ಹಾಲುಮತ ಸಮುದಾಯದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಮದರಿ ವಿರುದ್ಧ ಗಂಭೀರ ಆರೋಪ
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ತಾಲೂಕಿನ ನಾಗರಬೆಟ್ಟ ಗ್ರಾಮದ ದಲಿತ ಸಮುದಾಯದ ರವಿಚಂದ್ರ ಮಾದರ ಈತನನ್ನು ಬ.ಬಾಗೇವಾಡಿ ತಾಲೂಕಿನ ಹಂಗರಗಿ ಕ್ರಾಸ್ ಬಳಿಯ ಎನ್.ಎಸ್. ಪೂಜಾರಿ ಕಂಪನಿ ಪ್ಲಾಂಟ್ ಎದುರು ಪೂರ್ವನಿಯೋಜಿತ ಭೀಕರ ಹತ್ಯೆಗೈದ ಅಪರಾಧಿಗಳನ್ನು ಕೂಡಲೇ ಬಂಧಿಸಿ ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿ ಇಲ್ಲಿನ ವಿವಿಧ ದಲಿತಪರ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಮೃತದೇಹವನ್ನಿಟ್ಟು ರಸ್ತಾ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಈ ವೇಳೆ ಡಿಎಸ್ಎಸ್ ಮುಖಂಡ ಹರೀಶ್ ನಾಟೆಕಾರ ಮಾತನಾಡಿ, ೪ವರ್ಷಗಳ ಕಾಲ ದುಡಿಸಿಕೊಂಡು ಮರ್ಮಾಂಗವೇ ಇಲ್ಲದಂತೆ ಕ್ರೂರವಾಗಿ ಹತ್ಯೆ ಮಾಡಿರುವದು ಹೇಯ ಕೃತ್ಯ. ಸಮಾಜದ ತಾಲೂಕು ಅಧ್ಯಕ್ಷರಾದ ಮಲ್ಲಿಕಾರ್ಜುನ ಮದರಿ ಅವರು ಇಂತಹ ಕೃತ್ಯ ಮಾಡುತ್ತಿರುವದು ಇದು ಎರಡನೇ ಬಾರಿ. ಘಟನೆಯ ಬಳಿಕ ನಾನು ಸಿಎಂ ನ ಆಪ್ತ, ನೀವು ದಲಿತರು ನನಗೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಗರ್ವದಿಂದ ಹೇಳಿದ ಇವರಿಗೆ ನಾವು ಎಲ್ಲಿ ಹೋದರೂ ಬಿಡುವದಿಲ್ಲ. ಸೋಮವಾರದ ವರೆಗೆ ಪೊಲೀಸ್ ಇಲಾಖೆಗೆ ಗಡುವು ನೀಡುತ್ತೇವೆ. ಅಲ್ಲಿಯವರೆಗೆ ಎಲ್ಲ ಆರೋಪಿಗಳನ್ನು ಬಂಧಿಸಬೇಕು. ಇಲ್ಲದೇ ಹೋದಲ್ಲಿ ಜಿಲ್ಲೆಯಾಧ್ಯಂತ ಬಂದ್ ಕರೆ ನೀಡುವದಾಗಿ ಎಚ್ಚರಿಕೆ ನೀಡುತ್ತ, ಆತ್ಮಹತ್ಯೆ ಮಾಡಿಕೊಂಡಾದರೂ ಮೃತನ ಕುಟುಂಬಕ್ಕೆ ನ್ಯಾಯ ಕೊಡಿಸುತ್ತೇವೆ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದರು.
ಪ್ರಮುಖರಾದ ಸಿ.ಜಿ.ವಿಜಯಕರ, ಬಾಲಚಂದ್ರ ಹುಲ್ಲೂರ, ತಿಪ್ಪಣ್ಣ ದೊಡಮನಿ ಮತ್ತೀತರರು ಮಾತನಾಡಿದರು. ಸುಮಾರು ಹೊತ್ತು ಮೃತ ದೇಹವಿದ್ದ ಅಂಬುಲೆನ್ಸ್ ಎದುರು ಹೋರಾಟಗಾರರು ದಿಕ್ಕಾರ ಕೂಗುತ್ತ, ಕೂಡಲೇ ಎಲ್ಲ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದರು.
ಎಲ್ಲ ಆರೋಪಿಗಳ ಬಂಧನವಾಗುವವರೆಗೆ ಮೃತದೇಹದ ಅಂತ್ಯ ಸಂಸ್ಕಾರ ಮಾಡುವದಿಲ್ಲ ಎಂದು ಪಟ್ಟು ಹಿಡಿದಿದ್ದರು. ಇದರಿಂದ ವಾಹನ ಸಂಚಾರದಲ್ಲಿ ಸಾಕಷ್ಟು ಅಡಚಣೆ ಉಂಟಾಗಿತ್ತು. ಪ್ರತಿಭಟನಾ ಸ್ಥಳಕ್ಕೆ ಇಲ್ಲಿನ ಪಿಎಸ್ಐ ಸಂಜಯ ತಿಪರೆಡ್ಡಿ ಭೇಟಿ ನೀಡಿ ಬಸ್ ಸೇರಿದಂತೆ ಇನ್ನೀತರ ವಾಹನಗಳಲ್ಲಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಪ್ರಯಾಣಿಕರು ಇರುತ್ತಾರೆ ಎಂದು ಪ್ರತಿಭಟನಾಕಾರರನ್ನು ಮನವೊಲಿಸುತ್ತಿದ್ದಂತೆಯೇ, ಹಿರಿಯ ಹೋರಾಟಗಾರರು ತಕ್ಷಣ ಸ್ಪಂದಿಸಿ ಪ್ರಕರಣದ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಬರುವ ದಿನಗಳಲ್ಲಿ ಹೋರಾಟವನ್ನು ಉಗ್ರವಾಗಿಸುವದಾಗಿ ಎಚ್ಚರಿಕೆ ನೀಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಪ್ರತಿಭಟನೆಯಲ್ಲಿ ಪ್ರಮುಖ ಹೋರಾಟಗಾರರಾದ ಬಸವರಾಜ ಸಿದ್ದಾಪೂರ, ಮಾರುತಿ ಸಿದ್ದಾಪೂರ, ಶೇಕು ಮಾದರ, ಶಿವು ಶಿವಪೂರ ಸೇರಿದಂತೆ ನೂರಾರು ಜನ ಭಾಗಿಯಾಗಿದ್ದರು.
ಏನಿದು ಘಟನೆ
ಬಸವನ ಬಾಗೇವಾಡಿ ತಾಲೂಕಿನ ಹಂಗರಗಿ ಗ್ರಾಮದ ಕ್ರಾಸ್ ಬಳಿ ಇರುವ ಎನ್.ಎಸ್. ಪೂಜಾರಿ ಕಂಪನಿ ಪ್ಲಾಂಟ್ ಎದುರು ಮೃತ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಕೊಲೆ ಮಾಡಿ, ಪ್ರಕರಣವನ್ನು ಮುಚ್ಚಿ ಹಾಕಲು ನೇಣು ಹಾಕಲಾಗಿದೆ. ಈ ಹಿನ್ನೆಲೆ ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ೧೪ ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿತರನ್ನು ಬಂಧಿಸಬೇಕಾದ ಬಾಗೇವಾಡಿ ಪೊಲೀಸರು ತಮ್ಮ ಕಾರ್ಯದಲ್ಲಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂಬುದು ಹೋರಾಟಗಾರರ ಆರೋಪ.

