ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪಶ್ಚಿಮ ಬಂಗಾಳ, ಆಸ್ಸಾಂ, ಪಾಂಡೇಚೇರಿಯಲ್ಲಿ ಭಾರತೀಯ ಜನತಾ ಪಕ್ಷ ಭರ್ಜರಿ ಗೆಲುವಿನ ನಗೆ ಬೀರಿರುವ ಹಿನ್ನೆಲೆಯಲ್ಲಿ ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.
ವಿಜಯಪುರ ಗಾಂಧಿವೃತ್ತದ ಎದುರು ಜಮಾಯಿಸಿದ ನೂರಾರು ಕಾರ್ಯಕರ್ತರು ಪಟಾಕಿ ಸಿಡಿಸಿ ಪರಸ್ಪರ ಸಿಹಿ ತಿನಿಸಿ ಬಿಜೆಪಿ ಪಕ್ಷದ ಪರವಾಗಿ ಜಯ ಘೋಷಗಳನ್ನು ಮೊಳಗಿಸಿ ಸಂಭ್ರಮಿಸಿದರು.
ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಪಶ್ಚಿಮ ಬಂಗಾಳ, ಪುದಚೇರಿ, ಆಸ್ಸಾಂನಲ್ಲಿ ಭರ್ಜರಿ ಗೆಲುವನ್ನು ಬಿಜೆಪಿ ದಾಖಲಿಸಿದೆ, ಜನತೆ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅಪಾರ ಒಲವು ಹೊಂದಿದ್ದಾರೆ ಎಂಬುದಕ್ಕೆ ಸಾಕ್ಷಿ, ಅನೇಕ ವರುಷಗಳಿಂದ ಅಧಿಕಾರದಲ್ಲಿದ್ದ ತೃಣಮೂಲ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅರಳಿದೆ, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಹಾಗೂ ಮಮತಾ ಬ್ಯಾನರ್ಜಿ ಅವರ ಕಾರ್ಯವೈಖರಿಯಿಂದ ಬೇಸತ್ತಿದ್ದ ಬಂಗಾಳದ ಜನತೆ ನಿರೀಕ್ಷೆಯಂತೆ ಬಿಜೆಪಿಗೆ ಬೆಂಬಲಿಸಿದ್ದಾರೆ, ಈಗ ಅಲ್ಲಿ ಅಭಿವೃದ್ಧಿ ಪರ್ವ ಆರಂಭಾಗಲಿದೆ ಎಂದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಮಮತಾ ಬ್ಯಾನರ್ಜಿ ಅಕ್ರಮ ಬಾಂಗ್ಲಾ ನಿವಾಸಿಗಳನ್ನು ಪೋಷಿಸಿದರು, ಆದರೆ ಅಲ್ಲಿನ ಮತದಾರರು ತಕ್ಕ ಪಾಠ ಕಲಿಸಿದ್ದಾರೆ, ದರ್ಪದಿಂದ ಮೆರೆಯುತ್ತಿದ್ದ ಮಮತಾ ಬ್ಯಾನರ್ಜಿ ಅವರಿಗೆ ಸೋಲಿನ ರುಚಿ ತೋರಿಸಿದ್ದಾರೆ, ಪ್ರಧಾನಿ ನರೇಂದ್ರ ಮೋದಿಜಿ ಅವರ ಆಡಳಿತ ಅವಧಿಯಲ್ಲಿ ಆಗುತ್ತಿರುವ ಅಭಿವೃದ್ಧಿ ಯೋಜನೆಗಳಿಂದಾಗಿಯೇ ಜನತೆ ಬಿಜೆಪಿ ಜೊತೆ ನಿಂತಿದ್ದಾರೆ, ಅಭಿವೃದ್ಧಿಗೆ ಮತ ನೀಡಿದ್ದಾರೆ, ಇನ್ನೂ ಕಾಂಗ್ರೆಸ್ ಪಕ್ಷ ಎಲ್ಲಿಯೂ ಅಸ್ವಿತ್ವವನ್ನೇ ಕಾಪಾಡಿಕೊಳ್ಳದೇ ಅಸ್ಥಿರತೆಯಿಂದ ನಲಗುವಂತಾಗಿದೆ, ದೇಶ ವಿರೋಧಿ ಕಾಂಗ್ರೆಸ್ ಪಕ್ಷಕ್ಕೆ ಜನತೆ ತಕ್ಕ ಪಾಠ ಕಲಿಸಿದ್ದಾರೆ ಎಂದರು.
ಬಿಜೆಪಿ ಮುಖಂಡ
ವಿಜುಗೌಡ ಪಾಟೀಲ ಮಾತನಾಡಿ, ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ, ಪ್ರತಿಪಕ್ಷಗಳು ಬಿಜೆಪಿಯ ಬಗ್ಗೆ ಸಾಕಷ್ಟು ಅಪ ಪ್ರಚಾರ ಮಾಡಿದರೂ ಸಹ ಜನತೆ ಅದಕ್ಕೆ ಸೊಪ್ಪು ಹಾಕದೇ ಪ್ರಧಾನಿ ಮೋದಿಜಿ ಉತ್ತಮ ಆಡಳಿತ ಕಾರಣದಿಂದಾಗಿ ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸಿ ಜನಾದೇಶ ನೀಡಿದ್ದಾರೆ, ಈ ಗೆಲುವು ಕಾರ್ಯಕರ್ತರಲ್ಲಿ ಸಂತಸ ತರಿಸಿದೆ ಎಂದರು.
ಪಾಲಿಕೆ ಸದಸ್ಯೆ ಹಾಗೂ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸ್ವಪ್ನಾ ಕಣಮುಚನಾಳ ಮಾತನಾಡಿ,
ಮಹಿಳಾ ಮೀಸಲಾತಿ ವಿರೋಧಿಸಿ ಮಹಿಳಾ ರಾಜಕೀಯ ಪ್ರಾತಿನಿಧ್ಯದ ವಿರುದ್ದವಾಗಿ ನಡೆದುಕೊಂಡ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳಿಗೆ ಮಹಿಳೆಯರು ತಕ್ಕ ಶಾಸ್ತಿ ಮಾಡಿದ್ದಾರೆ, ಮತ್ತೊಮ್ಮೆ ಪ್ರಧಾನಿ ಮೋದಿಜಿ ಅವರ ಪರಿಶುದ್ಧ ಆಡಳಿತ ಮೆಚ್ಚಿ ಬಿಜೆಪಿಗೆ ಬೆಂಬಲಿಸಿದ್ದಾರೆ ಎಂದರು.
ಡಾ. ಸುರೇಶ ಬಿರಾದಾರ, ಮಳುಗೌಡ ಪಾಟೀಲ, ಈರಣ್ಣ ರಾವೂರ, ಉಮೇಶ್ ಕೊಳಕರ್ ಶಿಲ್ಪಾ ಕುದುರಗೊಂಡ, ಸಂದೀಪ ಪಾಟೀಲ, ಭೀಮಾಶಂಕರ ಹದನೂರ, ಕೃಷ್ಣಾ ಗುನ್ಹಾಳಕರ, ರಾಜು ಮಗಿಮಠ, ಭರತ ಕೋಳಿ, ವಿಜಯ ಜೋಶಿ, ಪಾಪುಸಿಂಗ ರಜಪೂತ, ರಾಜೇಶ ತಾವಸೆ, ಭೀಮಸಿಂಗ್ ರಾಥೋಡ, ಶರಣಬಸಪ್ಪ ಕುಂಬಾರ, ಸಂತೋಷ ಹಲವಾಯಿ, ಅಪ್ಪು ಕುಂಬಾರ, ರಾಜು ಬಿರಾದಾರ, ಜಗದೀಶ ಮುಚ್ಚಂಡಿ, ಸಂತೋಷ ಯಂಕಪ್ಪಗೂಳ, ಪ್ರಹ್ಲಾದ ಕಾಂಬಳೆ, ವಿವೇಕ ತಾವರಗೇರಿ, ಶಿವರಾಜ ಮಡಿವಾಳ, ಮಂಥನ ಗಾಯಕವಾಡ , ಭಾರತಿ ಭುಯ್ಯಾರ, ಶಾಂತಾ ಉತ್ಲಾಸಕರ, ಶಾಂತಾ ಯಳಮೇಲಿ, ಶ್ರೀದೇವಿ ಅವಧಿ, ಬಸಮ್ಮಾ ಗುಜರಿ, ಪ್ರಿಯಾಂಕಾ ಶೇರಖಾನೆ ಪಾಲ್ಗೊಂಡಿದ್ದರು.

