ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ರಾಣಿಚೆನ್ನಮ್ಮ ವಿಶ್ವವಿದ್ಯಾಲಯದ ವಿಜಯಪುರ ವಲಯದಲ್ಲಿ ೫೦ಕ್ಕೂ ಹೆಚ್ಚು ಪದವಿ ಕಾಲೇಜುಗಳಿದ್ದರೂ, ಕ್ರೀಡಾ ಸ್ಪರ್ಧೆಯಲ್ಲಿ ಕೇವಲ ೬ ತಂಡಗಳು ಮಾತ್ರ ಭಾಗವಹಿಸಿರುವುದು ವಿಷಾದನೀಯ ಸಂಗತಿ ಎಂದು ಕೃಷಿಕ ಸಮಾಜದ ತಾಲೂಕಾಧ್ಯಕ್ಷ, ಸಂಸ್ಥೆಯ ನಿರ್ದೇಶಕ ಶಿವಪ್ಪಗೌಡ ಬಿರಾದಾರ ಕಳವಳ ವ್ಯಕ್ತಪಡಿಸಿದರು.
ಸಿಂದಗಿ ನಗರದ ತಾ.ಶಿ.ಪ್ರಮಂಡಳಿಯ ಸಿ.ಎಂ. ಮನಗೂಳಿ ಪದವಿ ಮಹಾವಿದ್ಯಾಲಯ ಹಾಗೂ ರಾಣಿಚೆನ್ನಮ್ಮ ವಿಶ್ವವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ವಿಜಯಪುರ ದ್ವಿತೀಯ ವಲಯದ ವಾಲಿಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ವಿದ್ಯಾರ್ಥಿಗಳು ಕ್ರೀಡೆಗಳಿಗಿಂತ ಪಠ್ಯ ಚಟುವಟಿಕೆ ಮತ್ತು ತಂತ್ರಜ್ಞಾನಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇದರ ಪರಿಣಾಮವಾಗಿ ದೈಹಿಕ ಚಟುವಟಿಕೆಗಳು ಕಡಿಮೆಯಾಗುತ್ತಿದ್ದು, ಕ್ರೀಡಾ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ ಕುಂಠಿತವಾಗುತ್ತಿದೆ. ಹಾಗೆಯೇ, ಪೋಷಕರು ಹಾಗೂ ಶಿಕ್ಷಕರು ಕೂಡ ವಿದ್ಯಾರ್ಥಿಗಳನ್ನು ಕ್ರೀಡೆಗಳತ್ತ ಪ್ರೋತ್ಸಾಹಿಸುವ ಜವಾಬ್ದಾರಿ ಹೊಂದಿದ್ದಾರೆ. ಕೇವಲ ಅಂಕಗಳಿಗೆ ಮಾತ್ರ ಸೀಮಿತವಾಗದೆ, ಸರ್ವಾಂಗೀಣ ಅಭಿವೃದ್ಧಿಗೆ ಕ್ರೀಡೆಗಳೂ ಮಹತ್ವದ್ದೆಂಬ ಅರಿವು ಮೂಡಿಸುವ ಅಗತ್ಯವಿದೆ ಎಂದರು.
ಈ ವೇಳೆ ಯೋಜನಾ ಪ್ರಾಧಿಕಾರ ಅಧ್ಯಕ್ಷ ಹಣಮಂತ ಸುಣಗಾರ ಮಾತನಾಡಿ, ಕ್ರೀಡೆಗಳು ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಅತ್ಯಂತ ಅಗತ್ಯ. ಕ್ರೀಡೆಯಿಂದ ನಾಯಕತ್ವ ಗುಣ ಮತ್ತು ಮೌಲ್ಯಗಳು ಬೆಳೆಯುತ್ತವೆ. ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಪತ್ರಕರ್ತ ಶಾಂತು ಹಿರೇಮಠ, ಆಲಮೇಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಾದಿಕ ಸುಂಬಡ, ಎಚ್.ಎಂ.ಉತ್ನಾಳ ಮಾತನಾಡಿದರು.
