದಯರಶ್ಮಿ ದಿನಪತ್ರಿಕೆ
ಪಾದರಸದಂತೆ ಓಡಾಟ, ಸ್ನೇಹ ಪರತೆ, ಚಾಣಾಕ್ಷ ಮುನ್ನಡೆ, ಸಾಮಾಜಿಕ ಬದ್ಧತೆಯ ಅವಿಶ್ರಾಂತ ಕೆಲಸಗಾರ ಮಲ್ಲನಗೌಡ ಬಸನಗೌಡ ಪಾಟೀಲ್ ರವರು.
ಮಾಜಿ ಸಚಿವ, ಶಿಕ್ಷಣ ಪ್ರೇಮಿ, ಸೋಲರಿಯದ ಸರದಾರ ನಿರಂತರ 25ವರ್ಷಗಳ ಕಾಲ ಕರ್ನಾಟಕ ಶಾಸನ ಸಭೆ ಸದಸ್ಯರಾಗಿದ್ದ ದಿ.ಬಿ.ಎಂ.ಪಾಟೀಲ್ರ ಜೇಷ್ಠ ಸುಪುತ್ರರಾಗಿರುವ ಎಂ.ಬಿ.ಪಾಟೀಲ್ ವಿಜಯಪುರದಲ್ಲಿ 7 ಅಕ್ಟೋಬರ 1964 ರಂದು ಜನಿಸಿ, ಬೆಂಗಳೂರು, ವಿಜಯಪುರದಲ್ಲಿ ತಮ್ಮ ಶಿಕ್ಷಣ ಪಡೆದು 1991 ರಲ್ಲಿ ಆಗ ತಾನೇ ಬಿ.ಇ. ಸಿವಿಲ್ ಪದವಿ ಪಡೆದ ನವತರುಣ.
ತಂದೆಯವರ ಅಕಾಲಿಕ ನಿಧನದ ನಂತರ ಅವರು ಮುನ್ನಡೆಸಿದ ಬಿಜಾಪುರ ಲಿಂಗಾಯತ ಶಿಕ್ಷಣ ಸಂಸ್ಥೆಯ ನೇತೃತ್ವ ವಹಿಸಿಕೊಂಡು ಹಾಗೂ ತಂದೆಯವರ ನಿಧನದ ಹಿನ್ನಲೆಯಲ್ಲಿ ತೆರವಾದ ತಿಕೋಟಾ ವಿಧಾನಸಭೆಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಚುನಾಯಿತರಾಗಿ ತಮ್ಮ 26ನೇ ವಯಸ್ಸಿನಲ್ಲಿ (1991-1994) ಶಾಸಕರಾದರು.

ನಂತರ 1998 ರಲ್ಲಿ ವಿಜಯಪುರದಿಂದ ಲೋಕಸಭೆ ಸದಸ್ಯರಾಗಿ ಆಯ್ಕೆಗೊಂಡರು.
2004ರಲ್ಲಿ ತಿಕೋಟಾ ಕ್ಷೇತ್ರದಿಂದ ಶಾಸಕರಾದರು. ಹಿಂದುಳಿದ ವಿಜಯಪುರ ಜಿಲ್ಲೆಯನ್ನು ಅಭಿವೃದ್ಧಿ ಪಡಿಸಬೇಕೆಂಬ ಇವರ ಕನಸು ನನಸು ಮಾಡಲು ತಮ್ಮ ಸಂಸ್ಥೆಯ ಇಂಜನಿಯರಿಂಗ್ ಕಾಲೇಜಿನಿಂದ ರಾಷ್ಟ್ರದಲ್ಲಿಯೇ ಮಾದರಿಯಾಗಿರುವ ಕೆರೆ ನೀರು ತುಂಬುವ ಯೋಜನೆ ರೂಪಿಸಿ, ಅದರಲ್ಲಿ ಯಶಸ್ವಿಯಾಗಿದ್ದು ಇಂದು ಈ ಯೋಜನೆ ರಾಷ್ಟ್ರದಾದ್ಯಂತ ಅನುಕರಣೀಯವಾಗಿದೆ.
