ಬೀದರನಲ್ಲಿ ನಡೆದ ರಾಜ್ಯ ಪತ್ರಕರ್ತರ ಸಮ್ಮೇಳನ | ಧನ್ಯವಾದ ಸಮರ್ಪಣಾ ಸಮಾರಂಭದಲ್ಲಿ | ಕೆಯುಡಬ್ಲೂೃಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಶ್ಲಾಘನೆ
ಉದಯರಶ್ಮಿ ದಿನಪತ್ರಿಕೆ
ಬೆಂಗಳೂರು: ಬಸವನ ನಾಡು, ಸೂಫಿ ಸಂತರ ಬೀಡು ಬೀದರನಲ್ಲಿ ಎರಡು ದಿನಗಳು ನಡೆದ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ಅಚ್ಚುಕಟ್ಟಾಗಿ ಸಂಘಟಿಸಿ, ಯಶಸ್ವಿಗೊಳಿಸಿದ ಹಿನ್ನೆಲೆಯಲ್ಲಿ ಸಮ್ಮೇಳನದ ಯಶಸ್ವಿಗಾಗಿ ಶ್ರಮಿಸಿದವರು ಮತ್ತು ಸಹಕರಿಸಿದವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲೂೃಜೆ)ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಸನ್ಮಾನಿಸಿದರು.
ಬೀದರ ಎಸ್ಪಿ ಗೆಸ್ಟ್ ಹೌಸ್ ಆವರಣದಲ್ಲಿ ನಡೆದ ಸಮಾರಂಭದಲ್ಲಿ ವಸತಿ, ಆಹಾರ, ಸಾರಿಗೆ, ಪ್ರಚಾರ, ಮೆರವಣಿಗೆ, ನೋಂದಣಿ, ಅತಿಥಿ ಸತ್ಕಾರ, ಸಾಂಸ್ಕೃತಿಕ, ಸ್ಮರಣ ಸಂಚಿಕೆ, ಮಹಿಳಾ ಸಮಿತಿಯಿಂದ ಹಿಡಿದು ವಸ್ತು ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ ಸಮಿತಿ ತನಕ ಎಲ್ಲಾ ಉಪ ಸಮಿತಿಗಳ ಪ್ರಧಾನ ಸಂಚಾಲಕರು, ಸಂಚಾಲಕರು, ಸಹ ಸಂಚಾಲಕರ ಸೇವೆಯನ್ನು ಸ್ಮರಿಸಿ ಸನ್ಮಾನಿಸಲಾಯಿತು. ಸಮ್ಮೇಳನಕ್ಕೆ ಒಂದೊಂದು ಜವಬ್ದಾರಿ ವಹಿಸಿಕೊಂಡು ಸಹಕಾರ ನೀಡಿದವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಕಡಿಮೆ ಅವಧಿಯಲ್ಲಿ ಸಮ್ಮೇಳನವನ್ನು ವ್ಯವಸ್ಥಿತವಾಗಿ ಸಂಘಟಿಸಿದ ಬೀದರ್ ಜಿಲ್ಲಾ ಘಟಕ, ಬೀದರ್ ಪತ್ರಕರ್ತರು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತ ಮತ್ತು ನಾಗರೀಕರಿಗೆ ಧನ್ಯವಾದ ತಿಳಿಸಿದರು.
ಸಮ್ಮೇಳನದ ಮೆರವಣಿಗೆಯಿಂದ ಹಿಡಿದು ಊಟೋಪಚಾರ ತನಕ, ಸಮ್ಮೇಳನದ ಉದ್ಘಾಟನೆಯಿಂದ ಹಿಡಿದು ಹಲವು ವಿಚಾರ ಗೋಷ್ಠಿಗಳು, ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಸಮಾರೋಪ ತನಕ ಎಲ್ಲವೂ ವ್ಯವಸ್ಥಿತವಾಗಿ, ಅರ್ಥಪೂರ್ಣವಾಗಿ ನಡೆದಿವೆ ಎಂದು ತಿಳಿಸಿದರು.
