ಲೇಖನ
– ರಶ್ಮಿ ಕೆ. ವಿಶ್ವನಾಥ್
ಮೈಸೂರು
ಉದಯರಶ್ಮಿ ದಿನಪತ್ರಿಕೆ
ಪಾಂಚಾಲಿ ಕುಂತಿಯ ಸೊಸೆ.
ಮಥುರೆಯ ಶೂರಸೇನನ ಮಗಳು ‘ಪೃಥಾ’, ಕುಂತಿಸಾಮ್ರಾಜ್ಯದ ಕುಂತಿಭೋಜನ ಮಗಳು ‘ಕುಂತಿ’ಯಾದಳು..
ಪಾಂಚಾಲ ದೇಶದ ದ್ರುಪದ ಮಹಾರಾಜನ ಮಗಳು ದ್ರೌಪದಿ, ಹಸ್ತಿನಾಪುರದ ಪಾಂಡವರ ಪತ್ನಿ ‘ಪಾಂಚಾಲಿ’ಯಾದಳು..
ಯಾವ ಸುಖಕ್ಕೆ.. ಯಾರ ಕೋಪಕ್ಕೆ.. ಯಾವುದರ ಆರಂಭಕ್ಕೆ?
ಹಿಂದಿನ ಜನ್ಮದಲ್ಲಿ ನಳಯಾನಿಯಾಗಿದ್ದ ದ್ರೌಪದಿ ಶಿವನನ್ನು ಕುರಿತು ತಪಸ್ಸು ಮಾಡಿ, ಎಲ್ಲಾ ಉತ್ತಮ ಗುಣಗಳು ಅಥವಾ ಕೌಶಲ್ಯಗಳು ಇರುವವ ತನ್ನ ಪತಿಯಾಗಬೇಕು ಎಂಬ ವರಬೇಡಿದ್ದರ ಫಲವಾಗಿ ‘ಎಲ್ಲಾ ಹಣ್ಣುಗಳು ಒಂದೇ ಮರದಲ್ಲಿ ಬಿಡುವುದಿಲ್ಲ’ ಎಂಬ ಪ್ರಾಕೃತಿಕ ಸತ್ಯದಂತೆ, ಎಲ್ಲಾ ಉತ್ತಮ ಗುಣಗಳು ಒಬ್ಬನೇ ಪುರುಷನಲ್ಲಿ ಕ್ರೋಡೀಕೃತವಾಗಿರುವುದಿಲ್ಲವಾದ್ದರಿಂದ, ಉತ್ತಮ ಗುಣಗಳ ಮೊತ್ತವಾದ ಪಂಚಪಾಂಡವರು ಕೃಷ್ಣೆಗೆ(ಕೃಷ್ಣನಂತೆ ಕಪ್ಪಗಿದ್ದ ದ್ರೌಪದಿಗೆ ದೇವತೆಗಳು ‘ಕೃಷ್ಣೆ’ ಎಂದು ಕರೆದರು) ಪತಿಗಳಾದರು.
ದೇವಿ ಶ್ಯಾಮಲಾ (ಧರ್ಮನ ಪತ್ನಿ), ಭಾರತೀದೇವಿ (ವಾಯುವಿನ ಪತ್ನಿ), ಸಚಿ ದೇವಿ (ಇಂದ್ರನ ಪತ್ನಿ), ಉಷಾ ದೇವಿ(ಅಶ್ವಿನ್ ನ ಪತ್ನಿ)
ಪಾರ್ವತಿ (ಶಿವನ ಪತ್ನಿ) ಇಷ್ಟೂ ಜನ ಪಂಚಕನ್ಯೆಯರ ಸಮ್ಮಿಲನವಾದ ದೇವಿ ಶಿವನನ್ನು ಕುರಿತು ತಪಸ್ಸು ಮಾಡಿ ಉತ್ತಮ ಪತಿಗಾಗಿ ವರ ಕೇಳಿದಾಗ ಶಿವಾ “ತಥಾಸ್ತು” ಎಂದುಬಿಡುತ್ತಾನೆ. ಅದರ ಫಲವೆ ದ್ರೌಪದಿ ವಿವಾಹ.