ಕ್ಷೇತ್ರ ಪುನರ್ ವಿಂಗಡನೆಯ ನಂತರ 2008 ರಲ್ಲಿ ಬಬಲೇಶ್ವರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. 2013 ರಲ್ಲಿ ಬಬಲೇಶ್ವರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ನಂತರ ನೀರು-ನೀರಾವರಿ ಕುರಿತು ಇವರ ಅತೀವ ಆಸಕ್ತಿಯನ್ನು ಗಮನಿಸಿದ್ದ ಹೈಕಮಾಂಡ್ ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ 5 ವರ್ಷಗಳ ಕಾಲ ಜಲಸಂಪನ್ಮೂಲ ಸಚಿವರಾಗಿ ಇಡೀ ರಾಷ್ಟವೇ ಮೆಚ್ಚುವಂತೆ ನೀರಾವರಿ ಇಲಾಖೆಗೆ ಕಾಯಕಲ್ಪ ಒದಗಿಸಿದ್ದಾರೆ.
ಕೃಷ್ಣಾ ಮೇಲ್ದಂಡೆ ಯೋಜನೆ, ಆಣೆಕಟ್ಟುಗಳ, ನಾಲೆಗಳ ಆಧುನೀಕರಣ, ಭದ್ರಾಮೇಲ್ದಂಡೆ ಯೋಜನೆ, ರಾಮಥಾಳ ಸೂಕ್ಷ್ಮ ನೀರಾವರಿ ಯೋಜನೆ, ಮೆಕೆದಾಟು, ಎತ್ತಿನಹೊಳೆ, ಅತ್ಯಂತ ಎತ್ತರದ ಪ್ರದೇಶಕ್ಕೆ ನೀರಾವರಿ ಒದಗಿಸುವ ತುಬಚಿ-ಬಬಲೇಶ್ವರ ಏತನೀರಾವರಿ, ಆಡಳಿತ ಯಂತ್ರದಲ್ಲಿ ವ್ಯಾಪಕ ಸುಧಾರಣೆಗಳು, ಇಲಾಖೆಯಲ್ಲಿ ಖಾಲಿ ಹುದ್ದೆಗಳ ಭರ್ತಿ ಸೇರಿದಂತೆ ರಾಜ್ಯದ ಜಲಸಂಪನ್ಮೂಲ ಇಲಾಖೆಗೆ ಮಾಂತ್ರಿಕ ಸ್ಪರ್ಶ ನೀಡಿದ ಎಂ.ಬಿ.ಪಾಟೀಲ್ ನೀರಿನ ಪಾಟೀಲ್, ಕೆನಾಲ್ ಪಾಟೀಲ್ ಎಂದೇ ರೈತ ಸಮುದಾಯದಲ್ಲಿ ಹೆಸರಾಗಿದ್ದಾರೆ. ಕಾವೇರಿ, ಕೃಷ್ಣಾ, ಮಹದಾಯಿ ಅಂತರ ರಾಜ್ಯ ಜಲವಿವಾದಗಳಲ್ಲಿ ಸ್ವತಃ ಸುಪ್ರಿಂಕೋರ್ಟ್ ಕಲಾಪಗಳಲ್ಲಿ ಭಾಗವಹಿಸಿರುವದನ್ನು ಗಮನಿಸಿದರೇ, ತಮಗೆ ವಹಿಸಿರುವ ಜವಾಬ್ದಾರಿ ಕುರಿತು ಇವರಿಗಿರುವ ಆಸಕ್ತಿ ಮತ್ತು ಬದ್ದತೆಯನ್ನು ತೋರುತ್ತದೆ.
2018 ರಲ್ಲಿ ಬಬಲೇಶ್ವರ ಕ್ಷೇತ್ರ ಪುನರಾಯ್ಕೆಯಾದ ನಂತರ ಶ್ರೀ ಹೆಚ್. ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಡಾ ಎಂ. ಬಿ. ಪಾಟೀಲರು ಗೃಹ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಗೃಹ ಸಚಿವರಾಗಿ ಅಲ್ಪಾವಧಿಯಲ್ಲಿ ಅಧಿಕಾರದಲ್ಲಿದ್ದರೂ, ಪೊಲೀಸ್ ಇಲಾಖೆಯಲ್ಲಿ ಮಹತ್ತರ ಬದಲಾವಣೆಗಳನ್ನು ತರಲು ಕಾರಣರಾಗಿದ್ದಾರೆ. ದಿನದ 24 ಗಂಟೆ, ವಾರದ 7ದಿನಗಳು, ವರ್ಷದ 365ದಿನಗಳು ನಿರಂತರ ಕೆಲಸ ಮಾಡುವ ಪೋಲಿಸ್ ಸಿಬ್ಬಂದಿಯ ಕಲ್ಯಾಣಕ್ಕಾಗಿ ಔರಾದ್ಕರ್ ಸಮಿತಿಯ ವರದಿಯನ್ನು ಜಾರಿಗೆ ತರುವಲ್ಲಿ ಗುರುತರ ಪಾತ್ರ ವಹಿಸಿದ್ದಾರೆ. ಈ ವರದಿಯು ಪೋಲಿಸ್ ಸಿಬ್ಬಂದಿಯ ವೇತನದಲ್ಲಿ ಹೆಚ್ಚಳ, ಬಡ್ತಿ ಹಾಗೂ ಇನ್ನಿತರ ಬದಲಾವಣೆಗಳನ್ನು ಶಿಫಾರಸ್ಸು ಮಾಡಿತ್ತು. ಡಾ ಎಂ.ಬಿ.ಪಾಟೀಲರು ಗೃಹ ಮಂತ್ರಿಯಾಗಿ ತಮಗೆ ಲಭ್ಯವಿದ್ದ ಝೀರೋ ಟ್ರಾಫಿಕ್ ಸೌಲಭ್ಯವನ್ನು ನಿರಾಕರಿಸಿದರು. ಗೃಹ ಮಂತ್ರಿಗಳ ಪ್ರಯಾಣದ ಸಂದರ್ಭದಲ್ಲಿ ಅನುಸರಿಸುತ್ತಿದ್ದ ಪೊಲೀಸ್ ವಂದನೆ (ಸಲ್ಯೂಟ್) ಸಂಸ್ಕೃತಿಯನ್ನು ನಿಲ್ಲಿಸಿದರು. ರಾಜ್ಯದಲ್ಲಿ ಸುರಕ್ಷತೆ ಹಾಗೂ ಮಹಿಳೆಯರ ಭದ್ರತೆಗಾಗಿ ಪ್ರಪಂಚದ ವಿವಿಧ ಭಾಗಗಳಲ್ಲಿ ಅನುಭವಿಸುತ್ತಿರುವ ಉತ್ತಮ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ದೃಷ್ಟಿಯಿಂದ ಜಾಗತಿಕ ಮಟ್ಟದ ಪ್ರಮುಖ ಸೈಬರ್ ಭದ್ರತೆ ಸಂಸ್ಥೆಗಳೊಂದಿಗೆ ಚರ್ಚಿಸಿ ಕಾರ್ಯಪ್ರವೃತ್ತರಾಗಿದ್ದರು.
