ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಥೈರಾಯ್ಡ್ ಕಾಯಿಲೆಯನ್ನು ನಿರ್ಲಕ್ಷಿಸದೆ ಸಮಯಕ್ಕೆ ಸರಿಯಾಗಿ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುವ ಅಗತ್ಯವಿದೆ ಎಂದು ಬಿ.ಎಲ್.ಡಿ.ಇ ಆಸ್ಪತ್ರೆಯ ಶಸ್ತ್ರಚಿಕಿತ್ಸೆ ವಿಭಾಗದ ಪ್ರಾಧ್ಯಾಪಕ ಡಾ. ಗಿರೀಶ ಕುಲ್ಲೊಳ್ಳಿ ಹೇಳಿದ್ದಾರೆ.
ಶನಿವಾರ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಶಸ್ತ್ರಚಿಕಿತ್ಸೆ ವಿಭಾಗದ ವತಿಯಿಂದ ವಿಜಯಪುರದ ಕೆ. ಸಿ. ಪಿ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ಥೈರಾಯ್ಡ್ ಗ್ರಂಥಿ ರೋಗಗಳ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಥೈರಾಯ್ಡ್ ಮಾನವ ದೇಹದಲ್ಲಿನ ಅತಿದೊಡ್ಡ ನಿರ್ನಾಳ ಗ್ರಂಥಿಯಾಗಿದ್ದು, ಇಡೀ ದೇಹದ ಚಯಾಪಚಯ ಕ್ರಿಯೆ ಮತ್ತು ನಾನಾ ಶಾರೀರಿಕ ಕಾರ್ಯಗಳನ್ನು ನಿಯಂತ್ರಿಸುವ ಮಹತ್ವದ ಪಾತ್ರ ವಹಿಸುತ್ತದೆ.ಲ. ಥೈರಾಯ್ಡ್ ಗ್ರಂಥಿಯ ಕಾರ್ಯಕ್ಷಮತೆಯಲ್ಲಿ ಏರುಪೇರಾದಾಗ ಹೈಪೊ ಅಥವಾ ಹೈಪರ್ ಥೈರಾಯ್ಡಿಸಮ್ ಉಂಟಾಗಿ ಕುತ್ತಿಗೆಯ ಮುಂಭಾಗದಲ್ಲಿ ಗಂಟು ಕಾಣಿಸಿಕೊಳ್ಳಬಹುದು. ಈ ಸಮಸ್ಯೆ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಕೆಲವೊಮ್ಮೆ ಅನುವಂಶಿಕವಾಗಿಯೂ ಇದು ಬರಬಹುದು ಎಂದು ಅವರು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಹಾಯಕ ಪ್ರಾಧ್ಯಾಪಕಿ ಡಾ. ಶೃತಿ ಶೀಳೀನ, ಪ್ರತಿ ವರ್ಷ ಮೇ 25 ರಂದು ವಿಶ್ವ ಥೈರಾಯ್ಡ್ ದಿನವನ್ನು ಆಚರಿಸಲಾಗುತ್ತದೆ. ಥೈರಾಯ್ಡ್ ಕಾಯಿಲೆಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ. ಅಯೋಡಿನ್ ಕೊರತೆಯಿಂದ ಉಂಟಾಗುವ ಗಳಗಂಡ (ಗಾಯಿಟರ್) ರೋಗವನ್ನು ಅಯೋಡಿನ್ ಯುಕ್ತ ಉಪ್ಪಿನ ಬಳಕೆಯಿಂದ ತಡೆಯಬಹುದಾಗಿದೆ. ಥೈರಾಯ್ಡ್ ಕಾಯಿಲೆಯ ಲಕ್ಷಣಗಳಳಾಗಿವೆ. ಥೈರಾಯ್ಡ್ ಕ್ಯಾನ್ಸರ್ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುವ ಕ್ಯಾನ್ಸರ್ಗಳಲ್ಲೊಂದಾಗಿದ್ದು, ಭಯಪಡದೆ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆ.ಸಿ.ಪಿ. ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಚನ್ನಮಲ್ಲಿಕಾರ್ಜುನ ಪಾಟೀಲ, ಉಪನ್ಯಾಸಕ ಸೂರ್ಯಕಾಂತ ಬಿರಾದಾರ, ಡಾ. ಮಂಜುನಾಥ ಸಾವಂತ, ಡಾ. ಸ್ನೇಹಲ ಪಾಟೀಲ, ಡಾ. ನಿಖಿಲ್ ಸೀತಿಮನಿ, ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಾದ ಡಾ. ಗಝಲ್, ಡಾ. ಲಿಖಿತ್ ಹಾಗೂ ಡಾ. ನಿನಾದ ಮುಂತಾದವರು ಉಪಸ್ಥಿತರಿದ್ದರು.
ಸುಮಾರು 200 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಥೈರಾಯ್ಡ್ ಕಾಯಿಲೆಗಳ ಕುರಿತು ಮಾಹಿತಿ ಪಡೆದರು.

