ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿದ್ಯಾರ್ಥಿಗಳು ಬದಲಾಗುತ್ತಿರುವ ಕಾರ್ಪೊರೇಟ್ ಜಗತ್ತಿಗೆ ಅಗತ್ಯವಾಗಿರುವ ಕೌಶಲ್ಯಗಳನ್ನು ಒಡಮೂಡಿಸಿಕೊಂಡಾಗ ಮಾತ್ರ ಕಂಪನಿಗಳ ಆಡಳಿತ ನಿರ್ವಹಣೆ, ವ್ಯವಸ್ಥಾಪನೆ ಹಾಗೂ ಮಾರುಕಟ್ಟೆ, ಫೈನಾನ್ಸ್, ವಿಮೆ, ಸಾರಿಗೆ ಮತ್ತು ಉದ್ಯಮಶೀಲತೆ ಅಭಿವೃದ್ಧಿ, ಮಾನವ ಸಂಪನ್ಮೂಲ ನಿರ್ವಹಣೆ, ಬ್ಯಾಂಕಿಂಗ್ ನಂತಹ ಕ್ಷೇತ್ರಗಳಲ್ಲಿ ಅರ್ಹತೆಯನ್ನು ಪಡೆಯಲು ಸಾಧ್ಯ. ವಿಷಯ ಜ್ಞಾನದ ಜತೆಗೆ ಪ್ರಾಯೋಗಿಕತೆ, ತಾಂತ್ರಿಕ ಜ್ಞಾನ, ಗಣಕವಿಜ್ಞಾನದ ಬಳಕೆ ಮತ್ತು ಬಹು ಮುಖ್ಯವಾಗಿ ಸಂಪರ್ಕ-ಸಂವಹನ ಕಲೆಯಂತಹ ವಿಶೇಷ ಕೌಶಲ್ಯಗಳನ್ನು ಹೊಂದುತ್ತಾ ದೊರೆಯುವ ಅವಕಾಶಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕೆಂದು ದರಬಾರ ಪದವಿ ಕಾಲೇಜಿನ ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕ ಶ್ರೀ ಎಸ್.ಬಿ.ಕುಂಬಾರ ಅವರು ಅಭಿಪ್ರಾಯಪಟ್ಟರು.
ಅವರು ನಗರದ ನವಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಂ.ಕಾಂ. ವಿಭಾಗದಡಿಯಲ್ಲಿ ಜರುಗಿದ “ಇವೋಕ್-೨ಕೆ೨೬; ಬೀಳ್ಕೊಡುಗೆ ಸಮಾರಂಭ” ದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಗ್ರಾಮೀಣ ಹಾಗೂ ಆರ್ಥಿಕ-ಸಾಮಾಜಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಲ್ಲಿ ಸಂದರ್ಶನ ಕಲೆ, ಸಂವಹನ ಕೌಶಲ್ಯ ಮತ್ತು ಕಾರ್ಯತತ್ಪರತೆ ಮತ್ತು ಸೃಜನಾತ್ಮಕತೆ ಬ್ಯಾಂಕಿಂಗ್, ಫೈನಾನ್ಸ್, ಮಾರ್ಕೆಟಿಂಗ್, ವಿಮೆ ಮತ್ತು ಸ್ಟಾಕ್ ಮಾರುಕಟ್ಟೆ, ವ್ಯವಹಾರ ನಿರ್ವಹಣೆ, ಅಕೌಂಟಿಂಗ್ ಮತ್ತು ವ್ಯವಸ್ಥಾಪನಾ ಕ್ಷೇತ್ರದಲ್ಲಿ ವಿವಿಧ ಹುದ್ದೆಗಳಿಗೆ ನಡೆಯುವ ಲಿಖಿತ ಪರೀಕ್ಷೆ, ಸಂದರ್ಶನ ಕಲೆ, ಉದ್ಯೋಗ-ಮಾರ್ಗದರ್ಶನ, ತರಬೇತಿ ನೀಡುವುದು. ತನ್ಮೂಲಕ ಅವರು ಉದ್ಯೋಗ ಕಂಡುಕೊಂಡು ಆರ್ಥಿಕ ಸ್ವಾವಲಂಬಿಯಾಗುವಂತೆ ಮಾಡುವ ವಾಣಿಜ್ಯ ಶಿಕ್ಷಣ ಇಂದಿನ ಅಗತ್ಯತೆಯಾಗಿದೆ. ಪಡೆದ ಜ್ಞಾನದಿಂದ ಕೇವಲ ಉದ್ಯೋಗಿಯಾಗದೇ ಉದ್ಯೋಗದಾತರಾಗಿ ರೂಪುಗೊಳ್ಳಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲರಾದ ಡಾ. ಎ.ಐ.ಹಂಜಗಿ ಅವರು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಸಾಫಲ್ಯ ಪಡೆಯಬೇಕಾದರೆ ಕೌಶಲ್ಯಗಳು ಅಗತ್ಯ. ಅವುಗಳಲ್ಲಿ ಕ್ರಿಯಾತ್ಮಕ ಚಿಂತನೆ, ವಿಭಿನ್ನವಾದ ಆಲೋಚನೆಗಳನ್ನು ಬಳಸಿಕೊಂಡು ತಮ್ಮಲ್ಲಿರುವ ಶಕ್ತಿ-ಸಾಮರ್ಥ, ಕೊರತೆ, ಅವಕಾಶಗಳು ಮತ್ತು ಮುಂದಿನ ಸವಾಲುಗಳ ಬಗ್ಗೆ ವಿಶ್ಲೇಷಣೆ ಮಾಡುತ್ತಾ ಕೊರತೆಗಳನ್ನು ಸಾಧ್ಯತೆಗಳನ್ನಾಗಿ ಪರಿವರ್ತಿಸುವ ವಿಶೇಷ ಗುಣಗಳನ್ನು ಹೊಂದಬೇಕು. ಜೀವನದಲ್ಲಿ ಸಮಸ್ಯೆಗಳು ಅಥವಾ ಅನಿವಾರ್ಯತೆಗಳೇ ನಮ್ಮ ಗುರಿ ಸಾಧನೆಗೆ ಪ್ರೇರಣೆಯಾಗಬೇಕು ಎಂದರು.
ಸಮಾರಂಭದಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಪ್ರೊ. ಎಂ.ಎಸ್.ಖೊದ್ನಾಪೂರ ಬೀಳ್ಕೊಡಲಿರುವ ವಿದ್ಯಾರ್ಥಿಗಳ ಭಾವಿ ಭವಿಷ್ಯ ಉಜ್ವಲಗೊಳ್ಳಲೆಂದು ಶುಭ ಹಾರೈಸಿದರು. ಎಂ.ಕಾಂ. ವಿಭಾಗದ ಸಂಚಾಲಕ ಡಾ. ಎಸ್.ಬಿ.ಕಬಾಡೆ ಹಾಗೂ ಡಾ. ಮಮತಾ ಬನ್ನೂರ ಹಾಗೂ ಡಾ. ಶಿವಾನಂದ ಜಮಾದಾರ, ಡಾ, ಸುರೇಖಾ ಪಾಟೀಲ ಇವರು ವೇದಿಕೆಯ ಮೇಲಿದ್ದರು.
ಈ ಕಾರ್ಯಕ್ರಮದಲ್ಲಿ ಡಾ. ಚಂದ್ರಕಾಂತ.ಬಿ, ಡಾ.ವಿಶಾಲಾಕ್ಷೀ ಹೊನ್ನಾಕಟ್ಟಿ, ಡಾ. ಬಿ.ಎನ್.ಶಾಡದಳ್ಳಿ, ಡಾ. ಪ್ರಕಾಶ ಹಾವೇರಿಪೇಠ, ಪ್ರೊ. ಶ್ರೀಶೈಲ ಹೆಬ್ಬಿ ಉಪಸ್ಥಿತರಿದ್ದರು.
ವೀರೇಶ ಪತ್ತಾರ ಕಾರ್ಯಕ್ರಮ ನಿರೂಪಿಸಿದರು. ಪ್ರಶಾಂತ ಅತಿಥಿಗಳ ಸ್ವಾಗತ ನಡೆಸಿಕೊಟ್ಟರು.

