ಉದಯರಶ್ಮಿ ದಿನಪತ್ರಿಕೆ
ವರದಿ: ಬಸವರಾಜ ನಂದಿಹಾಳ
ಬಸವನಬಾಗೇವಾಡಿ: ಮುಂಗಾರು ಹಂಗಾಮಿನ ಆರಂಭವಾಗುತ್ತಿದ್ದಂತೆ ರೈತ ಬಾಂಧವರು ಬಿತ್ತನೆ ಕಡೆಗೆ ಮುಖ ಮಾಡುತ್ತಿದ್ದಾರೆ. ರೈತ ಬಾಂಧವರು ಬಿತ್ತನೆಗೆ ಬೇಕಾದ ಬೀಜಗಳನ್ನು ಖರೀದಿಸುವುದರಲ್ಲಿ ತಲ್ಲೀನರಾಗಿದ್ದಾರೆ. ತಾಲೂಕಿನಲ್ಲಿ ಕಳೆದ ವಾರದಲ್ಲಿ 10.3 ಎಂ.ಎಂ. ಮಳೆಯಾಗಬೇಕಿತ್ತು. 3.8 ಎಂ.ಎಂ ಮಳೆ ಮಾತ್ರ ಆಗಿದೆ. ನಿರೀಕ್ಷೆಯಷ್ಟು ಮಳೆಯಾಗಿಲ್ಲ. ಮಳೆಯ ನಿರೀಕ್ಷೆಯಲ್ಲಿ ರೈತ ಬಾಂಧವರು ಬಿತ್ತನೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಬುಧವಾರ ಮಧ್ಯಾನ್ಹ ವೇಳೆ ಪಟ್ಟಣ ಸೇರಿದಂತೆ ಕೆಲವೆಡೆ ದಟ್ಟವಾದ ಮೋಡ ಕವಿದ ವಾತಾವರಣದೊಂದಿಗೆ ಆರಂಭವಾದ ಮಳೆ ಕೆಲ ಹೊತ್ತು ಬಂದಿತ್ತು. ಬಿರು ಬಿಸಿಲಿನ ಧಗೆಯಿಂದ ತತ್ತರಿಸಿದ ಜನತೆಗೆ ಕೊಂಚ ತಂಪು ತಂದಿತ್ತು.
ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ರೈತರು ಬೀಜ ಪಡೆಯಲು ಸರದಿಯಲ್ಲಿ ನಿಂತು ಮೊದಲು ಟೋಕನ್ ಪಡೆದುಕೊಂಡ ನಂತರ ತಮ್ಮ ಆಧಾರ ಕಾರ್ಡ್ ನೀಡಿ ತಮಗೆ ಅಗತ್ಯವಿರುವ ಬೀಜಗಳಿಗೆ ರಸೀದಿ ಮಾಡಿಸಿಕೊಂಡು ಹಣ ಪಾವತಿ ಮಾಡಿದ ನಂತರ ಬೀಜ ವಿತರಣೆ ಕಾರ್ಯ ಮಾಡುತ್ತಿರುವದು ಕಂಡುಬಂದಿತ್ತು.
