ಉದಯರಶ್ಮಿ ದಿನಪತ್ರಿಕೆ
ತಾಳಿಕೋಟೆ: ೧೯೪೪ ರಲ್ಲಿ ಪಂಚಾಕ್ಷರಿ ಗವಾಯಿಗಳು ಚಕ್ಕಡಿಯಲ್ಲಿಯೇ ಸಂಚಾರಿ ಸಂಗೀತ ಸೇವಾ ಕಾರ್ಯಕ್ರಮವನ್ನು ನಡೆಸುತ್ತಾ ಚಕ್ಕಡಿಯಲ್ಲಿ ತಂಬೂರಿ, ತಬಲಾ ಸಂಗೀತ ನಾದಕ್ಕೆ ತಕ್ಕಂತಿರುವ ಈ ಎಲ್ಲ ಸಲಕರಣೆಗಳನ್ನಿಟ್ಟುಕೊಂಡು ಗ್ರಾಮಾಂತರ ಪ್ರದೇಶದಲ್ಲಿ ಸಂಚರಿಸುತ್ತಾ ಸಾಗಿದ ಸಂಗೀತ ಪ್ರೇಮಿಗಳು ಸಂಗೀತ ನಾದವನ್ನು ಕೇಳಿ ದೌಡಾಯಿಸಿ ಆ ಕಾರ್ಯಕ್ರಮವನ್ನು ವೀಕ್ಷಿಸಲು ಈ ಹಿಂದೆ ಆಗಮಿಸುವ ಕಾರ್ಯವೂ ಸಹ ನಡೆಯುತ್ತಿತ್ತೆಂದು ಖ್ಯಾತ ಗವಾಯಿಗಳಾದ ಬಿ.ಎಸ್. ಸಾಲಿಮಠ ಅವರ ಪುತ್ರ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಕಾಶೀನಾಥ ಪಿ ಸಾಲಿಮಠ ಅವರು ನುಡಿದರು.
ರವಿವಾರರಂದು ಎ.ಎಸ್. ವಠಾರ ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ಬಸವ ಸಮೀತಿಯ ಪ್ರಣಾಂಗಳದಲ್ಲಿ ಏರ್ಪಡಿಸಲಾದ ಪಿ.ಎ. ಸಾಲಿಮಠ ಗವಾಯಿಗಳ ೨೨ ನೇಯ ಹಾಗೂ ಶ್ರೀ ಎ.ಎಸ್. ವಠಾರ ಗುರುಗಳ ೮ ನೇ ಸ್ಮರಣೋತ್ಸವ ಅಂಗವಾಗಿ ಏರ್ಪಡಿಸಲಾದ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದ ಅವರು, ಬಿ.ಎಸ್. ಸಾಲಿಮಠ ಗುರುಗಳು ಪಂಚಾಕ್ಷರಿ ಗವಾಯಿಗಳೊಂದಿಗೆ ಅವರೂ ಕೂಡಾ ಸಂಗೀತದ ಸಂಚಾರಿ ಚಕ್ಕಡಿಯಲ್ಲಿ ಕುಳಿತು ಸಂಗೀತ ಸೇವೆ ನೀಡಿದವರಾಗಿದ್ದಾರೆ. ಬಿ.ಎಸ್. ಸಾಲಿಮಠ ನಮ್ಮ ತಂದೆಯವರಾಗಿದ್ದು ಎ.ಎಸ್. ವಠಾರ ಸರ್ ಅವರು ಸಹ ನಮ್ಮ ತಂದೆಯ ಶಿಷ್ಯರಾಗಿ ಸಂಗೀತ ಕ್ಷೇತ್ರದಲ್ಲಿ ಪರಿಣಿತರಾಗಿ ಸಂಗೀತದ ರಸ ಋಷಿಗಳಾಗಿ ಹೆಸರು ಗಳಿಸಿದ್ದಾರೆಂದರು. ತಾಳಿಕೋಟೆಯಲ್ಲಿ ಎಸ್.ಕೆ. ಹೈಸ್ಕೂಲ್ ನ್ನು ಪ್ರಾರಂಭಿಸಿ ಶ್ರೀ ಖಾಸ್ಗತೇಶ್ವರ ಮಠದ ಶಿವಬಸವದೇವರು ನಮ್ಮ ತಂದೆ ಸಾಲಿಮಠ ಅವರು ವಿರೇಶ್ವರ ಪುಣ್ಯಾಶ್ರಮದಲ್ಲಿ ಇದ್ದುದ್ದನ್ನು ಲಕ್ಷಿಸಿ ಅವರನ್ನು ತಾಳಿಕೋಟೆಗೆ ಕರೆತಂದು ಸಂಗೀತ ಶಿಕ್ಷಕರಾಗಿ ನೇಮಕ ಮಾಡಿಕೊಂಡರು. ಅಂದು ಸರ್ಕಾರದ ಯಾವ ಸೌಲತ್ತು ಇಲ್ಲದಿದ್ದರೂ ೧೯೫೪ ನೇ ಸಾಲಿನಲ್ಲಿ ಸಂಗೀತ ಶಾಲೆಯನ್ನು ಪ್ರಾರಂಭಿಸಿದ ಶಿವಬಸವದೇವರು ಸಂಗೀತಕ್ಕೆ ಅಗತ್ಯವಿದ್ದ ಎಲ್ಲ ಸಲಕರಣೆಗಳನ್ನು ತಂದು ಚಿತ್ತರಗಿ ಗಂಗಾಧರ ಶಾಸ್ತ್ರಿಗಳ ನಾಟಕ ಕಂಪನಿಯವರಿಂದ ಸಹಾಯ ಸೌಲತ್ತು ಪಡೆದು ಮುನ್ನಡೆದ ಈ ಸಂಗೀತ ಶಾಲೆಯಲ್ಲಿ ಸುಮಾರು ೭-೮ ಸಾವಿರಕ್ಕೂ ಮೇಲ್ಪಟ್ಟು ಜನತೆ ಸಂಗೀತ ಕಲಿತು ಉನ್ನತ ಹುದ್ದೆಯಲ್ಲಿ ಸೇವಾ ಕಾರ್ಯ ಮುಂದುವರೆಸಿದ್ದಾರೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿರಿಯ ಪತ್ರಕರ್ತ ಜಿ.ಟಿ. ಘೋರ್ಪಡೆ ಅವರು ಮಾತನಾಡಿ, ಹಿರಿಯ ಗವಾಯಿಗಳಾದ ಪಿ.ಎ. ಸಾಲಿಮಠ ಹಾಗೂ ಎ.ಎಸ್. ವಠಾರ ಗುರುಗಳ ಆತ್ಮೀಯ ಸಂಬಂಧ ೧೯೬೩ ನೇ ಸಾಲಿನಲ್ಲಿಯೇ ನನಗೆ ದೊರೆತಿತ್ತು. ಆ ಸಾಲಿನಲ್ಲಿ ನಾನು ೮ ನೇ ತರಗತಿಯಲ್ಲಿ ಓದುತ್ತಿದ್ದೆ. ಸಂಗೀತವನ್ನು ಕಲಿಯಲು ಸಹ ನನಗೂ ಕೂಡಾ ಅಂದು ಅನುಕೂಲವಾಯಿತು ಎಂದರು.
ಶಿಕ್ಷಕ ರಮೇಶ ಯರಕ್ಯಾಳ ಪ್ರಾಸ್ತಾವಿಕ ಮಾತನಾಡಿದರು.
ಇದೇ ಸಮಯದಲ್ಲಿ ಶಿಕ್ಷಕಿ ವಿಶಾಲಾಕ್ಷಿ ಬಡಿಗೇರ ಹಾಗೂ ಕುಮಾರಿ ಶ್ರೇಯಾ ಪೂಜಾರಿ, ಚೈತ್ರಾ ಕುಬಸದ, ಅಶ್ವಿನಿ ಬಡಿಗೇರ, ಅನುಷಾ ಕೊಡಗಾನೂರ, ಅಕ್ಷತಾ ಬಿರಾದಾರ, ಅಶ್ವಿನಿ ವಂದಲಿ, ಕುಮಾರಿ ಯಾಳಗಿ, ಅಲ್ಲದೇ ಖ್ಯಾತ ಗವಾಯಿಗಳಾದ ರಾಜ್ಯಪ್ರಶಸ್ತಿ ಪುರಸ್ಕೃತರಾದ ಬಸವರಾಜ ಭಂಟನೂರ ಹಾಗೂ ತಬಲಾ ಸಾಥಿ ಯಮನೇಶ ಶಾಸ್ತ್ರಿ ಅವರು ಶಾಸ್ತ್ರೀಯ ಹಾಗೂ ಭಾವಗೀತೆಗಳನ್ನು ಹಾಡಿ ಜನರ ಮನಸ್ಸನ್ನು ತಣಿಸಿದರು.
ವೇದಿಕೆಯ ಮೇಲೆ ಗವಾಯಿಗಳಾದ ಮಲ್ಲಿಕಾರ್ಜುನ ಭಜಂತ್ರಿ ಅವರು ಅಧ್ಯಕ್ಷತೆ ವಹಿಸಿದ್ದರು.
ಜಯಸಿಂಗ್ ಮೂಲಿಮನಿ, ವಾಸುದೇವ ಹೆಬಸೂರ, ಆಮಯ್ಯ ಹಿರೇಮಠ, ಪತ್ರಕರ್ತ ಬಸವರಾಜ ಕಟ್ಟಿಮನಿ, ಮಹಾಂತಯ್ಯ ಸಾಲಿಮಠ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಕಾರ್ಯಕ್ರಮದ ಮೊದಲಿಗೆ ಗವಾಯಿ ಸಾಲಿಮಠ ಅವರ ಹಾಗೂ ವಠಾರ ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು.
ಈ ಕಾರ್ಯಕ್ರಮದ ನೇತೃತ್ವವನ್ನು ಗವಾಯಿ ದೀಪಕಸಿಂಗ್ ಹಜೇರಿ, ಗೋವಿಂದಸಿಂಗ್ ಹಜೇರಿ ವಹಿಸಿದ್ದರು.
ಈಶ್ವರ ಬಡಿಗೇರ, ಬಸಣ್ಣ ಗುರಿಕಾರ, ರಾಜು ಗುಬ್ಬೇವಾಡ, ಸುರೇಶ ಹೂಗಾರ, ಅಶೋಕ ರಾಜನಕೋಳೂರ, ಚಿಂತಾಮಣಿ ಸಾಲವಾಡಗಿ, ಗುಂಡಣ್ಣ ಹಂದಿಗನೂರ, ಯಲ್ಲಪ್ಪ ಗುಂಡನಳ್ಳಿ, ಪ್ರಶಾಂತ ಮುದ್ದೇಬಿಹಾಳ, ಮಲ್ಲಿಕಾರ್ಜುನ ನಾವಿ, ಆಮಯ್ಯ ಹಿರೇಮಠ ಮೊದಲಾದವರು ಉಪಸ್ತಿತರಿದ್ದರು.