ಬಿ.ಎಲ್.ಡಿ.ಇ. ಸಂಸ್ಥೆ ಅಧ್ಯಕ್ಷರಾಗಿ ಗುಣಮಟ್ಟದ ಶಿಕ್ಷಣದ ಜೊತೆಗೆ ಆಧುನಿಕ ಸ್ಪರ್ಶವನ್ನು ನೀಡಿದವರು. ಸಂಸ್ಥೆ ಇಂದು ಅವಿಭಜಿತ ವಿಜಯಪುರ-ಬಾಗಲಕೋಟ ಜಿಲ್ಲೆಗಳಲ್ಲಿ ಸುಮಾರು 80 ಕ್ಕೂ ಮಿಕ್ಕಿ ಪ್ರಾಥಮಿಕ ಶಿಕ್ಷಣದಿಂದ ವಿಶ್ವವಿದ್ಯಾಲಯದವರೆಗೆ ವಿವಿಧ ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದು, ವಿಜಯಪುರದಲ್ಲಿ ಶ್ರೀ.ಬಿ.ಎಂ.ಪಾಟೀಲ್ರ ಹೆಸರಿನಲ್ಲಿ 1200 ಹಾಸಿಗೆಯ ಚಾರಿಟೇಬಲ್ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ. ಕಳೆದ ಕೊವಿಡ್ ಅವಧಿಯಲ್ಲಿ ಸರ್ಕಾರ ನಿಗಧಿಪಡಿಸಿದ ದರಕ್ಕಿಂತಲೂ ಶೇ.30 ಕಡಿಮೆ ಶುಲ್ಕ ಪಡೆದು ಅತೀ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಿ, ಆರೋಗ್ಯ ಕ್ಷೇತ್ರದಲ್ಲಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ವಚನಪಿತಾಮಹ ಡಾ.ಫ.ಗು.ಹಳಕಟ್ಟಿಯವರು ತಮ್ಮ ಜೀವಿತಾವಧಿಯಲ್ಲಿ ಸಂಗ್ರಹಿಸಿ, ಮುದ್ರಿಸಿದ 12ನೇ ಶತಮಾನದ ಬಸವಾದಿ ಶರಣರ ವಚನಗಳು ಮುಂದಿನ ಪೀಳಿಗೆಗೆ ತಲುಪಬೇಕು ಎಂದು ಚಿಂತಿಸಿ, ತಮ್ಮ ಸಮಗ್ರ ಸಾಹಿತ್ಯವನ್ನು 15 ಸಂಪುಟಗಳಲ್ಲಿ 10ಸಾವಿರ ಪುಟಗಳಲ್ಲಿ ಮುದ್ರಿಸಿ, ನಾಡಿನ ತುಂಬ ಮಠ-ಮಾನ್ಯ, ಸಂಘ-ಸಂಸ್ಥೆಗಳಿಗೆ ಹಂಚಿದ್ದಾರೆ. ಬಸವಾದಿ ಶರಣರ ವಿಚಾರಧಾರೆಯು ಮುಂದಿನ ಪೀಳಿಗೆಗೆ ಪ್ರವಹಿಸಲು ಕಾರಣಿಕರ್ತರಾಗಿದ್ದಾರೆ.

ವಿಜಯಪುರವನ್ನಾಳಿದ ಆದಿಲ್ಶಾಹಿ ಅರಸರ ಕಾಲದಲ್ಲಿ ರಚಿತಗೊಂಡ ಪರ್ಷಿಯನ್, ಉರ್ದು ಮತ್ತು ದಖನಿ ಭಾಷೆಗಳಲ್ಲಿರುವ ಈ ಸಾಹಿತ್ಯವನ್ನು ಕನ್ನಡಿಗರಿಗೆ ಅನುವಾದಿಸಿ ಸಮಗ್ರ 18 ಸಂಪುಟಗಳಲ್ಲಿ ಪ್ರಕಟಿಸಿ, ತಮ್ಮ ಸಾಹಿತ್ಯಾಸಕ್ತಿಯನ್ನು ತೋರಿಸಿದ್ದಾರೆ. ವಿಜಯಪುರದ ಆದಿಲ್ಶಾಹಿ ಅರಸರ ಕಾಲದ ಐತಿಹಾಸಿಕ ಭಾವಿಗಳನ್ನು, ಕೆರೆಗಳನ್ನು, ಸುರಂಗ ಮಾರ್ಗಗಳು ಕಾಲಕ್ರಮೇಣ ಹೂಳು ತುಂಬಿ ನಿರುಪಯುಕ್ತವಾಗಿದ್ದವು. ಎಂ.ಬಿ.ಪಾಟೀಲ್ರು ವಿಶೇಷ ಆಸಕ್ತಿ ವಹಿಸಿ ಈ ಎಲ್ಲ ಕೆರೆ, ಭಾವಿಗಳನ್ನು ಸ್ವಚ್ಚಗೊಳಿಸಿ, ಅವುಗಳ ಪುನಶ್ಚೇತನಕ್ಕೆ ಕಾರಣವಾಗಿದ್ದು, ನೀರು ತುಂಬಿ ನಿಂತಿರುವ ಆ ಪ್ರದೇಶಗಳು ಇಂದು ಪ್ರವಾಸಿ ತಾಣಗಳಾಗಿವೆ.
