ಹೆಚ್ ಡಿ ಕೋಟೆಯಲ್ಲಿ ಗಾಳಿ-ಮಳೆಗೆ ಬಾಳೆ ಗಿಡಗಳು ನೆಲಸಮ
ಉದಯರಶ್ಮಿ ದಿನಪತ್ರಿಕೆ
ಹೆಚ್ ಡಿ ಕೋಟೆ: ಕಳೆದ ಮೂರು-ನಾಲ್ಕು ದಿನಗಳಿಂದ ಆಗಾಗ್ಗೆ, ಅಲ್ಲಲ್ಲಿ ಸುರಿಯುತ್ತಿರುವ ಮಳೆಗೆ ಕೆಲ ರೈತರ ಬದುಕು ಅತಂತ್ರವಾಗಿದೆ. ಕಟಾವಿಗೆ ಬಂದಿದ್ದ ಬೆಳೆಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ತಾಲೂಕಿನ ತುಂಬಸೋಗೆ ಸಮೀಪವಿರುವ ನಿಲುವಾಗಿಲು ಗ್ರಾಮದ ಕಾಂತನಾಯಕ ಅವರ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಬೆಳೆ ಸಂಪೂರ್ಣ ನೆಲಕಚ್ಚಿದೆ. ಬಿರುಗಾಳಿ ಸಹಿತ ಮಳೆಗೆ ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಸಂಪೂರ್ಣ ನೆಲಸಮವಾಗಿದೆ. ಇನ್ನು 15-20 ದಿನದಲ್ಲಿ ಬಾಳೆ ಬೆಳೆ ಕಟಾವಿಗೆ ಬಂದಿತ್ತು. ವ್ಯಾಪಾರಸ್ಥರು ಕೂಡ ಬಾಳೆ ಗೊನೆ ನೋಡಿ, ಕೆಲವೇ ದಿನಗಳಲ್ಲಿ ಬಂದು ಕಟಾವು ಮಾಡುವುದಾಗಿ ಹೇಳಿ ಹೋಗಿದ್ದರು. ಆದರೆ ಅಷ್ಟರೊಳಗೆ ಬಿರುಗಾಳಿ ಸಹಿತ ಮಳೆಗೆ ಬಾಳೆ ಗಿಡಗಳು ನೆಲಸಮವಾಗಿವೆ. ಸಾಲಸೋಲ ಮಾಡಿ ಬಾಳೆ ಬೆಳೆದಿದ್ದೀವಿ. 15 ದಿನದೊಳಗೆ ಕಟಾವು ಮಾಡಿಸಿ, ಅಲ್ಪಸ್ವಲ್ಪ ದುಡ್ಡು ನೋಡುವ ಆಸೆ ಇತ್ತು. ಆದರೆ ಇದೀಗ ನಮ್ಮ ಆಸೆಗೆ ಮಳೆರಾಯ ತಣ್ಣೀರು ಎರಚಿದ್ದಾನೆ. ಬಾಳೆ ಕಳೆದುಕೊಂಡ ನಮಗೆ ದಿಕ್ಕೇ ತೋಚದಾಗಿದೆ. ಜೀವನ ಹೇಗೆ ನಡೆಸಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಎರಡೂವರೆ ಎಕರೆ ಬೆಳೆ ಹಾನಿಗೆ ಕೇವಲ 17 ಸಾವಿರ ರೂಪಾಯಿ ಪರಿಹಾರ ಸರ್ಕಾರದಿಂದ ಬರುತ್ತೆ ಎಂದು ಹೇಳುತ್ತಿದ್ದಾರೆ. ಆ ಬಿಡುಗಾಸು ಹಣ ತೆಗೆದುಕೊಂಡು ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ ಎಂದು ಜಮೀನು ಮಾಲೀಕ ಕಾಂತನಾಯಕ ಅಳಲು ತೋಡಿಕೊಳ್ಳುತ್ತಾರೆ.
ನಿಲುವಾಗಿಲು ಗ್ರಾಮದ ಮತ್ತೊಬ್ಬ ರೈತ ವೆಂಕಟೇಶ್ ಅವರ ಜಮೀನಿನಲ್ಲಿ ಬೆಳೆದಿದ್ದ 3 ಎಕರೆ ಬಾಳೆ ಬೆಳೆ ಕೂಡ ಸಂಪೂರ್ಣ ನೆಲಕಚ್ಚಿದೆ. ಗಾಳಿ-ಮಳೆಗೆ ಬಾಳೆಗಿಡಗಳು ನೆಲಕ್ಕುರುಳಿವೆ. ಇದರಿಂದ ರೈತ ವೆಂಕಟೇಶ್ ಗೆ ದಿಕ್ಕೇ ತೋಚದಾಗಿದೆ. ಎಕರೆಗೆ ೫೦ ಲಕ್ಷ ರೂಪಾಯಿ ಖರ್ಚು ಮಾಡಿ ಬಾಳೆ ಬೆಳೆದಿದ್ದೆ. ಇನ್ನು ಎರಡು ತಿಂಗಳಲ್ಲಿ ಬಾಳೆ ಗೊನೆ ಕಟಾವಿಗೆ ಬರುತ್ತಿತ್ತು. ಅಷ್ಟರೊಳಗೆ ಮಳೆ ಬಂದು ಈ ಪರಿಸ್ಥಿತಿ ನಿರ್ಮಾಣವಾಗಿದೆ. ಕೇವಲ ಬಾಳೆ ಕಂದು ಹಾಕುವುದಕ್ಕೆ ಎಕರೆಗೆ 4-5 ಸಾವಿರ ರೂಪಾಯಿ ಖರ್ಚು ಆಗುತ್ತದೆ. ಅಂತದ್ರಲ್ಲಿ ಎಕರೆಗೆ 6 ಸಾವಿರ ರೂಪಾಯಿ ಪರಿಹಾರ ಹಣ ತೆಗೆದುಕೊಂಡು ಏನು ಮಾಡಲಿ ಎಂದು ಕಣ್ಣೀರು ಹಾಕುತ್ತಾರೆ.
ತಾಲೂಕಿನ ಹ್ಯಾಂಡ್ ಪೋಸ್ಟ್ ಸಮೀಪವಿರುವ ಚೆನ್ನೇಗೌಡನಹುಂಡಿ ಗ್ರಾಮದಲ್ಲೂ ಬೆಳೆಹಾನಿಯಾಗಿದೆ. ಎರಡೂವರೆ ಎಕರೆ ಜಮೀನಿನಲ್ಲಿ ಬೆಳೆದಿದ್ದ ಬಾಳೆ ನಾಶವಾಗಿದ್ದು, ರೈತ ಪ್ರಕಾಶ್ ಗೆ ದಿಕ್ಕೆತೋಚದಾಗಿದೆ. ದಯವಿಟ್ಟು ಸರ್ಕಾರ ಅನ್ನದಾತರ ನೆರವಿಗೆ ಬರಬೇಕು. ಪರಿಹಾರ ಹ್ ಅನಾ ಹೆಚ್ಚಳ ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯ ಮಾಡುತ್ತಾರೆ.