ಬಸವನಬಾಗೇವಾಡಿ ತಾಲೂಕಿನಲ್ಲಿ ಮುಸಕಿನ ಜೋಳ ನೀರಾವರಿ ಮತ್ತು ಖುಷ್ಕಿ ಜಮೀನು ಸೇರಿದಂತೆ 11,156 ಹೆಕ್ಟೇರ್ ಪ್ರದೇಶದಲ್ಲಿ, ಸಜ್ಜೆ ನೀರಾವರಿ ಮತ್ತು ಖುಷ್ಕಿ ಜಮೀನು ಸೇರಿದಂತೆ 642 ಹೆಕ್ಟೇರ್ ಪ್ರದೇಶ,ತೊಗರಿ ನೀರಾವರಿ ಮತ್ತು ಖುಷ್ಕಿ ಜಮೀನು ಸೇರಿದಂತೆ56,478 ಹೆಕ್ಟೇರ್ ಪ್ರದೇಶ, ಹೆಸರು ನೀರಾವರಿ ಮತ್ತು ಖುಷ್ಕಿ ಜಮೀನು ಸೇರಿದಂತೆ 14 ಹೆಕ್ಟೇರ್ ಪ್ರದೇಶ, ಉದ್ದು ನೀರಾವರಿ ಮತ್ತು ಖುಷ್ಕಿ ಜಮೀನು ಸೇರಿದಂತೆ 12 ಹೆಕ್ಟೇರ್ ಪ್ರದೇಶ, ಅಲಸಂದಿ ಇತರೆ ನೀರಾವರಿ ಮತ್ತು ಖುಷ್ಕಿ ಜಮೀನು ಸೇರಿದಂತೆ 2 ಹೆಕ್ಟೇರ್ ಪ್ರದೇಶ, ಶೇಂಗಾ ನೀರಾವರಿ ಮತ್ತು ಖುಷ್ಕಿ ಜಮೀನು ಸೇರಿದಂತೆ 223 ಹೆಕ್ಟೇರ್ ಪ್ರದೇಶ, ಸೂರ್ಯಕಾಂತಿ ನೀರಾವರಿ ಮತ್ತು ಖುಷ್ಕಿ ಜಮೀನು ಸೇರಿದಂತೆ 2,128 ಹೆಕ್ಟೇರ್ ಪ್ರದೇಶ, ಹತ್ತಿ ನೀರಾವರಿ ಮತ್ತು ಖುಷ್ಕಿ ಜಮೀನು ಸೇರಿದಂತೆ 3,056 ಹೆಕ್ಟೇರ್ ಪ್ರದೇಶ, ನೀರಾವರಿ ಪ್ರದೇಶದಲ್ಲಿ ನಾಟಿ ಕಬ್ಬು 580 ಹೆಕ್ಟೇರ್ ಪ್ರದೇಶ, ಕೂಳೆ ಕಬ್ಬು 1,848 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಇಲಾಖೆಯು ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಗುರಿ ಇಟ್ಟುಕೊಂಡಿದೆ.
ಕೊಲ್ಹಾರ ಭಾಗದಲ್ಲಿ ಗೋವಿನಜೋಳ ಬೀಜ, ಹೂವಿನಹಿಪ್ಪರಗಿ, ಬಸವನಬಾಗೇವಾಡಿ, ಮನಗೂಳಿ ಭಾಗದಲ್ಲಿ ತೊಗರಿ ಬೀಜ, ನಿಡಗುಂದಿ ಭಾಗದಲ್ಲಿ ತೊಗರಿ, ಗೋವಿನಜೋಳ ಬೀಜ ಹೆಚ್ಚು ಮಾರಾಟವಾಗುತ್ತಿದೆ. ಅಖಂಡ ತಾಲೂಕಿನಲ್ಲಿ ಬಹುತೇಕ ರೈತರು ತೊಗರಿ ಬಿತ್ತನೆ ಮಾಡಲು ಮುಂದಾಗಿರುವುದರಿಂದಾಗಿ ತೊಗರಿ ಬೀಜಕ್ಕೆ ಬಹು ಬೇಡಿಕೆ ಕಂಡು ಬರುತ್ತಿದೆ. ಒಣಬೇಸಾಯಕ್ಕೆ ಟಿಎಸ್ತ್ರಿಆರ್ ತೊಗರಿ ಬೀಜ ರೈತರು ಖರೀದಿ ಮಾಡುತ್ತಿದ್ದಾರೆ. ಎಲ್ಲ ರೈತ ಸಂಪರ್ಕ ಕೇಂದ್ರದಲ್ಲಿ ತೊಗರಿ ಬೀಜ ಸದ್ಯ ದಾಸ್ತಾನು ಇದೆ. ಬೀಜಕ್ಕೆ ತೊಂದರೆಯಾಗಿಲ್ಲ. ಅಗತ್ಯವಿರುವ ಗೊಬ್ಬರ ಗೊಬ್ಬರ ಮಳಿಗೆಗಳಲ್ಲಿ ದಾಸ್ತಾನು ಇದೆ ಎಂದು ಕೃಷಿ ಅಧಿಕಾರಿಗಳು ಹೇಳುತ್ತಾರೆ.
