ಅವೈಜ್ಞಾನಿಕ ವೇಗ ನಿಯಂತ್ರಕದಿಂದ ಅಪಘಾತ | ಸಾರ್ವಜನಿಕರ ಆಕ್ರೋಶ
ಉದಯರಶ್ಮಿ ದಿನಪತ್ರಿಕೆ
ಚಡಚಣ: ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಬರಡೋಲ ಗ್ರಾಮದ ಸಮೀಪ ಅವೈಜ್ಞಾನಿಕವಾಗಿ ನಿರ್ಮಿಸಲಾಗಿರುವ ರಸ್ತೆ ವೇಗ ನಿಯಂತ್ರಕ (ಹಂಪ್) ಕಾರಣದಿಂದ ಸಂಭವಿಸಿದ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ.
ಈ ಘಟನೆ ಸ್ಥಳೀಯರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷದ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.
ಮಹಾರಾಷ್ಟ್ರ ರಾಜ್ಯದ ಇಸ್ಲಾಂಪುರ ನಿವಾಸಿ ಮುಮ್ತಾಜ್ ಅಬ್ದುಲ್ ಶೇಖ್ (55) ಮೃತಪಟ್ಟ ಮಹಿಳೆ. ಅವರು ತಮ್ಮ ಪತಿ ಅಬ್ದುಲ್ ಶೇಖ್ ಅವರೊಂದಿಗೆ ಮೈನಳ್ಳಿ ಗ್ರಾಮದಿಂದ ಬೈಕ್ನಲ್ಲಿ ಇಸ್ಲಾಂಪುರಕ್ಕೆ ತೆರಳುತ್ತಿದ್ದ ವೇಳೆ ಬರಡೋಲ ಗ್ರಾಮದ ಬಳಿ ರಸ್ತೆ ಮಧ್ಯೆ ನಿರ್ಮಿಸಲಾಗಿದ್ದ ಅವೈಜ್ಞಾನಿಕ ವೇಗ ನಿಯಂತ್ರಕದಿಂದಾಗಿ ಬೈಕ್ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದೆ. ಪರಿಣಾಮ ಮುಮ್ತಾಜ್ ಅವರ ತಲೆಗೆ ಪೆಟ್ಟು ಬಿದ್ದ ಪರಿಣಾಮವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತೆಯ ಪತಿ ಅಬ್ದುಲ್ ಶೇಖ್ ಮಾತನಾಡಿ, “ರಸ್ತೆಯ ಮೇಲಿನ ವೇಗ ನಿಯಂತ್ರಕಕ್ಕೆ ಯಾವುದೇ ಮುನ್ನೆಚ್ಚರಿಕೆ ಫಲಕ, ಬಣ್ಣದ ಗುರುತು ಅಥವಾ ಸೂಚನಾ ಫಲಕದ ವ್ಯವಸ್ಥೆ ಕೂಡ ಮಾಡಿಲ್ಲ್ಲ. ಏಕಾಏಕಿ ಹಂಪ್ ಎದುರಾದ ಕಾರಣ ಬೈಕ್ ಸಮತೋಲನ ಕಳೆದುಕೊಂಡು ಅಪಘಾತ ಸಂಭವಿಸಿದೆ. ಈ ದುರಂತಕ್ಕೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ರಸ್ತೆ ಕಾಮಗಾರಿ ಮಾಡಿದ ಕಾಂಟ್ರ್ಯಾಕ್ಟರ ನೇರ ಹೊಣೆ” ಎಂದು ಆರೋಪಿಸಿದರು.
ಸ್ಥಳೀಯರ ಪ್ರಕಾರ, ಕೆಲವು ತಿಂಗಳ ಹಿಂದೆ ನಿರ್ಮಿಸಲಾದ ಈ ವೇಗ ನಿಯಂತ್ರಕ ಅವೈಜ್ಞಾನಿಕವಾಗಿದ್ದು, ಈಗಾಗಲೇ ಇದೇ ಸ್ಥಳದಲ್ಲಿ 15ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿವೆ. ಬರಡೋಲ ಗ್ರಾಮದ ಸುಮಾರು ಸ್ಥಳಗಳಲ್ಲಿ ದೊಡ್ಡ ದೊಡ್ಡ ರಸ್ತೆ ವೇಗ ನಿಯಂತ್ರಕ (ಹಂಪ್) ಅಳವಡಿಸಿದ್ದು ಅವನ್ನು ವೈಜ್ಞಾನಿಕವಾಗಿ ಅಳವಡಿಸುವಂತೆ ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಪರಿಹರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಪಘಾತದ ನಂತರ ಸ್ಥಳಕ್ಕೆ ಚಡಚಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಮರಣೋತ್ತರ ಪರೀಕ್ಷೆಗೆ ಗಾಯಾಳುವನ್ನು ಸಮುದಾಯ ಆರೋಗ್ಯ ಕೇಂದ್ರ ಚಡಚಣಕ್ಕೆ ಸಾಗಿಸಲಾಯಿತು.
ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸದೆ ನಿರ್ಮಿಸಿರುವ ವೇಗ ನಿಯಂತ್ರಕಗಳನ್ನು ತಕ್ಷಣ ತೆರವುಗೊಳಿಸಿ, ಮತ್ತು ಅವಶ್ಯಕತೆ ಇದ್ದಲ್ಲಿ ಮಾತ್ರ ವೈಜ್ಞಾನಿಕ ರೀತಿಯಲ್ಲಿ ರಸ್ತೆ ಸುರಕ್ಷತಾ (ಹಂಪ)ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಈ ಘಟನೆ ರಸ್ತೆ ಕಾಮಗಾರಿಗಳಲ್ಲಿನ ನಿರ್ಲಕ್ಷ ಹಾಗೂ ಅವೈಜ್ಞಾನಿಕ ನಿರ್ಮಾಣಗಳು ಸಾರ್ವಜನಿಕರ ಜೀವಕ್ಕೆ ಹೇಗೆ ಅಪಾಯವಾಗುತ್ತವೆ ಎಂಬುದಕ್ಕೆ ಮತ್ತೊಂದು ಉದಾಹರಣೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಇಂತಹ ದುರ್ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ
ಈ ಕುರಿತು ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