2022 ಫೇಬ್ರುವರಿಯಲ್ಲಿ ಕೆ.ಪಿ.ಸಿ.ಸಿ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡು, ಕರ್ನಾಟಕದಾದ್ಯಂತ ಸಂಚರಿಸಿ, ಬಿಜೆಪಿ ವೈಫಲ್ಯಗಳ ಕುರಿತು ಜಾಗೃತಿ ಮೂಡಿಸಿ, ಪಕ್ಷವನ್ನು ಸಂಘಟಿಸಿ, ಮೇ 2023 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಶ್ರಮಿಸಿದ್ದಾರೆ.
ಪ್ರವಾಸ, ಇತಿಹಾಸ, ಪರಂಪರೆ, ಕಲೆ ಆಸಕ್ತರಾಗಿರುವ ಎಂ.ಬಿ.ಪಾಟೀಲ್ ಪತ್ನಿ ಆಶಾ, ಬಸನಗೌಡ ಹಾಗೂ ಧ್ರುವ ಇಬ್ಬರು ಪುತ್ರರನ್ನು ಹೊಂದಿದ್ದು, ಸಹೋದರ ಸುನೀಲಗೌಡ ಪಾಟೀಲ ವಿಜಯಪುರ-ಬಾಗಲಕೋಟ ಅವಳಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳ ವಿಧಾನಪರಿಷತ್ ಸದಸ್ಯರಾಗಿದ್ದಾರೆ. ಬಿಜಾಪುರ ಲಿಂಗಾಯತ ಶಿಕ್ಷಣ ಸಂಸ್ಥೆ ಅಧ್ಯಕ್ಷರಾಗಿ ಕಳೆದ 33 ವರ್ಷಗಳಿಂದ ಸುಧೀರ್ಘ ಸೇವೆ ಸಲ್ಲಿಸಿದ್ದಾರೆ.
“ಇವನಾರವ ಇವನಾರವ ಇವನಾರವ ಎಂದೆನಿಸದೆ, ಇವ ನಮ್ಮವ ಇವ ನಮ್ಮವ ಇವ ನಮ್ಮವ, ಇವ ನಮ್ಮ ಕೂಡಲಸಂಗಮದೇವನ ಮನೆಯ ಮಗನೆಂದನಿಸಯ್ಯ” ಎಂದು ಸರ್ವರನ್ನೂ ಅಪ್ಪಿಕೊಳ್ಳುವ ಸಹೃದಯತೆ ನಮ್ಮ ಎಂ.ಬಿ.ಪಾಟೀಲ್ರಲ್ಲಿದೆ.