ಬಸವನಬಾಗೇವಾಡಿ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯಲ್ಲಿ 148.6 ಕ್ವಿಂಟಾಲ್ ಗೋವಿನ ಜೋಳ ಬಂದಿದೆ. ಇದರಲ್ಲಿ 53.04 ಕ್ವಿಂಟಾಲ್ ವಿತರಣೆಯಾಗಿದೆ. 82.45 ಕ್ವಿಂಟಾಲ್ ತೊಗರಿ ಬಂದಿದ್ದು. ಇದರಲ್ಲಿ 9.35 ಕ್ವಿಂಟಾಲ್ ತೊಗರಿ ಬೀಜ ವಿತರಣೆಯಾಗಿದೆ. 1.2 ಕ್ವಿಂಟಾಲ್ ಹೆಸರು ಬೀಜ ಬಂದಿದೆ. 90 ಕೆಜಿ ಕ್ವಿಂಟಾಲ್ ಸಜ್ಜೆ ಬಂದಿದೆ. ಇದರಲ್ಲಿ 31.5 ಕೆಜಿ ಕ್ವಿಂಟಾಲ್ ವಿತರಣೆಯಾಗಿದೆ. 1.5 ಕ್ವಿಂಟಾಲ್ ಸೂರ್ಯಕಾಂತಿ ಬಂದಿದೆ. ಇದರಲ್ಲಿ 8 ಕೆಜಿ ಕ್ವಿಂಟಾಲ್ ವಿತರಣೆಯಾಗಿದೆ. ಹೂವಿನಹಿಪ್ಪರಗಿ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯಲ್ಲಿ 97.2 ಕ್ವಿಂಟಾಲ್ ಗೋವಿನ ಜೋಳ ಬಂದಿದೆ. ಇದಲ್ಲಿ 6 ಕ್ವಿಂಟಾಲ್ ವಿತರಣೆಯಾಗಿದೆ. 59 ಕ್ವಿಂಟಾಲ್ ತೊಗರಿ ಬೀಜ ಬಂದಿದೆ. ಇದರಲ್ಲಿ 9.9 ಕ್ವಿಂಟಾಲ್ ವಿತರಣೆಯಾಗಿದೆ. 60 ಕೆಜಿ ಹೆಸರು ಬೀಜ ಬಂದಿದೆ. ಇದರಲ್ಲಿ 5 ಕೆಜಿ ವಿತರಣೆಯಾಗಿದೆ. 2.58 ಕ್ವಿಂಟಾಲ್ ಸಜ್ಜೆ ಬೀಜ ಬಂದಿದೆ. ಇದರಲ್ಲಿ 11 ಕೆಜಿ ವಿತರಣೆಯಾಗಿದೆ. 1.5 ಕ್ವಿಂಟಾಲ್ ಸೂರ್ಯಕಾಂತಿ ಬಂದಿದೆ. ಇದರಲ್ಲಿ 4.5 ಕೆಜಿ ಕ್ವಿಂಟಾಲ್ ವಿತರಣೆಯಾಗಿದೆ. ಕೊಲ್ಹಾರ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ 165.44 ಕ್ವಿಂಟಾಲ್ ಗೋವಿನಜೋಳ ಬೀಜ ಬಂದಿದೆ. ಇದರಲ್ಲಿ 48.72 ಕ್ವಿಂಟಾಲ್ ವಿತರಣೆಯಾಗಿದೆ. 19 ಕ್ವಿಂಟಾಲ್ ತೊಗರಿ ಬೀಜ ಬಂದಿದೆ. ಇದರಲ್ಲಿ 1.15 ಕ್ವಿಂಟಾಲ್ ವಿತರಣೆಯಾಗಿದೆ. 60 ಕೆಜಿ ಹೆಸರು ಬೀಜ ಬಂದಿದೆ. ಹೆಸರು ವಿತರಣೆಯಾಗಿಲ್ಲ. 1.5 ಕ್ವಿಂಟಾಲ್ ಸೂರ್ಯಕಾಂತಿ ಬಂದಿದೆ. ಇದರಲ್ಲಿ ವಿತರಣೆಯಾಗಿಲ್ಲ. ಮನಗೂಳಿ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯಲ್ಲಿ 84.2 ಕ್ವಿಂಟಾಲ್ ಗೋವಿನಜೋಳ ಬೀಜ ಬಂದಿದೆ. ಇದರಲ್ಲಿ 13.32 ಕ್ವಿಂಟಾಲ್ ವಿತರಣೆಯಾಗಿದೆ. 