ಉದಯರಶ್ಮಿ ದಿನಪತ್ರಿಕೆ
ಇಂಡಿ: ನಗರದ ಮಿನಿ ವಿಧಾನಸೌಧದಲ್ಲಿರುವ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಲಿವೆ. ಸಾರ್ವಜನಿಕರು ಉಪನೋಂದಣಾಧಿಕಾರಿಗಳ ಕಾರ್ಯಾಲಯದಲ್ಲಿ ನೇರವಾಗಿ ಹೋಗಿ ಕಾರ್ಯ ಮಾಡಿಕೊಳ್ಳಬೇಕೆಂದರೆ ಸಾಧ್ಯವಾಗದ ದುಸ್ಥಿತಿ ನಿರ್ಮಾಣವಾಗಿದ್ದು ಏಜೆಂಟರ ಮೂಲಕವೇ ಹೋಗಿ ಕೆಲಸ ಮಾಡಿಕೊಳ್ಳಬೇಕಾಗಿದೆ.
ನೇರವಾಗಿ ಹೋದರೆ ನೀರಾವರಿ ವ್ಯಾಲ್ಯೂವೇಶನ್ ಹಾಕಿ ಹೆಚ್ಚಿನ ಚಲನ್ ಕಟ್ಟಲು ತಿಳಿಸುತ್ತಾರೆ. ಅದೇ ಏಜೆಂಟರ ಮುಖಾಂತರ ಹೋದರೆ ಒಣ ಬೇಸಾಯದ ವ್ಯಾಲ್ಯೂವೇಶನ್ ಮಾಡಿ ಚಲನ್ ತೆಗೆಸುತ್ತಾರೆ.
ಸರಕಾರಕ್ಕೆ ಕಡಿಮೆ ಹಣ:
ನೀರಾವರಿ ಜಮೀನನ್ನು ಒಣ ಬೇಸಾಯದ ವ್ಯಾಲ್ಯೂವೇಶನ್ನಲ್ಲಿ ಖರೀದಿ ಮಾಡಿಕೊಟ್ಟರೆ ಪ್ರತಿಶತ ೫೦ ರಷ್ಟು ಹಣ ಕಡಿಮೆಯಾಗುತ್ತದೆ. ಉದಾಹರಣೆಗೆ ನೀರಾವರಿಗೆ ೬೦ ಸಾವಿರ ರೂಪಾಯಿ ವ್ಯಾಲ್ಯೂವೇಶನ್ ಆದರೆ ಒಣಬೇಸಾಯಕ್ಕೆ ೩೦ ಸಾವರಿ ವ್ಯಾಲ್ಯೂವೇಶನ್ ಆಗುತ್ತದೆ. ಇದರಿಂದಾಗಿ ಸರಕಾರದ ಖಜಾನೆಗೆ ಅರ್ಧದಷ್ಟೇ ಹಣ ಜಮಾ ಮಾಡಲಾಗುತ್ತದೆ. ರೈತರಿಂದ ಅಥವಾ ಸಾರ್ವಜನಿಕರಿಂದ ಪಡೆದ ಹೆಚ್ಚಿನ ಹಣ ನೇರವಾಗಿ ಉಪನೋಂದಣಾಧಿಕಾರಿಗಳ ಖಜಾನೆಗೆ ಸೇರುತ್ತದೆ.
ಇದಕ್ಕೆ ಪುಷ್ಠಿ ಎಂಬಂತೆ ಪಡನೂರ ಗ್ರಾಮದ ಸರ್ವೇ ನಂಬರ ೧೭೧೧ ೩-೦೦ ಎಕರೆ ಜಮೀನು ಖರೀದಿ ಮಾಡಲಾಗಿದ್ದು ಪಹಣಿಯಲ್ಲಿ ಸ್ಪಷ್ಟವಾಗಿ ನೀರಾವರಿಯ ಮೂಲ ಬಾವಿ/ ಕೊಳವೆಭಾವಿ ಎಂದು ಉಲ್ಲೇಖಿಸಲಾಗಿದೆ ಆದರೂ ಆ ಖರೀದಿಗೆ ಒಣ ಬೇಸಾಯದ ವ್ಯಾಲ್ಯೂವೇಶನ್ ಮಾಡಿ ಕಡಿಮೆ ಚಲನ್ ತೆಗೆಸಲಾಗಿದೆ. ಅಲ್ಲದೆ ಇಂಡಿ ತಾಲೂಕಿನ ನಾಗರಹಳ್ಳಿ ಗ್ರಾಮದ ಸರ್ವೇ ೧೩/* ೧೧-೧೧ ಜಮೀನಿನ ಪಹಣಿಯಲ್ಲಿ ಕೊಳವೆ ಬಾವಿ ಎಂದು ನಮೂದಾಗಿದೆ. ಅದನ್ನೂ ಸಹ ಒಣ ನೀರಾವರಿ ಚಲನೆ ತೆಗೆಸಿ ಖರೀದಿ ಮಾಡಿ ಕೊಡಲಾಗಿದೆ ಹೀಗೆ ಒಂದಲ್ಲ ಎರಡಲ್ಲ ಸಾವಿರಾರು ಇಂತಹ ಪ್ರಕರಣಗಳಿವೆ. ಕೂಡಲೆ ಸಂಬಂಧಿಸಿದ ಮೇಲಾಧಿಕಾರಿಗಳು ಈ ಕುರಿತು ಪರಿಶೀಲಿಸಿ ಉಪನೋಂದಣಾಧಿಕಾರಿ ಅಂಜಲಿ ಸಿ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

“ನಗರದ ಉಪ ನೋಂದಣಾಧಿಕಾರಿಗಳ ಕಾರ್ಯಾಲಯದ ಅಧಿಕಾರಿಗಳು ಏಜೆಂಟರ ಮೂಲಕ ಕೆಲ ಮಾಡಿಸಿ ಲಂಚ ಪಡೆಯುತ್ತಿದ್ದಾರೆ. ನೀರಾವರಿ ಜಮೀನುಗಳಿಗೆ ಒಣ ಬೇಸಾಯದ ಚಲನ್ ತೆಗೆಸಿ ಸರಕಾರದ ಬೊಕ್ಕಸಕ್ಕೆ ಹಾನಿ ಮಾಡಿ ತಮ್ಮ ಖಜಾನೆ ತುಂಬಿಕೊಳ್ಳುತ್ತಿದ್ದಾರೆ. ಕೂಡಲೆ ಅವರನ್ನು ಅಮಾನತ್ತು ಮಾಡಬೇಕು.”
– ಬಾಳು ಮುಳಜಿ
ಕರವೇ ತಾಲೂಕಾ ಅಧ್ಯಕ್ಷ.
“ನೀರಾವರಿ ಬಿಟ್ಟು ಒಣ ಬೇಸಾಯ ವ್ಯಾಲ್ಯೂವೇಶನ್ ಚಲನ್ ತೆಗೆದು ಖರೀದಿ ಮಾಡಿದ್ದು ನನ್ನ ಗಮನಕ್ಕಿಲ್ಲ. ಅಂತಹವುಗಳಿದ್ದರೆ ತಿಳಿಸಿ ನೀರಾವರಿ ವ್ಯಾಲ್ಯೂವೇಶನ್ ಪ್ರಕಾರವೇ ಹಣ ಕಟ್ಟಿಸೋಣ.”
– ಅಂಜಲಿ ಸಿ
ಉಪನೋಂದಣಾಧಿಕಾರಿ ಇಂಡಿ.
“ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅಧಿಕಾರಿ ಯಾರಿಗೂ ಕಿಮ್ಮತ್ತು ಕೊಡದೇ ಏಕವಚನದಲ್ಲಿ ಮಾತನಾಡುತ್ತಾರೆ. ಏಜೆಂಟರ ಹಾವಳಿ ಹೆಚ್ಚಾಗಿದೆ. ಅವರ ಮೇಲೆ ಸೂಕ್ರ ಕ್ರಮ ಕೈಗೊಳ್ಳಬೇಕು.”
– ಚಂದ್ರು ಹೊಸಮನಿ
ಅಧ್ಯಕ್ಷರು ದಲಿತ ಸಂಘರ್ಷ ಸಮಿತಿ
“ಸಬ್ ರಜಿಸ್ಟರ್ ಕಚೇರಿಯಲ್ಲಿ ಹೆಚ್ಚಿನ ದುಡ್ಡು ಕೊಡದೇ ಹೋದರೆ ಕೆಲಸವೇ ಆಗಲ್ಲ. ಅಲ್ಲಿನ ಅಧಿಕಾರಿ ಸಿಬ್ಬಂದಿಗಳ ವರ್ತನೆ ಬೇಸರ ತರಿಸಿದೆ. ಕಚೇರಿಯಲ್ಲಿ ಸಂಬಂಧ ಇಲ್ಲದವರೂ ಕೆಲಸ ಮಾಡುತ್ತಾರೆ. ಏಜೆಂಟರ ಮುಖಾಂತರ ಹೋದರಷ್ಟೇ ಕೆಲಸವಾಗುತ್ತದೆ. ಈ ಅಧಿಕಾರಿಯನ್ನು ಕೂಡಲೆ ಅಮಾನತ್ತು ಮಾಡಬೇಕು.”
– ಸಿದ್ದಪ್ಪ ತಳವಾರ
ರೈತ ಸಂಘ ಮತ್ತು ಹಸಿರು ಸೇನೆ ತಾಲೂಕಾ ಅಧ್ಯಕ್ಷರು