ಆದ್ದರಿಂದಲೇ ಪಂಚಪಾಂಡವರಲ್ಲಿ ಒಬ್ಬೊಬ್ಬರು ದ್ರೌಪದಿಯನ್ನು ವರಿಸುವಾಗಲು ಒಂದೊಂದು ದೇವಿ ಜಾಗೃತವಾಗುತ್ತಾಳೆ ಎಂದು ಹೇಳಲಾಗುತ್ತದೆ.
ಅಂದಹಾಗೆ ವರ ನೀಡಿದ ಶಿವ ಸಹ ಬ್ರಹ್ಮನ ಶಾಪದ ಮೇರೆಗೆ ಅಶ್ವತ್ಥಾಮನಾಗಿ ಜನಿಸಿದ್ದು ಗೊತ್ತೇ ಇದೆ. ಅದೂ ಅಲ್ಲದೆ.ಬ್ರಹ್ಮಚಾರಿ ಅಶ್ವತ್ಥಾಮ ಚಿರಾಯು. ಅವ ಇಂದಿಗೂ ಬದುಕಿದ್ದಾನೆ ಎಂದು ಸಹ ನಂಬಲಾಗುತ್ತದೆ.
ಆದರೆ ದ್ವಾಪರಯುಗದಲ್ಲಿ ಐದು ಜನರನ್ನು ವರಿಸಬೇಕಾಗಿ ಬಂದ ದ್ರೌಪದಿ, ಪಾಂಚಾಲಿಯಾಗಿ ತನ್ನ ಪತಿಯರೊಂದಿಗಿನ ಅನುಭವವನ್ನು ಹೇಳಿಕೊಳ್ಳುವ ರೀತಿ ಯಾವುದೇ ಹೆಣ್ಣಿನ ಮನಸ್ಸಿನ ಮೂಲೆಯನ್ನು ತಟ್ಟದಿರದು.
ಯಜ್ಞದಿಂದ ದೃಷ್ಟದ್ಯುಮ್ನನನ್ನು ಪಡೆದು ಸಂತುಷ್ಟನಾದ ದ್ರುಪದ ಮಹಾರಾಜ, ಯಜ್ಞದಿಂದ ಮೇಲೇಳಲು ಹೋದಾಗ, “ನಿನಗೆ ಎರಡು ಮಕ್ಕಳ ವರವಿರುವುದರಿಂದ ನೀನು ಮತ್ತೊಂದು ಮಗುವನ್ನು ಬೇಡಿಕೊಳ್ಳಬೇಕು” ಎಂದು ಋಷಿಮುನಿಗಳು ಆಜ್ಞೆಮಾಡಿದ್ದರಿಂದ ಮೊದಲೇ ಹೆಣ್ಣುಮಕ್ಕಳೆಂದರೆ ಇಷ್ಟವಿಲ್ಲದ ದ್ರುಪದ, ಅದರಿಂದ ಕುಪಿತನಾಗಿ “ಓಹೋ ಹೌದಾ ಮತ್ತೊಂದು ಮಗುವನ್ನು ಬೇಡಲೇಬೇಕಾ… ಬೇಡಿದ್ದೆಲ್ಲವನ್ನು ನಿಮ್ಮ ದೇವತೆಗಳು ಕೊಡುವರೋ…” ಎಂಬ ಅಹಂಕಾರದಲ್ಲಿ, ನನಗೆ ಲೋಕಸುಂದರಿಯಾದ ಹೆಣ್ಣುಮಗು ಬೇಕು.. ಆಕೆ ಕಷ್ಟಗಳನ್ನು ಎದುರಿಸುತ್ತಲೇ ಬದುಕಬೇಕು…” ಎಂದೆಲ್ಲಾ ಈ ರೀತಿಯ ಅಪಶಕುನದ ಆಸೆಗಳನ್ನು ಹೇಳುತ್ತಾ ಪಡೆದ ಮಗಳೇ, ಯಜ್ಞಕುಂಡದಿಂದ ಎದ್ದುಬಂದ ‘ಯಜ್ಞಸೇನಾ”.
