ಗುಬ್ಬೇವಾಡ ಗ್ರಾಮದಲ್ಲಿ ನೂತನ ವಿದ್ಯುತ್ ವಿತರಣಾ ಕೇಂದ್ರಕ್ಕೆ ಚಾಲನೆ ನೀಡಿದ ಶಾಸಕ ಅಶೋಕ ಮನಗೂಳಿ ಆಶಯ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಮೂಲ ಸೌಕರ್ಯದಿಂದ ವಂಚಿತವಾದ ಗುಬ್ಬೇವಾಡ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸತತ ಎರಡು ವರ್ಷಗಳ ಪ್ರಯತ್ನದಿಂದ ನೂತನ ವಿದ್ಯುತ್ ಕೇಂದ್ರ ನಿರ್ಮಾಣ ಮಾಡಿದ್ದು ಸಂತಸ ತಂದಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಸಿಂದಗಿ ತಾಲೂಕಿನ ಗುಬ್ಬೇವಾಡ ಗ್ರಾಮದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ವತಿಯಿಂದ ಗುಬ್ಬೇವಾಡ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾದ ೧*೧೦ ಎಂ.ವ್ಹಿ.ಎ, ೧೧೦/೧೧ ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಚಾಲನೆ ಹಾಗೂ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಭಾಗದ ರೈತರ ಹೋರಾಟದ ಫಲವಾಗಿ ಇಂದು ಈ ನೂತನ ವಿದ್ಯುತ್ ಕೇಂದ್ರ ತಲೆ ಎತ್ತಿ ನಿಂತಿದೆ. ರೈತರಿಗೆ ಗುಣಮಟ್ಟದ ವಿದ್ಯುತ್ ವ್ಯವಸ್ಥೆ ನೀಡುವ ಮಹದಾಸೆಯನ್ನು ಹೊಂದಿದ್ದೇನೆ. ೫ ಗ್ಯಾರಂಟಿ ಯೋಜನೆಗಳನ್ನು ದಲ್ಲಾಳಿಗಳು ಇಲ್ಲದೇ ಜನರಿಗೆ ಸರಕಾರ ತಲುಪಿಸುತ್ತಿದೆ. ಸಮಸ್ಯೆಗೆ ಮೂಲ ಪರಿಹಾರಕ್ಕೆ ತಾಳ್ಮೆ ಮುಖ್ಯ. ಈ ವರ್ಷ ಕೊರಳ್ಳಿ ಗ್ರಾಮಕ್ಕೆ ಸರಕಾರಿ ಪಿಯು ಕಾಲೇಜು ನೀಡಿದ್ದಾರೆ. ಮುಂದಿನ ದಿನಮಾನಗಳಲ್ಲಿ ಗುಬ್ಬೇವಾಡ ಗ್ರಾಮಕ್ಕೂ ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಈಗಾಗಲೇ ಸಿಂದಗಿ-ಕಲಕೇರಿ ರಸ್ತೆಗೆ ಈಗಾಗಲೇ ರೂ.೬ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಈ ಭಾಗದ ಜನರಿಗೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದರು.
ಈ ವೇಳೆ ಬಾಗಲಕೋಟೆಯ ಕವಿಪ್ರನಿನಿ ಅದೀಕ್ಷಕ ಎಂಜನಿಯರ್ ರಮೇಶ ಪವಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಅಡಿವೇಶ್ವರ ಶ್ರೀಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಎಪಿಎಂಸಿ ನಿರ್ದೇಶಕ ಸದ್ದಾಂ ಪಟೇಲ, ರೈತ ಸಂಘದ ತಾಲೂಕಾಧ್ಯಕ್ಷ ಧರ್ಮಣ್ಣ ಗಬಸಾವಳಗಿ, ದೇವರಾಜ ನರಗೋದಿ, ಮುತ್ತುಗೌಡ ಪಾಟೀಲ ಮಾತನಾಡಿದರು.
