ಜೂನ್ ೮ರಂದು ಆಲಮಟ್ಟಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲು ರೈತಸಂಘ ನಿರ್ಧಾರ
ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ೨೦೧೮ರಲ್ಲಿ ಆರಂಭಗೊಂಡ ಮುದ್ದೇಬಿಹಾಳ ತಾಲ್ಲೂಕಿನ ನಾಗರಬೆಟ್ಟ ಏತ ನೀರಾವರಿ ಯೋಜನೆಯನ್ನು ಕೂಡಲೇ ಪೂರ್ಣಗೊಳಿಸುವಂತೆ ಆಗ್ರಹಿಸಿ ಜೂನ್ ೮ರಂದು ಆಲಮಟ್ಟಿಯಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತಿಳಿಸಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪದಾಧಿಕಾರಿಗಳಾದ ಶಾಂತಗೌಡ ಪಾಟೀಲ (ನಡಹಳ್ಳಿ), ಸಂಗಮೇಶ ಸಗರ, ಕಲ್ಲು ಸೊನ್ನದ, ಸೀತಪ್ಪ ಗಣಿ ಅವರು, “ಜೂನ್ ೮ರಂದು ಆಲಮಟ್ಟಿಯ ಮುಖ್ಯ ಎಂಜಿನಿಯರ್ ಕಚೇರಿ ಎದುರು ಪ್ರತಿಭಟನೆ ನಡೆಯಲಿದೆ. ನಾಗರಬೆಟ್ಟ ಯೋಜನೆಯ ೧೪ ಫಲಾನುಭವಿ ಗ್ರಾಮಗಳ ರೈತರು, ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಚೂನ್ನಪ್ಪ ಪೂಜೇರಿ, ಶಶಿಕಾಂತ ಗುರೂಜಿ ಸೇರಿದಂತೆ ಹಲವು ಹೋರಾಟಗಾರರು ಭಾಗವಹಿಸಲಿದ್ದಾರೆ” ಎಂದರು.
೯ ವರ್ಷ ಕಳೆದರೂ ಕಾಮಗಾರಿ ಅಪೂರ್ಣ:
೩೨೦೦ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸುವ ಈ ಯೋಜನೆಯ ಮುಖ್ಯ ಕಾಲುವೆ ಕಾಮಗಾರಿ ಆರಂಭವಾಗಿ ೯ ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಯೋಜನೆಗೆ ೩೪೬ ಎಕರೆ ಭೂಮಿ ವಶಪಡಿಸಿಕೊಳ್ಳಬೇಕಿದ್ದು, ಕೇವಲ ೧೧೧ ಎಕರೆ ಭೂಮಿಗೆ ಮಾತ್ರ ವಿಶೇಷ ಭೂಸ್ವಾಧೀನಾಧಿಕಾರಿಗಳು ಅವಾರ್ಡ್ ಮಾಡಿದ್ದಾರೆ. ಉಳಿದ ಭೂಮಿ ಸ್ವಾಧೀನ ಪ್ರಕ್ರಿಯೆ ನಡೆದಿಲ್ಲ ಎಂದು ಅವರು ಆರೋಪಿಸಿದರು.
“ಭೂಸ್ವಾಧೀನ ನೋಟಿಸ್ ನೀಡದೆ ರೈತರ ಹೊಲದಲ್ಲಿ ಕಾಲುವೆ ನಿರ್ಮಿಸಲಾಗಿದೆ. ಪ್ರತ್ಯೇಕ ಕಡೆಗಳಲ್ಲಿ ಒಟ್ಟು ೯೦೦ ಮೀಟರ್ ಕಾಲುವೆ ಕಾಮಗಾರಿ ಮಾತ್ರ ಬಾಕಿ ಇದೆ. ತಕ್ಷಣ ಸಮಸ್ಯೆ ಬಗೆಹರಿಸಿ ಕಾಮಗಾರಿ ಆರಂಭಿಸಬೇಕು” ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ರವಿಶಂಕರ ಕೋತಿನ, ಸಾಬಣ್ಣ ಅಂಗಡಿ, ಶಶಿಕಾಂತ ದೇಸಾಯಿ, ಸುಭಾಸ ಚೋಪಡೆ, ವೆಂಕಟೇಶ ವಡ್ಡರ ಮತ್ತಿತರರು ಉಪಸ್ಥಿತರಿದ್ದರು.
ರೈತರ ಪ್ರಮುಖ ಬೇಡಿಕೆಗಳು
೧. ಭೂಮಿ ವಶಪಡಿಸಿಕೊಂಡ ಎಲ್ಲಾ ಬಾಧಿತ ರೈತರಿಗೆ ಅವಾರ್ಡ್ ಪ್ರಕ್ರಿಯೆ ಪೂರ್ಣಗೊಳಿಸಿ ಪರಿಹಾರ ನೀಡಬೇಕು.
೨. ಬಾಕಿ ಉಳಿದ ೯೦೦ ಮೀಟರ್ ಕಾಲುವೆ ಕಾಮಗಾರಿಯನ್ನು ತಕ್ಷಣ ಆರಂಭಿಸಬೇಕು.
೩. ಜುಲೈ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಿ ಕಾಲುವೆಗೆ ನೀರು ಹರಿಸಬೇಕು.
“ಹೋರಾಟದ ದಿನ ಕೆಬಿಜೆಎನ್ಎಲ್ ಅಧಿಕಾರಿಗಳು, ಎಸ್ಎಲ್ಓ, ತಹಶೀಲ್ದಾರ್, ಎಡಿಎಲ್ಆರ್ ಸೇರಿದಂತೆ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳು ಸ್ಥಳದಲ್ಲಿ ಹಾಜರಿರಬೇಕು. ಅದೇ ದಿನ ಸಮಸ್ಯೆ ಬಗೆಹರಿಯದಿದ್ದರೆ ಮುಂದಿನ ಹೋರಾಟದ ರೂಪುರೇಷೆಯನ್ನು ಅಂದೇ ಪ್ರಕಟಿಸಲಾಗುವುದು” ಎಂದು ಎಚ್ಚರಿಸಿದರು.