ದೃಪದನಂತಹ ತಂದೆಯ ಕೋಪದ ಕೂಸಾದ ದ್ರೌಪದಿ.
ತನ್ನ ಸೌಂದರ್ಯದಿಂದಲೇ ಜಗಗೆದ್ದಿದ್ದ ಕಪ್ಪುಸುಂದರಿ ಕೃಷ್ಣೆ.
ಸ್ವಯಂವರದಲ್ಲಿ ಗೆದ್ದುತಂದ ದ್ರೌಪದಿಯನ್ನು ನಿಲ್ಲಿಸಿಕೊಂಡು “ಅಮ್ಮಾ ಒಂದು ಹೆಣ್ಣನ್ನು ಗೆದ್ದುತಂದಿದ್ದೀವಿ” ಎಂದು ಬಾಗಿಲಲ್ಲೇ ನಿಂತು ಹೇಳಿದ ಪಾರ್ಥನ ಮಾತು ಒಳಗಿನಿಂದಲೇ ಕೇಳಿಸಿಕೊಂಡ ಕುಂತಿಗೆ, ಅದು “ಒಂದು ಹಣ್ಣನ್ನು ಗೆದ್ದುತಂದಿದ್ದೀವಿ” ಎಂದು ಕೇಳಿಸಿ,
“ಹೌದಾ.. ಹಾಗಾದರೆ ಐದೂ ಜನರು ಹಂಚಿಕೊಳ್ಳಿ” ಎಂದು ಹೇಳಿದ್ದರಿದಲೇ. ‘ದ್ರೌಪದಿ’, ‘ಪಾಂಚಾಲಿ’ಯಾಗುವಂತೆ ಆಯಿತು.

ಕೌರವರು ಕೊಟ್ಟ ಯಮುನಾ ನದಿಯ ದಡದಲ್ಲಿದ್ದ 5 ಹಳ್ಳಿಗಳನ್ನು ಒಳಗೊಂಡ ‘ಖಾಂಡವಪ್ರಸ್ಥ’ ಎಂಬ ಬರಡುಭೂಮಿಯನ್ನು, ಶ್ರೀಕೃಷ್ಣ(ಮಯಾಸುರ)ನು ಅತ್ಯಾಕರ್ಷಕ ನಗರವಾಗಿ ಪರಿವರ್ತಿಸಿ, ‘ಇಂದ್ರಪ್ರಸ್ಥ’ ಎಂಬ ಭವ್ಯ ರಾಜಧಾನಿಯನ್ನಾಗಿ ಮಾಡಿ, ಅಲ್ಲಿ ರಾಜಸೂಯ ಯಾಗ ಮಾಡುವಂತೆ ಪಾಂಡವರಿಗೆ ಹೇಳುತ್ತಾನೆ.
ಅದೇ ರಾಜಸೂಯಯಾಗಕ್ಕೆಂದು ಇಂದ್ರಪ್ರಸ್ಥಕ್ಕೆ ಮೊದಲಬಾರಿಗೆ ಬಂದ ದುರ್ಯೋಧನ ‘ಗೃಹಪ್ರವೇಶ’ಕ್ಕೆ ಬಂದ ಹೊಸಬರಂತೆ ಅರಮನೆಯ ಆಡಂಬರವನ್ನು ಆಸಕ್ತಿಯಿಂದಲೂ ಅಸೂಯೆಯಿಂದಲೂ ನೋಡುತ್ತಿದ್ದ ಸಂದರ್ಭದಲ್ಲಿ, ಬರೀನೆಲವನ್ನು ನೀರಿರುವ ಭಾಗವೆಂದು ತಿಳಿದು ತನ್ನ ಪಂಚೆಯೆತ್ತಿಕೊಂಡು ನಡೆಯುತ್ತಿದ್ದನ್ನು ಗಮನಿಸಿದ ದಾಸಿ ‘ಅಲ್ಲಿ ನೀರಿಲ್ಲ ಬರೀ ನೆಲವೆಂದು’ ಸುಯೋಧನನಿಗೆ ತಿಳಿಸಿದ ಕಾರಣ, ಮುಂದೆ ನಡೆಯುತ್ತಾ ಹೋದಾಗ ನೀರಿರುವ ನೆಲವನ್ನೂ ಸಹ ನೀರಿಲ್ಲದ ನೆಲ ಎಂದುಕೊಂಡು ನೀರಿನಮೇಲೆ ಕಾಲಿಟ್ಟು ಅದರಲ್ಲಿ ಬಿದ್ದುಬಿಡುತ್ತಾನೆ. ಅವ ಬಿದ್ದಿದ್ದನ್ನು ಮೇಲಿನಿಂದ ನೋಡಿದ ದ್ರೌಪದಿ & ಸಖಿಯರಿಗೆ ಸ್ವಭಾವಿಕವಾಗಿಯೇ ಜೋರಾಗಿ ನಗು ಬಂದುಬಿಡುತ್ತದೆ. ಒಬ್ಬ ಸಖಿಯಂತೂ “ಅಂಧನ ಮಗ ಅಂಧನಾಗಿಬಿಟ್ಟನೆ” ಎಂದುಬಿಡುತ್ತಾಳೆ.
ಕೋಪದಿಂದ ತಲೆಯೆತ್ತಿ ನೋಡಿದ ಸುಯೋಧನನಿಗೆ ಕಾಣಿಸಿದ್ದು ದ್ರೌಪದಿ. ಹಾಗಾಗಿ ಪಾಂಚಾಲಿಯೇ ಆ ಮಾತು ಹೇಳಿದಳು ಎಂದುಕೊಂಡ ದುರ್ಯೋಧನನ ಕೋಪ ಮುಂದಿನ ಅಚಾತುರ್ಯಗಳಿಗೆ ಕಾರಣವಾದಂತಾಯಿತು.
ತಂದೆಯ ಕೋಪದ ಅಸ್ತ್ರವಾಗಿ ಜನಿಸಿದ ಕೃಷ್ಣೆ, ತುಂಬಿದ ಸಭೆಯಲ್ಲಿ ವಸ್ತ್ರಾಪಹರಣ ಮಾಡಿಸಿಕೊಳ್ಳುವಂತಾಯಿತು.
ನಂತರ ನಡೆದ ಕುರುಕ್ಷೇತ್ರ ಯುದ್ಧ ಯಜ್ಞಸೇನಳ ಐವರು ಮಕ್ಕಳನ್ನೂ, ಅಭಿಮನ್ಯುವನ್ನೂ ಬಲಿತೆಗೆದುಕೊಂಡುಬಿಟ್ಟಿತು.
ಪಟ್ಟದರಸಿಯಾಗಿ ಮೆರೆಯಬೇಕಿದ್ದ ದ್ರೌಪದಿ, ಸೈರಂಧ್ರಿ ಯಾಗಿ ಪರಿಣಿತಳ ಸೇವಕಿಯೂ ಆಗಿಬಿಟ್ಟಳು.
ಎಂದಿಗೂ ವಯಸ್ಸಾಗದ ಶಕ್ತಿಯನ್ನು ಹೊಂದಿದವಳು ಎಂಬ ಅರ್ಥವನ್ನು ಹೊಂದಿದ್ದ ‘ನಿತ್ಯಾಯುವಾಣಿ’ ಎಂಬ ನಮಾಂಕಿತೆ ದ್ರೌಪದಿ. ಕನ್ಯೆಯಾಗೇ ಇರುವಂತೆ ವರವನ್ನು ಪಡೆದವಳು. ಆದರೆ ಅನುಭವಿಸಿದ್ದು ಮಾತ್ರ ನೋವು.
ಕೃಷ್ಣನ ಅಂತ್ಯದ ನಂತರ ಮನನೊಂದ ಪಾಂಡವರು ಸ್ವರ್ಗಕ್ಕೆ ಹೋಗಲು ಹಿಮಾಲಯದತ್ತ ಪ್ರಯಾಣಿಸುವಾಗ ಅವರಿಗೆ ಸುಮೇರು ಪರ್ವತ ಎದುರಾಗುತ್ತದೆ. ಸುಮೇರು ಪರ್ವತವನ್ನು ದಾಟುವಾಗ ದ್ರೌಪದಿ ಪರ್ವತದಿಂದ ಕೆಳಗೆ ಬಿದ್ದು ಮರಣ ಹೊಂದಿಬಿಡುತ್ತಾಳೆ. ಆಗ ಭೀಮನು ಯುಧಿಷ್ಠಿರನ ಬಳಿ ದ್ರೌಪದಿ ಯಾಕೆ ನಮಗಿಂತ ಮೊದಲು ಸತ್ತಳು..? ನಮ್ಮೊಂದಿಗೆ ಸ್ವರ್ಗಕ್ಕೆ ಬರಲು ಯಾಕೆ ಸಾಧ್ಯವಾಗಲಿಲ್ಲ..? ಎಂದು ಪ್ರಶ್ನಿಸಿದಾಗ, ದ್ರೌಪದಿ ಮನಸಿನಲ್ಲಿ ಅರಗಿನ ಮನೆಯಲ್ಲಿ ನಾವೆಲ್ಲರೂ ಸತ್ತುಹೋದೆವು ಎಂದು ತಿಳಿದು ಆ ಸಮಯದಲ್ಲಿ ಕರ್ಣನನ್ನು ಇಷ್ಟಪಟ್ಟಿದ್ದಳು. ನಮ್ಮ ಪ್ರೀತಿಗೆ ಮೋಸ ಮಾಡಿದಳು. ಆದ್ದರಿಂದ ಆಕೆಗೆ ಸ್ವರ್ಗಕ್ಕೆ ಬರಲು ಸಾಧ್ಯವಾಗಲಿಲ್ಲವೆಂದು ಉತ್ತರಿಸುತ್ತಾನೆ. ಅಂದರೆ ದ್ರೌಪದಿ ಮನಸಿಗೆ ಆ ಭಾವನೆ ಬಂದದ್ದೇ ತಪ್ಪು ಎಂದಾಯಿತು. ಆದರೆ ಪಾಂಡವರು ಮಾತ್ರ ಮತ್ತೊಬ್ಬ ಹೆಣ್ಣನ್ನು ವರಿಸಿದ್ದು..

ಎಂಥ ದುರಂತ.
ಐವರು ಗಂಡರ ಮುದ್ದಿನ ಹೆಂಡತಿ ಪಾಂಚಾಲಿ ಯಾವ ಸುಖಪಟ್ಟಳು…
“ಅಮ್ಮನಂತೆ ಮಗಳು, ನೂಲಿನಂತೆ ಸೀರೆ” ಇದು ಗಾದೆ.
ಆದರೆ ಇಲ್ಲಿ “ಅತ್ತೆಯಂತೆ ಸೊಸೆ, ಅಪ್ಪನಣತಿಯಂತೆ ಜೀವನ” ಸಾಗಿಹೋಯಿತು.
ಶೂರಸೇನನ ಮಗಳಾಗಿ ಜನಿಸಿ “ಪೃಥಾ” ಎಂಬ ನಾಮಧೇಯದಿಂದ ನಲಿದ ಮಗು, “ಕುಂತಿ” ಎಂಬ ಹೆಸರಿನಲ್ಲಿ ಪೃಥೆ(ಭೂಮಿ)ಯಂತೆಯೇ ನೋವು ತಿನ್ನಬೇಕಾಯಿತು.
