ಉದಯರಶ್ಮಿ ದಿನಪತ್ರಿಕೆ
ಎಚ್.ಡಿ.ಕೋಟೆ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ನಮ್ಮ ದೇಶದಲ್ಲಿ ಶಿಕ್ಷಣಕ್ಕೆ ತನ್ನದೇ ಆದ ಶಕ್ತಿ ಇದೆ. ಇದನ್ನು 15 ರಿಂದ 25 ವರ್ಷದೊಳಗಿನ ವಿದ್ಯಾರ್ಥಿಗಳು ಬಳಸಿಕೊಂಡು ಶಿಕ್ಷಣ ಕಡೆ ಹೆಚ್ಚು ಗಮನ ಕೊಡಬೇಕು. ಆ 10 ವರ್ಷದಲ್ಲಿ ನೀವು ಕಲಿಕೆ ಕೂಡ ಗಮನಕೊಟ್ಟರೆ, ಮುಂದಿನ 60 ವರ್ಷ ನೆಮ್ಮದಿಯ ಜೀವನ ನಡೆಸಬಹುದು, ಸಮಾಜ ಗುರುತಿಸುವ ವ್ಯಕ್ತಿ ನೀವಾಗಬಹುದು ಎಂದು ಅಕ್ಕ ಐಎಎಸ್ ಅಕಾಡೆಮಿಯ ಮುಖ್ಯಸ್ಥರಾದ ಡಾ. ಶಿವಕುಮಾರ್ ಹೇಳಿದರು.
ಪಟ್ಟಣದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಭವನದಲ್ಲಿ ಕೋಟೆ ಮತ್ತು ಸರಗೂರು ತಾಲೂಕಿನ ಮಾದರ ಮಹಾಸಭಾ, ಡಾ. ಬಾಬು ಜಗಜೀವನ ರಾಮ್ ವಿಚಾರ ವೇದಿಕೆ ಹಾಗೂ ಮಾತಂಗ ಜನಜಾಗೃತಿ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಆಯೋಜನೆ ಮಾಡಿದ ಎಸ್ ಎಸ್ ಎಲ್ ಸಿ, ಪಿಯುಸಿ, ಪದವಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಪ್ರೇರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಮಯ ಎಂಬುದು ಸಂಪತ್ತು ಇದ್ದಂತೆ, ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ಇದನ್ನು ಹಾಳುಮಾಡಿಕೊಳ್ಳಬಾರದು, ದಿನದ 24 ಗಂಟೆಯಲ್ಲಿ ಆರು ಗಂಟೆಯನ್ನಾದರೂ ಓದುವುದಕ್ಕೆ ಮೀಸಲಿಟ್ಟರೆ ನಿಮ್ಮ ಭವಿಷ್ಯ ಪ್ರಜ್ವಲಿಸಲಿದೆ ಎಂದು ಹೇಳಿದರು.
ಸಮಾಜ ಸೇವಕ ಬೂದನೂರು ವೆಂಕಟೇಶ್ ಮಾತನಾಡಿ, ಸಮಾಜದ ಅಭಿವೃದ್ಧಿಗೆ ಶಿಕ್ಷಣ ಬಹಳ ಮುಖ್ಯ. ಮಕ್ಕಳು ವಿದ್ಯಾವಂತರಾದರಷ್ಟೇ ಆ ಸಮಾಜ, ಆ ಸಮುದಾಯ ಏಳಿಗೆ ಕಾಣಲು ಸಾಧ್ಯ. ಸಮುದಾಯದ ಸಂಘಟನೆಗಳ ವತಿಯಿಂದ ಇಂತಹ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಮಕ್ಕಳಿಗೆ ಮಾರ್ಗದರ್ಶನ ನೀಡಿದರೆ ಖಂಡಿತವಾಗಿಯೂ ಮಕ್ಕಳು ಮುಂದೆ ಬರುತ್ತೆ ಬರುತ್ತಾರೆ. ಇದಕ್ಕೆ ಒಗ್ಗಟ್ಟು, ಸಹಕಾರ ಬಹಳ ಮುಖ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾದರ ಮಹಾಸಭಾದ ಹೆಚ್ ಡಿ ಕೋಟೆ ತಾಲೂಕು ಅಧ್ಯಕ್ಷ ಪರಶಿವಮೂರ್ತಿ, ಸರಗೂರು ತಾಲೂಕು ಮಾದರ ಮಹಾಸಭಾ ಅಧ್ಯಕ್ಷ ಬೆಟ್ಟಸ್ವಾಮಿ, ಡಾ.ಬಾಬು ಜಗಜೀವರಾಂ ವಿಚಾರ ವೇದಿಕೆಯ ಅಧ್ಯಕ್ಷ ಸಿ. ತಿಮ್ಮಯ್ಯ, ಮಾಜಿ ಅಧ್ಯಕ್ಷ ಪಿ ನಾಗರಾಜ್, ಕಾರ್ಯದರ್ಶಿ ಎಡತೊರೆ ಶಿವರಾಜ್, ಮಾದರ ಮಹಾಸಭಾ ಉಪಾಧ್ಯಕ್ಷ ಪ್ರಕಾಶ್, ಖಜಾಂಚಿ ಡಿ.ನಾಗರಾಜ್, ಮಾತಂಗ ಜನ ಜಾಗೃತಿ ವೇದಿಕೆ ಅಧ್ಯಕ್ಷ ಬೂದನೂರು ರವೀಶ್, ಶಿಕ್ಷಕರ ಸಂಘದ ಉಪಾಧ್ಯಕ್ಷೆ ರೂಪಾ, ಬೂದನೂರು ವೆಂಕಟೇಶ್, ಶಿವಯ್ಯ, ವೆಂಕಟಪ್ಪ, ಸಿ.ಕಾಳಪ್ಪಾಜಿ, ಮಹೇಶ್, ಸಿಂಗಯ್ಯ, ಚಿಕ್ಕಸ್ವಾಮಿ, ಮಹದೇವು, ಕೆಟಿಎಸ್ ವಿನೋದ್, ಸೋಮಶೇಖರ್, ಶಿವಾಜಿ, ಮಂಜು ಸೇರಿದಂತೆ ವಿದ್ಯಾರ್ಥಿಗಳು ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು

