ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ರಾಜಕೀಯ ಜೀವನದಲ್ಲಿ 50 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಹಿನ್ನಲೆಯಲ್ಲಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಗೌರವಾರ್ಥವಾಗಿ ಮೇ 9 ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಯಡಿಯೂರಪ್ಪ ಅಭಿಮಾನೋತ್ಸವಕ್ಕೆ ವಿಜಯಪುರ ಜಿಲ್ಲೆ ಹಾಗೂ ಬಸವನಬಾಗೇವಾಡಿ ಮಂಡಲದಿಂದ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕಾರ್ಯಕರ್ತರು ಅಭಿಮಾನಿಗಳು ಪಕ್ಷಾತೀತವಾಗಿ ಪಾಲ್ಗೊಳ್ಳುವಂತೆ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರ ದೀರ್ಘ ರಾಜಕೀಯ ಪಯಣ ರಾಜ್ಯ ರಾಜಕೀಯದಲ್ಲಿ ಮಹತ್ವದ ಮೈಲುಗಲ್ಲಾಗಿದ್ದು, ರೈತರು, ಬಡವರು ಹಾಗೂ ಹಿಂದುಳಿದ ವರ್ಗಗಳ ಪರವಾಗಿ ಅವರು ನೀಡಿದ ಕೊಡುಗೆ ಅಪಾರವಾಗಿದೆ.
ರೈತಪರ ನೀತಿಗಳು, ಗ್ರಾಮೀಣಾಭಿವೃದ್ಧಿಗೆ ನೀಡಿದ ಕೊಡುಗೆಗಳು ಹಾಗೂ ಸಾಮಾನ್ಯ ಜನರೊಂದಿಗೆ ಹೊಂದಿರುವ ನಂಟು ಯಡಿಯೂರಪ್ಪರನ್ನು ಜನಪ್ರಿಯ ನಾಯಕರನ್ನಾಗಿ ಮಾಡಿವೆ ಎಂದು ಹೇಳಿದರು.
ವಿಜಯಪುರ ಜಿಲ್ಲೆ ಹಾಗೂ ಬಸವನಬಾಗೇವಾಡಿ ಮತಕ್ಷೇತ್ರಕ್ಕೆ ಅವರು ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಇಂತಹ ಮಹತ್ವದ ಕ್ಷಣವನ್ನು ಆಚರಿಸುವ ಅಭಿಮಾನೋತ್ಸವಕ್ಕೆ ವಿಜಯಪುರ ಜಿಲ್ಲೆ ಹಾಗೂ ಬಸವನಬಾಗೇವಾಡಿ ಮತಕ್ಷೇತ್ರದ ಪ್ರತಿ ಗ್ರಾಮದಿಂದ ಕಾರ್ಯಕರ್ತರು, ಪಕ್ಷದ ಎಲ್ಲಾ ಹಂತದ ಪದಾಧಿಕಾರಿಗಳು, ಯುವಕರು, ಮಹಿಳೆಯರು ಹಾಗೂ ಅಭಿಮಾನಿಗಳು ಪಕ್ಷಾತೀತವಾಗಿ ಶಿಸ್ತಿನಿಂದ ಹಾಗೂ ಉತ್ಸಾಹದಿಂದ ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಬಸವನ ಬಾಗೇವಾಡಿ ಮಂಡಲ ಅಧ್ಯಕ್ಷ ಸಿದ್ದರಾಮ ಕಾಖಂಡಕಿ, ಚಿನ್ನಪ್ಪ ಗಿಡ್ಡಪ್ಪಗೋಳ, ಸಂಗಮೇಶ ಅವಟಿ, ಪರಮಾನಂದ ತನಿಕೆದಾರ, ಮಲ್ಲಿಕಾರ್ಜುನ ದೇವರಮನಿ, ಟಿ.ಟಿ. ಹಗೇದಾಳ, ಇಸ್ಮಾಯಿಲಸಾಬ ತಹಶೀಲ್ದಾರ, ಶರಣು ಮುರನಾಳ, ಜಗದೀಶ ಸುಣಗದ ಇದ್ದರು.

