ನೋಟಿಸ್ ನೀಡದೆ ಕಾಲುವೆ ಕಾಮಗಾರಿ | ರೈತ ಸಂಘದ ನೇತೃತ್ವದಲ್ಲಿ ಸಂಕನಾಳ ಭಾಗದ ರೈತರಿಂದ ಪ್ರತಿಭಟನೆ
ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಸಂಕನಾಳ ಶಾಖಾ ಕಾಲುವೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡ ಜಮೀನಿನ ರೈತರಿಗೆ ೧೧(೧) ನೋಟಿಸ್ ನೀಡಿ ಕಾಮಗಾರಿ ಆರಂಭಿಸಬೇಕು ಎಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಸಂಕನಾಳ ಭಾಗದ ರೈತರು ಸೋಮವಾರ ಆಲಮಟ್ಟಿಯಲ್ಲಿ ಪ್ರತಿಭಟನೆ ನಡೆಸಿದರು.
ರಾಮಲಿಂಗೇಶ್ವರ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಹೊರಟ ರೈತರು ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಗೆ ತೆರಳಿ ಎಸ್ಎಲ್ಒ ಎಂ.ಬಿ. ನಾಗಠಾಣ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಉಮೇಶ ವಾಲೀಕಾರ, “ಮುಳವಾಡ ಏತ ನೀರಾವರಿ ಯೋಜನೆಗೆ ಸಂಬಂಧಿಸಿದ ಸಂಕನಾಳ ಶಾಖಾ ಕಾಲುವೆ ನರಸಲಗಿ, ಅಗಸಬಾಳ, ಸಂಕನಾಳ, ಕಣಕಾಲ, ಸೋಲವಾಡಗಿ, ಕನ್ನಾಳ, ವಡವಡ, ಗಿಜಾಯವಾಡಗಿ ಗ್ರಾಮಗಳ ವ್ಯಾಪ್ತಿಯಲ್ಲಿ ಹಾದು ಹೋಗಿದೆ. ಈ ಮೊದಲು ಸಂಕನಾಳದವರೆಗೆ ಕಾಲುವೆ ಕಾಮಗಾರಿ ಮುಗಿದಿದೆ. ಆದರೆ ಕನ್ನಾಳ ಗ್ರಾಮದವರೆಗೆ ಇನ್ನೂ ವಿತರಣಾ ಕಾಲುವೆ ಕಾಮಗಾರಿ ಬಾಕಿ ಉಳಿದಿದೆ” ಎಂದರು.
“ಈ ಹಿಂದೆ ಬಾಕಿ ಉಳಿದ ಕಾಮಗಾರಿ ಪೂರ್ಣಗೊಳಿಸಲು ಹೋರಾಟ ನಡೆಸಿದ್ದೆವು. ಹೋರಾಟದ ಫಲವಾಗಿ ಇಲಾಖೆ ಎಚ್ಚೆತ್ತುಕೊಂಡು ಉಳಿದ ಕಾಮಗಾರಿಗೆ ಚಾಲನೆ ನೀಡಿತ್ತು. ಆದರೆ ಭೂಮಿ ಕಳೆದುಕೊಳ್ಳುವ ರೈತರಿಗೆ ನೋಟಿಸ್ ನೀಡದೆ ಕಾಮಗಾರಿ ಆರಂಭಿಸಿದ್ದರಿAದ ರೈತರು ತಡೆ ಒಡ್ಡಿದ್ದಾರೆ. ಇದರಿಂದ ಕಾಮಗಾರಿ ಸ್ಥಗಿತಗೊಂಡಿದೆ” ಎಂದು ತಿಳಿಸಿದರು.
“ಬೇಸಿಗೆಯ ತಾಪ ಹೆಚ್ಚಿರುವುದರಿಂದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ೪-೫ ಕಿ.ಮೀ ದೂರ ಹೋಗಿ ನೀರು ತರುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ರೈತರಿಗೆ ಕೂಡಲೇ ನೋಟಿಸ್ ನೀಡಿ ಬಾಕಿ ಉಳಿದ ಕಾಮಗಾರಿಯನ್ನು ಪ್ರಾರಂಭಿಸಬೇಕು” ಎಂದು ಆಗ್ರಹಿಸಿದರು.
“ಶೀಘ್ರದಲ್ಲಿ ನೋಟಿಸ್ ನೀಡಿ ಕಾಮಗಾರಿಗೆ ಚಾಲನೆ ನೀಡದಿದ್ದರೆ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಪ್ರಾರಂಭಿಸಲಾಗುವುದು” ಎಂದು ಉಮೇಶ ವಾಲೀಕಾರ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಪ್ರಲ್ಹಾದ ನಾಗರಾಳ, ಸಾಯಬಣ್ಣ ಅಂಗಡಿ, ಇಬ್ರಾಹಿಂ ವಾಲೀಕಾರ, ಮಲ್ಲಪ್ಪ ಹಳೆನಿಡಗುಂದಿ, ಬಸಪ್ಪ ತೋಳಮಟ್ಟಿ, ಶ್ರೀಶೈಲ ಕಲಾದಗಿ, ಗುರಪ್ಪ ಪೂಜಾರಿ, ಸಂದೀಪ ನಾಗರಡ್ಡಿ, ಸೋಮೇಶ ನಾಗರಡ್ಡಿ, ಮುದಕಪ್ಪ ಮೇಟಿ, ಮಂಜು ಬಿರಾದಾರ, ಅಶೋಕ ಹಡಪದ, ಎಮನೂರಪ್ಪ ಸರೂರ, ಸಂಗು ಮೇಟಿ, ಹಣಮಂತ ವಾಲೀಕಾರ, ಪರಶೂರಾಮ ಮುತ್ತಗಿ, ಪ್ರಕಾಶ ವಾಲೀಕಾರ, ಶಿವಪ್ಪ ಚಲುವಾದಿ, ಸಂಗಪ್ಪ ಹುನಗುಂದ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