ಹುಡುಕಿಕೊಂಡು ಬಂದ ಪ್ರಶಸ್ತಿ ಗೌರವ
ಸಚಿವ ಎಂ.ಬಿ.ಪಾಟೀಲ ಅವರ ರಾಜಕೀಯ, ಸಾಮಾಜಿಕ, ಸಾಹಿತ್ಯಕ, ಶೈಕ್ಷಣಿಕ ಬದ್ಧತೆಗಳಿಂದಾಗಿ “ಬಸವಶಾಂತಿ”, “ಆಧುನಿಕ ಭಗೀರಥ”, “ಮೃತ್ಯುಂಜಯ” ಪ್ರಶಸ್ತಿ, “ಬಿ.ಡಿ.ಜತ್ತಿ ಸ್ಮಾರಕ” ಪ್ರಶಸ್ತಿ, “ಪರ್ಯಾವರಣ ರಕ್ಷಕ ಸಮ್ಮಾನ-2019” ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಸೇವೆಯನ್ನು ಮನ್ನಿಸಿ ಕೋಲ್ಹಾಪುರದ ಡಿ.ವೈ.ಪಾಟೀಲ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಕರ್ನಾಟಕದಲ್ಲಿ ಕೈಗಾರಿಕೆ ಬೆಳವಣಿಗೆ, ವಿದೇಶಿ ಬಂಡವಾಳ ಆಕರ್ಷಣೆಯ ಸಾಧನೆಗಾಗಿ ಬೆಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಕೊಡಮಾಡುವ ‘ವರ್ಷದ ವ್ಯಕ್ತಿ-2024’ ಪ್ರಶಸ್ತಿಯನ್ನು ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ನೀಡಿ ಗೌರವಿಸಿದ್ದಾರೆ.

೧೯೯೧ ರಿಂದ ೨೦೨೬ ವರೆಗೆ ರಾಜಕೀಯದಲ್ಲಿ ದಣಿವರಿಯದ ಪಯಣ
1991 ರಿಂದ ಉಪಚುನಾವಣೆಯಲ್ಲಿ ಶಾಸಕರಾದ ನಂತರ ಕಳೆದ 32 ವರ್ಷಗಳಿಂದ ಕಟ್ಟಾ ಕಾಂಗ್ರೆಸ್ಸಿಗರಾಗಿ ಪಕ್ಷಕ್ಕೆ ತನು-ಮನ-ಧನದಿಂದ ಸೇವೆ ಸಲ್ಲಿಸಿರುವ ಎಂ.ಬಿ.ಪಾಟೀಲರವರು ಲಿಂಗಾಯತ ಸಮುದಾಯದ ಪ್ರಬಲ ನಾಯಕರಾಗಿದ್ದಾರೆ. ಯಾವುದೇ ಕಪ್ಪುಚುಕ್ಕೆ ಇಲ್ಲದೆ ತಮ್ಮ ರಾಜಕೀಯ ಜೀವನವನ್ನು ಮುನ್ನೆಡೆಸಿಕೊಂಡು ಬಂದಿದ್ದಾರೆ. ಎಂ.ಬಿ.ಪಾಟೀಲ್ ರವರು ಎರಡು ಬಾರಿ ತಿಕೋಟಾ ಹಾಗೂ ನಾಲ್ಕನೇ ಬಾರಿ ಬಬಲೇಶ್ವರ ಕ್ಷೇತ್ರದಿಂದ ಒಟ್ಟು 6 ಬಾರಿ ಶಾಸಕರಾಗಿ ಹಾಗೂ ಒಂದು ಬಾರಿ ವಿಜಯಪುರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ.
2023ರಲ್ಲಿ ಶ್ರೀ ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾಗಿ 2026 ರವರೆಗೆ ಕಾರ್ಯನಿರ್ವಹಿಸಿದ್ದಾರೆ.
ಎಂ ಬಿ ಪಾಟೀಲರವರು 6 ಸಲ ಶಾಸಕರು ಮತ್ತು ಒಂದು ಬಾರಿ ಲೋಕಸಭೆ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಇದೀಗ ಶ್ರೀ ಡಿ.ಕೆ.ಶಿವಕುಮಾರ ಅವರ ನೇತೃತ್ವದ ಸಚಿವ ಸಂಪುಟದಲ್ಲಿ ಮತ್ತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