ಈ ವೇಳೆ ವಿಜಯಪುರದ ಕವಿಪ್ರನಿನಿ ಯೋಜನಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಜಗದೀಶ ಜಾಧವ, ಕಾರ್ಯಾಚರಣೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ವಾಹೀದ ಜಹಾಗೀರರಾದ, ಹೆಸ್ಕಾಂ ಎಇಇ ಚಂದ್ರಕಾಂತ ನಾಯಕ, ರಮೇಶ ಪವಾರ, ಸಂತೋಷ ಸಾಲಿ, ಎಸ್.ವಾಯ್ ಕೊಂಡಗೂಳಿ, ಬಸವರಾಜ ಮಾರಲಭಾವಿ, ಹುಸೇನಿ ತಾಂಬೊಳ್ಳಿ, ರಮೇಶ ಸಾವಳಸಂಗ, ಪ್ರಕಾಶ ಗೋಲಗೇರಿ, ವಿದ್ಯುತ್ ವಿತರಣಾ ಕೇಂದ್ರಕ್ಕೆ ಭೂದಾನ ಮಾಡಿದ ಬೋರಮ್ಮ ತಳವಾರ, ರಮೇಶ ಗುಬ್ಬೇವಾಡ, ನಿಂಗಪ್ಪ ಭಾವಿಕಟ್ಟಿ, ರಮೇಶ ಇಜೇರಿ, ಸಿದ್ದು ಅಂಗಡಿ ಸೇರಿದಂತೆ ಗುಬ್ಬೇವಾಡ ಗ್ರಾಮದ ಹಿರಿಯರು, ಪಕ್ಷದ ಮುಖಂಡರು ಹಾಗೂ ಹೆಸ್ಕಾಂ ಹಾಗೂ ಕರ್ನಾಟಕ ಪ್ರಸರಣ ನಿಗಮದ ಅಧಿಕಾರಿಗಳು ಮತ್ತು ಇತರರು ಇದ್ದರು.
” ನಮ್ಮೂರಿಗೆ ಸರಕಾರಿ ಪಪೂ ಕಾಲೇಜು, ಪ್ರಾಥಮಿಕ ಆರೋಗ್ಯ ಕೇಂದ್ರ, ರಸ್ತೆ ಸುಧಾರಣೆ, ಸಾರ್ವಜನಿಕ ಶೌಚಾಲಯ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಶಾಸಕ ಅಶೋಕ ಮನಗೂಳಿ ಅವರು ಅತೀ ಶೀಘ್ರದಲ್ಲಿ ಮಂಜೂರು ಮಾಡಿಸಿ ಕೊಟ್ಟರೆ ನಮ್ಮ ಭಾಗದ ಜನರಿಗೆ ಅನುಕೂಲವಾಗುತ್ತದೆ.”
– ಬಾಪುಗೌಡ ಪಾಟೀಲ
ಗ್ರಾಮಸ್ಥರು, ಗುಬ್ಬೇವಾಡ
ವಿದ್ಯುತ್ ವಿತರಣಾ ಕೇಂದ್ರದಲ್ಲಿ ಸಿಡಿದ ಪಟಾಕಿಗಳು
ವಿದ್ಯುತ್ ವಿತರಣಾ ಕೇಂದ್ರದ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ಶಾಸಕ ಅಶೋಕ್ ಮನಗೂಳಿ ಅವರಿಗೆ ಗುಬ್ಬೆವಾಡ ಗ್ರಾಮದ ಅವರ ಕಾರ್ಯಕರ್ತರು ವಿದ್ಯುತ್ ವಿತರಣಾ ಘಟಕದಲ್ಲಿಯೇ ಪಟಾಕಿ ಸಿಡಿಸಿದ್ದಾರೆ.
ವಿದ್ಯುತ್ ವಿತರಣಾ ಘಟಕದಲ್ಲಿ ಅಗ್ನಿ ಅವಘಡವಾಗುವ ಸಾಧ್ಯತೆಗಳಿರುತ್ತವೆ. ಇಂತಹ ವಸ್ತುಗಳನ್ನು ಘಟಕದಲ್ಲಿ ತರುವಂತಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಕೆಲ ಗ್ರಾಮಸ್ಥರು ಸುಮಾರು ೫ ನಿಮಿಷಗಳ ಕಾಲ ಅಲ್ಲಿ ಪಟಾಕಿ ಸಿಡಿಸಿದರೂ ಅಧಿಕಾರಿಗಳು ತಡೆಯಲು ಮುಂದಾಗಲಿಲ್ಲ.

“ನೂತನ ೧೧೦/೧೧ ಕೆವ್ಹಿ ಕೇಂದ್ರ ನಿರ್ಮಾಣವಾಗುವುದರಿಂದ ಪಂಪ್ ಸೆಟ್ ಗಳು ಸುಟ್ಟು ಹೋಗದ ಹಾಗೆ ಆಗುತ್ತವೆ. ಹಗಲಿನಲ್ಲಿಯೇ ರೈತರಿಗೆ ಇನ್ನು ಮುಂದೆ ವಿದ್ಯುತ್ ಸರಬರಾಜು ಮಾಡಲಾಗುವುದು.”
– ಚಂದ್ರಕಾಂತ ನಾಯಕ
ಹೆಸ್ಕಾಂ ಎಇಇ, ಸಿಂದಗಿ