ಕಾಲೇಜಿನ ಪ್ರಾಚಾರ್ಯ ಎಸ್.ಎಂ.ಬಿರಾದಾರ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ರವಿ ಗೋಲಾ, ಉಪನ್ಯಾಸಕರಾದ ರಮೇಶ ಯಂಕಂಚಿಕರ, ಎಸ್.ಎ.ಜಾಗೀರದಾರ್, ಎಂ.ಎಂ.ಕೆಂಭಾವಿ, ಕೆ.ಎಚ್.ಸೋಮಾಪೂರ ಹಾಗೂ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇನ್ನಿತರರು ಇದ್ದರು.
ಕಾರ್ಯಕ್ರಮದ ಕ್ರೀಡಾಕೂಟದ ಸಂಘಟನಾ ಕಾರ್ಯಾದರ್ಶಿ ಡಾ.ಅಂಬರೀಶ ಬಿರಾದಾರ ಸ್ವಾಗತಿಸಿದರು. ರಾಹುಲ ಕಾಂಬಳೆ ನಿರೂಪಿಸಿದರು. ಸತೀಶ ಬಿರಾದಾರ ವಂದಿಸಿದರು.
ಪ್ರಶಸ್ತಿ ವಿತರಣಾ ಸಮಾರಂಭ
ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ೩ ತಂಡಗಳಿಗೆ ಸಂಸ್ಥೆಯ ನಿರ್ದೇಶಕ ಭೀಮಾಶಂಕರ ನೆಲ್ಲಗಿ, ಪ್ರಥಮ ದರ್ಜೆ ಗುತ್ತಿಗೆದಾರ ಮುತ್ತು ಮುಂಡೇವಾಡಗಿ ಕ್ರೀಡಾಪಟುಗಳಿಗೆ ಟ್ರೋಫಿ ಮತ್ತು ಬಹುಮಾನವನ್ನು ವಿತರಿಸಿದರು.
ಪ್ರಥಮ ಸ್ಥಾನವನ್ನು ತಾಳಿಕೋಟಿಯ ಎಚ್.ಎಸ್.ಪಾಟೀಲ ದೈಹಿಕ ಶಿಕ್ಷಣ ಮಹಾವಿದ್ಯಾಲಯ, ದ್ವಿತೀಯ ಸ್ಥಾನವನ್ನು ಸಿಂದಗಿಯ ಸಿ.ಎಂ.ಮನಗೂಳಿ ಪದವಿ ಮಹಾವಿದ್ಯಾಲಯ, ತೃತೀಯ ಸ್ಥಾನ ಜೆ.ಎಚ್.ಪಟೇಲ್ ಶಿಕ್ಷಣ ಮಹಾವಿದ್ಯಾಲಯವು ಗಿಟ್ಟಿಸಿಕೊಂಡಿತು. ಸಂತೋಷ ಬಳಗೊಂಡ ಉತ್ತಮ ಹೊಡೆತಗಾರ, ಉಮಾಕಾಂತ ಚವ್ಹಾಣ ಉತ್ತಮ ತೂರುಗಾರ, ಅಮೀತ ಕನವಳ್ಳಿ ಸರ್ವಾಂಗೀಣ ಆಟಗಾರ, ಸತೀಶ ಹೂನಳ್ಳಿ ಉತ್ತಮ ಲಿಬ್ರೋ ಪ್ರದರ್ಶಿಸಿ ಪಾರಿತೋಷಕ ಪಡೆದುಕೊಂಡರು. ವಿದ್ಯಾರ್ಥಿಗಳ ಉತ್ಸಾಹ ಹಾಗೂ ಕ್ರೀಡಾಸ್ಪೂರ್ತಿ ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿತು.
ಈ ವೇಳೆ ಕಾಲೇಜಿನ ಪ್ರಾಚಾರ್ಯ ಎಸ್.ಎಂ.ಬಿರಾದಾರ, ಎ.ಆರ್.ಹೆಗ್ಗನದೊಡ್ಡಿ, ಉಪನ್ಯಾಸಕರಾದ ರಾಹುಲ ಕಾಂಬಳೆ, ಎಸ್.ಕೆ.ಹೂಗಾರ, ಎಸ್.ಎ.ಜಾಗೀರದಾರ್, ಕೆ.ಎಚ್.ಸೋಮಾಪೂರ, ಗವಿಸಿದ್ದಪ್ಪ ಆನೆಗುಂದಿ ಬಿ.ಡಿ.ಮಾಸ್ತಿ ಇದ್ದರು.

