ಬಬಲೇಶ್ವರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪ್ರೀತಿ ಗಡೇದ ಕರೆ
ಉದಯರಶ್ಮಿ ದಿನಪತ್ರಿಕೆ
ಬಬಲೇಶ್ವರ: ಪಟ್ಟಣದ ಸ್ವಚ್ಛತೆಗೆ ಮತ್ತು ನಾಗರಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸರ್ಕಾರವು ಘನತ್ಯಾಜ್ಯ ನಿರ್ವಹಣೆ ನಿಯಮಗಳನ್ನು ಹೊಸದಾಗಿ ಜಾರಿಗೆ ತಂದಿದೆ. ಕಾರಣ ಬಬಲೇಶ್ವರ ಪಟ್ಟಣವನ್ನು ತ್ಯಾಜ್ಯ ಮುಕ್ತ ಸುಂದರ ಪಟ್ಟಣವನ್ನಾಗಿ ಮಾಡಲು ಪಟ್ಟಣ ಪಂಚಾಯತಿಯೊಂದಿಗೆ ಸಾರ್ವಜನಿಕರು ಹಾಗೂ ಉದ್ದಿಮೆದಾರರೊಳಗೊಂಡು ಪ್ರತಿಯೊಬ್ಬ ನಾಗರಿಕರು ಸಹಕರಿಸಬೇಕು ಎಂದು ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಪ್ರೀತಿ ಗಡೇದ ಹೇಳಿದರು.
ಪಟ್ಟಣದಲ್ಲಿ ಬುಧವಾರ ಘನತ್ಯಾಜ್ಯ ನಿಯಮ ೨೦೨೬ ರ ಅನುಷ್ಠಾನಕ್ಕೆ ಸಹಕರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸ್ವಚ್ಛತೆ ಎನ್ನುವುದು ಕೇವಲ ಯಾರೋ ಒಬ್ಬರ ಜವಾಬ್ದಾರಿಯಲ್ಲ, ಅದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ ಮತ್ತು ಸ್ವಚ್ಛ ಸಮಾಜವೇ ಪ್ರಗತಿಪರ ದೇಶದ ಅಡಿಪಾಯ. ಆದ್ದರಿಂದ ಇಂದಿನಿಂದಲೇ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ಆರೋಗ್ಯವಂತ ಭಾರತ ನಿರ್ಮಿಸೋಣ ಎಂದರು.
ತ್ಯಾಜ್ಯದ ಮೂಲ ವರ್ಗಿಕರಣ ನಿಮ್ಮ ಮನೆಯ ತ್ಯಾಜ್ಯವನ್ನು ಪಟ್ಟಣ ಪಂಚಾಯತ ವಾಹನಕ್ಕೆ ನೀಡುವಾಗಲೇ ನಾಲ್ಕು ಭಾಗಗಳ ಕಸವನ್ನಾಗಿ ವಿಂಗಡಿಸಿ ನೀಡಬೇಕು. ಹಸಿ ತ್ಯಾಜ್ಯ: ಅಡುಗೆ ಮನೆ ತ್ಯಾಜ್ಯ, ಹಣ್ಣು-ತರಕಾರಿ ಸಿಪ್ಪೆ, ಎಲೆಗಳು. ಒಣ ತ್ಯಾಜ್ಯ: ಪ್ಲಾಸ್ಟಿಕ್, ಪೇಪರ್, ಗಾಜು, ಲೋಹದ ವಸ್ತುಗಳು. ಸ್ಯಾನಿಟರ್ ತ್ಯಾಜ್ಯ : ಬಳಸಿದ ಳಸಿದ ಡೈಪರ್ಗಳು, ಸ್ಯಾನಿಟರಿ ನ್ಯಾಪ್ಕಿನ್ಗಳು (ಇವುಗಳನ್ನು ಕಾಗದದಲ್ಲಿ ಸುತ್ತಿ ಪ್ರತ್ಯೇಕವಾಗಿ ನೀಡಬೇಕು. ಹಾಗೂ ವಿಶೇಷ ಕಾಳಜಿಯ ತ್ಯಾಜ್ಯ: ಬ್ಯಾಟರಿಗಳು, ಟ್ಯೂಬ್ ಲೈಟ್ಗಳು, ಪೇಂಟ್ ಡಬ್ಬಿಗಳು ಮತ್ತು ಕಾಲಾವಧಿ ಮುಗಿದ ಔಷಧಿಗಳು, ಮತ್ತು ದಿನಕ್ಕೆ ೧೦೦ ಕೆಜಿಗಿಂತ ಹೆಚ್ಚು ತ್ಯಾಜ್ಯ ಉತ್ಪಾದಿಸುವ ಕಲ್ಯಾಣ ಮಂಟಪಗಳು, ಹೋಟೆಲ್ಗಳು ಮತ್ತು ಅಪಾರ್ಟ್ ಮೆಂಟ್ ಗಳು ತಮ್ಮ ಆವರಣದಲ್ಲಿಯೇ ಹಸಿ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಅಳವಡಿಸಿಕೊಳ್ಳುವುದು ಕಡ್ಡಾಯಗೊಳಿಸಲಾಗಿದೆ ಎಂದರು.
ನಿರುಪಯುಕ್ತವಾಗಿರುವ ತಮ್ಮಲ್ಲಿ ಸಂಗ್ರಹವಿರುವ ಕಸವನ್ನು ರಸ್ತೆ, ಚರಂಡಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದು ಶಿಕ್ಷಾರ್ಹ ಅಪರಾಧವಾಗಿದೆ. ಅಲ್ಲದೇ ಪ್ಲಾಸ್ಟಿಕ್ ಅಥವಾ ಯಾವುದೇ ರೀತಿಯ ತ್ಯಾಜ್ಯವನ್ನು ಸುಡುವುದು ಪರಿಸರಕ್ಕೆ ಮಾರಕವಾಗಿದ್ದು, ಇದನ್ನು ಕಟ್ಟುನಿಟ್ಟಾಗಿ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ ಉಲ್ಲಂಘಿಸಿದವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲು ಪಟ್ಟಣ ಪಂಚಾಯತಿಗೆ ಸರ್ಕಾರವು ಅವಕಾಶ ನೀಡಿದ್ದು ದಂಡ ಸಹಿತ ಶಿಕ್ಷಾರ್ಹ ಅಪರಾಧಕ್ಕೆ ಗುರಿಯಾಗುವಿರಿ ಎಂದು ಮುಖ್ಯಾಧಿಕಾರಿ ಗಡೇದ ಮಾಹಿತಿ ನೀಡಿದರು.

