ವಿಜಯಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಪಿ.ರಾಜೀವ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಚಿತ್ರದುರ್ಗದಲ್ಲಿ ನಡೆಯಲಿರುವ ಮೇ.೯ ರಂದು ನಡೆಯಲಿರುವ ಬಿ.ಎಸ್. ಯಡಿಯೂರಪ್ಪ ಅಭಿಮಾನೋತ್ಸವದಲ್ಲಿ ವಿಜಯಪುರ ಜಿಲ್ಲೆಯಿಂದ ೧೮ ರಿಂದ ೨೦ ಸಾವಿರ ಅಭಿಮಾನಿಗಳು ಭಾಗವಹಿಸಲಿದ್ದಾರೆ ಎಂದು ಮಾಜಿ ಶಾಸಕ ಪಿ. ರಾಜೀವ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವ ವಿಷಯಕ್ಕೆ ಹೋರಾಟ ಮಾಡಿದರೂ ಅಧಿಕಾರ ದೊರಕಿದಾಗ ಆ ಹೋರಾಟದ ಆಶಯಗಳನ್ನು ಈಡೇರಿಸುವ ಮೂಲಕ ಧೀಮಂತವಾಗಿ ಆಡಳಿತ ನಡೆಸಿದ ಮಹಾನ್ ನೇತಾರ ಬಿ.ಎಸ್. ಯಡಿಯೂರಪ್ಪ, ಅವರು ನಾಡು ಕಂಡ ಶ್ರೇಷ್ಠ ಹೋರಾಟಗಾರ, ಹೀಗಾಗಿ ಅವರನ್ನು ಹೃದಯಸ್ಪರ್ಶಿಯಾಗಿ ಅಭಿನಂದಿಸುವ ದೃಷ್ಟಿಯಿಂದ ಅಭಿಮಾನಿಗಳೆಲ್ಲರೂ ಸೇರಿ ಬಿ.ಎಸ್. ಯಡಿಯೂರಪ್ಪ ಅವರ ಅಭಿಮನೋತ್ಸವ ಹೆಸರಿನಲ್ಲಿ ಚಿತ್ರದುರ್ಗದಲ್ಲಿ ಅರ್ಥಪೂರ್ಣ ಕಾರ್ಯಕ್ರಮ ಸಂಘಟಿಸಲಾಗುತ್ತಿದೆ, ವಿಜಯಪುರ ಜಿಲ್ಲೆಯಿಂದಲೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಪಾಲ್ಗೊಂಡು ಕಾರ್ಯಕ್ರಮಕ್ಕೆ ಸಾಕ್ಷಿಯಾಗಬೇಕು, ಈ ಹಿನ್ನೆಲೆಯಲ್ಲಿ ಎಲ್ಲ ಮತಕ್ಷೇತ್ರಗಳ ಪ್ರಮುಖರ ಸಭೆ ನಡೆಸಲಾಗಿದ್ದು, ವಿಜಯಪುರ ಜಿಲ್ಲೆಯಿಂದ ೨೦ ಸಾವಿರ ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ ಎಂದು ರಾಜೀವ ತಿಳಿಸಿದರು.
ಭಾಗ್ಯ ಲಕ್ಷ್ಮಿ, ಮಕ್ಕಳಿಗೆ ಸೈಕಲ್ ಯೋಜನೆ ಮಹಿಳೆಯರ ಶ್ರೇಯೋಭಿವೃದ್ಧಿಯ ಒಂದು ದಿವ್ಯ ಯೋಜನೆಯಾಗಿದೆ, ಈ ಎಲ್ಲ ಫಲಾನುಭವಿಗಳು, ನಾಡಿನ ಹಲವಾರು ಮಠಾಧೀಶರು, ಯಡಿಯೂರಪ್ಪ ಅವರ ಹೋರಾಟದಲ್ಲಿ ಹೆಜ್ಜೆ ಹಾಕಿದ ಒಡನಾಡಿಗಳು ಎಲ್ಲರೂ ಈ ಅಭಿಮಾನೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಕೇಂದ್ರ ಗೃಹ ಸಚಿವ ಅಮೀತ್ ಷಹಾ ಸೇರಿದಂತೆ ಅನೇಕ ರಾಜಕೀಯ ನಾಯಕರು ಭಾಗವಹಿಸಲಿದ್ದಾರೆ, ೧೨ ಲಕ್ಷಕ್ಕೂ ಅಧಿಕ ಜನರಿಗೆ ಊಟದ ವ್ಯವಸ್ಥೆ, ಬಿಸಿಲಿನ ಹಿನ್ನೆಲೆಯಲ್ಲಿ ವಾತಾನೂಕುಲ ರೂಪದ ಶಾಮಿಯಾನ ಅಳವಡಿಕೆ ಸೇರಿದಂತೆ ವಿವಿಧ ರೀತಿಯ ಸಿದ್ಧತೆಗಳು ಭರದಿಂದ ನಡೆಯುತ್ತಿವೆ ಎಂದರು.
ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಮಾತನಾಡಿ, ಬಿಜೆಪಿಯನ್ನು ಸಂಘಟನಾತ್ಮಕವಾಗಿ ಕಟ್ಟಿದ ಬಿ.ಎಸ್. ಯಡಿಯೂರಪ್ಪ ಒಂದು ಆಧಾರಸ್ತಂಭ, ಪ್ರತಿಯೊಬ್ಬ ಕಾರ್ಯಕರ್ತ, ಪದಾಧಿಕಾರಿಗಳು ಅಭಿಮಾನದಿಂದ ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ, ಯಡಿಯೂರಪ್ಪ ಒಬ್ಬ ಅಜಾತಶತ್ರು, ಸಕಲ ಧರ್ಮಗಳನ್ನು ಗೌರವದಿಂದ ಕಂಡ ನಾಯಕ, ಅವರ ಅಭಿಮಾನೋತ್ಸವ ಕಾರ್ಯಕರ್ತರಿಗೆ, ಅಭಿಮಾನಿಗಳ ಪಾಲಿಗೆ ಇದೊಂದು ಉತ್ಸವ ಹಾಗೂ ಹಬ್ಬದ ಸ್ವರೂಪ ಎಂದರು.
ಕೃಷ್ಣಾ ಮೇಲ್ದಂಡೆ ಬಿ ಸ್ಕೀಂ ಯೋಜನೆ, ಕೆರೆಗಳಿಗೆ ನೀರು ತುಂಬುವ ಯೋಜನೆ, ಚಿಮ್ಮಲಗಿ ಏತ ನೀರಾವರಿಗೆ ಆಡಳಿತಾತ್ಮಕ ಅನುಮೋದನೆ ಹೀಗೆ ಅವರು ಜಿಲ್ಲೆಗೆ ನೀಡಿದ ಕೊಡುಗೆ ಅನನ್ಯ, ಕೆಲವರು ಯಡಿಯೂರಪ್ಪ ಅವರ ಕೊಡುಗೆ ಜಿಲ್ಲೆಗೆ ಇಲ್ಲ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ, ಅವರು ಕೊಟ್ಟ ಕೊಡುಗೆ ಯಾವ ಮುಖ್ಯಮಂತ್ರಿಯೂ ನೀಡಿಲ್ಲ ಎಂದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಅನೇಕ ಬಾರಿ ಬಸ್ ಮೂಲಕ ವಿಜಯಪುರ ಜಿಲ್ಲೆಗೆ ಆಗಮಿಸಿ ಪಕ್ಷ ಸಂಘಟಿಸಿದ ಅನೇಕ ನಿದರ್ಶನಗಳಿವೆ, ಯಡಿಯೂರಪ್ಪ ಅವರ ಪ್ರಯತ್ನಿಂದಾಗಿಯೇ ವಿಜಯಪುರದಲ್ಲಿ ಕಮಲ ಅರಳುವಂತಾಗಿದೆ ಎಂದರು.
ಕರ್ನಾಟಕ ಸಾವಯವ ಬೀಜ ಪ್ರಮಾಣನ ಸಂಸ್ಥೆ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ ಮಾತನಾಡಿ, ಆಟೋರಿಕ್ಷಾ, ಟಾಂಗಾ, ಬಸ್, ಸೈಕಲ್ ಮೂಲಕವೂ ಸಂಚರಿಸಿ ಬಿಜೆಪಿ ಪಕ್ಷವನ್ನು ಬೇರುಮಟ್ಟದಿಂದ ಬೆಳೆಸಿದ ಕೀರ್ತಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ, ಕೊಟ್ಟ ಮಾತಿನಂತೆ ನಡೆಯುವ ಏಕೈಕ ಧೀಮಂತ ನಾಯಕ ಬಿ.ಎಸ್. ಯಡಿಯೂರಪ್ಪ ಎಂದರು.
ಬಿಜೆಪಿ ಯುವ ಮುಖಂಡ ಉಮೇಶ ಕಾರಜೋಳ ಮಾತನಾಡಿ, ರೈತ, ಕಾರ್ಮಿಕ, ಪತ್ರಕರ್ತರು ಹೀಗೆ ಎಲ್ಲ ವರ್ಗದ ಬಗ್ಗೆಯೂ ಸಹ ಅತ್ಯಂತ ಕಾಳಜಿ ಹೊಂದಿದ ಜನನಾಯಕ ಎಂದರು.
ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿದರು.
ಮಾಜಿ ಶಾಸಕರಾದ ಸಂಜಯ ಪಾಟೀಲ, ರಮೇಶ ಭೂಸನೂರ, ಮುಖಂಡರಾದ ಗುರುಲಿಂಗಪ್ಪ ಅಂಗಡಿ, ಉಮೇಶ ಕಾರಜೋಳ, ಕಾಸುಗೌಡ ಬಿರಾದಾರ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

“ವಿಜಯಪುರ ಜಿಲ್ಲೆ ಪರವಾಗಿಯೂ ಅನೇಕ ಬಾರಿ ಹೋರಾಟ ಮಾಡಿದ ಬಿ.ಎಸ್. ಯಡಿಯೂರಪ್ಪ ಅತಿವೃಷ್ಟಿ ಬಂದಾಗ ದೊಡ್ಡ ಹೋರಾಟವನ್ನು ವಿಜಯಪುರದಲ್ಲಿ ಮಾಡಿದ್ದರು, ಮಳೆಯಲ್ಲಿಯೇ ನೆನೆದುಕೊಂಡು ಹೋರಾಟ ಮಾಡಿದ ದಿಟ್ಟ ಹೋರಾಟಗಾರ ಯಡಿಯೂರಪ್ಪ”
– ಅಪ್ಪು ಪಟ್ಟಣಶೆಟ್ಟಿ
ಮಾಜಿ ಸಚಿವರು