ಸಮ್ಮೇಳನ ಎನ್ನುವುದು ಒಂದು ಮೆರಗು,ಸೊಬಗು. ಸಮ್ಮೇಳನದ ಆತಿಥ್ಯ ವಹಿಸಿಕೊಂಡಿದ್ದ ಬೀದರ್ ಘಟಕ ಸಮ್ಮೇಳನದ ದಿಬ್ಬಣವನ್ನು ಅಚ್ಚುಕಟ್ಟಾಗಿ, ಹಬ್ಬದ ರೂಪದಲ್ಲಿ ಸ್ವಾಗತಿಸಿ, ಸತ್ಕರಿಸಿ ಬೀಳ್ಕೊಟ್ಟಿರುವುದಕ್ಕೆ ಕೆಯುಡಬ್ಲೂೃಜೆ ಅಭಾರಿಯಾಗಿದೆ ಎಂದು ತಗಡೂರು ಹೇಳಿದರು.
ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ, ಸಚಿವ ರಹೀಂಖಾನ್ ಸೇರಿದಂತೆ ಎಲ್ಲಾ ಶಾಸಕರು ಮತ್ತು ಜನಪ್ರತಿನಿಧಿಗಳು ಮತ್ತು ಜಿಲ್ಲಾಧ್ಯಕ್ಷ ಆನಂದ ದೇವಪ್ಪ ಸೇರಿದಂತೆ ಎಲ್ಲ ತಾಲೂಕು ಸಂಘಗಳಿಗೂ ರಾಜ್ಯ ಸಂಘ ಅಭಾರಿಯಾಗಿದೆ ಎಂದು ಶಿವಾನಂದ್ ಹೇಳಿದರು.
ಬೀದರ್ ಜಿಲ್ಲಾ ಘಟಕ ಅಧ್ಯಕ್ಷ ಆನಂದ ದೇವಪ್ಪ ಮಾತನಾಡಿ, ರಾಜ್ಯ ಸಂಘದ ಅಧ್ಯಕ್ಷರು ನಮ್ಮ ಮೇಲೆ ವಿಶ್ವಾಸವಿಟ್ಟು ಸಮ್ಮೇಳನವನ್ನು ನೀಡಿ, ಸಹಕಾರ ಮಾಡಿದ್ದನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಹಾಗೆಯೇ ಸಮ್ಮೇಳನಕ್ಕಾಗಿ ದುಡಿದವರಿಗೆ ಹೃದಯಪೂರ್ವಕವಾದ ಧನ್ಯವಾದ ಎಂದು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ಮಾತನಾಡಿ, ರಾಜ್ಯ ಸಂಘದ ಪರವಾಗಿ ಧನ್ಯವಾದ ಸಲ್ಲಿಸಿದರು.
ಕಲಬುರ್ಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ, ಕೆಯುಡಬ್ಲೂೃಜೆ ರಾಜ್ಯ ಸಮಿತಿ ಸದಸ್ಯರಾದ ಭವಾನಿಸಿಂಗ್ ಠಾಕೂರ್ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಗುರುದ್ವಾರದ ಮುಖ್ಯಸ್ಥರು ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.
ರಾಜ್ಯ ಸಮಿತಿ ಸದಸ್ಯ ಅಪ್ಪರಾವ್ ಸೌದಿ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಸಮ್ಮೇಳನವನ್ನು ಯಶಸ್ವಿಗೊಳಿಸಿದ ಬೀದರ್ ಜಿಲ್ಲಾ ಘಟಕ ಅಧ್ಯಕ್ಷ ಆನಂದ ದೇವಪ್ಪ ಅವರನ್ನು ರಾಜ್ಯ ಸಂಘದ ಪರವಾಗಿ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸನ್ಮಾನಿಸಿದರು


