ಚಾಮರಾಜನಗರ ಜಿಲ್ಲೆಯ ಯಳಂದೂರಿನ ಹಿರಿಯ ಪತ್ರಕರ್ತ ನಾಗರಾಜ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಹಿರಿಯ ಪತ್ರಕರ್ತ ಹಾಗೂ ’ಉದಯರಶ್ಮಿ’ ದಿನಪತ್ರಿಕೆ ಸಂಪಾದಕ ಇಂದುಶೇಖರ ಮಣೂರ ಅವರು ಈಚೆಗೆ ’ಬಸವ ಸೇವಾ ಪ್ರಶಸ್ತಿ’ ಗೌರವಕ್ಕೆ ಭಾಜನರಾದ ಪ್ರಯುಕ್ತ ಚಾಮರಾಜನಗರ ಜಿಲ್ಲೆಯ ಯಳಂದೂರಿನ ಹಿರಿಯ ಪತ್ರಕರ್ತ ನಾಗರಾಜ ಅವರು ತಮ್ಮ ಸ್ವಗೃಹದಲ್ಲಿ ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಮಾತನಾಡಿದ ಪತ್ರಕರ್ತ ನಾಗರಾಜ ಅವರು, ವಚನ ಸಾಹಿತ್ಯ ಮತ್ತು ಶರಣ ಸಂಸ್ಕೃತಿಯ ಪ್ರಸಾರಕ್ಕಾಗಿ ಶ್ರಮಿಸುತ್ತಿರುವ ಸನ್ಮಿತ್ರ ಇಂದುಶೇಖರ ಅವರ ಶ್ರಮ ಮತ್ತು ಬದ್ಧತೆಯನ್ನು ಗೌರವಿಸಲು ಮಾನವೀಯತೆ ಹಾಗೂ ಸಮಾನತೆಯ ಸಂದೇಶವನ್ನು ಸಾರಿದ ವಿಶ್ವಗುರು ಬಸವಣ್ಣನವರ ಹೆಸರಿನ ಪ್ರಶಸ್ತಿ ಅವರಿಗೆ ಸಂದಿರುವುದು ಅವರ ಸೇವೆಗೆ ಸಂದ ಗೌರವ ಎಂದು ಅಭಿಪ್ರಾಯಿಸಿದರು.
ಸನ್ಮಾನಕ್ಕೆ ಪ್ರತಿಯಾಗಿ ಮಾತನಾಡಿದ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ ಮಾತನಾಡಿ, ಎಲ್ಲಿಯ ವಿಜಯಪುರ, ಎಲ್ಲಿಯ ಚಾಮರಾಜನಗರ.. ನಾಗರಾಜ ಅವರೊಂದಿಗಿನ ಸ್ನೇಹತಂತು ದಾರಿ ದೂರವಿದ್ದರೂ ಭಾವಗಳು ಸದಾ ಜೊತೆಯಾಗಿ ಸಾಗಿವೆ. ಅವರ ಜೀವನ ಪ್ರೀತಿ, ನೊಂದವರಿಗೆ ಸದಾ ಸ್ಪಂದಿಸುವ, ಸಹಾಯ ಹಸ್ತ ಚಾಚುವ ಅವರ ಮಾನವೀಯ ಕಳಕಳಿ ಅನನ್ಯ ಎಂದು ಶ್ಲಾಘಿಸಿದರು.
ಈ ವೇಳೆ ಸ್ಥಳೀಯ ಹಿರಿಯ ಪತ್ರಕರ್ತ ನಾಗೇಂದ್ರ, ರಾಜು ಕೆರುಟಗಿ, ಶ್ರೀಮತಿ ಶೋಭಾ ನಾಗರಾಜ, ಚೇತನ ನಾಗರಾಜ, ಜೀವನ್ ನಾಗರಾಜ, ’ಉದಯರಶ್ಮಿ’ ಪ್ರಕಾಶಕಿ ಶ್ರೀಮತಿ ಶೈಲಾ ಮಣೂರ ಸೇರಿದಂತೆ ಹಲವರಿದ್ದರು.