“ನಿನಗೆ ಮಕ್ಕಳಾಗದಿದ್ದರೆ, ನನ್ನ ಎರಡನೇ ಮಗುವನ್ನೇ ನಿನಗೆ ದಾನವಾಗಿ ಕೊಡುತ್ತೇನೆ” ಎಂದು ಗೆಳೆಯನಿಗೆ ಮಾತುಕೊಟ್ಟಿದ್ದ ಶೂರಸೇನ ತನ್ನ ಮಾತಿನಂತೆಯೇ ತನ್ನ ಮಗಳನ್ನು ಒಂದು ಮಾತೂ ಕೇಳದೆ. “ಇನ್ನು ಮುಂದೆ ಇವರೇ ನಿನ್ನ ತಂದೆ ಮಗು” ಎಂದು ಭೋಜರಾಜನನ್ನು ತೋರಿಸಿ, ಕಳಿಸಿಕೊಟ್ಟುಬಿಟ್ಟರು.
ನಿರ್ಭಾವುಕಳಾಗಿ ಭೋಜನೊಂದಿಗೆ ಕುಂತಿರಾಜ್ಯಕ್ಕೆ ಹೊರಟ ‘ಪೃಥಾ’ ಅಲ್ಲಿ ‘ಕುಂತಿ’ಯಾಗಿಬಿಟ್ಟಳು.
“ದೇವರಿಗೂ ಒಲಿಯದ ‘ದುರ್ವಾಸಮುನಿ’, ನಮ್ಮ ರಾಜ್ಯಕ್ಕೆ ಬರುತ್ತಿರುವುದು ನಮ್ಮ ಪುಣ್ಯ. ಅವರಿಗೆ ಏನೂ ಕಡಿಮೆಯಾಗದಂತೆ ನೀನೇ ನೋಡಿಕೊಳ್ಳಬೇಕು ಮಗಳೇ ನೆನಪಿನಲ್ಲಿರಲಿ” ಎಂದು ತಂದೆ ಭೋಜರಾಜ ಹೇಳಿದ್ದನ್ನು ಪಾಲಿಸಲು ಕುಂತಿ, ದುರ್ವಾಸರಿಗೆ ತನ್ನನ್ನು ತಾನೇ ಅರ್ಪಿಸಿಕೊಂಡುಬಿಟ್ಟಳು.
ಲೋಕಾಪವಾದಕ್ಕೆ ಹೆದರಿ, ರಾಜ್ಯಕ್ಕೆ ಅಪಕೀರ್ತಿ ಬರಬಾರದು ಎಂಬ ತಂದೆಯ ಒತ್ತಾಯಕ್ಕೆ ಮಣಿದು, ಆ ಮಗುವನ್ನೂ ನೀರಿಗೆ ಬಿಟ್ಟಳು.
ಹಿಂದಿನ ದಿನವಷ್ಟೇ ಮಾದ್ರಿಯನ್ನು ವರಿಸಿಬಂದಿದ್ದ ಮತ್ತು ಕುಂತಿಯೊಂದಿಗೆ ಇನ್ನಾ ಒಂದು ರಾತ್ರಿಯೂ ಕಳೆದಿರದ ಪಾಂಡುಮಹಾರಾಜ, ತನ್ನೊಡನೆ ಭೇಟೆಗೆ ಬಂದಿದ್ದ ಮಾದ್ರಿಯ ಮಾತುಕೇಳಿ ಶೃತಿಗೊಳ್ಳುತ್ತಿದ್ದ ಜಿಂಕೆಗಳ ಮೇಲೆ ಬಾಣಪ್ರಯೋಗ ಮಾಡಿಬಿಡುತ್ತಾನೆ. ಜಿಂಕೆಯ ರೂಪದಲ್ಲಿದ್ದ ಕಿಂದಮ ಋಷಿಗಳು ಕನಲಿ, “ನೀನು ಯಾರನ್ನೇ ಕೂಡಿದರು ಅಥವಾ ಹೊಂದಲು ಆಸೆಪಟ್ಟರು ಆ ಕ್ಷಣವೆ ನಿನ್ನ ಜೀವಹೋಗಲಿ” ಎಂಬ ಶಾಪ ಕೊಟ್ಟುಬಿಡುತ್ತಾರೆ.