131.3 ಕ್ವಿಂಟಾಲ್ ತೊಗರಿ ಬೀಜ ಬಂದಿದೆ. ಇದರಲ್ಲಿ 6.3 ಕ್ವಿಂಟಾಲ್ ವಿತರಣೆಯಾಗಿದೆ. 60 ಕೆಜಿ ಹೆಸರು ಬೀಜ ಬಂದಿದೆ. ಇದರಲ್ಲಿ 5 ಕೆಜಿ ವಿತರಣೆಯಾಗಿದೆ.1.5 ಕ್ವಿಂಟಾಲ್ ಸೂರ್ಯಕಾಂತಿ ಬಂದಿದೆ. ಇದರಲ್ಲಿ 8 ಕೆಜಿ ವಿತರಣೆಯಾಗಿದೆ. ನಿಡಗುಂದಿ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ 152.2 ಕ್ವಿಂಟಾಲ್ ಗೋವಿನ ಜೋಳ ಬೀಜ ಬಂದಿದೆ. ಇದರಲ್ಲಿ 44.2 ಕ್ವಿಂಟಾಲ್ ವಿತರಣೆಯಾಗಿದೆ. 28.25 ಕ್ವಿಂಟಾಲ್ ತೊಗರಿ ಬಂದಿದೆ. ಇದರಲ್ಲಿ 10.45 ಕ್ವಿಂಟಾಲ್ ವಿತರಣೆಯಾಗಿದೆ. 60 ಕ್ವಿಂಟಾಲ್ ಹೆಸರು ಬೀಜ ಬಂದಿದೆ. ಇದರಲ್ಲಿ ಎಷ್ಟು ವಿತರಣೆಯಾಗಿಲ್ಲ. 3 ಕ್ವಿಂಟಾಲ್ ಸೂರ್ಯಕಾಂತಿ ಬಂದಿದೆ. ಇದರಲ್ಲಿ 46 ಕೆಜಿ ಕ್ವಿಂಟಾಲ್ ವಿತರಣೆಯಾಗಿದೆ ಎಂದು ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಗಾಯತ್ರಿ ಶಿಂಧೆ ತಿಳಿಸಿದರು.
ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಬುಧವಾರ ಕೃಷಿ ಅಧಿಕಾರಿ ಚಿದಾನಂದ ಹಿರೇಮಠ ಅವರು ಬೀಜ ವಿತರಿಸಿದ ಸಂದರ್ಭದಲ್ಲಿ ರೈತರು ಬಿತ್ತನೆ ಮಾಡುವ ಸಂದರ್ಭದಲ್ಲಿ ಬೀಜೋಪಚಾರ ಮಾಡಬೇಕು. ತೊಗರಿ ಬೆಳೆಯಲ್ಲಿ ಸೂರ್ಯಕಾಂತಿ, ಸಜ್ಜೆ, ಮೆಕ್ಕೆಜೋಳ, ಹೆಸರು,ಶೇಂಗಾ ಹಾಗೂ ಉದ್ದು ಬೆಳೆಗಳನ್ನು ಅಂತರ ಬೆಳೆಯನ್ನಾಗಿ ಬೆಳೆಯಬೇಕು. ಹತ್ತಿಯ ಬೆಳೆಯಲ್ಲಿ ತೊಗರಿ ಬೆಳೆಯನ್ನು ಕಾವಲು ಬೆಳೆಯನ್ನಾಗಿ ಬೆಳೆಯಬೇಕು. ನ್ಯಾನೋ ಯೂರಿಯಾ, ನ್ಯಾನೋ ಡಿ.ಎ.ಪಿ. ಪಲ್ಸ ಮ್ಯಾಜಿಕ್ ಹಾಗೂ ಪಲ್ಸ ಬೂಸ್ಟರ್ ಇತ್ಯಾದಿಗಳನ್ನು ಬಳಕೆ ಮಾಡಬೇಕು. ಇದರಿಂದ ಹೆಚ್ಚಿನ ಇಳುವರಿ ಪಡೆಯಬಹುದಾಗಿದೆ ಎಂದು ರೈತರಿಗೆ ಸಲಹೆ ನೀಡಿದರು.
