ಸಮಾಜದ ಮುಖಂಡರು ಒಟ್ಟಾಗಿ ಹೋರಾಡಲು ನಿರ್ಧಾರ | ಶಾಸಕ ಅನಿಲ್ ಚಿಕ್ಕಮಾದು ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ಹೆಚ್ ಡಿಕೋಟೆ: ಪರಿಶಿಷ್ಟ ಪಂಗಡ ಮೀಸಲಾತಿ ಶೇ.7ರಷ್ಟು ಇದ್ದಿದ್ದರೆ ಇವತ್ತು ಸರ್ಕಾರ ಭರ್ತಿ ಮಾಡಲು ಮುಂದಾಗಿರುವ 56,432 ಹುದ್ದೆಗಳ ನೇಮಕಾತಿಯಲ್ಲಿ ನಮ್ಮ ಸಮುದಾಯದ 15 ರಿಂದ 20 ಸಾವಿರ ಜನರಿಗೆ ಉದ್ಯೋಗ ಸಿಗುತ್ತಿತ್ತು. ಆದರೆ ಈ ಅವಕಾಶ ಮತ್ತೆ ಸಿಗುತ್ತೋ ಇಲ್ಲವೋ ಗೊತ್ತಿಲ್ಲ. ಮಳೆಗಾಲ ಅಧಿವೇಶನದೊಳಗೆ ಸಮಾಜದ ಮುಖಂಡರು , ಸಂಸದರು ಒಟ್ಟಾಗಿ, ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿ, ಮೀಸಲಾತಿ ಪ್ರಮಾಣ ಶೇ. 3 ರಿಂದ ಶೇ. 7 ಕ್ಕೆ ಹೆಚ್ಚಳ ಮಾಡುವಂತೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.
ಪಟ್ಟಣದ ಖಾಸಗಿ ಪಂಕ್ಷನ್ ಹಾಲ್ ನಲ್ಲಿ ನಡೆದ ಹೆಚ್ ಡಿ ಕೋಟೆ ಮತ್ತು ತಾಲೂಕು ಎಸ್ಟಿ ಸಮುದಾಯದ ನಾಯಕರ ಸಭೆಯಲ್ಲಿ ಮಾತನಾಡಿದ ಶಾಸಕ ಅನಿಲ್ ಚಿಕ್ಕಮಾದು , ಸಮಾಜದ ಮುಖಂಡರು ಸಭೆ ಕರೆದಾಗ, ಪಕ್ಷಾತೀತವಾಗಿ ಎಲ್ಲರೂ ಭಾಗಿಯಾಗಬೇಕು. ಸಮಾಜ ಒಗ್ಗೂಡಿದಾಗ ಮಾತ್ರ ಶಕ್ತಿ ಬರುತ್ತದೆ. ಇದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಪರಿಶಿಷ್ಟ ಪಂಗಡ ಮೀಸಲಾತಿ ಶೇ. 3 ರಿಂದ ಶೇ. 7 ಕ್ಕೆ ಹೆಚ್ಚಳವಾದಾಗ ಸಿಹಿ ಹಂಚಿ ಸಂಭ್ರಮಪಟ್ಟಿವಿ. ಆದರೆ ವ್ಯಕ್ತಿಯೊಬ್ಬರು ಮೀಸಲಾತಿ ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿ ತಡೆಯಾಜ್ಞೆ ತಂದಿರುವುದರಿಂದ ಮೀಸಲಾತಿಯಲ್ಲಿ ವಂಚಿತರಾಗಿದ್ದೇವೆ. ಜೂನ್- ಜುಲೈ ತಿಂಗಳಲ್ಲಿ ಮಳೆಗಾಲ ಅಧಿವೇಶನ ಆರಂಭವಾಗುತ್ತೆ. ಅಷ್ಟರೊಳಗೆ ಸಮಾಜದ ಮುಖಂಡರು, ಚುನಾಯಿತ ಪ್ರತಿನಿಧಿಗಳು ಒಟ್ಟಾಗಿ, ನಮ್ಮ ಸಮಾಜದ ಸಂಸದರ ಜೊತೆಗೂಡಿ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.
ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಮಾತನಾಡಿ, ನೀವು ಎಲ್ಲದರೂ ಇರಿ, ಯಾವ ಪಕ್ಶದಲ್ಲೇ ಇರಿ, ನಾನು ಇದೇ ಪಕ್ಷಕ್ಕೆ ಮತ ನೀಡಿ ಎಂದು ಹೇಳುವುದಿಲ್ಲ. ಯಾವುದೇ ಪಕ್ಷದಲ್ಲಿ ಗೆದ್ದರೂ, ಶಾಸಕರಾದರೂ ಸಮಾಜದ ಪರವಾಗಿ ಇರಿ, ಸಮಾಜದ ಹಿತಾಶಕ್ತಿಗೆ, ಸಮಾಜದ ಏಳಿಗೆಗಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಿ. ಎಸ್ಎಸ್ಎಲ್ಸಿ ಉತ್ತೀರ್ಣ ಆದ ತಕ್ಷಣ ನಮ್ಮ ಮಕ್ಕಳಿಗೆ ಕೆಲಸ ಕೊಡಿ ಎಂದು ಹೇಳಿದರೆ ಯಾರೂ ಕೆಲಸ ಕೊಡುವುದಿಲ್ಲ. ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಕೊಡಿಸಿ, ಅವಾಗ ಸಮಾಜ ಉದ್ದಾರ ಆಗುತ್ತೆ ಎಂದು ಹೇಳಿದರು.
ಜೆಡಿಎಸ್ ಯುವ ಮುಖಂಡ ಜಯಪ್ರಕಾಶ್ ಚಿಕ್ಕಣ್ಣ ಮಾತನಾಡಿ, ತಮ್ಮ ಹಕ್ಕುಗಳಿಗಾಗಿ ಇತರೆ ಸಮುದಾಯದವರು ಹೋರಾಟ ಮಾಡುವಂತೆ ನಮ್ಮ ಸಮುದಾಯ ಕೂಡ , ಯುವಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಬೇಕಾಗಿದೆ. ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಒತ್ತಾಯಿಸಿ ಶಾಸಕ ಅನಿಲ್ ಚಿಕ್ಕಮಾದು ಅವರು ಹೇಳಿದಂತೆ ಸರ್ಕಾರಕ್ಕೆ ಮನವಿ ಕೊಡುವುದರ ಜೊತೆಗೆ ಹೋರಾಟ ಕೂಡ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸಮಾಜದ ಮುಖಂಡರು ಚಿಂತಿಸಬೇಕಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಜೆಡಿಎಸ್ ಯುವ ಮುಖಂಡ ಜಯಪ್ರಕಾಶ್ ಚಿಕ್ಕಣ್ಣ, ಅಪ್ಪಣ್ಣ, ಮೈಸೂರು-ಚಾಮರಾಜನಗರ ಜಿಲ್ಲಾ ನಾಯಕ ಸಂಘದ ಅಧ್ಯಕ್ಷ ರಾಮಚಂದ್ರ, ಕಾರ್ಯದರ್ಶಿ ಕೆಂಪನಾಯಕ , ನಗರಸಭೆ ಸದಸ್ಯ ಸುರೇಶ, ಎಚ್.ಡಿ.ಕೋಟೆ ತಾಲೂಕು ನಾಯಕ ಸಂಘದ ಅಧ್ಯಕ್ಷ ಎಂ.ಸಿ.ದೊಡ್ಡನಾಯಕ, ಸರಗೂರು ತಾಲೂಕು ಅಧ್ಯಕ್ಷ ಪುರದಕಟ್ಟೆ ಬಸವರಾಜು, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕಂಡಕ್ಟರ್ ಶಿವಣ್ಣ, ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಕ್ಯಾತನಹಳ್ಳಿ ನಾಗರಾಜು, ಮುಖಂಡರಾದ ಚಾಕಹಳ್ಳಿ ಕೃಷ್ಣ, ಜಿನ್ನಹಳ್ಳಿ ರಾಜನಾಯಕ, ಜಿಯಾರ ನಾಗನಾಯಕ, ಹಲಸೂರು ಶಂಭುಲಿಂಗ ನಾಯಕ, ಚಿಕ್ಕನಾಯಕ, ಸರಗೂರು ರವಿಕುಮಾರ್, ಉಪನ್ಯಾಸಕ ಶಿವಪ್ಪ ಕೋಟೆ, ನಿವೃತ್ತ ಪೊಲೀಸ್ ಅಧಿಕಾರಿ ಬಸವನಾಯಕ, ವಕೀಲ ನಾಗೇಶ್, ಆಗತ್ತೂರು ಅಂಕನಾಯಕ, ಸಮಾಜಸೇವಕ ನಿಂಗರಾಜು ಸೇರಿದಂತೆ ಎರಡು ತಾಲೂಕಿನ ಸಮಾಜದ ಮುಖಂಡರು ಉಪಸ್ಥಿತರಿದ್ದರು.

