ವಿಜಯಪುರದಲ್ಲಿ ನಿವೃತ್ತಿಯಾದ ಡಿಸಿ ಕುರುಬರಗೆ ಬೀಳ್ಕೊಡುಗೆ ಸಮಾರಂಭ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಅವರು ದಕ್ಷ ಪ್ರಾಮಾಣಿಕ ಅಧಿಕಾರಿಯಾಗಿ ತಮ್ಮ ಸೌಮ್ಯ ಸ್ವಭಾವದಿಂದ ಕಾನೂನು ಪರಿಪಾಲಿಸುವುದರೊಂದಿಗೆ ಉತ್ತಮ ಸೇವೆ ಸಲ್ಲಿಸಿದ್ದಾರೆ ಎಂದು ಮಾಜಿ ಶಾಸಕ ಪ್ರೊ. ರಾಜು ಆಲಗೂರು ಹೇಳಿದರು.
ಸೇವಾ ನಿವೃತ್ತಿ ಹೊಂದಿದ ಕಲ್ಯಾಣ ಕರ್ನಾಟ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಜೊತೆಗೆ ನಿವೃತ್ತಿ ಹೊಂದಿದ ಇತರೇ ಸಿಬ್ಬಂದಿಗೆ ಇಲ್ಲಿನ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಅರವಿಂದ ಹಾಗರಗಿ ಮಾತನಾಡಿ, ಸಂಸ್ಥೆಯ ಸಿಬ್ಬಂದಿ ಸಹಕಾರದೊಂದಿಗೆ ನಾರಾಯಣಪ್ಪ ಕುರುಬರ ಅವರು ಸಂಸ್ಥೆ ಕಟ್ಟುವಲ್ಲಿ ಅವಿರತ ಶ್ರಮ ವಹಿಸಿದ್ದಾರೆ. ಖಡಕ್ ಅಧಿಕಾರಿಯಾಗಿದ್ದ ಕುರುಬರ ಅವರು, ಕಾನೂನು ಸೇವಾ ಪ್ರಾಧಿಕಾರದೊಂದಿಗೆ ಸುಮಧುರ ಒಡನಾಟ ಹೊಂದಿದ್ದರು ಎಂದು ಹೇಳಿದರು.
ಸೋಮನಾಥ ಕಳ್ಳಿಮನಿ ಮಾತನಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ, ಸೇವಾವಧಿಯುದ್ಧಕ್ಕೂ ಸಹಕಾರ ನೀಡಿದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರನ್ನು ಸ್ಮರಿಸಿದರು.
ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ಧೈವಾಡಿ ಮಾತನಾಡಿ, ಸೇವೆಯ ಪಥದಲ್ಲಿ ಕರ್ತವ್ಯದ ದೀಪ ಬೆಳಗಿಸಿ, ಯಶಸ್ಸಿನ ಹಾದಿಯಲ್ಲಿ ಬೃಹತ್ ಸಂಸ್ಥೆ ಮುನ್ನಡೆಸಿದ ಪ್ರೀತಿಯ ಅಧಿಕಾರಿ ನಾರಾಯಣಪ್ಪ ಕುರುಬರ ಅವರು, ಸರ್ಕಾರಿ ಸೇವೆಯಿಂದ ನಿವೃತ್ತಿಯಾಗುತ್ತಿದ್ದರೂ, ನಿಮ್ಮ ಪ್ರೀತಿ, ಮಾರ್ಗದರ್ಶನ ಹಾಗೂ ತಮ್ಮ ಅನುಭವದ ಕಣಜ ಹಿತ ನುಡಿಗಳು ಎಂದಿಗೂ ನಿವೃತ್ತಿಯಾಗುವುದಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಅಡಿವೆಪ್ಪ ಸಾಲಗಲ್, ಒಡಲ ಧ್ವನಿಯ ಅಧ್ಯಕ್ಷೆ ಭುವನೇಶ್ವರಿ ಮಾತನಾಡಿದರು.
ಇದಕ್ಕೂ ಮುನ್ನ ಸಮಾರಂಭದಲ್ಲಿ ನಾರಾಯಣಪ್ಪ ದಂಪತಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಈ ವೇಳೆ ಮೇಯರ್ ಮಡಿವಾಳಪ್ಪ ಕರಡಿ, ವಕೀಲರ ಸಂಘದ ಅಧ್ಯಕ್ಷ ಬಿರಾದಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಂತೋಷ ಭೋವಿ, ವಾರ್ತಾಧಿಕಾರಿ ಅಮರೇಶ ದೊಡಮನಿ, ಅಡಿವೆಪ್ಪ ಸಾಲಗಲ್, ಸೇರಿದಂತೆ ವಿಭಾಗೀಯ ಕಚೇರಿ, ನಾನಾ ಘಟಕದ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ, ಸಾರ್ವಜನಿಕರು ಪಾಲ್ಗೊಂಡಿದ್ದರು.