ಬಸವನಬಾಗೇವಾಡಿ ರೈತ ಸಂಪರ್ಕ ಕೇಂದ್ರದಲ್ಲಿ ಬೀಜ ಖರೀದಿಸಲು ಆಗಮಿಸಿದ್ದ ನಾಗೂರಿನ ಶಾಂತಯ್ಯ ಶೀಕಳವಾಡಿಮಠ ಅವರನ್ನು ಮಾತನಾಡಿಸಿದಾಗ, ಕೆಲ ದಿನಗಳ ಹಿಂದೆ ಮಳೆಯಾಗಿದೆ. ಮುಂಗಾರು ಹಂಗಾಮಿನಲ್ಲಿ ಮಳೆಯಾಗುವ ಲಕ್ಷಣ ಗೋಚರಿಸಿದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಬೀಜ ಖಾಲಿಯಾದರೆ ತೊಂದರೆಯಾಗುತ್ತದೆ. ಅದಕ್ಕಾಗಿ ಈಗಲೇ ಬೀಜ ಖರೀದಿಸಿ ತೆಗೆದುಕೊಂಡು ಹೋಗುತ್ತಿದ್ದೇನೆ. ಬಿತ್ತನೆ ಅಗತ್ಯವಿರುವ ಮಳೆಯಾದ ನಂತರ ಬಿತ್ತನೆ ಕಾರ್ಯ ಮಾಡಲಾಗುವುದು. ಈ ಸಲ ಬೀಜದ ದರ ಹೆಚ್ಚಳವಾಗಿದೆ ಎಂದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎ.ಪಿ. ಬಿರಾದಾರ ಅವರನ್ನು ಸಂಪರ್ಕಿಸಿದಾಗ, ಕೃಷಿ ಇಲಾಖೆಯಿಂದ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ. ಎಲ್ಲ ರೈತ ಸಂಪರ್ಕ ಕೇಂದ್ರದಲ್ಲಿ ಎಲ್ಲ ಬೀಜಗಳು ದಾಸ್ತಾನು ಇದೆ. ಬೀಜ ವಿತರಣೆಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ಅಖಂಡ ತಾಲೂಕಿನಲ್ಲಿ ಭೂಮಿ ತಯಾರಿಕೆಗೆ ಮಳೆಯಾಗಿದೆ.ಬಿತ್ತನೆಗೆ ಇನ್ನಷ್ಟು ಮಳೆ ಆಗುವ ಅಗತ್ಯವಿದೆ. ರೈತರು ಕಳಪೆ ಬೀಜಗಳನ್ನು ಖರೀದಿಸದೇ ಉತ್ತಮ ಗುಣಮಟ್ಟದ ಬೀಜಗಳನ್ನು ಖರೀದಿಸಿ ಬಿತ್ತನೆ ಮಾಡಬೇಕು. ಅಖಂಡ ತಾಲೂಕಿನಲ್ಲಿರುವ ಐದು ಕೃಷಿ ಸಂಪರ್ಕ ಕೇಂದ್ರದಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ. ಬೀಜಗಳ ಪ್ಯಾಕೆಟ್ ಮೇಲೆ ಕ್ಯೂಆರ್ ಕೋಡ್ ಇರುವದರಿಂದ ಅದನ್ನು ಸ್ಕ್ಯಾನ್ ಮಾಡಬೇಕಾಗಿರುವದರಿಂದ ಬೀಜಗಳ ಪ್ಯಾಕೆಟ್ಗಳನ್ನು ಕೊಡುವಾಗ ರೈತರು ಸಹಕರಿಸಬೇಕೆಂದರು.