ಕುರುರಾಜ ಪಾಂಡು ಕುಂತಿಯ ಪತಿ ಪಾಂಡು
ಅಂತಹ ಶಾಪಕ್ಕೆ ಗುರಿಯಾದದ್ದು ಅವಳ ಮತ್ತೊಂದು ದುರಂತ.
ತನ್ನಿಂದ ಮಕ್ಕಳಾಗದಿದ್ದರಿಂದ ವಂಶವನ್ನು ಮುಂದುವರೆಸುವ ನಿಟ್ಟಿನಲ್ಲಿ, ಪತಿ ಪಾಂಡುಮಹಾರಾಜನೆ, ಯಮಧರ್ಮರಾಯನಿಂದ ಧರ್ಮರಾಯನನ್ನು, ಇಂದ್ರನಿಂದ ಅರ್ಜುನನ್ನು, ವಾಯುವಿನಿಂದ ಭೀಮನನ್ನು ಮತ್ತು ಅಶ್ವಿನಿ ದೇವತೆಗಳಿಂದ ಮಾದ್ರಿ, ನಕುಲ ಸಹದೇವರನ್ನು ಪಡೆಯುವಂತೆ ಮಾಡಲೇಬೇಕಾಯಿತು.
ಅಂದರೆ ಕುಂತಿಯ ಜೀವನದಲ್ಲೂ 5 ಪುರುಷರ ಪ್ರವೇಶ.
ಕುಂತಿಗೆ ಜನ್ಮನೀಡಿದ ತಂದೆಯೇ ಗೆಳೆಯನಿಗೆ ಮಗಳನ್ನು ದಾನವಾಗಿ ಕೊಟ್ಟು, ಆ ತಂದೆಯು ಮಗಳನ್ನು ಮುನಿಯಸೇವೆ ಮಾಡಲು ನೇಮಿಸಿದ.
ಜೀವನಪೂರಾ ಕುಂತಿಯ ಸೌಖ್ಯ ಕಾಯಬೇಕಾದ ಪತಿ ಪಾಂಡುವೆ, ವಂಶೋದ್ಧಾರಕ್ಕಾಗಿ ತನ್ನ ಧರ್ಮಪತ್ನಿ ಕುಂತಿಯನ್ನು ಮತ್ತೊಬ್ಬರ ಹತ್ತಿರ ಕಳಿಸಿಕೊಡಬೇಕಾಯಿತು.
ನಂತರ 15 ವರ್ಷಗಳ ಕಾಲ ಆಕೆಯ ಮಕ್ಕಳು ಕಾಡುಪಾಲಾದರು.
ಕುರುಕ್ಷೇತ್ರದ ಸಮಯದಲ್ಲಿ ಹೆತ್ತ ಮಗ ಕರ್ಣನ ಹತ್ತಿರವೇ ಭಿಕ್ಷೆಬೇಡುವಂತಾಯಿತು.
ಯಾವ ಸುಖ ಕಂಡಳು ಕುಂತಿದೇವಿ..
ಅತ್ತ ಅತ್ತೆ ಕುಂತಿದೇವಿ ಜೀವನಪೂರಾ ನೋವನ್ನು ನುಂಗುತ್ತಾಹೋದಳು
ಇತ್ತ ಸೊಸೆ ಪಾಂಚಾಲಿ ಜೀವನವೆಲ್ಲಾ ನೋವನ್ನೇ ಉಣ್ಣುತ್ತಾಹೋದಳು
ಇದುವೆ ನರಳಿ ನಲುಗಿ ಕೊನೆಗೆ ಮುದುಡಿ ಮಣ್ಣಾಗುವ ಎಷ್ಟೊ ಹೆಣ್ಣುಗಳ ಜೀವನ.


